ಯಾರಿಗಾದರೂ ಸರಿ ತಂತ್ರ-ಮಂತ್ರ ವಿದ್ಯೆಗಳೆಂದರೆ ಸ್ವಲ್ಪ ಮಟ್ಟಿಗೆ ಕುತೂಹಲಕರ ಭಯ ಮೂಡುವುದು ಸಹಜ. ಏನಿದು ತಂತ್ರವಿದ್ಯೆ? ಏನೆಲ್ಲ ಮಾಡುತ್ತಾರೆ? ಎಂಬ ಅಂಶಗಳು ಕುತೂಹಲ ಕೆರಳಿಸಿದರೆ, ಇದರಿಂದ ಏನಾಗುತ್ತದೆ? ಏನಾದರೂ ಅಪಾಯವಿದೆಯೆ? ಎಂಬ ಸಂದೇಹಗಳು ಭಯ ಮೂಡಿಸುತ್ತವೆ.
ಅದೇನೆ ಇರಲಿ ತಂತ್ರವಿದ್ಯೆ ಭಾರತದಲ್ಲಿ ಅತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಒಂದು ಅದ್ಭುತ ವಿದ್ಯಾಶಾಸ್ತ್ರವಾಗಿರುವುದಂತೂ ಸುಳ್ಳಲ್ಲ. ಇಂದು ಅನೇಕ ಜನರು ಈ ತಂತ್ರಶಾಸ್ತ್ರವನ್ನು ಮೂಢನಂಬಿಕೆ ಎನ್ನುವವರಿದ್ದಾರೆ. ಅದರಂತೆ ಇದರಲ್ಲಿ ನಂಬಿಕೆಯಿಟ್ಟ ಜನರ ಸಂಖ್ಯೆಗೆ ಏನೂ ಕಮ್ಮಿ ಇಲ್ಲ.
ವೇದ ಪುರಾಣಗಳಲ್ಲೆ ತಂತ್ರಶಾಸ್ತ್ರದ ಕುರಿತು ಅನೇಕ ಉಲ್ಲೇಖವಿದ್ದು ಇದನ್ನು ಭಯಂಕರವಾದ ಅಥವಾ ತೀವ್ರಗತಿಯಲ್ಲಿ ಸಾಧನೆಗೈಯಬಹುದಾದ ವಿದ್ಯೆ ಎಂದು ಹೇಳಲಾಗಿದೆ. ತಮಿಳಿನ ಪ್ರಸಿದ್ಧ 18 ಸಿದ್ಧರ ಪೈಕಿ ಪ್ರಮುಖರಾದ ತಿರುಮೂಲಾರ್ ಹೇಳುವ ಪ್ರಕಾರ ವೈದಿಕ ಆಚರಣೆಯು ಅಧ್ಯಾತ್ಮದೆಡೆ ದಾರಿ ತೋರುವ ಮಾರ್ಗವಾಗಿದ್ದು ಅದರ ಮೇಲೆ ನಡೆಯುತ್ತಲೆ ಗುರಿ ತಲುಪಬೇಕು.
ಆದರೆ, ತಾಂತ್ರಿಕ ವಿಧಿ-ವಿಧಾನಗಳು ಅಧ್ಯಾತ್ಮ ಅಥವಾ ಸಾಧನೆಯೆಡೆ ಕುದುರೆಯ ಮೂಲಕ ಸವಾರಿ ಮಾಡುತ್ತ ಬಲು ವೇಗವಾಗಿ ತಲುಪಬಹುದಾದ ಮಾರ್ಗವಾಗಿದೆ. ಮುಖ್ಯವಾಗಿ ತಂತ್ರಶಾಸ್ತ್ರದಲ್ಲಿ ವಿಧಿ ವಿಧಾನಗಳು ಅತ್ಯಂತ ಕಷ್ಟಕರವಾಗಿದ್ದು ಸಾಕಷ್ಟು ಹಿಂಸಾತ್ಮಕ ಹಾಗೂ ಸಾತ್ವಿಕವಲ್ಲದ ಅಂಶಗಳಿಂದ ಕೂಡಿರುವುದೆ ಈ ಶಾಸ್ತ್ರದ ಕುರಿತು ತಿಳಿಯುವ ಕುತೂಹಲ ಹಲವರಲ್ಲಿ ಹೆಚ್ಚಿಸಿದೆ.
ವಿಕ್ರಮಶಿಲಾ ಎಂಬ ತಂತ್ರಶಾಸ್ತ್ರದ ವಿದ್ಯಾಲಯ!
ಇದರಂತೆ ಈ ತಂತಶಾಸ್ತ್ರಕ್ಕೆಂದೆ ಹೆಸರುವಾಸಿಯಾದ ಕೆಲವು ಗುರುತರವಾದ ದೇವಾಲಯಗಳು ಭಾರತದಲ್ಲಿ ಕಂಡುಬರುತ್ತವೆ. ಈ ದೇವಾಲಯಗಳು ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ್ದರೂ ಸಹ ಎಲ್ಲ ರೀತಿಯ ಭಕ್ತಾದಿಗಳು (ಸಾತ್ವಿಕ ಮಾರ್ಗ ಹಾಗೂ ಮಾಂತ್ರಿಕ ಮಾರ್ಗ) ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇವು ಅತ್ಯಂತ ಶಕ್ತಿಶಾಲಿ ಹಾಗೂ ಜಾಗೃತ ಸ್ಥಳಗಳೆಂದು ಪ್ರಸಿದ್ಧಿ ಪಡೆದಿವೆ. ಹಾಗಾದರೆ ಆ ದೇವಾಲಯಗಳು ಯಾವುವು ಮತ್ತು ಅವು ಎಲ್ಲಿವೆ, ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಇವು ಸಾಕಷ್ಟು ಮಹತ್ತರ ಕೊಡುಗೆ ನೀಡುತ್ತವೆ.

