ತೆಲಂಗಾಣ ರಾಜ್ಯವು ಹಿಂದೂ ಧರ್ಮಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾದ ತಾಣ. ಇಲ್ಲಿ ಶ್ರೀ ರಾಮಚಂದ್ರನ ಅಸ್ತಿತ್ವವನ್ನು ಹೇಳುವಂತಹ ಹಲವಾರು ಸನ್ನಿವೇಶಗಳು ಇಲ್ಲಿವೆ. ಮುದ್ರೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡವೇಕೆನ್ನುವ ಕುತೂಹಲಗಳೂ ಇಲ್ಲಿ ಸಾಕಷ್ಟಿವೆ. ಆದ್ದರಿಂದ ರಜಾ ದಿನವನ್ನು ಕಳೆಯಲು ಒಮ್ಮೆಯಾದರೂ ಈ ಸ್ಥಳಕ್ಕೆ ಬರಲೇಬೇಕು. ಅಲ್ಲದೇ ಜನರಿಗೆ ಅನುಕೂಲಕರವಾದ ವಾತಾವರಣವು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಂತಹ ಅಪರೂಪದ ಪುರಾಣ ಕಥೆಗಳನ್ನು ತನ್ನ ಸುತ್ತ ಹೊಂದಿರುವ ಭದ್ರಾಚಲಂ ಪಟ್ಟಣಕ್ಕೆ ಬರಲು ನೀವು ಸಿದ್ಧರಾಗಿದ್ದಿರಿ ತಾನೇ? ಭದ್ರಾಚಲಂ ಸ್ಥಳದ ಕುರಿತು ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಭದ್ರಾಚಲಂ ಭಾರತದ ದಕ್ಷಿಣ ಭಾಗದ ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿನ ಒಂದು ಸಣ್ಣ ಪಟ್ಟಣ. ನಗರದ ಈಶಾನ್ಯ ಭಾಗದಲ್ಲಿ ಹೈದರಾಬಾದ್ ನಗರದಿಂದ 309 ಕಿಮೀ ದೂರದಲ್ಲಿ ಮನಮೋಹಕರ ಗೋದಾವರಿ ನದಿಯ ತಟದ ಗುಂಟ ಈ ಪ್ರದೇಶವನ್ನು ಕಾಣಬಹುದು. ಭದ್ರಾಚಲಂ ನಗರವು ದೇಶದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ, ಏಕೆಂದರೆ ಈ ಪ್ರದೇಶವನ್ನು ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತೆಯ ನಿವಾಸ ಸ್ಥಾನ ಎಂದು ಹೇಳಲಾಗುತ್ತದೆ. ಶ್ರೀ ರಾಮನ ಹೆಸರಿನಿಂದಾಗಿಯೇ ಭದ್ರಾಚಲಂ ಹಿಂದುಗಳ ಪ್ರಸಿದ್ಧ ಯಾತ್ರಾ ಸ್ಥಳವೆನಿಸಿದೆ.
ಭದ್ರಾಚಲಂ ಎಂದು ಈ ಪಟ್ಟಣಕ್ಕೆ ಭದ್ರನ ಪರ್ವತ ಅಂದರೆ ’ಭದ್ರಗಿರಿ’ ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಭದ್ರ, ಮೇರು ಹಾಗೂ ಮೇನಕೆಗೆ ವರದ ಫಲವಾಗಿ ಹುಟ್ಟಿದ ಸುಪುತ್ರ. ಭದ್ರಾಚಲಂ ನಗರವು, ಶ್ರೀ ರಾಮನ ಜನ್ಮ ಸ್ಥಾನ ಎಂದು ಕರೆಯಲ್ಪಡುವ ಅಯೋದ್ಯಯನ್ನು ಹೊರತುಪಡಿಸಿದರೆ ಎರಡನೇ ಪ್ರಮುಖ ಸ್ಥಳವಾಗಿದೆ. ಶ್ರೀ ರಾಮನು ರಾಕ್ಷಸ ರಾಜ ರಾವಣನನ್ನು ಲಂಕೆಯಲ್ಲಿ ಸಂಹಾರ ಮಾಡಿದ ನಂತರ ಇಲ್ಲಿ ನೆಲೆಸಿ ದೀರ್ಘ ಕಾಲ ರಾಜ್ಯವನ್ನು ಆಳಿದನು ಎಂದು ಹೇಳಲಾಗುತ್ತದೆ.
