ನೀವೇನಾದರು ತೇಜ್ಪುರಕ್ಕೆ ಹೋದರೆ ಅಗ್ನಿಗಡ್ ನೋಡದೆ ಬಂದಲ್ಲಿ ನಿಮ್ಮ ಪ್ರವಾಸ ಅಪೂರ್ಣವಾಯಿತು ಎಂದೇ ಅರ್ಥ. ಈ ಸ್ಥಳವು ಯುವರಾಜ ಅನಿರುದ್ಧ ಮತ್ತು ಯುವರಾಣಿ ಉಷಾರ ಪ್ರೇಮ ಪ್ರಸಂಗ ಹಾಗು ಅದರಿಂದ ಉಂಟಾದ ಕೃಷ್ಣ - ಬಾಣಾಸುರರ ಯುದ್ಧದ ಕುರಿತು ಸ್ಥಳ ಪುರಾಣವನ್ನು ಸಾರಿ ಹೇಳುತ್ತಿದೆ. ಈ ಕಥೆಯನ್ನು ಜೀವಂತವಾಗಿ ಕಾಣುವ ಶಿಲ್ಪಗಳ ಮೂಲಕ ಸಾರಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಈ ಶಿಲ್ಪಗಳು ಅಗ್ನಿಗಡ್ನಲ್ಲಿರುವ ಕೋಟೆ ಮಾದರಿಯ ವಿಶಾಲ ಸ್ಥಳದಲ್ಲಿ ನೆಲೆಗೊಂಡಿವೆ.
ಈ ಸ್ಥಳವು ಒಂದು ದಿಬ್ಬದ ಮೇಲೆ ನೆಲೆಗೊಂಡಿದೆ. ಇದಕ್ಕೆ ಏರಲು ಸುರುಳಿಯಾಕಾರದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಕತೆ ಸಹ ಇಲ್ಲಿ ಚಾಲ್ತಿಯಲ್ಲಿದೆ. ನಂಬಿಕೆಗಳ ಪ್ರಕಾರ ಉಷಾಳ ಸಖಿಯಾದ ಚಿತ್ರಲೇಖಳು ಒಬ್ಬ ಚಿತ್ರಕಲಾ ನಿಪುಣತೆಯನ್ನು ಹೊಂದಿದ್ದ ಕಲಾವಿದೆಯಾಗಿದ್ದಳು. ಒಮ್ಮೆ ಆಕೆಯು ತಾನು ಕನಸಿನಲ್ಲಿ ಕಂಡ ವ್ಯಕ್ತಿಯ ಚಿತ್ರವನ್ನು ಬರೆದುಕೊಂಡು ಹೋಗಿ, ಉಷಾಳ ಮುಂದೆ ಇಟ್ಟಳು. ಆಗ ಆಕೆ ಇದು ತನ್ನ ಪ್ರಿಯಕರ ಅನಿರುದ್ಧನ ಚಿತ್ರವೆಂದು ಗುರುತಿಸಿದಳು ಎಂದು ಇಲ್ಲಿ ಹೇಳಲಾಗುತ್ತದೆ.
ಅಗ್ನಿಗಡ್ನ ಮೇಲಿನಿಂದ ಇಡೀ ಪಟ್ಟಣದ ಪಕ್ಷಿನೋಟವನ್ನು ನಾವು ಕಾಣಬಹುದು. ಇದು ಪ್ರವಾಸಿಗರ ವಲಯದಲ್ಲಿ ಮತ್ತು ಸ್ಥಳೀಯರ ವಲಯದಲ್ಲಿ ವಿಹಾರ ತಾಣವಾಗಿ ಖ್ಯಾತಿಯನ್ನು ಪಡೆದಿದೆ.