ಯಾರು ಮಹತ್ವ?
ತಂತ್ರಶಾಸ್ತ್ರದಲ್ಲಿ ಮುಖ್ಯವಾಗಿ ಕಾಳಿ ಮಾತೆಯ ಭಯಂಕರ ರೂಪವನ್ನು ಆರಾಧಿಸಲಾಗುತ್ತದೆ. ಮಾಂಸ-ಮದ್ಯಗಳಂತಹ ದ್ರವ್ಯಗಳನ್ನು ಸಾಮಾನ್ಯವಾಗಿ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಇಲ್ಲಿ ಸಾಕಷ್ಟು ವಿವಿಧಾನಗಳಿದ್ದು ಬಹಳ ಅಚ್ಚುಕಟ್ಟಾಗಿ ಅವುಗಳನ್ನು ನೆರವೇರಿಸುವುದರ ಮೂಲಕ ಪ್ರತಿಫಲವು ಅತ್ಯಂತ ಶೀಘ್ರವಾಗಿ ಉಂಟಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

ಅಸ್ಸಾಂ
ಅಸ್ಸಾಂ ರಾಜ್ಯದ ದೊಡ್ಡ ನಗರ ಪ್ರದೇಶವಾದ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿಯ ದೇವಾಲಯವು ತಾಂತ್ರಿಕ ವಿದ್ಯೆಗಳಿಗೆ ಮೊದಲಿನಿಂದಲೂ ದೇಶದಲ್ಲಿ ಹೆಚ್ಚಿನ ಪ್ರಸಿದ್ಧಿಗಳಿಸಿರುವ ದೇವಾಲಯವಾಗಿದೆ. ಗುವಾಹಟಿ ನಗರದ ಹೊರವಲಯದ ನೀಲಾಚಲ ಬೆಟ್ಟದಲ್ಲಿ ಸ್ಥಿತವಿರುವ ಈ ಶಕ್ತಿದೇವಿಯ ದೇವಾಲಯವು ತಂತ್ರ ಮಾರ್ಗ ಅನುಸರಿಸುವವರಿಗೂ ಹಾಗೂ ಸಾಮಾನ್ಯ ಭಕ್ತಾದಿಗಳಿಗೂ ಮಹತ್ತರವಾದ ದೇವಾಲಯವಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Bothalal

