ಉಜ್ಜಯಿನಿ ಒಂದು ಇತಿಹಾಸಪೂರ್ವದ ಪಟ್ಟಣವಾಗಿದ್ದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಇದನ್ನು ಉಜ್ಜೈನ್ ಎಂದೂ ಕರೆಯಲಾಗುತ್ತಿದ್ದು ಇದರ ಅರ್ಥ ಶ್ರೇಷ್ಟ ವಿಜಯ ಎಂಬುದಾಗಿದೆ. ಉಜ್ಜಯಿನಿ ಇಲ್ಲಿನ ಧಾರ್ಮಿಕ ಚಟುವಟಿಕೆಗಳಿಗೆ ಒಂದು ಕೇಂದ್ರವಾಗಿದೆ ಹಾಗೂ ಇದು ದೇಶದಾದ್ಯಂತ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಇಲ್ಲಿನ ದೇವಾಲಯಗಳು. ಈ ನಗರವು ಶಿಪ್ರಾ ನದಿಯ ದಂಡೆಯ ಮೇಲಿದ್ದು ಶಿವರಾತ್ರಿ, ಕುಂಭ ಮೇಳ ಹಾಗೂ ಅರ್ಧ ಕುಂಭ ಮೇಳ ಇಲ್ಲಿನ ಬಹು ಪ್ರಮುಖವಾದ ಹಬ್ಬಗಳಾಗಿವೆ.
ಉಜ್ಜಯಿನಿ: ಇತಿಹಾಸದತ್ತ ಒಂದು ಇಣುಕು ನೋಟ
ಈ ನಗರದ ಇತಿಹಾಸದ ಬಗ್ಗೆ ಹಲವಾರು ಕಥೆಗಳು ಹುಟ್ಟಿಕೊಂಡಿವೆ. ಒಂದಾನೊಂದು ಕಾಲದಲ್ಲಿ ಉಜ್ಜಯಿನಿ ಯನ್ನು ಅಶೋಕ ಹಾಗೂ ವಿಕ್ರಮಾದಿತ್ಯರಂತಹ ರಾಜರು ಆಳುತ್ತಿದ್ದರು. ಪ್ರಸಿದ್ಧ ಕವಿ ಕಾಳಿದಾಸನೂ ತನ್ನ ಕವಿತೆಗಳನ್ನು ಇಲ್ಲಿಯೇ ಬರೆದಿದ್ದನು. ವೇದಗಳೂ ಉಜ್ಜಯಿನಿಯ ಬಗ್ಗೆ ಉಲ್ಲೇಖ ಮಾಡಿವೆ ಹಾಗೂ ಸ್ಕಂದ ಪುರಾಣದ ಎರಡು ಅಧ್ಯಾಯಗಳನ್ನು ಇಲ್ಲಿಯೇ ಬರೆಯಲಾಗಿತ್ತು ಎಂದೂ ಹೇಳಲಾಗುತ್ತದೆ. ಮಹಾಭಾರತದಲ್ಲಿ ಈ ನಗರವನ್ನು ಆವಂತಿ ದೇಶದ ರಾಜಧಾನಿ ಎಂದು ಹೇಳಲಾಗಿದೆ. ಇದನು ಶಿವದೇವನ ಸ್ಥಳ ಎಂದೂ ಹೇಳಲಾಗುತ್ತಿದ್ದು ಇದು ಹಿಂದೂಗಳ ಏಳು ಪವಿತ್ರ ನಗರಗಳಲ್ಲಿ ಒಂದಾಗಿದೆ. ಈ ನಗರದ ಜೊತೆ ಅಶೋಕ ಚಕ್ರವರ್ತಿ, ಕವಿ ಕಾಳಿದಾಸ, ವಿಕ್ರಮಾದಿತ್ಯ, ವರಹಮಿತ್ರ ಹಾಗೂ ಬ್ರಹ್ಮಗುಪ್ತರಂತಹ ಖ್ಯಾತನಾಮರ ಹೆಸರುಗಳು ಸೇರಿಕೊಂಡಿವೆ.
