ಇವು ಕರ್ನಾಟಕದಲಿ ಕಂಡುಬರುವ ಕೆಲವು ಪ್ರಮುಖ ದೇವಾಲಯಗಳು ಹಾಗೂ ವಿಶೇಷ ರಚನೆಗಳು. ಸಾಮಾನ್ಯವಾಗಿ ಅನುದಿನವೂ ಭಕ್ತಾದಿಗಳಿಂ, ಪ್ರವಾಸಿಗರಿಂದ ತುಂಬಿರುವ ಈ ಆಕರ್ಷಣೆಗಳು ತಮ್ಮ ವಿಶೇಷವಾದ ಅಲಂಕಾರದಲ್ಲಿದ್ದಾಗಲಂತೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ.
ಏಕೆಂದರೆ ಇವು ದೀಪಾಲಂಕೃತಗೊಂಡಾಗ ಕಾಣುವ ರೀತಿಯ ವರ್ಣನಾತೀತ. ಸ್ವರ್ಗಲೋಕದ ದೇವೇಂದ್ರನ ಆಸ್ಥಾನದಂತೆ ಕಂಡುಬರುತ್ತವೆ. ಫಳ ಫಳ ಹೊಳೆಯುತ್ತ ಇವುಗಳ ಕಳೆ ನೂರು ಪಟ್ಟು ಹೆಚ್ಚಾಗಿ ಎಲ್ಲೆಡೆಯಿಂದ ಜನರನ್ನು ಸರ ಸರ ಎಂದು ಸೆಳೆಯುತ್ತವೆ. ಈ ವಿಶೇಷ ಅಲಂಕಾರದಲ್ಲಿ ಇವುಗಳನ್ನು ನೋಡಲೆಂದು ರಾಜ್ಯದ ಅನೇಕ ಮೂಲೆ ಮೂಲೆಗಳಿಂದ ಜನರು, ಪ್ರವಾಸಿಗರು ಭೇಟಿ ನೀಡುತ್ತಾರೆ.
ನನ್ನ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ!
ಅವುಗಳ ಅಂದ-ಚೆಂದವನ್ನು ನೋಡಿ ಪುಳಕಿತಗೊಳ್ಳುತ್ತಾರೆ. ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಆ ಅದ್ಭುತ ಕ್ಷಣಗಳ ಸೆರೆ ಹಿಡಿದು ಸಂತಸ ಪಡುತ್ತಾರೆ. ಇಂದು ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಟ್ವಿಟ್ಟರ್ ನಂತಹ ತಾಣಗಳ ಬಹಳ ಪರಿಣಾಮಕಾರಿಯಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಂತ ಪುಟದಲ್ಲಿ ಚಿತ್ರಗಳನ್ನು ಹರಿಬಿಟ್ಟು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ.
ಇಸ್ಕಾನ್, ಚಿತ್ರಕೃಪೆ: Svpdasa
ಇಸ್ಕಾನ್, ಬೆಂಗಳೂರು
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ ಅಥವಾ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ISKCON) ಸಂಸ್ಥೆಯ ಪ್ರಸಿದ್ಧ ಕೃಷ್ಣ ದೇವಾಲಯಗಳ ಪೈಕಿ ಒಂದಾಗಿರುವ ಬೆಂಗಳೂರಿನ ಶ್ರೀ ರಾಧಾ ಕೃಷ್ಣ ಮಂದಿರವು ಸಾಕಷ್ಟು ಅದ್ಭುತವಾಗಿ ನಿರ್ಮಾಣಗೊಂಡಿದೆ. ಬೆಂಗಳೂರಿನ ರಾಜಾಜಿನಗರ ಬಡಾವಣೆಯಲ್ಲಿ ಬರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದ್ದು ಮೆಜೆಸ್ಟಿಕ್ ನಿಂದ ಸಾಕಷ್ಟು ಬಸ್ಸುಗಳು ಈ ದೇವಾಲಯದ ಮುಲಕ ಹಾದುಹೋಗುತ್ತವೆ. ದೀಪಾವಳಿ ಹಾಗೂ ಕೃಷ್ಣ ಜನ್ಮಾಷ್ಟಮಿಯ ದಿನಗಳಂದು ಈ ದೇವಲಯವು ದೀಪಾಲಂಕೃತವಾಗಿರುವುದನ್ನು ನೋಡಲು ಎರಡು ಕಣ್ಣುಗಳೂ ಸಾಲದು.
