ಅನಂತ್ನಾಗ್ ಜಿಲ್ಲೆಯು ಜಮ್ಮು ಮತ್ತು ಕಾಶ್ಮೀರ ಕಣಿವೆಯ ನೈಋತ್ಯ ದಿಕ್ಕಿನಲ್ಲಿ ನೆಲೆಗೊಂಡಿದ್ದು, ಈ ರಾಜ್ಯದ ವಾಣಿಜ್ಯ ಕೇಂದ್ರವಾಗಿ ಸಹ ಇದು ಖ್ಯಾತಿಪಡೆದಿದೆ. ಈ ಸ್ಥಳವನ್ನು ಕಾಶ್ಮೀರದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರಾಂತ್ಯವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಪೂ. 5000 ಇಸವಿಯಲ್ಲಿ ಈ ಪ್ರಾಂತ್ಯವು ಮೊಟ್ಟ ಮೊದಲ ನಗರೀಕರಣ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು, ಒಂದು ಮಾರುಕಟ್ಟೆ ನಗರವಾಗಿ ರೂಪುಗೊಂಡಿತ್ತು. ಈ ನಗರವು ಶ್ರೀನಗರ್, ಕಾರ್ಗಿಲ್, ಪುಲ್ವಾಮ, ದೋಡಾ ಮತ್ತು ಕಿಶ್ತವರ್ ನಗರಗಳಿಂದ ಸುತ್ತುವರೆದಿದೆ.
ಈ ಜಿಲ್ಲೆಯ ಹೆಸರು ಒಂದು ಜನಪ್ರಿಯ ಜನಪದ ಕಥೆಯಿಂದ ಬಂದಿದೆ. ಆ ಕಥೆಯ ಪ್ರಕಾರ, ಪರಶಿವನು ಅಮರನಾಥ್ ಗುಹೆಗೆ ಸಾಗುವ ಹಾದಿಯಲ್ಲಿ ತನ್ನ ಎಲ್ಲಾ ಒಡವೆಗಳನ್ನು ವಿಸರ್ಜಿಸಿದನಂತೆ. ಆ ವಿಸರ್ಜಿಸಿದ ಸ್ಥಳದಲ್ಲಿದ್ದ ಅಸಂಖ್ಯಾತ ಹಾವುಗಳನ್ನು ಅನಂತ್ನಾಗ್ ಎಂದು ಕರೆಯಲಾಯಿತಂತೆ.
ಪ್ರಸ್ತುತ ಅನಂತ್ನಾಗ್ ಗೂಲ್ ಗುಲಾಬ್ ಗಢ್, ದೋಡಾ ಮತ್ತು ಬುಧಾಲ್ ಎಂಬ ಮೂರು ತಾಲ್ಲೂಕುಗಳನ್ನು ಹೊಂದಿದೆ. ಈ ಪ್ರಾಂತ್ಯವು ಹಿಂದೂ ಮತ್ತು ಮುಸಲ್ಮಾನರ ಹಲವಾರು ಧಾರ್ಮಿಕ ಕೇಂದ್ರಗಳಿಗೆ ಖ್ಯಾತಿಯನ್ನು ಪಡೆದಿದೆ. ಅವುಗಳಲ್ಲಿ ಹಝರತ್ ಬಾಬಾ ರೆಷಿ, ಗೋಸ್ವಾಮಿ ಗುಂಡ್ ಆಶ್ರಮ್, ಶಿಲಾಗ್ರಾಮ್ ದೇವಾಲಯ, ನಿಲಾ ನಾಗ್ಗಳು ಅನಂತ್ನಾಗ್ ಜಿಲ್ಲೆಯಲ್ಲಿರುವ ಕೆಲವೊಂದು ಪ್ರಮುಖ ದೇವಾಲಯಗಳಾಗಿವೆ. ಈ ಪ್ರಾಂತ್ಯದಲ್ಲಿ ಹನುಮಾನ್ ದೇವಾಲಯ, ಶಿವ ದೇವಾಲಯ, ಸೀತಾ ದೇವಾಲಯ ಮತ್ತು ಗಣೇಶ ದೇವಾಲಯಗಳು ಸೇರಿದಂತೆ ಏಳು ದೇವಾಲಯಗಳ ಒಂದು ಸಂಕೀರ್ಣವೊಂದಿದೆ. ದೇವಾಲಯ ಮತ್ತು ಗುಡಿಗಳ ಹೊರತಾಗಿ ಇಲ್ಲಿ ಸಲಗ್ ನಾಗ್, ಮಲಿಕ್ ನಾಗ್ ಮತ್ತು ನಾಗ್ ಬಾಲ್ಗಳಂತಹ ಸುಂದರವಾದ ಝರಿಗಳು ಹರಿಯುತ್ತವೆ.
