ಕಾಶ್ಮೀರ ಎಂದ ಕೂಡಲೆ ಮೊದಲು ನೆನಪಾಗುವ ಊರಿನ ಹೆಸರು ಶ್ರೀನಗರ. ಕೇವಲ ಕಾಶ್ಮೀರ ಮಾತ್ರವಲ್ಲದೇ ಭಾರತದಾದ್ಯಂತ, ಅಷ್ಟೇ ಯಾಕೆ ವಿದೇಶಗಳಲ್ಲೂ ಚಿರಪರಿಚಿತ ಹೆಸರು ಶ್ರೀನಗರ. ಇಲ್ಲಿ ವಿಶೇಷಗಳ ಮಹಾಪೂರವೇ ಇದೆ. ರಜೆ ಕಳೆಯಲು, ಮನಸ್ಸನ್ನು ಪ್ರಫುಲ್ಲಗೊಳಿಸಲು ಹಾಗೂ ಪ್ರಕೃತಿ ಪ್ರಿಯರಿಗೂ ಇಲ್ಲಿ ಸಾಕಷ್ಟು ಆಕರ್ಷಣೆಗಳಿವೆ. ನೀವೂ ರಜೆ ಕಳೆಯಲು ಶ್ರೀನಗರಕ್ಕೆ ಹೋಗುವ ಯೋಚನೆಯಲ್ಲಿದ್ದೀರಾ ಖಂಡಿತ ಹೋಗಬಹುದು. ಅಲ್ಲಿ ನಿಮಗೆ ಮುದ ನೀಡಲು ಸಾಕಷ್ಟು ತಾಣಗಳಿವೆ. ಪ್ರಕೃತಿಯ ಜೊತೆಗೆ ಇತಿಹಾಸವೂ ನಿಮ್ಮನ್ನು ಸ್ವಾಗತಿಸುತ್ತದೆ. ಹಳೆಯ ಕಾಲದ ಹಲವು ಪಳೆಯುಳಿಕೆಗಳಿವೆ. ಪ್ರಸಿದ್ಧ ಅಮರನಾಥ ಇದೆ. ಇನ್ನೂ ಸಾಕಷ್ಟು ಸ್ಥಳಗಳಿವೆ. ಏನೇನಿದೆ ನೀವೇ ನೋಡಿ.
ಭೂಮಿಯ ಮೇಲಿನ ಸ್ವರ್ಗ ಮತ್ತು ಪೂರ್ವದ ವೆನೀಸ್ ಎಂದು ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಶ್ರೀನಗರವು ಸುಂದರವಾದ ಕಾಶ್ಮೀರ ಕಣಿವೆಯಲ್ಲಿದೆ. ಝೀಲಮ್ ನದಿಯ ದಡದಲ್ಲಿ ಇರುವ ಈ ನಗರ ಅಲ್ಲಿನ ಸುಂದರವಾದ ಸರೋವರಗಳು, ಹೌಸ್ ಬೋಟ್ ಗಳು ಮತ್ತು ಹಲವಾರು ಮೊಘಲ್ ಉದ್ಯಾನವನಗಳಿಗೆ ಪ್ರಸಿದ್ಧವಾಗಿದೆ. ಶ್ರೀನಗರ ಎಂಬ ಶಬ್ದ ಶ್ರೀ ಮತ್ತು ನಗರ ಎಂಬ ಎರಡು ಪದಗಳಿಂದ ವ್ಯುತ್ಪತ್ತಿಯಾಗಿದೆ. ಇವುಗಳ ಅರ್ಥ ಕ್ರಮವಾಗಿ ಸಿರಿವಂತಿಕೆ ಮತ್ತು ಸ್ಥಳ ಎಂಬುದಾಗಿದೆ. ಹಾಗಾಗಿ ಈ ಶಬ್ದದ ಪದಶಹಃ ಅರ್ಥ ಸಿರಿವಂತಿಕೆಯ ನಗರ ಎಂಬುದಾಗಿದೆ.
