ಭಾರತಕ್ಕೆ ಪ್ರವಾಸಕ್ಕೆ ಬರುವುದು ಹಾಗೂ ದೇಶಾದ್ಯಂತ ಸಂಚರಿಸುವುದು ಒಂದು ಉತ್ತಮ ಅನುಭವವೇ ಸರಿ. ಅದರಲ್ಲೂ, ದೇಶದ ರಾಜಧಾನಿಯಲ್ಲಿ ವಸತಿ ಹೂಡುವದೆಂದರೆ ಒಂದು ಅದ್ಭುತ ಅನುಭವ. ಮಾಂತ್ರಿಕ ಜಗತ್ತಿನ ಬೆಂಕಿ ಚಂಡಿನಂತಿರುವ ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ. ದೆಹಲಿ ಭಾರತದ ದೊಡ್ಡನಗರಗಳಲ್ಲೊಂದು ಮಾತ್ರವಲ್ಲದೆ, ಪ್ರಾಚೀನತೆ ಮತ್ತು ಆಧುನಿಕತೆಗಳಿಂದ ಸಮ್ಮಿಳಿತವಾದ ನಗರವಾಗಿದೆ.
ದೆಹಲಿಯನ್ನು, ಹಿಂದಿ ಭಾಷೆಯಲ್ಲಿ 'ದಿಲ್ಲಿ' ಎಂದು ಸಂಭೋದಿಸುತ್ತಿದ್ದು ಇದು ಅಧಿಕೃತವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಟೆರಿಟರಿ) (NCT) ವಾಗಿದೆ. ಭಾರತದ ರಾಜಧಾನಿಯಾದ ಹೊಸದೆಹಲಿಯೂ ಕೂಡ ಈ NCTಯ ಭಾಗವಾಗಿದೆ. ದೆಹಲಿಯು ಮುಂಬೈ ನಂತರದ ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.
ಹೊಸ ದೆಹಲಿ ಮತ್ತು ಹಳೆ ದೆಹಲಿ ಎಂಬ ಹೆಸರುಗಳಲ್ಲಿರುವ ಈ ಪುರಾತನ ಮತ್ತು ನವೀನತೆಯಿಂದ ಸಮ್ಮಿಲಿತವಾಗಿರುವ ಈ ನಗರವು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ವಿವಿಧ ಅದ್ಭುತಗಳ ವರ್ಗೀಕರಣಗಳನ್ನೊಳಗೊಂಡ ಬಟ್ಟಲು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ದೇಶದ ಎಲ್ಲಾ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ ಭೇಟಿ ಮಾಡಲೇ ಬೇಕೆಂದೆನಿಸುವಂತಹ ನಗರವಾಗಿದೆ.
ಭೂಗೋಳ
0-125 ಮೀಟರ್ಗಳಷ್ಟು ಎತ್ತರದಲ್ಲಿ ಸ್ಥಿತಗೊಂಡಿರುವ ದೆಹಲಿ ಭಾರತದ ಉತ್ತರ ಭಾಗದಲ್ಲಿದೆ. ಪೂರ್ವಕ್ಕೆ ಉತ್ತರ ಪ್ರದೇಶ, ಉತ್ತರ-ಪಶ್ಚಿಮ ಮತ್ತು ದಕ್ಷಿಣಕ್ಕೆ ಹರಿಯಾಣದಿಂದ ಸುತ್ತುವರೆದಿರುವ ದೆಹಲಿಯು, ದಿಲ್ಲಿ ಪರ್ವತ ಶ್ರೇಣಿಗಳು ಮತ್ತು ಯಮುನಾ ನದಿ ಬಯಲುಗಳೆಂಬ ಎರಡು ಪ್ರಮುಖ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ರಾಜಧಾನಿಯಲ್ಲಿ ಹರಿಯುವ ಏಕೈಕ ನದಿ ಯಮುನಾ.