ಅನಂತ್ನಾಗ್ಗೆ ಹೋದಾಗ ನೀವು ಅಲ್ಲಿನ ಮಾರ್ತಾಂಡ ಸೂರ್ಯ ದೇವಾಲಯಕ್ಕೆ ಭೇಟಿ ಕೊಡಬಹುದು. ಇದು ಅನಂತ್ನಾಗ್ನಿಂದ 9 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಸೂರ್ಯದೇವನಿಗಾಗಿ ರಾಜ ಲಲಿತಾದಿತ್ಯನು ನಿರ್ಮಿಸಿದನು. ಈ ದೇವಾಲಯದ ವಾಸ್ತು ಶಿಲ್ಪವು ಕಾಶ್ಮೀರಿ ಹಿಂದೂಗಳ ಕಲಾ ನೈಪುಣ್ಯತೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಅಭಿವ್ಯಕ್ತಿಪಡಿಸುತ್ತದೆ. ಪ್ರಸ್ತುತ ಮಾರ್ತಂಡ ಸೂರ್ಯ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ. ಪ್ರವಾಸಿಗರು ಈ ದೇವಾಲಯವಿದ್ದ ಸ್ಥಳದಲ್ಲಿ ಅಳಿದುಳಿದ ಅವಶೇಷಗಳನ್ನು ಮಾತ್ರ ನೋಡಬಹುದು.
ಈ ದೇವಾಲಯವು ಹಿಮಾಚ್ಛಾಧಿತವಾದ ಪರ್ವತಗಳ ನಡುವೆ ನೆಲೆಗೊಂಡಿದೆ. ಇದರ ಜೊತೆಗೆ ಇಲ್ಲಿ ಪ್ರವಾಸಿಗರು 15ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶೇಖ್ ಝೈನ್-ಉದ್-ದಿನ್ರವರ ಐಶ್ಮುಖಮ್ರವರ ಪವಿತ್ರ ಸಮಾಧಿಯನ್ನು ನೋಡಬಹುದು. ಇವರು ತಮ್ಮ ಸಂಪೂರ್ಣ ಜೀವನವನ್ನು ಅಲ್ಲಾಗೆ ಸಮರ್ಪಿಸಿಕೊಂಡಿದ್ದರು. ಇವರು ತಮ್ಮ ಕಾರ್ಯವ್ಯಾಪ್ತಿಯನ್ನು ಒಂದು ಗುಹೆಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರು. ಅಲ್ಲದೆ ಅಲ್ಲಾನ ಕುರಿತಾಗಿ ಸ್ಥಳೀಯರಿಗೆ ಪ್ರವಚನಗಳನ್ನು ನೀಡುತ್ತಿದ್ದರು.
