ತೇಜ್ಪುರ್ ಎಂಬುದು ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿ ನೆಲೆಗೊಂಡಿರುವ ಸುಂದರವಾದ ನಗರವಾಗಿದೆ. ಇದು ಸೋನಿಟ್ಪುರ್ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ತೇಜ್ಪುರ್ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ವಿಶ್ವಖ್ಯಾತಿಯನ್ನು ಪಡೆದಿದೆ. ಇದು ಕೇವಲ ಸಾಂಸ್ಕೃತಿಕ ನಗರವಾಗಿ ಮಾತ್ರವಲ್ಲದೆ, ಐತಿಹಾಸಿಕ ಶ್ರೀಮಂತಿಕೆ ಮತ್ತು ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ವಿದ್ಯಾನಗರಿಯು ಸಹ ಹೌದು. ತೇಜ್ಪುರ್ ಎಂಬ ಹೆಸರು ’ತೇಜ್’ ಮತ್ತು ’ ಪುರ’ ಎಂಬ ಎರಡು ಪದಗಳಿಂದ ಆಗಿದೆ. ಇದಕ್ಕೆ ಸಂಸ್ಕೃತದಲ್ಲಿ ’ತೇಜ್’ ಎಂದರೆ ರಕ್ತ ಮತ್ತು ಪುರ ಎಂದರೆ ಪಟ್ಟಣವೆಂಬ ಅರ್ಥವಿದೆ.
ತೇಜ್ಪುರ್ ಬಹುಮುಖ ಪ್ರವಾಸೋದ್ಯಮದ ತಾಣ
ಭೌಗೋಳಿಕವಾಗಿ ತೇಜ್ಪುರ್ ಹಲವಾರು ಮೈದಾನಗಳಿಂದ, ಪರ್ವತಗಳಿಂದ, ಸುಂದರವಾದ ಪರಿಸರದಿಂದ ಮತ್ತು ದೊಡ್ಡ ನದಿಯಿಂದ ಕೂಡಿದೆ. ಅದರಲ್ಲೂ ಬ್ರಹ್ಮಪುತ್ರ ನದಿಯು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೋಡಿ ಮಾಡದೆ ಬಿಡುವುದಿಲ್ಲ. ಜೊತೆಗೆ ಸೋನಿಟ್ಪುರ್ ಮತ್ತು ನಾಗಾಂವ್ ಜಿಲ್ಲೆಗಳನ್ನು ಒಂದುಗೂಡಿಸುವ ಕೊಲಿಯ ಭೋಮೊರ ಸೇತುವೆಯು 3015 ಮೀಟರ್ ಉದ್ದವಿದ್ದು, ತನ್ನದೇ ಆದ ಪ್ರತ್ಯೇಕತೆಯಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ. ತೇಜ್ಪುರದ ಆಕರ್ಷಣೆಯು ಇಲ್ಲಿನ ಅಗ್ನಿಗಡ್ ಎಂಬ ಸ್ಥಳದಿಂದ ಮತ್ತಷ್ಟು ಹೆಚ್ಚಾಗಿದೆ. ಈ ಎತ್ತರವಾದ ಸ್ಥಳದಿಂದ ಇಡೀ ನಗರದ ಪಕ್ಷಿನೋಟವನ್ನು ನೋಡಬಹುದು.
ತೇಜ್ಪುರ್ ಸುತ್ತ-ಮುತ್ತ ಇರುವ ಕುತೂಹಲ ಕೆರಳಿಸುವ ತಾಣಗಳು
ಭೈರಬಿ ದೇವಾಲಯ, ಕೋಲ್ ಪಾರ್ಕ್, ಕೊಲಿಯ ಭೊಮೊರ ಸೆಟು, ಪಡುಮ್ ಪುಖುರಿ ಇತ್ಯಾದಿಗಳು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಕುತೂಹಲವನ್ನು ತಣಿಸುವಲ್ಲಿ ವಿಶೇಷ ಸ್ಥಾನವನ್ನು ಗಳಿಸಿವೆ. ಇಲ್ಲಿ ನೆಲೆಗೊಂಡಿರುವ ಕೆಲವೊಂದು ಶಿವನ ದೇವಾಲಯಗಳು ನೋಡಲೆ ಬೇಕಾದ ತಾಣಗಳಾಗಿವೆ. ಇವುಗಳಲ್ಲಿ ಕೇಟಕೇಶ್ವರ್ ದೇವಲ್, ಮಹಾಭೈರವ್ ದೇವಾಲಯ, ರುದ್ರಪದ, ನಾಗ್ ಶಂಕರ್ ದೇವಾಲಯ ಇತ್ಯಾದಿಗಳು ಪ್ರಮುಖವಾದವುಗಳಾಗಿವೆ.
