ಹಿಸಾರ್ ನಗರ ಹರ್ಯಾಣಾ ರಾಜ್ಯದ ಹಿಸಾರ್ ಜಿಲ್ಲಾಡಳಿತದ ಪ್ರಧಾನ ಕಚೇರಿಯಾಗಿದೆ. ಇದು ನವದೆಹಲಿಯ ಪಶ್ಚಿಮ ಭಾಗಕ್ಕೆ 164 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ಇದನ್ನು ರಾಷ್ಟ್ರೀಯ ರಾಜಧಾನಿ ನವದೆಹಲಿಗೆ ಪರ್ಯಾಯವಾಗಿ ಮತ್ತು ವಲಸೆ ಬರುವವರನ್ನು ಆಕರ್ಷಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಹಿಸಾರ್ ಉಕ್ಕಿನ ಕಾರ್ಖಾನೆಗಳಿಗೆ ಪ್ರಸಿದ್ಧವಾಗಿರುವುದರಿಂದ ಉಕ್ಕಿನ ನಗರಿ ಎಂದು ಕರೆಯುತ್ತಾರೆ.
ಇತಿಹಾಸ
1354ನೇ ಇಸ್ವಿಯಲ್ಲಿ ಫಿರೋಜ್ ಷಾ ತುಘಲಕ್ ಎಂಬುವವನು ಹಿಸಾರ್-ಎ-ಫಿರೋಜ್ ಎಂಬ ಹೆಸರಿನಲ್ಲಿ ಹಿಸಾರ್ ನಗರವನ್ನು ಸ್ಥಾಪಿಸಿದ. 1351ರಿಂದ 1388ರವರೆಗೆ ಆಳ್ವಿಕೆ ಮಾಡಿದ್ದ ಫಿರೋಜ್ ಯಮುನಾ ನದಿಯ ನೀರು ಕಾಲುವೆ ಮೂಲಕ ನಗರಕ್ಕೆ ಬರಲು ಕಾರಣ. ಒಂದು ಕಾಲದಲ್ಲಿ ಘಗ್ಗರ್ ಮತ್ತು ದ್ರಿಶದ್ವತಿ ಎಂಬ ಎರಡು ನದಿಗಳು ನಗರದ ಜೀವನಾಡಿಗಳಾಗಿದ್ದವು. ಆದರೆ, ಪ್ರಸ್ತುತ ಅವುಗಳ ಮಾರ್ಗವನ್ನು ಬದಲಿಸಲಾಗಿದೆ. ಹಿಸಾರ್ ನಗರ ಅನೇಕ ಸಂಸ್ಥಾನಗಳ ಆಳ್ವಿಕೆಗೆ ಸಾಕ್ಷಿಯಾಗಿದೆ.
ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಮೌರ್ಯರ, 14ನೇ ಶತಮಾನದಲ್ಲಿ ತುಘಲಕ್ರ, 16ನೇ ಶತಮಾನದಲ್ಲಿ ಮುಘಲರ ಹಾಗು 19ನೇ ಶತಮಾನದಲ್ಲಿ ಬ್ರಿಟಿಷರ್ ಆಳ್ವಿಕೆಗೆ ಹಿಸಾರ್ ಒಳಪಟ್ಟಿತ್ತು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಇದು ಪಂಜಾಬ್ ಭಾಗವಾಗಿತ್ತು. ಆದರೆ, 1966ನೇ ಇಸ್ವಿಯಲ್ಲಿ ಪಂಜಾಬ್ ಭಾಗವಾದಾಗ ಹಿಸಾರ್ ಪ್ರದೇಶ ಹರ್ಯಾಣಕ್ಕೆ ಸೇರಿಕೊಂಡಿತು.
ಹಿಸಾರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು
ಹಿಸಾರ್ ಪ್ರದೇಶದಲ್ಲಿ ನೋಡಲು, ಕಾಲಕಳೆಯಲು ಬಹಳಷ್ಟು ಪ್ರವಾಸಿ ತಾಣಗಳಿವೆ. 1860ನಿಂದ ನಿರ್ಮಾಣ ಆರಂಭವಾಗಿ 4 ವರ್ಷಗಳಲ್ಲಿ ಪೂರ್ತಿಯಾದ ಸೇಂಟ್ ಥಾಮಸ್ ಚರ್ಚ್ ಮುಖ್ಯವಾದ ಆಕರ್ಷಣೆ. ಈ ಚರ್ಚನ್ನು ಸೇಂಟ್ ಥಾಮಸ್ ಗೆ ಸಮರ್ಪಿಸಲಾಗಿದೆ. ಇವರು ಏಸು ಕ್ರಿಸ್ತನ 12 ಶಿಸ್ತುವಾದಿಗಳಲ್ಲಿ ಒಬ್ಬರು. ಅಂದಿನ ಕಾಲದಲ್ಲಿ ಈ ಚರ್ಚ್ ನಿರ್ಮಾಣಕ್ಕೆ ತಲುಲಿದ್ದ ವೆಚ್ಚ ಕೇವಲ 4500 ರು.ಗಳು. ಇದರ ವಿನ್ಯಾಸ ಮತ್ತು ಕಟ್ಟಡ ವಿಕ್ಟೋರಿಯನ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ.
