ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ ರಾಜ ಅವಂತಿವರ್ಮನ್ ಕಾಲದಲ್ಲಿ. ಅವಂತೀಶ್ವರ ದೇವಸ್ಥಾನವು ಹೆಸರೇ ಹೇಳುವಂತೆ ಶಿವನ ದೇವಸ್ಥಾನ. ಇನ್ನು ಅವಂತಿಸ್ವಾಮಿ ದೇವಸ್ಥಾನವು ವಿಷ್ಣುವಿಗೆ ಅರ್ಪಿಸಲ್ಪಟ್ಟಿದೆ. ಈ ದೇವಸ್ಥಾನಗಳ ವಾಸ್ತುಶಿಲ್ಪವು ಗ್ರೀಕರ ವಾಸ್ತು ಶೈಲಿಯನ್ನು ಹೋಲುತ್ತದೆ.
ಆದರೆ ಈ ಪುರಾತನ ದೇವಸ್ಥಾನಗಳು ಈಗ ಶಿಥಿಲಗೊಂಡ ಸ್ಥಿತಿಯಲ್ಲಿವೆ. ಒಮ್ಮೆ ಅವಂತೀಶ್ವರ ದೇಗುಲಕ್ಕೆ ಸುಲ್ತಾನ್ ಸಿಕಂದರ್ ದಾಳಿ ಮಾಡಿದ್ದ. ನಂತರ ಈ ದೇವಸ್ಥಾನವನ್ನು ಬುತ್ಶಕೀನ್ ಎಂದು ಇದನ್ನು ಮರುನಾಮಕರಣ ಮಾಡಲಾಯಿತು. ಈತ ಈ ಪ್ರಾಂತ್ಯವನ್ನು ಆಳಿದ ಎಂದು ಹೇಳಲಾಗುತ್ತದೆ. ದಾಳಿಯ ಸಂದರ್ಭದಲ್ಲಿ ಈ ದೇವಸ್ಥಾನ ಬಹುತೇಕ ಭಾಗ ಶಿಥಿಲಗೊಂಡಿದೆ. ಅಲ್ಲದೇ ಈ ದೇವಸ್ಥಾನ ನಿರ್ಮಾಣಕ್ಕೆ ಬಳಸಿದ ಕಚ್ಚಾವಸ್ತುಗಳು ದಾಳಿಗೆ ತುತ್ತಾದಾಗ ಸುಲಭವಾಗಿ ನಾಶಗೊಳ್ಳುವಂತಿದ್ದವು. ಅಂದರೆ ಸಾಕಷ್ಟು ಗಟ್ಟಿಮುಟ್ಟಾಗಿ ಈ ದೇವಸ್ಥಾನವನ್ನು ನಿರ್ಮಿಸಲಾಗಿರಲಿಲ್ಲ ಎಂದು ಹೇಳಲಾಗುತ್ತದೆ.
ಕಾಲಾನಂತರದಲ್ಲಿ ದೇವಸ್ಥಾನ ಅವಶೇಷಗಳಾಗಿ ಭೂಮಿಯಲ್ಲಿ ಹೂತು ಹೋಗಿತ್ತು. 18ನೇ ಶತಮಾನದಲ್ಲಿ ಬ್ರಿಟೀಷರ ಆಡಳಿತವಿದ್ದಾಗ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲಾಯಿತು. ಇಲ್ಲಿನ ಒಂದಷ್ಟು ಮೂರ್ತಿಗಳನ್ನು ಬ್ರಿಟೀಷರು ಹೊತ್ತೊಯ್ದಿದ್ದಾರೆ. ಬ್ರಿಟೀಷರ ಕೈಯಿಂದ ಬಚಾವಾದ ಒಂದಷ್ಟು ಮೂರ್ತಿಗಳು ಶ್ರೀನಗರದ ಶ್ರೀ ಪ್ರತಾಪ ಸಿಂಗ್ ಮ್ಯೂಸಿಯಂನಲ್ಲಿವೆ. ಅವಂತೀಶ್ವರ ಮತ್ತು ಅವಂತಿಸ್ವಾಮಿ ದೇವಸ್ಥಾನಗಳು ಶಿಥಿಲಗೊಂಡಿದ್ದರೂ, ಕೆಲವು ಮೂರ್ತಿಗಳು ವಿವಿಧ ರೂಪದಲ್ಲಿ ಇಲ್ಲಿ ಇನ್ನೂ ಕಾಣಸಿಗುತ್ತವೆ.
ಅವಂತೀಪುರಕ್ಕೆ ಬರಲು ಯೋಜಿಸಿದರೆ, ಪ್ರವಾಸಿಗರು ರೈಲು, ವಿಮಾನ ಅಥವಾ ರಸ್ತೆಯ ಮೂಲಕ ಆಗಮಿಸಬಹುದು. ಅವಂತೀಪುರಕ್ಕೆ ಸಮೀಪದ ವಿಮಾನ ನಿಲ್ದಾಣವು ಶ್ರೀನಗರದಲ್ಲಿದ್ದು, ಇಲ್ಲಿಂದ ಸುಮಾರು 29 ಕಿ.ಮೀ ದೂರದಲ್ಲಿದೆ. ಇನ್ನು ಜಮ್ಮು ತಾವಿ ರೈಲ್ವೆ ನಿಲ್ದಾಣವು ಅವಂತಿಪುರಕ್ಕೆ ಸಮೀಪದ ರೈಲ್ವೆ ನಿಲ್ದಾಣ. ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಇಲ್ಲಿಗೆ ರೈಲು ಸಂಪರ್ಕವಿದೆ. ಪ್ರವಾಸಿಗರು ಬಸ್ಸಿನಲ್ಲೂ ಅವಂತಿಪುರಕ್ಕೆ ಪ್ರಯಾಣಿಸಬಹುದು. ಆದರೆ ನೇರವಾಗಿ ಅವಂತಿಪುರಕ್ಕೆ ಬಸ್ ಸೌಲಭ್ಯವಿಲ್ಲ. ತಮ್ಮ ತಾಣದಿಂದ ಪ್ರವಾಸಿಗರು ಶ್ರೀನಗರಕ್ಕೆ ಬಂದು ಅಲ್ಲಿಂದ ಇನ್ನೊಂದು ಬಸ್ ಹಿಡಿದು ಅವಂತೀಪುರಕ್ಕೆ ಆಗಮಿಸಬೇಕು.
ಈ ಸುಂದರ ತಾಣವನ್ನು ವೀಕ್ಷಿಸುವ ಮನಸಿದ್ದವರು ಏಪ್ರಿಲ್ನಿಂದ ನವೆಂಬರಿನ ಅವಧಿಯಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಒಳಿತು. ಯಾಕೆಂದರೆ ಈ ಅವಧಿಯಲ್ಲಿ ಅವಂತಿಪುರದ ವಾತಾವರಣ ಅತ್ಯಂತ ಹಿತವಾಗಿರುತ್ತದೆ.