ಹವಾಮಾನ
ದೆಹಲಿಯು ಆರ್ದ್ರ ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ. ಇಲ್ಲಿನ ಬೇಸಿಗೆ ದೀರ್ಘವಾಗಿರುತ್ತಿದ್ದು ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ. ಹಾಗೆಯೇ, ಚಳಿಗಾಲದ ತಿಂಗಳುಗಳಲ್ಲಿ ಅತಿ ಚಳಿ ಇರುತ್ತಿದ್ದು ರಾಜಧಾನಿಯ ಮೇಲೆ ಮಂಜಿನ ಮುಸುಕು ಹಾಸಿರುತ್ತದೆ. ಬೇಸಿಗೆಯು ಏಪ್ರಿಲ್ ನಿಂದ ಜೂನ್ ವರೆಗಿರುತ್ತಿದ್ದು, ಜೂನನಿಂದ ಸುರಿಯಲಾರಂಭಿಸುವ ಮಳೆ ಅಕ್ಟೋಬರ್ ವರೆಗೆ ಮುಂದುವರೆಯುತ್ತದೆ. ನಂತರ ನವೆಂಬರ್ ತಿಂಗಳಿಂದ ಕೊರೆಯುವ ಚಳಿ ಆರಂಭವಾಗುತ್ತದೆ.
ರಾಜಧಾನಿಯ ಸಾಂಸ್ಕೃತಿಕ ಸಿರಿವಂತಿಕೆ
ದೆಹಲಿಯ ಇತಿಹಾಸದಂತೆಯೇ ಅದರ ಸಂಸ್ಕೃತಿ ಕೂಡ ಬಹಳ ವೈವಿಧ್ಯಮಯವಾಗಿದೆ. ದೀಪಾವಳಿಯಿಂದ ಹಿಡಿದು ಮಹಾವೀರ ಜಯಂತಿ, ಹೋಳಿ, ಲೋಹ್ರಿ, ಕೃಷ್ಣ ಜನ್ಮಾಷ್ಟಮಿ, ಗುರು ನಾನಕ್ ಜಯಂತಿವರೆಗಿನ ಎಲ್ಲಾ ಪ್ರಮುಖ ಹಿಂದು ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ ಆದರೆ, ಇವುಗಳಿಗಿಂತ ಕುತುಬ್ ಉತ್ಸವ, ಬಸಂತ್ ಪಂಚಮಿ, ವಿಶ್ವ ಪುಸ್ತಕ ಮೇಳ ಮತ್ತು ಅಂತಾರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವಗಳಂತಹ ಅನನ್ಯ ಹಬ್ಬಗಳು ಕೂಡ ತುಂಬಾ ಹೆಸರುವಾಸಿಯಾಗಿವೆ.
ವಾಸ್ತವವಾಗಿ ಮೊಘಲ್ ಪಾಕ ಪದ್ಧತಿಗಳು ರೂಪುಗೊಂಡ ಸ್ಥಳವಾಗಿದ್ದರಿಂದ ದೆಹಲಿಗರ ಆಹಾರ ವೈಖರಿಯಲ್ಲಿ ಮೊಘಲ್ ತಿನಿಸುಗಳ ಪ್ರಭಾವವಿರುವುದನ್ನು ಕಾಣಬಹುದು. ಆದರೂ, ಸಾಮಾನ್ಯ ಭಾರತೀಯ ಅಡುಗೆಗಳೂ ಇಲ್ಲಿ ಜನಪ್ರಿಯವಾಗಿವೆ. ಕಡಾಯಿ ಚಿಕನ್, ಬೆಣ್ಣೆ ಚಿಕನ್, ಚಾಟ್ಸ್, ಜಲೇಬಿ, ಕಚೋರಿ ಮತ್ತು ಲಸ್ಸಿಗಳು ದೆಹಲಿಯ ಶಾಸ್ತ್ರೀಯ ಪಾಕಪದ್ಧತಿಗಳಲ್ಲಿ ಕೆಲವು ಹೆಸರಿಸಬಹುದಾದ ತಿಂಡಿ ತಿನಿಸುಗಳು.
ಈ ಮಾಂತ್ರಿಕ ವೈವಿಧ್ಯಮಯ ಜಗತ್ತಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ತಾಣಗಳು...