ಅಗ್ರೋಹ ಧಾಮ ಅಥವಾ ಅಗ್ರೋಹ ಮಂದಿರ ಹೆಸರೇ ಸೂಚಿಸುವ ಹಾಗೆ ಅಗ್ರೋಹದಲ್ಲಿ ನೆಲೆಗೊಂಡಿದೆ. ಈ ಮಂದಿರದ ಆವರಣದಲ್ಲೇ ಶಕ್ತಿ ಸರೋವರ ಎಂಬ ಕೊಳವಿದೆ ಮತ್ತು ಯೋಗದ ಮೂಲಕ ರೋಗಿಗಳನ್ನು ಗುಣಪಡಿಸಲು ನ್ಯಾಚುರೋಪತಿ ಕೇಂದ್ರವಿದೆ. ಇಲ್ಲಿ ಅನೇಕ ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ.
ಇನ್ನು ನಗರದ ಪೂರ್ವ ಭಾಗಕ್ಕೆ ಸುಮಾರು 31 ಕಿ.ಮೀ. ದೂರದಲ್ಲಿ ಪ್ರಯಾಣಿಕರು ಭೇಟಿ ಕೊಡಬಹುದಂತಹ ಐತಿಹಾಸಿಕ ಹಳ್ಳಿಯಾದ ಲೋಹರಿ ರಾಘೋ ಉಪಸ್ಥಿತವಿದೆ. ಇದು ಮೂರು ಐತಿಹಾಸಿಕ ಗುಡ್ಡಗಳಿಗೆ ಮನೆಯಾಗಿದೆ. ಇದು ಸೋಧಿ ಸಿಸವಾರ್ ಸೆರಾಮಿಕ್ ಕಾಲಕ್ಕೆ ಸಂಬಂಧಿಸಿದೆ. 1980ನೇ ಇಸ್ವಿಯಲ್ಲಿ ಈ ಗುಡ್ಡಗಳನ್ನು ಧೂಪ್ ಸಿಂಗ್ ಮತ್ತು ಚಂದರ್ ಪಾಲ್ ಸಿಂಗ್ ಸಂಶೋಧಿಸಿದರು. ಇವರು ಹರ್ಯಾಣದ ಪುರಾತತ್ವಶಾಸ್ತ್ರ, ಸಂಗ್ರಹಾಲಯ ಇಲಾಖೆಯ ಅಧಿಕಾರಿಗಳಾಗಿದ್ದರು.
ಅಗ್ರೋಹದಿಂದ 1.5 ಕಿ.ಮೀ. ದೂರದಲ್ಲಿ ಪ್ರಾಚೀನವಾದ ಅಗ್ರೋಹ ಗುಡ್ಡ ನೆಲೆಗೊಂಡಿವೆ. ಸಂಶೋಧನೆಯಲ್ಲಿ ದೊರೆತಿರುವ ಐತಿಹಾಸಿಕ ವಸ್ತುಗಳು ಕ್ರಿಸ್ತ ಪೂರ್ವ 3 ಹಾಗು 4ನೇ ಇಸ್ವಿಯಿಂದ ಹಿಡಿದು 13 ಮತ್ತು 14ನೇ ಶತಮಾನದವರೆಗೆ ಸಂಬಂಧಿಸಿದ್ದವಾಗಿವೆ. ಅಗ್ರೋಹ ಗುಡ್ಡದ ಪಕ್ಕದ ಒಂದು ಬದಿಯಲ್ಲಿ ಮಂದಿರದ ಸಂಕೀರ್ಣ ಮತ್ತೊಂದು ಬದಿಯಲ್ಲಿ ಶೀಲಾಮಾತಾ ಮಂದಿರವಿದೆ.
1963 ಮತ್ತು 1997ನೇ ಇಸ್ವಿಯಲ್ಲಿ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸಿದ ಸಂಶೋಧನ ಕಾರ್ಯದಲ್ಲಿ ಹಿಸಾರ್ ಜಿಲ್ಲೆಯಲ್ಲಿ ರಾಖಿ ಷಾಹಪುರ, ರಾಖಿ ಖಾಸ್ ಎಂತಲೂ ಕರೆಯಲಾಗುವ ರಾಖಿಘರಹಿ ಎಂಬ ಐತಿಹಾಸಿಕ ಮಹತ್ವವುಳ್ಳ ಹಳ್ಳಿ ಬೆಳಕಿಗೆ ಬಂದಿತು. ಈ ಹಳ್ಳಿಯು 22 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಹರಪ್ಪನ್ ಮತ್ತು ಇಂಡಸ್ ವ್ಯಾಲಿ ನಾಗರಿಕತೆಗೆ ಸಂಬಂಧಪಟ್ಟದ್ದಾಗಿದೆ.