ಪ್ರವಾಸಿಗರಿಗೆ ಸಮಯಾವಕಾಶವಿದ್ದರೆ ಅವರು ಸೈಯದ್ ಶಾಬ್ರವರ ಮಸೀದಿ, ನಾಗ್ಬಾಲ್, ಖೇರ್ಬಾವನಿ ಅಷ್ಟಪನ್ ಮತ್ತು ಐಶ್ಮುಖಮ್ ಎಂಬ ಧಾರ್ಮಿಕ ಸ್ಥಳಗಳನ್ನು ಸುತ್ತಿ ನೋಡಬಹುದು. ಜಾನ್ ಬಿಶಪ್ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿರುವ ಒಂದು ಸಣ್ಣ ಚರ್ಚ್ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. 1982 ರಲ್ಲಿ ಈ ಚರ್ಚನ್ನು ಪ್ರೊಟೆಸ್ಟೆಂಟ್ ಕ್ರೈಸ್ತರ ಮತ್ತು ಅಧಿಕಾರಿಗಳ ಅಗತ್ಯಗಳನ್ನು ಪೂರೈಸುವ ಸಲುವಾಗಿ ನಿರ್ಮಿಸಲಾಯಿತು. ಈ ಚರ್ಚ್ ಈ ಪ್ರಾಂತ್ಯ ಮತ್ತು ಸುತ್ತ-ಮುತ್ತಲಿನ ಪ್ರದೇಶದಲ್ಲಿ ನೆಲೆಸಿರುವ ಕ್ರೈಸ್ತ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಪ್ರವಾಸಿಗರು ಅನಂತ್ನಾಗ್ಗೆ ಸಾರಿಗೆಯ ಮೂರು ಪ್ರಕಾರಗಳ ಮೂಲಕವು ಸುಲಭವಾಗಿ ತಲುಪಬಹುದು. ಶ್ರೀ ನಗರ್ ವಿಮಾನ ನಿಲ್ದಾಣವು ಅನಂತ್ನಾಗ್ನಿಂದ 62 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಶೇಖ್ ಉಲ್ ಅಲಂ ವಿಮಾನ ನಿಲ್ದಾಣವೆಂದು ಸಹ ಕರೆಯಲ್ಪಡುತ್ತದೆ. ಇದು ನವದೆಹಲಿ ಮತ್ತು ಜಮ್ಮು ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ವಿದೇಶಿಯರು ದೇಶದ ರಾಜಧಾನಿಯನ್ನು ತಲುಪಿದ ಮೇಲೆ ಅಲ್ಲಿಂದ ಶ್ರೀನಗರಕ್ಕೆ ಸಂಪರ್ಕ ವಿಮಾನವನ್ನು ಹಿಡಿದು ಅನಂತ್ನಾಗ್ ತಲುಪಬಹುದು. ಅಲ್ಲಿಂದ ಅನಂತ್ನಾಗ್ಗೆ ಟ್ಯಾಕ್ಸಿ ಮತ್ತು ಕ್ಯಾಬ್ಗಳ ಮೂಲಕ ತಲುಪಬಹುದು.
ಅನಂತ್ನಾಗ್ ಜಿಲ್ಲೆಗೆ ರೈಲಿನ ಮೂಲಕ ಸಹ ತಲುಪಬಹುದು. ಇದರ ರೈಲ್ವೇ ಜಂಕ್ಷನ್ ಜಮ್ಮು ಮತ್ತು ಕಾಶ್ಮೀರದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಅನಂತ್ನಾಗ್ ತಲುಪಲು ಇಚ್ಛಿಸುವ ಪ್ರವಾಸಿಗರು ಮೊದಲು ಜಮ್ಮುವಿನ ತಾವಿ ರೈಲ್ವೇ ನಿಲ್ದಾಣವನ್ನು ತಲುಪಬೇಕು. ಇದು ಇಲ್ಲಿಂದ 247 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕ ಅನಂತ್ನಾಗ್ ತಲುಪಲು ಬಯಸುವವರು ತಮ್ಮ ಸ್ವಂತ ಕಾರ್ ಅಥವಾ ಬಾಡಿಗೆ ಕಾರಿನ ಮೂಲಕ ಇಲ್ಲಿಗೆ ತಲುಪಬಹುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಪ್ರವಾಸಿಗರಿಗೆ ಅನಂತ್ನಾಗ್ ತಲುಪಿಸಲು ನೆರವಾಗುತ್ತವೆ. ಪ್ರವಾಸಿಗರು ಇಲ್ಲಿಗೆ ವಸಂತ ಮತ್ತು ಬೇಸಿಗೆ ಕಾಲದಲ್ಲಿ ಭೇಟಿಕೊಟ್ಟರೆ ಉತ್ತಮವೆಂದು ಹೇಳಬಹುದು.