ಏಕೆ ಶಕ್ತಿಶಾಲಿ
ಇದೊಂದು ಶಕ್ತಿಶಾಲಿಯಾದ ಶಕ್ತಿಪೀಠವಾಗಿದ್ದು ಸತಿ ದೇವಿಯ ಯೋನಿ ಭಾಗವು ಬಿದ್ದ ಸ್ಥಳವೆನ್ನಲಾಗುತ್ತದೆ. ಹಾಗಾಗಿ ಇಲ್ಲಿ ಶಕ್ತಿ ದೇವಿಯು ಯೋನಿಯ ಆಕಾರದಲ್ಲಿ ಕಂಡುಬರುತ್ತಾಳೆ. ಅಲ್ಲದೆ ಇಲ್ಲಿ ವರ್ಷಕ್ಕೊಮ್ಮೆ ದೇವಿಯ ಋತುಸ್ರಾವವನ್ನು ಅದ್ದೂರಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೂಲೆ ಮೂಲೆಗಳಿಂದ ಅನೇಕ ಮಂತ್ರವಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Vikramjit Kakati

ನೀರಿನ ಮೂಲ
ಈ ದೇವಾಲಯವು ಮೂಲತಃ ಒಂದು ನೈಸರ್ಗಿಕ ಗುಹೆಯನ್ನು ಹೊಂದಿದ್ದು ನೆಲಮಾಳಿಗೆಯನ್ನು ಹೊಂದಿದೆ. ಈ ನೆಲ ಮಾಳಿಗೆಯಲ್ಲಿ ನೀರಿನ ಮೂಲವಿದ್ದು ಅಲ್ಲಿ ಮಾತೃ ಯೋನಿಯ ರೂಪವನ್ನು ಕಾಣಬಹುದಾಗಿದೆ. ಈ ಯೋನಿಯಾಕಾರವನ್ನು ದೇವಿಯನ್ನಾಗಿ ಆರಾಧಿಸಲಾಗುತ್ತದೆ. ಶತಮಾನಗಳಿಂದಲೂ ಇಲ್ಲಿ ತಾಂತ್ರಿಕ ಅನುಷ್ಠಾನಗಳು ನಡೆದುಕೊಂಡು ಬಂದಿವೆ.

ಕೊಲ್ಕತ್ತಾ
ಸಾಮಾನ್ಯ ಭಕ್ತ ಜನರಿಗೂ ಪವಿತ್ರವಾಗಿರುವ ಈ ಕಾಳಿ ಮಾತೆಯ ಮಂದಿರವು ಮಾಂತ್ರಿಕರಿಗೆ ಅಥವಾ ಮಂತ್ರವಾದಿಗಳಿಗೆ ತೀರ್ಥಕ್ಷೇತ್ರವಾಗಿದೆ. ಉತ್ತರ ಭಾರತದ ಮೂಲೆ ಮೂಲೆಗಳಿಂದ ತಂತ್ರಶಾಸ್ತ್ರ ಅನುಸರಿಸುವ ಭಕ್ತಾದಿಗಳು ಈ ಕಾಳಿ ದೇವಿಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರದಲ್ಲಿ ಸ್ಥಿತವಿದೆ.
ಚಿತ್ರಕೃಪೆ: Sankarrukku

ಆದಿ ಗಂಗಾ
ಹಿಂದೆ ಹೂಗ್ಲಿ ನದಿಯ ತಟದಲ್ಲಿ ನೆಲೆಸಿತ್ತು ಈ ದೇವಾಲಯ ಕ್ರಮೇಣವಾಗಿ ಹೂಗ್ಲಿ ನದಿಯು ತನ್ನ ಪಥ ಬದಲಾಯಿಸಿತು. ಇಂದಿಗೂ ಇದು ಆದಿ ಗಂಗಾ ಎಂಬ ಸಣ್ಣ ನೀರಿನ ಮೂಲವೊಂದರ ತಟದ ಮೇಲೆ ಸ್ಥಿತವಿದೆ. ಆದಿ ಗಂಗಾ ನೀರಿನ ಮೂಲವೆ ಹೂಗ್ಲಿ ನದಿಯ ಮುಖ್ಯ ಭಾಗವಾಗಿದೆ ಎನ್ನಲಾಗುತ್ತದೆ. ಇದು ಮುಂದೆ ಹರಿಯುತ್ತ ಮತ್ತೆ ಹೂಗ್ಲಿ ನದಿಯೊಂದಿಗೆ ಸಮಾಗಮಗೊಳ್ಳುತ್ತದೆ.
ಚಿತ್ರಕೃಪೆ: Balajijagadesh