ಭದ್ರಾಚಲಂ ನ ದಂತಕಥೆ
ಪುರಾಣ ಕಥೆಯೊಂದರ ಪ್ರಕಾರ ಭದ್ರಾಚಲಂ ಪಟ್ಟಣ ಇರುವ ಪ್ರದೇಶವು ಹಿಂದೊಮ್ಮೆ ದಂಡಕಾರಣ್ಯ ಇರುವ ಪ್ರದೇಶ ಎಂದು ಹೇಳಲಾಗುತ್ತದೆ. ಹಿಂದೂ ಪುರಾಣದ ನಂಬಿಕೆಯ ಪ್ರಕಾರ, ಶ್ರೀ ರಾಮ ಹಾಗೂ ಸೀತಾ ದೇವಿ ಹಾಗೂ ರಾಮನ ತಮ್ಮ ಲಕ್ಷ್ಮಣ ಸ್ವಲ್ಪ ಸಮಯದ ವರೆಗೆ ತಮ್ಮ ವನವಾಸದ ಸಂದಂರ್ಭದಲ್ಲಿ ಈ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದರು ಎನ್ನಲಾಗುತ್ತದೆ.
ಅನೇಕ ಜನರು ಶ್ರೀ ರಾಮ ದೇವಾಲಯದ ಸಾಮಿಪ್ಯದ ಅರಣ್ಯದಲ್ಲಿ ಶ್ರೀ ರಾಮ ಪತ್ನಿ ಸೀತಾ ಮಾತೆ ಹಾಗೂ ತಮ್ಮನ ಸಮೇತನಾಗಿ ಇಲ್ಲಿ ತಂಗಿದ್ದನು ಎಂದು ಹೇಳುತ್ತಾರೆ. ಶ್ರೀ ರಾಮ ದೇವಾಲಯದಿಂದ 32 ಕೀ.ಮಿ ದೂರದಲ್ಲಿ ಶ್ರೀ ರಾಮನು ತನ್ನ ಕುಟುಂಬದವರಿಗೆ ವಾಸ ಸ್ಥಳವನ್ನು ನಿರ್ಮಿಸಿದ್ದನಂತೆ. ಈ ಗುಡಿಸಲಿನಿಂದಲೇ (ಸ್ಥಳದಿಂದಲೇ) ರಾವಣನು ಸೀತಾ ಮಾತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ದಿದ್ದನು ಎನ್ನುವ ನಂಬಿಕೆಯಿದೆ.
ಭದ್ರಾಚಲಂ ನ ಕುರಿತು ಇರುವ ಇನ್ನೊಂದು ನಂಬಿಕೆಯೆಂದರೆ ಇಲ್ಲಿನ ಭಗವಾನ್ ವಿಷ್ಣು ಹಾಗೂ ಅವನ ಭಕ್ತ, ಭದ್ರನ ಮಧ್ಯೆ ನಡೆದ ಪ್ರಸಂಗ . ಭದ್ರನು ಶ್ರೀ ರಾಮಚಂದ್ರನ ಉತ್ಕಟ ಭಕ್ತ ಹಾಗೂ ಋಷಿ ಮಹರ್ಷಿಯಾಗಿದ್ದ. ಭಗವಂತನು ತನ್ನ ಪತ್ನಿ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಯ ಮಾರ್ಗದಲ್ಲಿ ಹೋಗುತ್ತಿರುವಾಗ ಭದ್ರನನ್ನು ಭೇಟಿಯಾಗುತ್ತಾನೆ.
ಭಗವಂತನನ್ನುದ್ದೇಶಿಸಿ ಸನ್ಯಾಸಿ ಭದ್ರನು ತನ್ನ ತಲೆಯ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಾನೆ. ಆದರೆ ಸೀತೆಯನ್ನು ಹಿಂತಿರುಗಿ ಪಡೆಯುವ ಆತುರದಲ್ಲಿದ್ದ ಶ್ರೀ ರಾಮನು ತಾನು ಪ್ರಮುಖವಾದ ಕಾರ್ಯವೊಂದಕ್ಕೆ ಹೊರಟಿರುವುದರಿಂದ ಹಿಂತಿರುಗಿ ಬರುವಾಗ ನಿನ್ನ ಬಯಕೆಯನ್ನು ಪೂರ್ಣಮಾಡೂವುದಾಗಿ ಶ್ರೀ ರಾಮನು ಆಶ್ವಾಸನೆ ನೀಡಿದನು.