ಪುರಾಣ ಮತ್ತು ಇತಿಹಾಸದಲ್ಲಿ ತೇಜ್ಪುರ್
ಪುರಾಣದ ಪ್ರಕಾರ ಈ ಸ್ಥಳದಲ್ಲಿ ಕೃಷ್ಣನ ಮೊಮ್ಮಗನಾದ ಯುವರಾಜ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾಳ ಮಧ್ಯೆ ಪ್ರಣಯಾಂಕುರವಾಯಿತಂತೆ. ಈ ವಿಚಾರ ರಾಕ್ಷಸನಾದ ಬಾಣಾಸುರನ ಕಿವಿಗೆ ಬಿತ್ತಂತೆ. ಇದರಿಂದ ಕೆರಳಿದ ಆ ರಾಕ್ಷಸ ಯುವರಾಜನನ್ನು ಸೆರೆಮನೆಯಲ್ಲಿಟ್ಟನಂತೆ. ಇದನ್ನು ಕೇಳಿ ಕೆಂಡಾಮಂಡಲವಾದ ಶ್ರೀಕೃಷ್ಣನು ಬಾಣಾಸುರನ ಮೇಲೆ ಇಲ್ಲಿ ಯುದ್ಧ ಮಾಡಿದನಂತೆ. ಆ ಯುದ್ಧದಲ್ಲಿ ವಿಪರೀತ ರಕ್ತಪಾತವಾಯಿತಂತೆ. ಅದರಿಂದಾಗಿ ಈ ಊರಿಗೆ " ರಕ್ತಪಾತ ಅಥವಾ ರಕ್ತನಗರಿ" - ಎಂದರೆ ತೇಜ್ಪುರ್ ಎಂಬ ಹೆಸರು ಬಂದಿತಂತೆ
ಆಧುನಿಕ ತೇಜ್ಪುರ್ ಬ್ರಿಟೀಷರ ಆಡಳಿತಾವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಅವರು ಈ ನಗರವನ್ನು 1835ರಲ್ಲಿ ಡರ್ರಂಗ್ ಜಿಲ್ಲೆಯ ಪ್ರಮುಖ ಆಡಳಿತ ಕೇಂದ್ರವನ್ನಾಗಿ ಮಾಡಿದರು. ಇದು ಭೌಗೋಳಿಕವಾಗಿ ಅರುಣಾಚಲ್ ಪ್ರದೇಶಕ್ಕೆ ಸಮೀಪದಲ್ಲಿದೆ. ಜೊತೆಗೆ ಇಲ್ಲಿ ವಿಮಾನ ನಿಲ್ದಾಣದ ವ್ಯವಸ್ಥೆಯಿರುವುದರಿಂದಾಗಿ ಭಾರತದ ವಾಯು ಸೇನೆಯು ಇಲ್ಲಿ ತನ್ನ ವಾಯುನೆಲೆಯನ್ನು ಸ್ಥಾಪಿಸಿದೆ. ಅದರಲ್ಲು ಇಲ್ಲಿ ಸುಖೋಯ್ ವಿಮಾನಗಳನ್ನು ಇಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ( ಭಾರತದಲ್ಲಿ ಸುಖೋಯ್ ವಿಮಾನಗಳನ್ನು ಇಳಿಸಲು ಎರಡು ನೆಲೆಗಳು ಮಾತ್ರವಿದೆ. ಒಂದು ತೇಜ್ಪುರದಲ್ಲಿದ್ದರೆ, ಮತ್ತೊಂದು ಪುಣೆಯಲ್ಲಿದೆ).