ಅತ್ಯಂತ ಹಳೆಯ ನಗರ ಎಂಬ ಹಿರಿಮೆಯ ಹೊರತಾಗಿ ಈ ನಗರ ಐತಿಹಾಸಿಕವಾಗಿ ಧಾರ್ಮಿಕವಾಗಿ ಮತ್ತು ವಾಸ್ತುಶಿಲ್ಪದ ಕಾರಣದಿಂದಲೂ ಪ್ರಸಿದ್ಧವಾಗಿದೆ. ಇಲ್ಲಿರುವ ಹಲವು ಐತಿಹಾಸಿಕ ಪ್ರಾಮುಖ್ಯತೆಯ ಕಟ್ಟಡಗಳು ಮತ್ತು ಪುರಾತನ ಧಾರ್ಮಿಕ ತಾಣಗಳು ಈ ನಗರದ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಬುರ್ಜಾಹೋಮ್ ಕ್ರಿ. ಪೂ 3000 ರಿಂದ 1500 ನಡುವೆ ಇದ್ದ ನವಶಿಲಾಯುಗದ ವಸಾಹತು ಆಗಿತ್ತು. ಇಲ್ಲಿ ಉತ್ಖನನದ ಸಮಯದಲ್ಲಿ ದೊರಕಿದ ಕಲಾಕೃತಿಗಳನ್ನು ಇಲ್ಲಿನ ಶ್ರೀ ಪ್ರತಾಪ್ ಸಿಂಗ್ (ಎಸ್.ಪಿ.ಎಸ್) ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಲ್ಲಿರುವ ವಸ್ತುಗಳಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಬಾಣದ ತುದಿಗಳು, ಉಪಕರಣಗಳು ಹಾಗೂ ಬೃಹತ್ ಶಿಲೆಯ ಮತ್ತು ನವಶಿಲಾಯುಗದ ಅವಧಿಯ ಮಡಕೆಗಳನ್ನು ಕಾಣಬಹುದಾಗಿದೆ.
ಇಲ್ಲಿ ಕಾಣಸಿಗುವ ಕೆಲವೊಂದು ದೇವಾಲಯಗಳು ಮತ್ತು ಮಸೀದಿಗಳು ಸುಮಾರು 1000 ವರ್ಷಗಳಷ್ಟು ಹಳೆಯವು. ಶಂಕರಾಚಾರ್ಯ ದೇವಾಲಯ ಮತ್ತು ಜ್ಯೇಷ್ಟೇಶ್ವರ ದೇವಾಲಯ ಈ ನಗರದ ಎರಡು ಪ್ರಮುಖ ತಾಣಗಳು. ಜಾಮಾ ಮಸೀದಿ, ಹಜರತ್ ಬಾಲ್ ಮಸೀದಿ ಮತ್ತು ಅಖಂಡ್ ಮುಲ್ಲಾ ಮಸೀದಿ ಇಲ್ಲಿನ ಕೆಲವು ಪ್ರಮುಖ ಮಸೀದಿಗಳು ಮತ್ತು ಪ್ರವಾಸಿ ಆಕರ್ಷಣೆಗಳು. ನಸ್ರತ್ ಬಾಗ್, ಶಾಲಿಮಾರ್ ಬಾಗ್, ಅಚಬಾಲ್ ಬಾಗ್, ಚಸ್ಮಾ ಶಾಹಿ ಮತ್ತು ಪರಿ ಮಹಲ್ ಇಲ್ಲಿನ ಕೆಲವು ಪ್ರಮುಖ ಮೊಘಲ್ ಉದ್ಯಾನವನಗಳಾಗಿವೆ. ಇವು ಜಗತ್ತಿನಾದ್ಯಂತ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತವೆ. ಈ ಉದ್ಯಾನಗಳು ನಗರಕ್ಕೆ ನೈಸರ್ಗಿಕ ಸೊಬಗನ್ನು ನೀಡುತ್ತವೆ.
ಇಲ್ಲಿನ ಸರೋವರಗಳಾದ ದಾಲ್ ಸರೋವರ, ನಾಗಿನ್ ಸರೋವರ, ಅಂಚಾರ್ ಸರೋವರ ಮತ್ತು ಮನಾಸ್ ಬಾಲ್ ಸರೋವರ ಇಲ್ಲಿನ ಕೆಲವು ಇತರೆ ಪ್ರಮುಖ ಆಕರ್ಷಣೆಗಳು. ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಇಲ್ಲಿನ ಸುತ್ತಮುತ್ತಲ ಆಕರ್ಷಣೀಯ ಸ್ಥಳಗಳು ಇದನ್ನು ಒಂದು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸಿದೆ. ದಾಲ್ ಸರೋವರ ಕಾಶ್ಮೀರ ಕಣಿವೆಯ ಎರಡನೆಯ ಅತೀ ದೊಡ್ಡ ಸರೋವರವಾಗಿದ್ದು ಇದನ್ನು ‘ಕಾಶ್ಮೀರದ ಮುಕುಟದಲ್ಲಿರುವ ರತ್ನ’ ಎಂದು ಕರೆಯಲಾಗುತ್ತದೆ. ಇದರ ಹಿಂದೆ ಕಾಣುವ ಹಿಮಾಲಯ ಪರ್ವತ ಇದನ್ನು ಮತ್ತಷ್ಟು ಸುಂದರವನ್ನಾಗಿಸುತ್ತದೆ. ಶ್ರೀನಗರವು ತನ್ನ ಹೌಸ್ ಬೋಟ್ ಗಳು (ದೋಣಿಮನೆಗಳು) ಮತ್ತು ಶಿಕಾರಾ ಅಥವಾ ಮರದ ದೋಣಿಗಳಿಗೂ ಹೆಸರುವಾಸಿ. ಇದರ ಮೇಲೆ ಒಂದು ಸುತ್ತು ಹೊಡೆದು ಬರಲು ಇವು ಸರೋವರದ ದಡದಲ್ಲೇ ಕಾಯುತ್ತಿರುತ್ತವೆ.