ಉಜ್ಜಯಿನಿ: ದಾರಿ ಬದಿಯ ತಿನಿಸು ಪ್ರಿಯರ ರಸದೌತಣ
ದಾರಿ ಬದಿಯಲ್ಲಿ ಸಿಗುವ ಕರಿದ ಪದಾರ್ಥಗಳಿಗೆ ಬಹಳ ಪ್ರಸಿದ್ಧವಾದ ನಗರ ಉಜ್ಜಯಿನಿ. ಟವರ್ ಚೌಕ್ ಎಂಬ ಸ್ಥಳದಲ್ಲಿ ಇಂತಹ ತಿಂಡಿಗಳೇ ನಿಮಗೆ ರಸದೌತಣ ಬಡಿಸಲು ಸಿದ್ಧವಿರುತ್ತವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳು ಬಾಯಲ್ಲಿ ನೀರೂರಿಸುವಂತಹ ತಿಂಡಿ ತಿನಿಸುಗಳ ಸವಿರುಚಿಯನ್ನು ಸವಿಯಬಹುದಾಗಿದೆ. ಇವುಗಳಲ್ಲಿ ಮುಖ್ಯವಾಗಿ ಪಾನಿ ಪುರಿ, ಕಾರ್ನ್ ಸ್ನ್ಯಾಕ್ಸ್, ಭೇಲ್ ಪುರಿ ಪ್ರಮುಖವಾದುವುಗಳಾಗಿವೆ. ಉಜ್ಜಯಿನಿ ಸಾಂಪ್ರದಾಯಿಕ ಉಡುಗೆಗಳಿಗೂ ಪ್ರಸಿದ್ಧವಾಗಿದೆ. ಆದಿವಾಸಿಗಳು ತಯಾರಿಸಿದ ಆಭರಣಗಳು, ಬಿದಿರಿನಿಂದ ಮಾಡಿದ ಕೆಲವು ಕರಕುಶಲ ವಸ್ತುಗಳು ಇಲ್ಲಿನ ಮಾರುಕಟ್ಟೆಯಲ್ಲಿ ಲಭ್ಯ. ಇಲ್ಲಿಂದ ಕೆಲವು ಸ್ಮರಣಿಕೆಗಳನ್ನೂ ನೀವು ಕೊಂಡೊಯ್ಯಬಹುದು.
ಉಜ್ಜಯಿನಿ ಸುತ್ತಮುತ್ತಲ ಪ್ರವಾಸಿ ತಾಣಗಳು
ಉಜ್ಜಯಿನಿ ಪ್ರವಾಸಿಗಳಿಗೆ ಕೆಲವು ಪ್ರಮುಖ ತಾಣಗಳನ್ನು ಹೊಂದಿದೆ. ಇಲ್ಲಿನ ಕೆಲವು ಪ್ರಮುಖವಾದ ದೇವಾಲಯಗಳೆಂದರೆ ಚಿಂತಾಮನ್ ಗಣೇಶ ದೇವಾಲಯ, ಬಡೇ ಗಣೇಶ್ ಜೀ ಕಾ ಮಂದಿರ್, ಹರ್ ಸಿದ್ಧಿ ದೇವಾಲಯ, ವಿಕ್ರಮ್ ಕೀರ್ತಿ ಮಂದಿರ್, ಗೋಪಾಲ್ ಮಂದಿರ್ ಮತ್ತು ನವಗ್ರಹ ಮಂದಿರ. ಮಹಾಲಕ್ಷೇಶ್ವರ ಮಂದಿರ ನಗರದ ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಇಲ್ಲಿನ ಶಿವನ ದೇವಾಲಯ ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ ಹಾಗೂ ಇಲ್ಲಿ ಗಣೇಶ, ಓಂಕಾರೇಶ್ವರ ಶಿವ, ಪಾರ್ವತಿ, ಕಾರ್ತಿಕೇಯ ಮತ್ತು ಶಿವನ ಎತ್ತಾದ ನಂದಿಯ ವಿಗ್ರಹಗಳಿವೆ.
ಇಲ್ಲಿನ ಇತರೆ ಪ್ರವಾಸಿ ಆಕರ್ಷಣೆಗಳೆಂದರೆ ಸಿದ್ಧವತ, ಭರ್ತಿಹಾರಿ ಗುಹೆಗಳು, ಸಂದೀಪನಿ ಆಶ್ರಮ, ಕಾಲ ಭೈರವ, ದುರ್ಗಾದಾಸ್ ಕಿ ಛತ್ರಿ, ಗಡಕಾಲಿಕಾ, ಮಂಗಲನಾಥ ಮತ್ತು ಪಿರ್ ಮತ್ಸ್ಯೇಂದ್ರನಾಥ. ಕಾಲಿ ದೇಶ ಅರಮನೆ ಕೂಡ ಇಲ್ಲಿನ ಪ್ರವಾಸಿಗಳ ಅತ್ಯಂತ ಮಹತ್ವದ ಸ್ಥಳವಾಗಿದೆ. ಇದರ ಜೊತೆಗೆ ಕಾಳಿದಾಸ ಅಕಾಡೆಮಿ ಹಾಗೂ ಸಂದಲ್ವಾಲಾ ಕಟ್ಟಡ ಕೂಡ ಹೆಸರುವಾಸಿಯಾಗಿದೆ. ವೇದ ಶಾಲಾವನ್ನು ರಾಜ ಜಯ್ ಸಿಂಗ್ ನಿರ್ಮಿಸಿದನು. ಆತನು ಆ ಕಾಲದ ಪ್ರಸಿದ್ಧ ಜ್ಞಾನಿಯಾಗಿದ್ದ. ಆತನು ಇದರ ಜೊತೆಗೆ ಭಾರತದಾದ್ಯಂತ ಹಲವು ವೀಕ್ಷಣಾಲಯಗಳನ್ನು ನಿರ್ಮಿಸಿದನು. ಉಜ್ಜಯಿನಿ ಖಗೋಳಶಾಸ್ತ್ರದ ಅಧ್ಯಯನಕ್ಕೆ ಬಹಳ ಪ್ರಸಿದ್ಧವಾದ ಸ್ಥಳವಾಗಿದೆ.