ಯಾರಿಗೆ?
ತಾಂತ್ರಿಕ ಮಾರ್ಗದ ಭಕ್ತಾದಿಗಳಿಗೆ ಇದೊಂದು ತೀರ್ಥಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ತಂತ್ರವಾದಿಗಳು ದೇವಿಯ ಮುಂದೆ ನಿಂತು ತಮ್ಮ ಜೀವನವನ್ನು ಸಾಧನೆಗೆ ಮೀಸಲಿಟ್ಟು ಶಿಸ್ತುಬದ್ಧವಾದಜೀವನ ಹಾಗೂ ವಿಧವತ್ತಾದ ಆಚರಣೆಗಳನ್ನು ಆಚರಿಸುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಮೂಲಗಳ ಪ್ರಕಾರ ಕಾಲಿಘಾಟ್ ನಿಂದಲೆ ಈ ನಗರಕ್ಕೆ ಕಲ್ಕತ್ತಾ (ಇಂದು ಕೊಲ್ಕತ್ತಾ) ಎಂಬ ಹೆಸರು ಬಂದಿತೆನ್ನಲಾಗಿದೆ. ದೇವಾಲಯದ ಒಂದು ಹಳೆಯ ಚಿತ್ರ.
ಚಿತ್ರಕೃಪೆ: Clyde Waddell

ಭುವನೇಶ್ವರ
ಒಡಿಶಾದ ರಾಜಧಾನಿ ನಗರವಾದ ಭುವನೇಶ್ವರ ನಗರದಲ್ಲಿ ಈ ಪುರಾತನ ದೇವಾಲಯವನ್ನು ಕಾಣಬಹುದು. ಚಾಮುಂಡಾ ದೇವಿಗೆ ಮುಡಿಪಾದ ದೇವಾಲಯ ಇದಾಗಿದ್ದು ತಾಂತ್ರಿಕ ಶೈಲಿಯ ಆರಾದನೆಗೆ ಇದು ಪ್ರಖ್ಯಾತವಾಗಿದೆ. ಇಲ್ಲಿ ಚಾಮುಂಡಾ ದೇವಿಯ ಭಯಂಕರ ರೂಪದಲ್ಲಿದ್ದು ರುಂಡಮಾಲೆ ಧರಿಸಿ, ಹಾವು, ಕತ್ತಿ, ಗುರಾಣಿ, ಬಿಲ್ಲು, ಬಾಣದಾಯುಧಗಳನ್ನು ಹಿಡಿದು ರಕ್ಕಸನೊಬ್ಬನನ್ನು ಸಂಹರಿಸುವ ಭಂಗಿಯಲ್ಲಿದ್ದಾಳೆ. ಸಾಂದರ್ಭಿಕ.
ಚಿತ್ರಕೃಪೆ: commons.wikimedia

ತಿನಿ ಮುಂಡಿಯಾ
ತಾಂತ್ರಿಕ ಮಾರ್ಗದವರು, ಮಂತ್ರವಾದಿಗಳಂತಹ ಭಕ್ತರಲ್ಲದೆ ಇತರೆ ಸಾಮಾನ್ಯ ದೇವಿಯ ಭಕ್ತರೂ ಸಹ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ಸ್ಥಳೀಯವಾಗಿ ತಿನಿ ಮುಂಡಿಯಾ ಮಂದಿರ ಎಂದು ಕರೆಯುತ್ತಾರೆ. ಅಂದರೆ ಈ ದೇವಾಲಯದ ಗೋಪುರದಲ್ಲಿ ಮೂರು ಕಳಶಗಳಿರುವುದನ್ನು ಗಮನಿಸಬಹುದಾಗಿದೆ.
ಚಿತ್ರಕೃಪೆ: Nayansatya