ಶ್ರೀನಗರದ ಇನ್ನೊಂದು ಪ್ರಮುಖ ಆಕರ್ಷಣೆ ದಚಿಗಮ್ ವನ್ಯಜೀವಿ ಅಭಯಾರಣ್ಯ. ಇದು ಸುಮಾರು 141 ಚದರ ಕಿಲೋಮೀಟರ್ ವಿಸ್ತಾರದಲ್ಲಿ ವ್ಯಾಪಿಸಿದೆ. ಇದನ್ನು 1951ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ. ಇದು ಅಳಿವಿನ ಅಂಚಿನಲ್ಲಿರುವ ಕೆಂಪು ಕರಡಿ ಅಥವಾ ಹಂಗುಲ್ ಗೆ ಮನೆ ಇದ್ದಂತಿದೆ. ಇದರ ಜೊತೆಗೆ ಇಲ್ಲಿ ಚಿರತೆ, ಕಪ್ಪು ಮತ್ತು ಕಂದು ಕರಡಿಗಳು, ಕಸ್ತೂರಿ ಮೃಗ ಮತ್ತು ಹಲವಾರು ವಲಸೆ ಬರುವ ಹಕ್ಕಿಗಳನ್ನು ಕಾಣಬಹುದಾಗಿದೆ.
ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನವನ ಕೂಡ ಶ್ರೀನಗರದ ಇನ್ನೊಂದು ಆಕರ್ಷಣೆ. ಇದು ದಾಲ್ ಸರೋವರದ ದಡದಲ್ಲಿದೆ. ಇದು ಸುಮಾರು 90 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಇಲ್ಲಿ ಸುಮಾರು 70 ಬಗೆಯ ಟ್ಯುಲಿಪ್ ಹೂವುಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಪ್ರತ್ರಿ ವರ್ಷ ಎಪ್ರಿಲ್ 5 ರಿಂದ 15 ರ ತನಕ ಟ್ಯುಲಿಪ್ ಹೂವುಗಳ ಹಬ್ಬವನ್ನು ಆಯೋಜಿಸಲಾಗುತ್ತಿದ್ದು ಸ್ಥಳೀಯರ ನಡುವೆ ಇದು ಬಹಳ ಪ್ರಸಿದ್ಧವಾಗಿದೆ.
ಇದು ಕೇವಲ ಭಾರತೀಯರನ್ನಷ್ಟೆ ಅಲ್ಲದೆ ವಿದೇಶಿಯರನ್ನೂ ತನ್ನತ್ತ ಕರೆಯುತ್ತದೆ. ಇಲ್ಲಿ ಸ್ಥಳೀಯ ತಿನಿಸುಗಳು ಮತ್ತು ಜಾನಪದ ನೃತ್ಯವೂ ಆ ಸಮಯದ ವಿಶೇಷ ಆಕರ್ಷಣೆಯಾಗಿದೆ. ಇಲ್ಲಿ ಭೇಟಿ ನೀಡುವವರು ಸ್ಥಳೀಯ ಕೈಮಗ್ಗ ಮತ್ತು ಬಟ್ಟೆಗಳನ್ನು ಖರೀದಿಸಬಹುದು ಇವು ಜಗತ್ತಿಗೆಲ್ಲ ಕಾಶ್ಮೀರಿ ಕಾರ್ಪೆಟ್, ಪಶ್ಮಿನಾ ಶಾಲ್, ಸ್ಟೋಲ್ ಮತ್ತು ಉಣ್ಣೆಯ ಕೈಮಗ್ಗಗಳು ಎಂದು ಹೆಸರುವಾಸಿಯಾಗಿದೆ. ಈ ಉತ್ಸವವು ನಾಗರಿಕರಿಗೆ ಬೆಳಗ್ಗೆ 9 ರಿಂದ ಸಂಜೆ 7 ರ ತನಕ ತೆರೆದಿರುತ್ತದೆ.
