ಜಮ್ಮು ಕಾಶ್ಮೀರದಲ್ಲಿ ಸಮುದ್ರಮಟ್ಟಕ್ಕಿಂತ 1107 ಮೀಟರ್ ಎತ್ತರದಲ್ಲಿರುವ ದೋಡಾ ಜಿಲ್ಲೆ, ಉಧಮ್ಪುರದಿಂದ ಬೇರ್ಪಟ್ಟ ನಂತರ 1948 ರಲ್ಲಿ ಜಿಲ್ಲೆಯಾಗಿ ಪರಿಗಣಿಸಲ್ಪಟ್ಟಿತು. ಪ್ರಸ್ತುತ ಪಾಕಿಸ್ತಾನದಲ್ಲಿರುವ ಮುಲ್ತಾನ್ ಎಂಬ ಊರಿನ ಸ್ಟೀಲ್ ವರ್ತಕ, ವಲಸಿಗ ದೀಡಾ ಎಂಬುವವನ ಹೆಸರನ್ನೇ ಜಿಲ್ಲೆಗೆ ಇಡಲಾಯಿತು. ಪ್ರಾಕೃತಿಕ ಸೌಂದರ್ಯದಿಂದ ತುಂಬಿರುವ ದೋಡಾ ಅತ್ಯದ್ಭುತ ಪ್ರವಾಸಿ ತಾಣಗಳಲ್ಲೊಂದು. ಈ ಪ್ರದೇಶದ ಪ್ರಮುಖ ಆಕರ್ಷಣೆಗಳೆಂದರೆ, ಭದೇರ್ವಾ, ಚಿಂತಾ ಕಣಿವೆ, ಸಿಯೋಜ್ ಹುಲ್ಲುಗಾವಲು ಮತ್ತು ಭಲ್ ಪದ್ರಿ. ಭದೇರ್ವಾದಲ್ಲಿ ಪ್ರತಿ ವರ್ಷ ಆಗಸ್ಟ್ನಲ್ಲಿ ನಡೆಯುವ ಧಾರ್ಮಿಕ ಆಚರಣೆ ಹಿಂದೂಗಳ ಪವಿತ್ರ ಕೈಲಾಸ ಯಾತ್ರೆ ಎಂದೂ ಕರೆಸಿಕೊಂಡಿದೆ.
ಭದೇರ್ವಾದಲ್ಲಿ ಸಮುದ್ರಮಟ್ಟಕ್ಕಿಂತ 6500 ಅಡಿ ಎತ್ತರದಲ್ಲಿರುವ ಚಿಂತಾ ಕಣಿವೆ ದಟ್ಟ ಕಾಡಿನಿಂದ ಕಣ್ಮನ ಸೆಳೆಯುತ್ತದೆ. ಭದೇರ್ವಾ ಜಿಲ್ಲೆಯ ಮುಕುಟಕ್ಕೆ ವಜ್ರವೆಂದೇ ಪ್ರಸಿದ್ಧಿಯಾದ ಸಿಯೊಜ್ ಹುಲ್ಲುಗಾವಲು ಪ್ರದೇಶ ದಟ್ಟ ಹಿಮಗಿರಿಯಿಂದ ಕೂಡಿದೆ. ಹಲವು ಪ್ರಸಿದ್ಧ ದೇವಸ್ಥಾನಗಳನ್ನೊಳಗೊಂಡಿರುವುದರಿಂದ ದೋಡಾ ಜಿಲ್ಲೆಗೆ ಧಾರ್ಮಿಕ ಮಹತ್ವವಿದೆ. ಅವುಗಳಲ್ಲಿ ಗುಪ್ತ ಗಂಗಾ ದೇವಸ್ಥಾನ, ಶೀತ್ಲಾ ಮಾತಾ ದೇವಸ್ಥಾನ, ಅಲಲ್ಬಾನಿ ದೇವಸ್ಥಾನ, ನಾಗ್ನಿ ಮಾತಾ ದೇವಸ್ಥಾನಗಳು ಪ್ರಮುಖ. ಸುಬರ್ನಾಗ್ ದೇವಸ್ಥಾನ, ತುಬು ನಾಗ್ ದೇವಸ್ಥಾನ ಮತ್ತು ವಾಸುಕಿ ನಾಗ ದೇವಸ್ಥಾನಗಳೂ ಭದೇರ್ವಾದ ಪ್ರಮುಖ ಧಾರ್ಮಿಕ ಸ್ಥಳಗಳೆನಿಸಿವೆ.
ಸಾರಿಗೆ ವ್ಯವಸ್ಥೆ:
ದೋಡಾದಿಂದ 200 ಕಿ.ಮೀ ದೂರದಲ್ಲಿ ಶ್ರೀನಗರ ವಿಮಾನನಿಲ್ದಾಣವಿದೆ. ಇಲ್ಲಿಂದ ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ ವಿಮಾನನಿಲ್ದಾಣಗಳನ್ನು ಸಂಪರ್ಕಿಸಬಹುದು. ಪ್ರವಾಸಿಗರು ಈ ವಿಮಾನನಿಲ್ದಾಣದ ಹೊರಗಿನಿಂದ ಟ್ಯಾಕ್ಸಿ ಮೂಲಕ ದೋಡಾ ತಲುಪಬಹುದು.
ದೋಡಾದಿಂದ 200 ಕಿ.ಮೀ. ದೂರದಲ್ಲಿ ಶ್ರೀನಗರ ರೈಲ್ವೆ ನಿಲ್ದಾಣವಿದೆ. ಈ ರೈಲು ನಿಲ್ದಾಣದಿಂದ ಪ್ರಮುಖ ನಗರಗಳನ್ನು ಸಂಪರ್ಕಿಸಬಹುದು. ರಾಜ್ಯ ಸಾರಿಗೆ ವ್ಯವಸ್ಥೆ ಜತೆಗೆ ಶ್ರೀನಗರ ಮತ್ತು ಜಮ್ಮುವಿನಿಂದ ಐಶಾರಾಮಿ ಬಸ್ಗಳೂ ಕೂಡ ದೋಡಾಗೆ ತಲುಪಲು ಲಭ್ಯವಿದೆ. ವರ್ಷವಿಡಿ ದೋಡಾದಲ್ಲಿ ತಂಪಾದ ವಾತಾವರಣವಿರುತ್ತದೆ. ಆದರೂ, ದೋಡಾ ಪ್ರವಾಸಕ್ಕೆ ಮಾರ್ಚ್ ಮತ್ತು ನವೆಂಬರ್ ತಿಂಗಳು ಸೂಕ್ತ. ಚಳಿಗಾಲದಲ್ಲಿ ದೋಡಾದ ಮಂಜು ಮುಸುಕನ್ನು ಕಣ್ತುಂಬಿಕೊಳ್ಳುವುದೇ ಸ್ವರ್ಗಾನುಭವ.