ಪೃಥ್ವಿರಾಜ್ ಕಾ ಕಿಲಾ ಎಂದೂ ಕರೆಯಲಾಗುವ ಈ ಕೋಟೆ ಹಿಸಾರ್ ಜಿಲ್ಲೆಯ ಹಂಸಿ ನಗರದಲ್ಲಿದೆ. ಇದನ್ನು 12ನೇ ಶತಮಾನದಲ್ಲಿ, ಹೆಸರೇ ಸೂಚಿಸುವಂತೆ ಆಗಿನ ಕಾಲದ ಪ್ರಸಿದ್ಧ ದೊರೆ ಪೃಥ್ವಿರಾಜ ಕಟ್ಟಿಸಿದ. ಹಿಸಾರ್ ಮತ್ತು ರೋಹ್ಟಕ್ ಒಳಗೊಂಡಿದ್ದ ಪ್ರದೇಶದ ರಾಜ್ಯಭಾರ ನಡೆಸುತ್ತಿದ್ದ ಬ್ರಿಟಿಷ್ ಆಡಳಿತಗಾರ ಜಾರ್ಜ್ ಥಾಮಸ್ ಇದನ್ನು 1798ರಲ್ಲಿ ಮರುನಿರ್ಮಿಸಿದ. ಮುಂದೆ ಇದನ್ನು ಕ್ಯಾಂಟೋನ್ಮೆಂಟ್ ಆಗಿ ಪರಿವರ್ತಿಸಲಾಯಿತು. 1857ರ ಪ್ರಥಮ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಬ್ರಿಟಿಷರು ಇದನ್ನು ಬಿಟ್ಟು ತೊಲಗಿದರು.
30 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಚೌಕಾಕಾರದ ಕೋಟೆ 52 ಅಡಿ ಎತ್ತರ ಮತ್ತು 37 ಅಡಿ ದಪ್ಪ ಗೋಡೆಗಳಿಂದ ಸುತ್ತುವರಿದಿದ್ದು, ಪ್ರಾಚೀನ ಭಾರತದ ಅತ್ಯಂತ ಸುಭದ್ರ ಕೋಟೆಗಳಲ್ಲೊಂದು ಎಂದು ಹೆಸರು ಪಡೆದಿತ್ತು. ಪೃಥ್ವಿರಾಜ್ ಚೌಹಾಣ್ ಪರಾಭವಗೊಂಡ ನಂತರ ಇಲ್ಲಿ ಒಂದು ಮಸೀದಿಯನ್ನೂ ಕಟ್ಟಿಸಲಾಯಿತು.
ಕೋಟೆಯ ಬಾಗಿಲಿನ ಮೇಲೆ ಹಿಂದೂ ದೇವರು ಮತ್ತು ದೇವತೆ ಹಾಗೆ ಪ್ರಾಣಿಪಕ್ಷಿಗಳ ಸುಂದರ ಕೆತ್ತನೆಯಿದೆ. ನಂತರ ಫಿರೋಜ್ ಷಾ ತುಘಲಕ್ ಹಂಸಿ ಮತ್ತು ಹಿಸಾರ್ ಸೇರಿಸುವಂಥ ಸುರಂಗವನ್ನು ನಿರ್ಮಿಸಿದ. ಇಲ್ಲಿ ಭಗವಾನ್ ಬುದ್ಧ ಮತ್ತು ಭಗವಾನ್ ಮಹಾವೀರನ ಪ್ರತಿಮೆಗಳೂ ಇವೆ. 1982ರಲ್ಲಿ ನಡೆಸಿದ ಉತ್ಖನನ ಸಮಯದಲ್ಲಿ ಇಲ್ಲಿ ಅಷ್ಟಧಾತುವಿನಿಂದ ನಿರ್ಮಿಸಿದ 57 ಜೈನರ ವಿಗ್ರಹಗಳನ್ನು ಪತ್ತೆಹಚ್ಚಲಾಯಿತು. ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಇದನ್ನು ರಾಷ್ಟ್ರೀಯ ಮಹತ್ವವುಳ್ಳ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.