ಆದರೆ ಇದು ಸಂಭವಿಸಲೇ ಇಲ್ಲ. ಇದರಿಂದಾಗಿ ಭದ್ರನು ವಿಷ್ಣುವಿನ ಶ್ರೀ ರಾಮನ ಅವತಾರಕ್ಕಾಗಿ ವಿಷ್ಣುವನ್ನು ಪೂಜಿಸುವ ಕಾಯಕವನ್ನು ಮುಂದುವರಿಸಿದನು. ಭದ್ರನ ಭಕ್ತಿ ಶ್ರದ್ಧೆಯ ಪ್ರತಿಫಲವಾಗಿ ಶ್ರೀ ವಿಷ್ಣುವು ಶ್ರೀ ರಾಮನ ಅವತಾರದಲ್ಲಿ ಸೀತೆ ಹಾಗೂ ಲಕ್ಷ್ಮಣನ ಜೊತೆಗೂಡಿ ಭಕ್ತನ ಎದುರಿಗೆ ಪ್ರತ್ಯಕ್ಷನಾದನು ಎಂದು ನಂಬಲಾಗಿದೆ.
ಭಗವಂತನು ತನ್ನ ಬರುವಿಕೆಯನ್ನು ಶಂಖವನ್ನು ಊದುವುದರ ಮೂಲಕ ಭಕ್ತನಿಗೆ ತಿಳಿಸಿದನಂತೆ. ಭಗವಂತನು ಭದ್ರಗಿರಿಯ ತುದಿಯಲ್ಲಿ ಹಾಗೂ ಆತನ ಪತ್ನಿ ಸೀತಾ ಮಾತೆಯೂ ಎಡ ತೊಡೆಯ ಮೇಲೆ ಮತ್ತು ಲಕ್ಷ್ಮಣನು ಬಲ ತೊಡೆಯ ಮೇಲೆ ಆಸ್ತಾನಿತರಾಗಿದ್ದರು. ಈ ಘಟನೆ ಹಲವಾರು ವರ್ಷಗಳ ಕಾಲ ಅಂದರೆ ರಾಮರಾಜ್ಯ ಕೊನೆಗೊಳ್ಳುವವರೆಗೆ ಅಥವಾ ರಾಮ ಆಳ್ವಿಕೆ ಮುಗಿಯುವವರೆಗೆ ಹೀಗೆಯೇ ಇತ್ತು ಎಂಬುದು ಅನೇಕ ಜನರ ನಂಬಿಕೆಯಾಗಿದೆ. ಆದ್ದರಿಂದಲೇ ಈ ಪಟ್ಟಣವು ಶ್ರೀ ರಾಮನ ಭಕ್ತ ಭದ್ರನ ಹೆಸರನ್ನೇ ಹೊಂದಿದೆ!
ಶ್ರಿ ರಾಮ ದೇವಾಲಯದ ಬಗ್ಗೆ ಪ್ರಚಲಿತದಲ್ಲಿರುವ ಇನ್ನೊಂದು ಅತ್ಯಂತ ಕುತೂಹಲಕಾರಿ ದಂತಕಥೆಯೆಂದರೆ, ಶ್ರೀ ರಾಮನೇ ಸ್ವತಃ ಪೋಕಲ ದಮ್ಮಕ್ಕ ಎಂಬ ಮಹಿಳೆಯ ಕನಸಿನಲ್ಲಿ ಕಾಣಿಸಿಕೊಂಡನಂತೆ. ಕಾಣಿಸಿಕೊಂಡ ಭಗವಂತನು ಭದ್ರಗಿರಿಯ ತಪ್ಪಲುಗಳಲ್ಲಿ ವಿಗ್ರಹಗಳು ಅಸ್ತಿತ್ವದಲ್ಲಿರುವುದನ್ನು ಹೇಳಿದನಂತೆ. ಆನಂತರ ಮರುದಿನ ಆ ಮಹಿಳೆಯು ಪರ್ವತಕ್ಕೆ ಹೋಗಿ ನೋಡಿದಾಗ ಆಕೆಗೆ ಆಶ್ವರ್ಯವಾಗುವ ರೀತಿಯಲ್ಲಿ ಹಲವಾರು ತಪ್ಪಲಿನ ಬೇರೆ ಬೇರೆ ಜಾಗಗಳಲ್ಲಿ ವಿಗ್ರಹಗಳು ಲಭಿಸಿದವಂತೆ.