ಉದೈಪುರ
ಶಿವನಿಗೆ ಮುಡಿಪಾದ, ಸುಮಾರು 734 ರ ಸಮಯದಲ್ಲಿ ನಿರ್ಮಾಣಗೊಂಡ ಅತ್ಯಂತ ಪುರಾತನ ದೇವಾಲಯವಾಗಿದೆ ಇದು. ಈ ದೇವಾಲಯದ ವಿಶೇಷ ಆಕರ್ಷಣೆ ಎಂದರೆ ಶಿವಲಿಂಗ. ಈ ಶಿವಲಿಂಗವು ಅಸಾಮಾನ್ಯವೆಂಬುವಂತೆ ನಾಲ್ಕು ದಿಕ್ಕಿನಲ್ಲೂ ಶಿವನ ಮುಖ ಹೊಂದಿದೆ. ರಾಜಸ್ಥಾನದ ಉದೈಪುರ್ ಪಟ್ಟಣದಿಂದ ಸುಮಾರು ಒಂದ್ ಘಂಟೆ ಪ್ರಯಾಣಾವಧಿಯಷ್ಟು ದೂರದಲ್ಲಿರುವ ಕೈಲಾಶಪುರಿ ಎಂಬಲ್ಲಿರುವ ಈ ದೇವಾಲಯಕ್ಕೆ ಪ್ರದೇಶದ ಸುತ್ತಮುತ್ತಲಿನ ಭಾಗಗಳಿಂದ ಅನೇಕ ತಂತ್ರವಾದಿಗಳು ಭೇಟಿ ನೀಡಿ ಪೂಜಿಸುತ್ತಾರೆ.
ಚಿತ್ರಕೃಪೆ: Nikhil Varma

ಭರತಪುರ್
ಇಲ್ಲಿಗೆ ಭೇಟಿ ನೀಡಿದರೆ ಸಾಕು ಸಾಕಷ್ಟು ಚೀರುವ, ರೋಧಿಸುವ ಧ್ವನಿ ಕೇಳಲ್ಪಡುತ್ತವೆ. ಮಂತ್ರವಾದಿಗಳು ಇಲ್ಲಿ ಪ್ರೇತಾತ್ಮ ಹೊಕ್ಕ ಎನ್ನಲಾದ ಮನುಷ್ಯನ ಶರೀರದಿಂದ ಆ ಪ್ರೇತಾತ್ಮ ಓಡಿಸುವ ವಿಧಿ ವಿಧಾನಗಳನ್ನು ನೆರವೇರಿಸುತ್ತಿರುವುದನ್ನು ಸಾಮಾನ್ಯವಾಗಿ ಇಲ್ಲಿ ಕಾಣಬಹುದು. ಇದು ಅವರವರ ಭಕ್ತಿ ನಂಬಿಕೆಗಳಿಗೆ ಬಿಟ್ಟ ವಿಚಾರವಷ್ಟೆ. ಆದರೂ ಧಾರ್ಮಿಕ ದೃಷ್ಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಈ ದೇವಾಲಯ ರಾಜಸ್ಥಾನದ ಭರತಪುರದ ಬಳಿಯಿದೆ.
ಚಿತ್ರಕೃಪೆ: Dausaanoop