ಹಿಸಾರ್ ನಗರದ ಮಧ್ಯಭಾಗದಲ್ಲಿ ಒಂದು ಪುರಾತನ ಗುಮ್ಮಟವೂ ಇದೆ. ಇದು ಆಧ್ಯಾತ್ಮಿಕ ಗುರುಗಳಾದ ಬಾಬಾ ಪನ್ನೀರ್ ಬಾದಷಾ ಅವರಿಗೆ ಸೇರಿದ್ದಾಗಿದೆ. ಇವರು 14ನೇ ಶತಮಾನದಲ್ಲಿ ಬಾಳಿಬದುಕಿದವರು. ಚೌಕ ಆಕಾರದ ಈ ಗುಮ್ಮಟಕ್ಕೆ ನಾಲ್ಕು ಕಡೆ ಕಮಾನುಗಳಿವೆ.
ಹಂಸಿ ಎಂಬ ನಗರದ ದಕ್ಷಿಣ ಭಾಗಕ್ಕೆ ಬಾರ್ಸಿ ಗೇಟ್ ಇದೆ. ಇದು ಹಿಸಾರ್ ನಿಂದ 26 ಕಿ.ಮೀ. ದೂರದಲ್ಲಿದೆ. ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಇದೂ ಒಂದು. ದಿಲ್ಲಿ ಗೇಟ್, ಹಿಸಾರ್ ಗೇಟ್, ಗೂಸೇನ್ ಗೇಟ್ ಮತ್ತು ಉಮ್ರಾ ಗೇಟ್ ಉಳಿದ ಪ್ರವೇಶ ದ್ವಾರಗಳು. ಪೃಥ್ವಿರಾಜ್ ಕೋಟೆಗೆ ಕೂಡ ಭೇಟಿ ನೀಡಬಹುದು. ಹೆಸರೇ ಸೂಚಿಸುವ ಹಾಗೆ ಈ ಪ್ರಸಿದ್ಧ ಕೋಟೆಯನ್ನು ರಜಪೂತ ಯೋಧನಾದ ಪೃಥ್ವಿರಾಜ 12ನೇ ಶತಮಾನದಲ್ಲಿ ಕಟ್ಟಿಸಿದ್ದು.
ಇನ್ನೊಂದು ಆಕರ್ಷಣೆ ಎಂದರೆ, ದುರ್ಗಾ ಚಾರ್ ಖುತುಬ್ ಅಥವಾ ಮೌಸೋಲಿಯನ್ ಸಂಕೀರ್ಣ. ಇದು ಹಂಸಿಯಲ್ಲಿರುವ ನಾಲ್ಕು ಸೂಫಿ ಸಂತರ ಗೋರಿ. ಇಲ್ಲಿ ಮಣ್ಣಾದ ಮಹಾ ಸೂಫಿ ಸಂತರೆಂದರೆ ಜಮಲ್-ಉದ್-ದಿನ್ ಹಂಸಿ, ಬುರಹನ್-ಉದ್-ದಿನ್, ಖುತುಬ್-ಉದ್-ದಿನ್ ಮಮದರ್ ಮತ್ತು ನೂರ್-ಉದ್-ದಿನ್.
ಕಡೆಯದಾಗಿ 1354ನೇ ಇಸ್ವಿಯಲ್ಲಿ ಫಿರೋಜ್ ಷಾ ತುಘಲಕ್ ಕಟ್ಟಿಸಿದ ಫಿರೋದ್ ಷಾ ಅರಮನೆ ಸಂಕೀರ್ಣವನ್ನು ಸಹ ಭೇಟಿ ಮಾಡಬಹುದು. ಈ ಅರಮನೆ ಲತ್ ಕಿ ಮಸ್ಜಿದ್ ಎಂಬ ಮಸೀದಿಗೆ ಮನೆಯಾಗಿದೆ. ಮರಳುಗಲ್ಲಿನಿಂದ ಕಟ್ಟಿಸಿದ ಆಧಾರ ಸ್ತಂಭವು ಸುಮಾರು 20 ಅಡಿ ಎತ್ತರದಲ್ಲಿದೆ.
ಹಿಸಾರ್ ಗೆ ಭೇಟಿ ಕೊಡಲು ಸೂಕ್ತ ಸಮಯ
ಹವಾಮಾನ ಮತ್ತು ವಾತಾವರಣ ಹಿತಕರವಾಗಿರುವುದರಿಂದ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಹಿಸಾರ್ ಪ್ರವಾಸ ಕೈಗೊಳ್ಳುವುದು ಸೂಕ್ತ.
ಹಿಸಾರ್ ತಲುಪುವ ಬಗೆ
ಭಾರತದ ಇತರ ನಗರಗಳಿಗೆ ಹಿಸಾರ್ ನಿಂದ ವಿಮಾನ, ರಸ್ತೆ ಮತ್ತು ರೈಲು ಮಾರ್ಗವಾಗಿ ಉತ್ತಮ ಸಂಪರ್ಕವಿದೆ.