ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಈ ವಾರ ಸಂಚಾರ ಆರಂಭಿಸಲಿದೆ. ಭಾರತದಲ್ಲಿ ಪ್ರಾರಂಭವಾಗುವ ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದ್ದು, 479 ಕಿಮೀ ದೂರವನ್ನು ಕ್ರಮಿಸಲು 6 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಭಾರತೀಯ ರೈಲ್ವೇಯು ರೈಲಿನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರ ಶುಕ್ರವಾರ ಕೆಎಸ್ಆರ್ ಬೆಂಗಳೂರು ನಗರದಿಂದ 16 ಕೋಚ್ಗಳು ಮತ್ತು 1,128 ಪ್ರಯಾಣಿಕರ ಆಸನ ಸಾಮರ್ಥ್ಯವುಳ್ಳ ರೈಲಿಗೆ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಈ ಹೊಸ ರೈಲ್ವೆ ಸೇವೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗ :
ರೈಲು ಚೆನ್ನೈ ಸೆಂಟ್ರಲ್ನಿಂದ ಬೆಂಗಳೂರು ನಗರದಿಂದ ಮೈಸೂರು ಜಂಕ್ಷನ್ಗೆ ಪ್ರಯಾಣಿಸಲಿದ್ದು, ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರನ್ನು ದಾಟುತ್ತದೆ. 6 ಗಂಟೆ 40 ನಿಮಿಷಗಳ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್ನಲ್ಲಿ ಮಾತ್ರ ನಿಲ್ಲುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ವೇಳಾಪಟ್ಟಿ ಮತ್ತು ಸಮಯ :
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಇದು ಬೆಳಿಗ್ಗೆ 5.50 ಕ್ಕೆ ಚೆನ್ನೈ ಸೆಂಟ್ರಲ್ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಬೆಳಿಗ್ಗೆ 10.25 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪುತ್ತದೆ, 359 ಕಿಮೀ ದೂರವನ್ನು ಕ್ರಮಿಸುತ್ತದೆ. ಐದು ನಿಮಿಷಗಳ ನಿಲುಗಡೆ ನಂತರ ತನ್ನ ಅಂತಿಮ ಗಮ್ಯಸ್ಥಾನಕ್ಕೆ ಹೊರಟು ಮಧ್ಯಾಹ್ನ 12.30 ಕ್ಕೆ ಮೈಸೂರು ಜಂಕ್ಷನ್ಗೆ ತಲುಪುತ್ತದೆ. 137.6ಕಿಮೀ ದೂರವನ್ನು ಕ್ರಮಿಸುತ್ತದೆ.
ಹಿಂದಿರುಗುವ ಮಾರ್ಗದಲ್ಲಿ ರೈಲು ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1:05 ಕ್ಕೆ ಹೊರಟು 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪುತ್ತದೆ. ಐದು ನಿಮಿಷಗಳ ನಿಲುಗಡೆಯ ನಂತರ ರೈಲು ಬೆಂಗಳೂರು ಸಿಟಿ ಜಂಕ್ಷನ್ನಿಂದ ಹೊರಟು ಸಂಜೆ 7:35 ಕ್ಕೆ ತನ್ನ ಅಂತಿಮ ತಾಣವಾದ ಚೆನ್ನೈ ಸೆಂಟ್ರಲ್ ತಲುಪುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈ-ಬೆಂಗಳೂರು-ಮೈಸೂರು ಟಿಕೆಟ್ ದರ :
ಸುದ್ದಿ ಮೂಲಗಳ ಪ್ರಕಾರ ಎಕಾನಮಿ ಕ್ಲಾಸ್ ಅಥವಾ ಎ/ಸಿ ಚೇರ್ನ ದರವು ರೂ 921 ರಿಂದ ಪ್ರಾರಂಭವಾಗಲಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ಗೆ ರೂ1,880 ವೆಚ್ಚವಾಗಲಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಎಕಾನಮಿಗೆ ರೂ 368 ಮತ್ತು ಎಕ್ಸಿಕ್ಯೂಟಿವ್ ವರ್ಗಕ್ಕೆ ರೂ 768 ಆಗಿರುತ್ತದೆ.