ಮಧ್ಯಪ್ರದೇಶ
ಮಧ್ಯಪ್ರದೇಶ ರಾಜ್ಯದಲ್ಲಿರುವ ಖಜುರಾಹೊ ತನ್ನಲ್ಲಿರುವ ಅದ್ಭುತ ಪುರಾತನ ದೇವಾಲಯ ರಚನೆಗಳು ಹಾಗೂ ಕಾಮರಸವನ್ನು ಉದ್ರೇಕಗೊಳಿಸುವ ರತಿ-ಮನ್ಮಥರ ಸಮಾಗಮದ ವಿವಿಧ ಭಂಗಿಗಳ ಶಿಲ್ಪಕಲೆಗಳಿಂದಾಗಿ ಜಗತ್ತಿನಲ್ಲೆ ಪ್ರಖ್ಯಾತಿಗಳಿಸಿದೆ. ಸಾಕಷ್ಟು ಜನರಿಗೆ ಖಜುರಾಹೊ ಎಂದಾಕ್ಷಣ ನೆನಪಾಗುವುದು ಮಿಥುನ ಶಿಲ್ಪಕಲೆಗಳು. ಆದರೆ ಕೇವಲ ಕೆಲವೆ ಜನರಿಗಷ್ಟೆ ಗೊತ್ತು ಇದೊಂದು ಶಕ್ತಿಶಾಲಿ ತಾಂತ್ರಶಾಸ್ತ್ರದ ದೇವಾಲಯವಾಗಿಯೂ ಗಮನಸೆಳೆದಿದೆ. ಖಜುರಾಹೊವಿನ ಕಾಮಸೂತ್ರದ ಭಂಗಿಗಳು!
ಚಿತ್ರಕೃಪೆ: Sushmaahuja17

ಉಜ್ಜಯಿನಿ
ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿ ನಗರದ ಅಧಿ ದೇವತೆಯಾಗಿರುವವನು ಕಾಳ ಭೈರವ. ಅಷ್ಟ ಭೈರವರ ಪೈಕಿ ನಾಯಕನಾದ ಭಯಂಕರ ಹಾಗೂ ಕಪ್ಪು ವರ್ಣದ ಕಾಳ ಭೈರವನನ್ನು ಉಜ್ಜಯಿನಿ ನಗರದ ಸೇನಾಪತಿಯೆಂದೆ ಆರಾಧಿಸುತ್ತಾರೆ. ತಂತ್ರಶಾಸ್ತ್ರದಲ್ಲಿ ಓದುವವರ, ಹೊಸದಾಗಿ ಸಿದ್ಧಿ ಮಾರ್ಗದಲ್ಲಿ ಸೇರಿರುವಂಥವರಿಗೆ ಈ ಕಾಳ ಭೈರವನ ದರ್ಶನ ಮಹತ್ವದ್ದಾಗಿದೆ.
ಚಿತ್ರಕೃಪೆ: commons.wikimedia

ಕಾಳಭೈರವ
ಹಾಗಾಗಿ ಉಜ್ಜಯಿನಿ ನಗರದಲ್ಲಿರುವ ಈ ಕಾಳಭೈರವನ ದೇವಲಾಯಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದಂತೆ, ಸಿದ್ಧರು, ನಾಗಾ ಸಾಧುಗಳು, ಅಘೋರಿಗಳು ಹಾಗೂ ಮಂತ್ರವಾದಿಗಳು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Utcursch

ಮಧ್ಯಪ್ರದೇಶ
ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲೆ ಇರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲೇಶ್ವರನ ದೇವಾಲಯವೂ ಸಹ ತಾಂತ್ರಿಕ ಶಕ್ತಿಯ ಹೂರಣವಾಗಿದೆ. ಇಲ್ಲಿಗೂ ಸಹ ಅಪಾರ ಪ್ರಮಾಣದಲ್ಲಿ ತಾಂತ್ರಿಕ ಆರಾಧಕರು ಭೇಟಿ ನೀಡುತ್ತಾರಾದರೂ ಅವರು ಇಲ್ಲಿ ಶಿವನಿಗೆ ನಡೆಯುವ ಭಸ್ಮದಾರತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಏಕೆಂದರೆ ಈ ಭಸ್ಮದಾರತಿಯನ್ನು ಹಿಂದಿನ ದಿನ ಅಂತಸಂಸ್ಕಾರಗೊಂಡ ಶವದ ಭಸ್ಮದಿಂದ ನೆರವೇರಿಸಲಾಗುತ್ತದೆ.
ಚಿತ್ರಕೃಪೆ: Ssriram mt

