ನಲ್ಗೊಂಡ ಆಂಧ್ರ ಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಪುರಸಭೆ. ನಲ್ಗೊಂಡ ಹೆಸರು ನಲ್ಲ ಮತ್ತು ಕೊಂಡ ಎಂಬ ಎರಡು ತೆಲುಗು ಪದಗಳ ಸಂಯೋಗವಾಗಿದೆ. ಇವುಗಳ ಅರ್ಥ ಕ್ರಮವಾಗಿ ಕಪ್ಪು ಮತ್ತು ಬೆಟ್ಟ ಎಂಬುದಾಗಿದೆ. ಹೀಗೆ ಸ್ಥಳೀಯ ಭಾಷೆಯಲ್ಲಿ ಈ ಊರಿನ ಹೆಸರಿನ ಅರ್ಥ ಕಪ್ಪುಬೆಟ್ಟ ಎಂಬುದಾಗಿದೆ. ಮೊದಲಿಗೆ ನಲ್ಗೊಂಡದ ಹೆಸರು ನೀಲಗಿರಿ ಎಂಬುದಾಗಿತ್ತು. ಬಹಮನಿಗಳ ಆಳ್ವಿಕೆಯ ಅವಧಿಯಲ್ಲಿ ಈ ಊರಿನ ಹೆಸರು ನಲ್ಲಗೊಂಡ ಎಂದು ಬದಲಾಯಿತು. ನಿಜಾಮರ ಆಳ್ವಿಕೆಯ ಅವಧಿಯಲ್ಲಿ ಆಡಳಿತದ ಕಾರಣಕ್ಕಾಗಿ ಇದನ್ನು ನಲ್ಗೊಂಡ ಎಂದು ಬರೆಯಲಾಯಿತು. ಆದರೂ ಈಗಲೂ ಇಲ್ಲಿನ ಸ್ಥಳೀಯರು ಈ ಹೆಸರನ್ನು ನಲ್ಲಗೊಂಡ ಎಂದೇ ಕರೆಯುತ್ತಾರೆ. ಸಾಹಿತ್ಯದಲ್ಲಿ ಇದನ್ನು ಹಲವು ಕಡೆ ಇದೇ ರೀತಿ ಕರೆಯಲಾಗಿದೆ ಅದರಲ್ಲೂ ಪ್ರಸಿದ್ಧ ‘ದಿ ಪೋಯೆಟ್ರಿ ಆಫ್ ಫೇಮಸ್ ತೆಲಂಗಾಣ ಲಿಬರೇಷನ್ ಸ್ಟ್ರಗಲ್’ ನಲ್ಲಿಯೂ ಇದನ್ನು ಹೀಗೆಯೇ ಕರೆಯಲಾಗಿದೆ. ಹಲವು ಜನರು ಆಡಳಿತ ಭಾಷೆಯಲ್ಲೂ ಇದನ್ನು ನಲ್ಲಗೊಂಡ ಎಂದೇ ಕರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ತೆಲಂಗಾಣ ಹೋರಾಟದ ಪ್ರಮುಖ ಎರಡು ಸ್ಥಳಗಳು ವಾರಂಗಲ್ ಮತ್ತು ನಲ್ಲಗೊಂಡದ ಆಸುಪಾಸಿನ ಸ್ಥಳಗಳೇ ಆಗಿರುವುದರಿಂದ ಇಂದು ನಲ್ಗೊಂಡ ತೆಲಂಗಾಣ ಹೋರಾಟದ ಕೇಂದ್ರ ಸ್ಥಳವಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ತಾಲೂಕುಗಳು ತೆಲಂಗಾಣ ಹೋರಾಟದಲ್ಲಿ ಪಾಲ್ಗೊಳ್ಳುತ್ತಿವೆ. ತೆಲಂಗಾಣ ಹೋರಾಟ ಸಮಿತಿಯ ಮೂಲ ಆಂಧ್ರ ಮಹಾ ಸಭಾ ಮತ್ತು ಕಮ್ಯೂನಿಸ್ಟರಾಗಿದ್ದಾರೆ. 1946 ರ ತನಕವೂ ಮಾರ್ಷಲ್ ಕಾನೂನು ಜಾರಿಯಲ್ಲಿತ್ತು. ಊಳಿಗಮಾನ್ಯ ಪದ್ಧತಿಯ ಜಮೀನುದಾರರ ಗೂಂಡಾಗಳಾಗಿದ್ದ ರಜಕಾರರ ಕೈಯಲ್ಲಿ ಹಲವಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಚಳುವಳಿಯಲ್ಲಿ ಪಾಲ್ಗೊಂಡಿದ್ದ ಹಲವಾರು ಮಂದಿಯನ್ನು ಕೊಂದು ನಿಜಾಮರೂ ರಣರಂಗವನ್ನು ಸೃಷ್ಟಿಸಿದ್ದರು. ಇದರ ಪರಿಣಾಮವಾಗಿ 3000-5000 ದಷ್ಟು ಗ್ರಾಮಗಳು ಸ್ವತಂತ್ರವಾಗಿ ಪ್ರತಿಯೊಂದು ಹಳ್ಳಿಗೆ ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಲಾಯಿತು. ಜಮೀನ್ದಾರರ ಕೈಯಿಂದ ಜಮೀನುಗಳನ್ನು ಪಡೆದು ಬಡವರಲ್ಲಿ ಹಂಚಲಾಯಿತು. ಕೊನೆಗೆ ಭಾರತೀಯ ಸೈನ್ಯ ಈ ಯುದ್ಧವನ್ನು ಕೊನೆಗೊಳಿಸಿತು ಹಾಗೂ ವಾರಂಗಲ್ ಮತ್ತು ನಲ್ಗೊಂಡ ಹೈದರಾಬಾದ್ ಜೊತೆಗೆ ಭಾರತದ ಅಂಗವಾದವು.