ಮೈಸೂರು ಅರಮನೆ, ಚಿತ್ರಕೃಪೆ: Ashwin Kumar
ಮೈಸೂರು ಅರಮನೆ, ಮೈಸೂರು
ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಮೈಸೂರು ಪ್ರವಾಸಿ ದೃಷ್ಟಿಯಿಂದ ಬಲು ಮಹತ್ವ ಪಡೆದಿರುವ ರಾಜ್ಯದ ನಗರ ಕೇಂದ್ರವಾಗಿದೆ. ಇಲ್ಲಿನ ಒಂದೊಂದು ಸ್ಥಳಗಳೂ, ರಚನೆಗಳು ಮೈಸೂರು ಅರಸರ ವೈಭವದ ದಿನಗಳನ್ನು ನೆನಪಿಸುತ್ತವೆ. ಅಲ್ಲದೆ ಮೈಸೂರು ಮಹಾರಾಜನ ಅರಮನೆಯಾದ ಅಂಬಾವಿಲಾಸ ಅಥವಾ ಮೈಸೂರು ಅರಮನೆಯ ವೈಭೋಗ ಕೇಳಿದರೆ ಮಾತ್ರವಲ್ಲ, ನೋಡಿದಾಗಲೇ ಮನದಟ್ಟಾಗುವುದು. ಇನ್ನೂ ದಸರಾ ಸಂದರ್ಭದಲ್ಲಂತೂ ಈ ಅರಮನೆಯು ದೀಪಾಲಂಕೃತವಾಗಿ ಗೋಚರಿಸುವ ಬಗೆಯಂತೂ ಯಾವ ಸ್ವರ್ಗ ಲೋಕಕ್ಕಿಂತಲೂ ಕಮ್ಮಿ ಇಲ್ಲ.
ಕುದ್ರೋಳಿ, ಚಿತ್ರಕೃಪೆ: Karunakar Rayker
ಗೋಕರ್ಣನಾಥೇಶ್ವರ ದೇವಾಲಯ, ಮಂಗಳೂರು
ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಾಲಯ. ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರವೆ ಕುದ್ರೋಳಿ. ಕಾರಣಿಕ ಕ್ಷೇತ್ರವೆಂದೇ ಹೆಸರುಗಳಿಸಿರುವ ಕುದ್ರೋಳಿಯಲ್ಲಿ ಸ್ಥಿತವಿರುವ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವು ಕ್ರಾಂತಿಪುರುಷ ಎಂದೆ ಕರೆಯಲಾಗುವ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿದೆ.
ಚಿತ್ರಕೃಪೆ: RajuBabannavar
ವಿಂಧ್ಯಗಿರಿ, ಶ್ರವಣಬೆಳಗೋಳ
ಹಾಸನ ಜಿಲ್ಲೆಯ ಶ್ರವಣಬೆಳಗೋಳವು ಜೈನರ ಪ್ರಮುಖ ಧಾರ್ಮಿಕ ತಾಣವಾಗಿದ್ದು ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಇಲ್ಲಿರುವ ಎರಡು ಗಿರಿಗಳಾದ ವಿಂಧ್ಯಗಿರಿ ಹಾಗೂ ಚಂದ್ರಗಿರಿ ಸಾಕಷ್ಟು ಪೌರಾಣಿಕ ಹಿನ್ನೆಲೆಯಿರುವ ಬೆಟ್ಟಗಳಾಗಿದ್ದು ವಿಂಧ್ಯಗಿರಿಯು ಪ್ರಸಿದ್ಧವಾದ ಗೊಮ್ಮಟೇಶ್ವರನ ಪ್ರತಿಮೆ ನೆಲೆಸಿರುವ ಆಕರ್ಷಕ ಬೆಟ್ಟವಾಗಿದೆ. ಈ ಬೆಟ್ಟವು ದೀಪಾಲಂಕಾರಗೊಂಡಾಗ ಇದನ್ನು ದೂರದಿಂದ ನೋಡುವುದೆ ಒಂದು ಚೆಂದದ ಅನುಭವ. ಸಾಕಷ್ಟು ಅದ್ಭುತವಾಗಿ ಈ ಗಿರಿಯು ಕಂಗೊಳಿಸುತ್ತದೆ. ಬೆಟ್ಟಕ್ಕೇರುವ ಮೆಟ್ಟಿಲು ಪಥವು ಸಾಲಾಗಿ ದೀಪಗಳಿಂದ ಜಗಮಗಿಸುತ್ತದೆ.