ತೇಜ್ಪುರ್ - ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ
ಸಾಂಸ್ಕೃತಿಕವಾಗಿ ತೇಜ್ಪುರ್ ಹಲವಾರು ದಿಗ್ಗಜರ ತವರೂರಾಗಿ ಗುರುತಿಸಲ್ಪಟ್ಟಿದೆ. ಪ್ರಥಮ ಅಸ್ಸಾಮಿ ಚಲನ ಚಿತ್ರ ನಿರ್ದೇಶಕರಾದ ಜ್ಯೋತಿ ಪ್ರಸಾದ್ ಅಗರ್ವಾಲ, ಕ್ರಾಂತಿಕಾರಿ ಗಾಯಕ ಕಲಾಗುರು ಬಿಷ್ಣು ಪ್ರಸಾದ್ ರಾಬಾ ಮತ್ತು ಪ್ರಸಿದ್ಧ ಚಲನ ಚಿತ್ರ ನಿರ್ದೇಶಕ ಪಾಣಿ ಶರ್ಮಾರವರು ಇಲ್ಲಿಯೇ ಜನಿಸಿದವರು. ಹೀಗೆ ಹಲವಾರು ಕಾರಣಗಳಿಂದಾಗಿ ತೇಜ್ಪುರ್ ಅಸ್ಸಾಂನ ಸಾಂಸ್ಕೃತಿಕ ರಾಜಧಾನಿಯಾಗಿ ಹೆಸರುವಾಸಿಯಾಗಿದೆ.
ತೇಜ್ಪುರಕ್ಕೆ ತಲುಪುವುದು ಹೇಗೆ
ತೇಜ್ಪುರದಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ. ಇಲ್ಲಿಗೆ ಕೊಲ್ಕಟಾ ಮತ್ತು ಸಿಲ್ಚಾರ್ ಗಳಿಂದ ಪ್ರತಿನಿತ್ಯ ವಿಮಾನಗಳು ಬಂದು ಹೋಗುತ್ತಿರುತ್ತವೆ. ಜೊತೆಗೆ ಇಲ್ಲಿಗೆ ರೈಲು ಮಾರ್ಗ ಸಹ ಇದೆ. ಇದು ತೇಜ್ಪುರದಿಂದ ರಂಗಿಯ ಮತ್ತು ರಂಗಪರ ನಗರಗಳ ಜೊತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆದರೂ ತೇಜ್ಪುರಕ್ಕೆ ಅಸ್ಸಾಂನ ಯಾವುದೇ ಭಾಗದಿಂದ ಬೇಕಾದರು ತಲುಪಲು, ರಸ್ತೆಮಾರ್ಗಗಳೇ ಉತ್ತಮವಾದ ಆಯ್ಕೆಯಾಗಿರುತ್ತವೆ. ಅದಕ್ಕೆ ಇಲ್ಲಿನ ರಸ್ತೆಗಳನ್ನು ಸಂಪರ್ಕ ವ್ಯವಸ್ಥೆಯ ಜೀವನಾಡಿಗಳು ಎಂದು ಕರೆಯಲಾಗುತ್ತದೆ.
ತೇಜ್ಪುರ್ - ಹವಾಮಾನ
ತೇಜ್ಪುರ್ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ನೆಲೆಗೊಂಡಿದೆ. ಇಲ್ಲಿ ಸುಡುವ ಬಿಸಿಲು ಮತ್ತು ಆಹ್ಲಾದಕರವಾದ ಚಳಿಗಾಲಗಳು ಕಂಡು ಬರುತ್ತವೆ. ಇಲ್ಲಿ ಬೇಸಿಗೆಯಲ್ಲಿ ಉಷ್ಣಾಂಶವು 36 ಡಿಗ್ರಿಗೆ ತಲುಪಿದರೆ, ಚಳಿಗಾಲದಲ್ಲಿ 7 ಡಿಗ್ರಿಯವರೆಗು ಕುಸಿಯುತ್ತದೆ. ಮಳೆಗಾಲದಲ್ಲಿ ಇಲ್ಲಿ ಹೆಚ್ಚಿನ ಮಳೆ ಬೀಳುತ್ತದೆ.