ಪ್ರವಾಸಿ ಆಕರ್ಷಣೆಗಳು
ಪ್ರವಾಸೋದ್ಯಮದ ದೃಷ್ಟಿಯಿಂದ ನಲ್ಗೊಂಡ ಇಂದು ಒಂದು ಮಹತ್ವದ ಸ್ಥಳವಾಗಿದೆ. ಆರ್ಥಿಕತೆಗಾಗಿ ಬೇರೆ ಯಾವುದೇ ವ್ಯವಹಾರದ ಮೇಲೆ ಅವಲಂಬಿಸಲು ಸಾಧ್ಯವಿಲ್ಲದೆ ನಲ್ಗೊಂಡ ಇಂದು ತನ್ನ ಆದಾಯದ ಪ್ರಮುಖ ಮೂಲವಾಗಿ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದೆ. ಮಟ್ಟಪಲ್ಲಿ, ಪಿಲ್ಲಮರಿ, ರಾಜೀವ್ ಪಾರ್ಕ್, ಪಾನಿಗಿರಿ ಬೌದ್ಧ ಕಾಲನಿ, ಪಾನಗಲ್ ದೇವಾಲಯ, ನಂದಿಕೊಂಡ, ಲತೀಫ್ ಸಾಹೇಬ್ ದರ್ಗಾ, ಕೊಲ್ಲಂಪಕು ಜೈನ ದೇವಾಲಯ, ರಚಕೊಂಡ ಕೋಟೆ, ಮೆಲ್ಲಚೆರ್ವು, ದೇವರಕೊಂಡ ಕೋಟೆ ಮತು ಭುವನಗಿರಿ ಕೋಟೆ ನಲ್ಗೊಂಡದ ಆಕರ್ಷಕ ಸ್ಥಳಗಳಾಗಿವೆ. ಈ ಎಲ್ಲಾ ಸ್ಥಳಗಳು ನಲ್ಗೊಂಡದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ.
ನಲ್ಗೊಂಡ ಯಾವುದೇ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಇಲ್ಲದೇ ಇದ್ದರು ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ನಲ್ಗೊಂಡ ರೈಲ್ವೆ ನಿಲ್ದಾಣ ಗುಂಟೂರು – ಸಿಕಂದರಾಬಾದ್ ರೈಲ್ವೆ ಮಾರ್ಗದ ಒಂದು ಪ್ರಮುಖ ನಿಲ್ದಾಣವಾಗಿದೆ ಹಾಗೂ ಇಲ್ಲಿ ಬಹುತೇಕ ಎಲ್ಲಾ ರೈಲುಗಳು ನಿಲುಗಡೆಯನ್ನು ಹೊಂದಿವೆ. ಇದು ಉತ್ತಮವಾದ ರಸ್ತೆ ಮಾರ್ಗವನ್ನೂ ಹೊಂದಿದ್ದು ಹಲವಾರು ಬಸ್ಸುಗಳು ನಲ್ಗೊಂಡದಿಂದ ಹೊರಡುತ್ತವೆ. ಹೈದರಾಬಾದ್ ವಿಮಾನ ನಿಲ್ದಾಣವು ಇದಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ.
ಇದು ಶುಷ್ಕ ಮತ್ತು ಬಿಸಿಯಾಗಿರುವ ಬೇಸಿಗೆಯನ್ನು ಹೊಂದಿರುವ ಉಷ್ಣ ವಾಯುಗುಣವನ್ನು ಹೊಂದಿದೆ. ಮಾನ್ಸೂನ್ ಮಂದವಾಗಿದ್ದು ಚಳಿಗಾಲದಲ್ಲಿ ಸುಮಾರಾದ ಚಳಿ ಇರುತ್ತದೆ. ನಲ್ಗೊಂಡ ಭೇಟಿ ನೀಡುವವರು ಚಳಿಗಾಲವನ್ನು ಹೆಚ್ಚು ಆರಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಹವಾಮಾನ ಚೆನ್ನಾಗಿರುತ್ತದೆ ಅದರಲ್ಲೂ ಮಧ್ಯಾಹ್ನದ ನಂತರ ಸೂರ್ಯನ ಕಿರಣಗಳ ಪ್ರಭಾವ ಕಡಿಮೆಯಾಗಿರುವುದರಿಂದ ಓಡಾಡಲು ಸೂಕ್ತವಾಗಿದೆ. ಸಂಜೆ ಮತ್ತು ರಾತ್ರಿಯ ವೇಳೆ ಸಮಯ ಕಳೆಯಲು ಇದು ಸೂಕ್ತವಾದ ತಾಣವಾಗಿದೆ.