ವಿಚಿತ್ರ ವಿಧಾನ
ಆದರೆ ದೇವಾಲಯದ ಆಡಳಿತ ಮಂಡಳಿಯು ಈ ರೀತಿಯ ವಿಧಾನವು ಹಿಂದೆ ಪ್ರಚಲಿತದಲ್ಲಿತ್ತಾದರೂ ಇಂದು ಅದನ್ನು ಮುಂದುವರೆಸಲಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಇದರ ವಿಶೇಷತೆ ಎಂದರೆ ಯಾರು ಈ ಭಸ್ಮಾರತಿಯನ್ನು ನೋಡುತ್ತಾರೊ ಅವರಿಗೆ ಅಕಾಲ ಮರಣ ಬರುವುದಿಲ್ಲವೆಂದು ನಂಬಲಾಗುತ್ತದೆ. ಅಲ್ಲದೆ ಈ ರೀತಿಯಾಗಿ ಶಿವನಿಗೆ ಬಸ್ಮಾರತಿಯನ್ನು ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಇಲ್ಲಿ ಮಾತ್ರವೆ ಮಾಡಲಾಗುತ್ತದೆ.
ಚಿತ್ರಕೃಪೆ: Arian Zwegers

ಹಿಮಾಚಲ
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಜ್ವಾಲಾಮುಖಿ ಎಂಬ ಹೆಸರಿನ ಪಟ್ಟಣದಲ್ಲಿ ಈ ಜಗನ್ಮಾತೆಯು ಅನಾದಿ ಕಾಲದಿಂದಲೂ ನೆಲೆಸಿದ್ದಾಳೆ. ದಂತಕಥೆಯ ಪ್ರಕಾರ, ಶಕ್ತಿಪೀಠಗಳು ಸತಿ ದೇವಿಯ ಮೃತ ದೇಹದ ವಿವಿಧ ಭಾಗಗಳು ಕತ್ತರಿಸಿಕೊಂಡು ವಿವಿಧ ಸ್ಥಳಗಳಲ್ಲಿ ಬಿದ್ದಾಗ ರೂಪಗೊಂಡಿವೆ. ಅದರಂತೆ ಈ ಸ್ಥಳದಲ್ಲಿ ಮಾತೆಯ ನಾಲಿಗೆಯು ಬಿದ್ದ ಸ್ಥಳವೆಂದು ಪರಿಗಣಿಸಲಾಗಿದೆ.
ಚಿತ್ರಕೃಪೆ: Nswn03

ನೈಸರ್ಗಿಕ
ಇದರ ವಿಶೇಷವೆಂದರೆ ಸಾಮಾನ್ಯವಾಗಿ ಶಕ್ತಿಪೀಠಗಳಲ್ಲಿ ದೇವಿಯು ಪಿಂಡಿಯ ರೂಪದಲ್ಲಿರುವುದನ್ನು ಕಾಣಬಹುದು. ಆದರೆ ಇಲ್ಲಿ ಜ್ವಾಲಾ ದೇವಿಯು ಪರಮ ಪಾವನವಾದ ಜ್ಯೋತಿಯ ರೂಪದಲ್ಲಿರುವುದು ವಿಶೇಷ. ಹೌದು ನೀವು ಕೇಳುತ್ತಿರುವುದು ನಿಜ. ಇಲ್ಲಿನ ಕಲ್ಲು ಬಂಡೆಗಳ ಮಧ್ಯೆ ನೈಸರ್ಗಿಕ ಅನಿಲಗಳ ರಾಸಾಯನಿಕ ಪ್ರಕ್ರಿಯೆಗಳಿಂದ ಜ್ವಾಲೆಯು ಸದಾ ಊರಿಯುತ್ತಿರುತ್ತದೆ. ತಾಂತ್ರಿಅಕವಲದಲ್ಲಿ ಸಾಕಷ್ಟು ಪ್ರಸಿದ್ಧಿಗಳಿಸಿರುವ ದೇವಿಯ ದೇವಾಲಯ ಇದಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Erik Charlton

ಕಂಗ್ರಾ
ಹಿಮಾಚಲ ಪ್ರದೇಶದ ಕಂಗ್ರಾದ ಜ್ವಾಲಾಮಿಖಿ ದೇವಾಲಯ ಸ್ಥಳದಿಂದ 52 ಕಿ.ಮೀ ಗಳಷ್ಟು ದೂರದಲ್ಲಿರುವ ಬೈಜನಾಥ ಪಟ್ಟಣದಲ್ಲಿ ಅಪಾರ ಪ್ರಾಮಣದ ಶಕ್ತಿ ಹೊಂದಿರುವ ಶಿವನ ಈ ದೇವಸ್ಥಾನವಿದೆ. ಈ ಶಿವನನ್ನು ವೈದ್ಯನಾಥನೆಂದೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Jngupta