ಇಲ್ಲಿನ ವಿಕ್ರಮ ವಿಶ್ವವಿದ್ಯಾಲಯ ತನ್ನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಕಾಳಿದಾಸ ಅಕಾಡೆಮಿ ಸಂಸ್ಕೃತ ಅಧ್ಯಯನ ಮಾಡುವವರ ಪ್ರಮುಖ ಸ್ಥಳವಾಗಿದೆ. ಉಜ್ಜಯಿನಿಯ ಸಾರಿಗೆ ಸೌಲಭ್ಯಗಳು ನಿಮ್ಮ ಪ್ರಯಾಣವನ್ನು ಮತ್ತಷ್ಟು ಹಿತಕರವನ್ನಾಗಿಸುತ್ತದೆ. ಇಲ್ಲಿನ ನಗರಗಳಲ್ಲಿ ಬಸ್ಸುಗಳು ಮತ್ತು ಆಟೋರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ. ಹಲವು ಜನ ಸೇರಿ ಒಂದು ರಿಕ್ಷಾವನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಅತ್ಯಂತ ಕಡಿಮೆ ದರದ ಸಾರಿಗೆಯ ಮೂಲವಾಗಿದೆ. ಹೆಚ್ಚಿನ ಪ್ರವಾಸಿಗಳು ಹೀಗೆಯೇ ಎರಡು ಮೂರು ಜನ ಸೇರಿ ಒಂದು ರಿಕ್ಷಾದಲ್ಲಿ ಪ್ರಯಾಣಿಸುವ ಪದ್ಧತಿ ಇಲ್ಲಿದೆ.
ಉಜ್ಜಯಿನಿ ಗೆ ಪ್ರಯಾಣ
ಉಜ್ಜಯಿನಿ ಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಇಂದೋರ್ ನ ವಿಮಾನ ನಿಲ್ದಾಣ. ಇದು ಉಜ್ಜಯಿನಿ ನಗರದಿಂದ ಕೇವಲ 55 ಕಿ.ಮೀ ದೂರದಲ್ಲಿದೆ. ಉಜ್ಜಯಿನಿಯ ರೈಲ್ವೆ ನಿಲ್ದಾಣ ಭಾರತದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳೊಂದಿಗೆ ಸಂಪರ್ಕದಲ್ಲಿದೆ. ಪ್ರವಾಸಿಗಳು ಮುಂಬಯಿ, ಭೋಪಾಲ್, ದೆಹಲಿ, ಇಂದೋರ್, ಅಹಮದಾಬಾದ್ ಮತ್ತು ಖುಜುರಾಹೋ ದಿಂದ ರಸ್ತೆ ಮಾರ್ಗವಾಗಿಯೂ ಉಜ್ಜಯಿನಿಗೆ ಸಾಗಬಹುದಾಗಿದೆ.
ಇಂದೋರ್, ಭೋಪಾಲ್, ಕೋಟಾ ಮತ್ತು ಗ್ವಾಲಿಯರ್ ನಿಂದ ನಿರಂತರ ಬಸ್ ಸಂಚಾರಗಳೂ ಲಭ್ಯವಿವೆ. ಉಜ್ಜಯಿನಿ ರೈಲ್ವೆ ನಿಲ್ದಾಣಗಳ ಸಮೀಪ ತಮ್ಮ ಬಜೆಟ್ ಗೆ ತಕ್ಕಂತೆ ಹೊಟೇಲ್ ರೂಮು ಗಳೂ ಲಭ್ಯವಿವೆ. ಉಜ್ಜಯಿನಿ ಯ ವಾಯುಗುಣ ತೀಕ್ಷ್ಣ ವಾಯುಗುಣವನ್ನು ಹೊಂದಿದ್ದು ಬಹಳ ಬಿಸಿಯಾದ ಬೇಸಗೆಯನ್ನು ಹಾಗೂ ಶೀತಮಯ ಚಳಿಗಾಲವನ್ನು ಹೊಂದಿದೆ.
ಉಜ್ಜಯಿನಿ ಭೇಟಿಗೆ ಅತ್ಯಂತ ಸೂಕ್ತವಾದ ಸಮಯ
ಅಕ್ಟೋಬರ್ ನಿಂದ ಮಾರ್ಚ್ ನ ಅವಧಿ ಉಜ್ಜಯಿನಿಯ ಭೇಟಿಗೆ ಅತ್ಯಂತ ಸೂಕ್ತವಾದ ಅವಧಿಯಾಗಿದೆ.