ಸಾಸಿವೆಕಾಳು ಗಣೇಶ, ಹಂಪಿ, ಚಿತ್ರಕೃಪೆ: Ravibhalli
ಹಂಪಿ ದೇವಾಲಯಗಳು
ಕರ್ನಾಟಕದಲ್ಲಿ ಜರುಗುವ ಪ್ರತಿ ಹಂಪಿ ಉತ್ಸವದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಈ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಲೇಬೇಕು. ಇದು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಉತ್ಕೃಷ್ಟ ಮಟ್ಟದ ತಾಣವಾಗಿದ್ದು ಇಲ್ಲಿ ಹಲವು ದೇವಾಲಯಗಳು ಹಾಗೂ ಅದ್ಭುತಮಯ ಕೆತ್ತನೆಗಳ ಆಕರ್ಷಕ ಶಿಲ್ಪಕಲೆಗಳನ್ನು ನೋಡಬಹುದು. ಉತ್ಸವದ ಸಂದರ್ಭದಲ್ಲಂತೂ ಹಂಪಿಯು ಸಾಕ್ಷಾತ್ ಮದುವಣಗಿತ್ತಿಯಂತೆ ಸರ್ವಾಲಂಕೃತಗೊಂಡಿರುತ್ತದೆ. ಒಂದೊಂದು ದೇವಾಲಯಗಳೂ ವಿವಿಧ ಬಣ್ಣಗಳ ದೀಪಗಳಿಂದ ಅಲಂಕಾರಗೊಂಡಿರುತ್ತವೆ.
ಕೀರ್ತಿನಾರಾಯಣ ದೇವಾಲಯ, ಚಿತ್ರಕೃಪೆ: Sharanya44
ತಲಕಾಡು ದೇವಾಲಯ, ಮೈಸೂರು
ಇದೊಂದು ರೀತಿಯಲ್ಲಿ ಮಿನಿ ಹಂಪಿ ಎಂದೆ ಹೇಳಬಹುದು. ಇಪ್ಪತ್ತಕ್ಕೂ ಅಧಿಕ ದೇವಾಲಯಗಳು ಇಲ್ಲಿದ್ದವು. ಆದರೆ ಮರಳಿನಲ್ಲಿ ಅವುಗಳಲ್ಲಿ ಬಹುತೇಕ ದೇವಾಲಯಗಳು ಇಂದು ಹೂತು ಹೋಗಿವೆ. ಕೆಲವೆ ಕೆಲವು ಮಾತ್ರ ದೇವಾಲಯಗಳಿದ್ದು ಅವುಗಳಲ್ಲಿ ಇತ್ತೀಚಿಗಷ್ಟೆ ಹೊರತೆಗೆಯಲಾದ ಕೀರ್ತಿನಾರಾಯಣನ ದೇವಾಲಯವು ಸಾಕಷ್ಟು ಆಕರ್ಷಕವಾಗಿದೆ. ಆದರೆ ಇದರ ಗೋಪುರವೆಲ್ಲ ಸಾಕಷ್ಟು ಹಾನಿಗಿಡಾಗಿತ್ತು. ಆದರೂ ಇದನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಇದಕ್ಕೆ ಹೊಸ ಗೋಪುರ ನಿರ್ಮಿಸಿ ಇಂಬು ನೀಡಲಾಗಿದೆ. ದೀಪದಿಂದ ಪ್ರಕಾಶಗೊಂಡಾದ ಇದೊಂದು ಸುಂದರ ರಚನೆಯಾಗಿ ಕಣ್ಣಲ್ಲುಳಿಯುತ್ತದೆ.
ಚಿತ್ರಕೃಪೆ: Budhesh
ವಿಧಾನಸೌಧ, ಬೆಂಗಳೂರು
ವಿಧಾನಸಭೆ ಅಧಿವೇಶನ ನಡೆಯುವ ಬೆಂಗಳೂರಿನ ವಿಧಾನಸೌಧವು ನಿಜಕ್ಕೂ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವಂತಹ ಆಕರ್ಷಕ ರಚನೆ. ಸಾಕಷ್ಟು ಚಲನಚಿತ್ರಗಳು ಈ ಹಿಂದೆ ವಿಧಾನಸೌಧದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿವೆ. ಅಲ್ಲದೆ ಬೆಂಗಳೂರಿನ ಪ್ರಮುಖ ಹಾಗೂ ಗುರುತರವಾದ ಲ್ಯಾಂಡ್ ಮಾರ್ಕ್ ಆಗಿ ವಿಧಾನಸೌಧ ಗಮನಸೆಳೆಯುತ್ತದೆ. ಇಂಡೋ-ಸಾರ್ಸೆನಿಕ್ ಹಾಗೂ ದ್ರಾವಿಡ ಶೈಲಿಯ ಮಿಶ್ರಣ ಹೊಂದಿರುವ ಈ ಅದ್ಭುತ ರಚನೆಯ ನಿರ್ಮಾಣದ ಕರ್ತೃವನ್ನಾಗಿ ಕೆಂಗಲ್ ಹಣುಮಂತಯ್ಯರವರನ್ನು ನೆನೆಸಲಾಗುತ್ತದೆ. ಸಾಮಾನ್ಯವಾಗಿ ಭಾನುವಾರ ಹಾಗೂ ಸಾರ್ವಜನಿಕ ರಜೆ ದಿನಗಳಂದು ಈ ರಚನೆಯು ದೀಪಾಲಂಕಾರದಿಂದ ಜಗಮಗಿಸುತ್ತದೆ.