'ಲಡಾಖ್ ನ ದ್ವಾರ' ಎಂತಲೂ ಕರೆಯಲಾಗುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದೆ. ಪ್ರಪಂಚದಲ್ಲೆ ಸೈಬೀರಿಯಾದ ನಂತರ ಎರಡನೇಯ ಅತಿ ಶೀತಮಯ ಪ್ರದೇಶ ಇದೆಂದು ಪರಿಗಣಿಸಲಾಗಿದೆ. 1999 ರಲ್ಲಿ ಭಾರತ ಹಾಗು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದ ತಾಣವಾದ ಕಾರ್ಗಿಲ್ ನಿಂದ ಈ ಪ್ರದೇಶವು ಕೇವಲ 62 ಕಿ.ಮೀ ದೂರದಲ್ಲಿದೆ. ದ್ರಾಸ್ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಲಡಾಖ್ ಮಾತ್ರವಲ್ಲದೆ, ಇತರೆ ಪ್ರಖ್ಯಾತ ಗಿರಿಧಾಮಗಳು ಹಾಗು ಜಮ್ಮು ಮತ್ತು ಕಾಶ್ಮೀರದ ನಗರಗಳಿಗೆ ದ್ರಾಸ್ ಪ್ರವೇಶ ದ್ವಾರವಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪಟ್ಟಣವು ತನ್ನಲ್ಲಿರುವ ಕಡಿದಾದ/ಒರಟಾದ ಭೂಮಿಗಳಿಂದ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು ಪ್ರವಾಸಿಗರ ಮಧ್ಯೆ ಜನಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿನ ಸುರು ಕಣಿವೆಯಿಂದ ಚಾರಣವನ್ನು ಕೈಗೊಳ್ಳಬಹುದು. ಇಷ್ಟೆ ಅಲ್ಲ, ಪ್ರವಾಸಿಗರು 5200 ಮೀ. ಎತ್ತರದ ಮಾರ್ಗವಾದ ಅಮರ್ನಾಥ ಗುಹೆಯ ಚಾರಣ ಮಾರ್ಗವನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.
ಪ್ರವಾಸಿಗರು ದ್ರಾಸ್ ಗೆ ಭೇಟಿ ನೀಡಿದಾಗ ದ್ರಾಸ್ ಯುದ್ಧ ಸ್ಮಾರಕವನ್ನು ನೋಡಲು ಮರೆಯಬಾರದು. ಈ ಸ್ಮಾರಕವನ್ನು ಕಾರ್ಗಿಲ್ ಕಾಳಗದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ದಾಖಲೆಗಳ ಪ್ರಕಾರ, ಈ ಯುದ್ಧದಲ್ಲಿ ಎರಡೂ ಕಡೆಯ(ಭಾರತ ಮತ್ತು ಪಾಕಿಸ್ತಾನ)ಸುಮಾರು 1200 ಸೈನಿಕರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ಸ್ಮಾರಕದ ಪಕ್ಕದಲ್ಲೆ ಸಂಗ್ರಹಾಲಯವೊಂದಿದ್ದು, ಯುದ್ಧದ ಹಲವಾರು ನೆನಪಿನ ಸ್ಮರಣಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇದರ ಪಕ್ಕದಲ್ಲೆ ದ್ರೋಪದಿ ಕುಂಡವಿದ್ದು ಅನ್ವೇಷಿಸಲು ಯೋಗ್ಯವಾದ ತಾಣವಾಗಿದೆ.
ದ್ರಾಸ್ ಪಟ್ಟಣವನ್ನು ವಾಯುಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಬೇಸಿಗೆ, ಅಂದರೆ ಜೂನ್ ಹಾಗು ಸೆಪ್ಟಂಬರ್ ಮಧ್ಯದ ಅವಧಿ.