ಶ್ರೀನಗರವು ಚಾರಣದಂತಹ ಸಾಹಸ ಚಟುವಟಿಕೆಗಳಿಗೂ ಹೆಸರುವಾಸಿಯಾಗಿದೆ. ಶ್ರೀನಗರದಿಂದ ಆರಂಭವಾಗಿ ಅಮರನಾಥ ಗುಹೆಗಳಿಗೆ ತಲುಪುವ ಚಾರಣದ ಮಾರ್ಗ ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ. ಡಚಿಗಮ್ ರಾಷ್ಟ್ರೀಯ ಉದ್ಯಾನ ಮತ್ತು ಫಾಲಗಮ್ ಪ್ರವಾಸಕ್ಕೆ ಹೋಗಬಹುದಾದ ಕೆಲವು ಪ್ರವಾಸಿ ತಾಣಗಳಾಗಿವೆ.
ಶ್ರೀನಗರದ ಆಹಾರದಲ್ಲಿ ಬಹುತೇಕ ಭಾಗ ಅನ್ನದಿಂದ ಮಾಡಿದ ತಿನಿಸುಗಳಿಂದ ಕೂಡಿರುತ್ತದೆ ಹಾಗೂ ಬಹಳ ಖಾರವಾಗಿರುತ್ತದೆ. ಇದು ಕೇಸರಿಯ ಉತ್ಪಾದನೆಯಲ್ಲೂ ಬಹಳ ಹೆಸರುವಾಸಿ. ಇದೊಂದು ಬಹಳ ಪ್ರಖ್ಯಾತ ಮತ್ತು ದುಬಾರಿ ಸಂಬಾರ ಪದಾರ್ಥವಾಗಿದೆ. ಇದು ರಾಜಮನೆತದ ಸಂಬಾರ ಪದಾರ್ಥವೆಂದು ಹೆಸರುವಾಸಿಯಾಗಿದೆ. ಇದನ್ನು ಇಲ್ಲಿ ನೇರವಾಗಿ ರೈತರ ಕೈಯಿಂದಲೇ ಖರೀದಿಸಬಹುದಾಗಿದೆ. ಒಂದು ಗ್ರಾಂ ಕೇಸರಿಯ ಬೆಲೆ ಸುಮಾರು 200 ರೂಪಾಯಿಗಳಾಗಿದೆ.
ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಶ್ರೀನಗರವು ವಿಮಾನ ಮಾರ್ಗದ ಮೂಲಕ ಸಂಪರ್ಕ ಸಾಧಿಸುತ್ತದೆ. ಶೇಕ್ ಉಲ್ ಆಲಮ್ ಎಂದೂ ಕರೆಯಲ್ಪಡುವ ಈ ವಿಮಾನ ನಿಲ್ದಾಣ ಮುಂಬಯಿ, ದೆಹಲಿ, ಶಿಮ್ಲಾ ಮತ್ತು ಚಂಡಿಗಡದಂತಹ ಭಾರತದ ಪ್ರಮುಖ ನಗರಗಳಿಂದ ನೇರವಾದ ಸಂಪರ್ಕ ಹೊಂದಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿದೇಶಿ ಪ್ರವಾಸಿಗರನ್ನು ಶ್ರೀನಗರಕ್ಕೆ ಸಂಪರ್ಕಿಸುತ್ತದೆ. ಶ್ರೀನಗರಕ್ಕೆ ಸಮೀಪವಾಗಿರುವ ರೈಲ್ವೆ ನಿಲ್ದಾಣ ವೆಂದರೆ ಜಮ್ಮುವಿನ ಜಮ್ಮುತಾವಿ ರೈಲು ನಿಲ್ದಾಣ. ಇದು ಸುಮಾರು 290 ಕಿ.ಮೀ ದೂರದಲ್ಲಿದೆ. ಇಲ್ಲಿನ ಸಮೀಪದ ನಗರಗಳಾದ ಜಮ್ಮು, ಚಂಡಿಗಡ, ದೆಹಲಿ ಮತ್ತು ಲೇಹ್ ದಿಂದ ಶ್ರೀನಗರಕ್ಕೆ ಸಾಕಷ್ಟು ಬಸ್ ಸಂಚಾರವಿದೆ.
ಇಲ್ಲಿನ ವಾತಾವರಣ ವರ್ಷದಾದ್ಯಂತ ಬಹಳ ಆಹ್ಲಾದಕರವಾಗಿರುತ್ತದೆ. ಬೇಸಿಗೆ ಮತ್ತು ಚಳಿಗಾಲ ಇಲ್ಲಿನ ಪ್ರಮುಖ ಋತುಮಾನಗಳಾಗಿವೆ. ಇಲ್ಲಿ ಬಹಳ ಕಡಿಮೆ ಮಳೆಯಾಗುತ್ತದೆ. ಇಲ್ಲಿ ಬೇಸಿಗೆಯಲ್ಲಿ ಬಹಳ ಉತ್ತಮವಾದ ಹವಾಮಾನವಿದ್ದು ಚಳಿಗಾಲದಲ್ಲಿ ಬಹಳ ಚಳಿ ಹಾಗೂ ಮಂಜು ಬೀಳುತ್ತಿರುತ್ತದೆ.