ದೆಹಲಿಯು ಸಂಪೂರ್ಣವಾಗಿ ಪ್ರೇಕ್ಷಣಾಸ್ಥಳಗಳಿಂದ ತುಂಬಿದ್ದು, ಪ್ರಾಚೀನ ಯುಗದ ವಾಸ್ತುಶಿಲ್ಪದ ಅದ್ಭುತಗಳನ್ನು ಪ್ರತಿನಿಧಿಸುತ್ತದೆ. ಕುತುಬ್ ಮಿನಾರ್, ಕೆಂಪು ಕೋಟೆ, ಇಂಡಿಯಾ ಗೇಟ್, ಕಮಲ ಮಂದಿರ ಮತ್ತು ಅಕ್ಷರಧಾಮ ದೇವಾಲಯಗಳು ವಾಸ್ತುಶಿಲ್ಪದ ಮೇರುಕೃತಿಗಳೆಂದು ಖ್ಯಾತವಾಗಿವೆ. ಅಲ್ಲದೇ ಇದು ವ್ಯಾಪಾರಿಗಳ ಸ್ವರ್ಗವೆಂದು ಗುರುತಿಸಲ್ಪಟ್ಟಿದ್ದು ಇಲ್ಲಿ ಒಂದೇ ಸೂರಿನಡಿಯಲ್ಲಿ ಕಾನೂನಿನನ್ವಯ ಏನನ್ನಾದರೂ ವ್ಯಾಪಾರ ಮಾಡಬಹುದಾಗಿದೆ.
ಭಾರತದ ಎಲ್ಲಾ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರುವ ನಮ್ಮ ಲೋಕಸಭಾ ಸದನ, ರಾಷ್ಟ್ರಪತಿ ಭವನ(ಭಾರತ ರಾಷ್ಟ್ರಾಧ್ಯಕ್ಷರ ನಿವಾಸ), ರಾಜಘಾಟ್ (ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರವಾದ ಸ್ಥಳ) ಇವೇ ಮುಂತಾದ ಆಕರ್ಷಕ ತಾಣಗಳು ಇಲ್ಲಿವೆ.
ಇಷ್ಟೇ ಅಲ್ಲ! ನೀವು ಇತಿಹಾಸ ಪ್ರಿಯರಾಗಿದ್ದರೆ 'ಅನೇಕ ಸಾಮ್ರಾಜ್ಯಗಳ ರಾಜಧಾನಿ' ಯಾಗಿದ್ದ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ದೆಹಲಿಗೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಕೆಂಪು ಕೋಟೆ , ಐತಿಹಾಸಿಕ ಬಾವಿಗಳು, ಸ್ಮಾರಕಗಳು, ಅನೇಕ ಭವ್ಯ ಸಮಾಧಿಗಳು, ಮಸೀದಿಗಳು, ಪ್ರಸಿದ್ಧ ಕುತುಬ್ ಮಿನಾರ......ಹೀಗೆ ಅನೇಕ ಸ್ಮಾರಕಗಳು ನಿಮ್ಮನ್ನು ಐತಿಹಾಸಿಕ ಯುಗಕ್ಕೆ ಕರೆದೊಯ್ಯುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನೀವು ಇದುವರೆಗೆ ಇಲ್ಲಿ ಓದಿದ್ದು ಕೇವಲ ದೆಹಲಿಯ ಮೇಲ್ನೋಟ ಅಥವಾ ಪಕ್ಷಿನೋಟ. ದೆಹಲಿಯ ಸವಿಸ್ತಾರವಾದ ಐತಿಹ್ಯವನ್ನು ತಿಳಿಯಬೇಕಾದರೆ - 'ಅನೇಕ ಸಾಮ್ರಾಜ್ಯಗಳ ರಾಜಧಾನಿ' ಯಲ್ಲಿ ವಿಹರಿಸಿ ಕಣ್ತುಂಬಿಸಿಕೊಳ್ಳಬೇಕಾದರೆ ನೀವು ಸ್ವತಃ ಭೇಟಿ ನೀಡಬೇಕು. ಒಮ್ಮೆ ಭೇಟಿನೀಡಿದ ನೀವು, 'ಬಸ್ತಿ ಹೈ ಮಸ್ತಾನೊಂ ಕೀ ದಿಲ್ಲಿ ದಿಲ್ಲಿ, ಗಲಿ ಹೈ ದಿವಾನೊಂ ಕಿ ದಿಲ್ಲಿ, ಯೇ ದಿಲ್ಲಿ ಹೈ ಮೇರೆ ಯಾರ್, ಬಸ್ ಇಷ್ಕ್ ಮೊಹಬ್ಬತ್ ಪ್ಯಾರ್.....ಎಂದು ಗುನುಗುವದಂತೂ ಖಚಿತ.