ನಂತರ ಅವಳು ಚಿಕ್ಕದಾದ ನೆಲೆಯನ್ನು ಪರ್ವತದ ಮೇಲೆ ರಚಿಸಿ ಅದಕ್ಕೆ ಧಮ್ಮಕ್ಕ ಎಂದು ಹೆಸರಿಟ್ಟಳು. ಅರಣ್ಯವನ್ನು ತೆರವುಗೊಳಿಸಲು ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದಳು ಹಾಗೂ ಪ್ರತಿ ದಿನ ಬಲಿಪೀಠದ ಪೂಜೆಯನ್ನೂ ಆರಂಭಿಸಿದಳು. ಅಂದಿನಿಂದ ಕಾಲಕ್ರಮೇಣ ಭದ್ರಗಿರಿ ಪರ್ವತವು ಅತ್ಯಂತ ಪವಿತ್ರ ಸ್ಥಳವೆನಿಸಿದ್ದು ಜಗತ್ತಿನಾದ್ಯಂತ ಇರುವ ಎಲ್ಲಾ ಹಿಂದೂ ಯಾತ್ರಿಕರ ಪ್ರಮುಖ ಸ್ಥಳವಾಗಿದೆ.
ಪ್ರತಿ ವರ್ಷ ಲಕ್ಷಗಟ್ಟಲೆ ಜನ ಭಕ್ತಾದಿಗಳು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಹಾಗೂ ತಮ್ಮ ಪಾಪಕ್ಕಾಗಿ ಕ್ಷಮೆಯನ್ನು ಯಾಚಿಸಲು ಇಲ್ಲಿಗೆ ಧಾವಿಸುತ್ತಾರೆ.
ಆಹ್ಲಾದಕರ ಕ್ಷೇತ್ರ ವೀಕ್ಷಣೆಯ ಅನುಭವ
ಭದ್ರಾಚಲಂ ಪಟ್ಟಣವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಉತ್ತಮವಾದ ಕ್ಷೇತ್ರ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಈ ಪಟ್ಟಣದ ಇನ್ನಿತರ ಪ್ರಮುಖ ಆಕರ್ಷಣೆಗಳೆಂದರೆ ಜಟಾಯು ಪಕ್ಕ, ಪ್ರನಸಲ, ದುಮ್ಮುಗುಡೆಂ, ಹಾಗೂ ಗುಂಡಾಲ. ಈ ಪ್ರದೇಶದ ಪ್ರಸಿದ್ಧವಾದ ದೇವಾಲಯಗಳೆಂದರೆ, ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯ ಹಾಗೂ ಭದ್ರಾಚಲಂ ರಾಮ ದೇವಾಲಯ.
ಈ ದೇವಾಲಯಗಳು ಅದರ ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಮಹತ್ವದಿಂದಾಗಿ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದೆ. ಭದ್ರಾಚಲಂ ಪಟ್ಟಣವನ್ನು ರಸ್ತೆ ಹಾಗೂ ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಈ ಪ್ರದೇಶದ ಸುತ್ತ ದಂತ ಕಥೆಗಳ ಸ್ಥಳಗಳಿವೆ, ಉತ್ತಮ ಸಂಪರ್ಕ ವ್ಯವಸ್ಥೆಯಿದೆ. ಅಲ್ಲದೇ ಆಹ್ಲಾದಕರ ವಾತಾವರಣ ಹಾಗೂ ಧಾರ್ಮಿಕ ನಂಬುಗೆಗಳು ಈ ಪುಟ್ಟ ಪಟ್ಟಣವನ್ನು ಎಲ್ಲರ ನೆಚ್ಚಿನ ಪ್ರದೇಶವನ್ನಾಗಿ ಮಾಡಿವೆ!