ಗುಣಪಡಿಸುವ ಶಕ್ತಿ
ಸಾಮಾನ್ಯವಾಗಿ ಜ್ವಾಲಾಮುಖಿಗೆ ಭೇಟಿ ನೀಡುವ ತಾಂತ್ರಿಕರು, ಮಂತ್ರವಾದಿಗಳು ಬೈಜನಾಥಿಗೂ ದರ್ಶನಕ್ಕೆ ತೆರಳುತ್ತಾರೆ ಕಾರಣ ವೈದ್ಯನಾಥನ ಬಳಿಯಿರುವ ಗುಣಪಡಿಸುವ ಶಕ್ತಿ. ಹಾಗಾಗಿಯೆ ಇತನನ್ನು ವೈದ್ಯನಾಥನೆಂದೂ ಸಹ ಕರೆಯಾಲಾಗುತ್ತದೆ.
ಚಿತ್ರಕೃಪೆ: Pdhang

ಸಿದ್ಧಿ ಲಭ್ಯ
ಮಂತ್ರವಾದಿಗಳು, ಸಿದ್ಧರು ಹೇಳುವಂತೆ ವೈದ್ಯನಾಥನ ಕೃಪೆ ದೊರೆತರೆ ಯಾವ ರೀತಿಯ ಕಾಯಿಲೆಯಾದರೂ ಸರಿ ಗುಣಪಡಿಸುವ ಸಿದ್ಧ ಶಕ್ತಿ ಲಭಿಸುತ್ತದೆಂದು ಅವರ ಬಲವಾದ ನಂಬಿಕೆಯಾಗಿದೆ. ಹಾಗಾಗಿ ತಾಂತ್ರಿಕ ವಲದಲ್ಲಿ ಹೆಸರುವಾಸಿಯಾದ ದೇವಾಲಯ ಇದಾಗಿದೆ.
ಚಿತ್ರಕೃಪೆ: Rakeshkdogra

ಕೇರಳ
ಈಕೆಯನ್ನು ಪ್ರೀತಿಯಿಂದ "ಕೊಡುಂಗಲ್ಲೂರು ಅಮ್ಮ" ಎಂದೆ ಕರೆಯುತ್ತಾರೆ. ಕೇರಳದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾದ ಕೊಂಡುಂಗಲ್ಲೂರು ಭದ್ರಕಾಳಿಯ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿರುವ ದೇವಸ್ಥಾನವಾಗಿದೆ. ಅಲ್ಲದೆ ತಾಂತ್ರಿಕ ಆರಾಧನೆಗೂ ಸಾಕಷ್ಟು ಹೆಸರುವಾಸಿಯಾದ ದೇವಾಲಯ ಇದಾಗಿದೆ.
ಚಿತ್ರಕೃಪೆ: Aruna

ಬ್ರಾಹ್ಮಿ ಕಾಲದಲ್ಲಿ
ಕೊಡುಂಗಲ್ಲೂರು ಭದ್ರಕಾಳಿಯ ದೇವಾಲಯವು ಕಾಳಿ ದೇವಿಗೆ ಮುಡಿಪಾದ ದೇವಾಲಯವಾಗಿದ್ದು ಇಲ್ಲಿ ದೇವಿಯು ಎಂಟು ಕೈಗಳನ್ನು ಹೊಂದಿರುವ ಅವತಾರದಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾಳೆ. ಈ ದೇವಾಲಯವು ನಸುಕಿನ ಬ್ರಾಹ್ಮಿ ಕಾಲವಾದ ಮೂರು ಘಂಟೆಯ ಸಮಯಕ್ಕೆ ತೆರೆದು ದೇವಿಗೆ ಕ್ರಮಬದ್ಧವಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ ಹಾಗೂ ರಾತ್ರಿಯ ಒಂಭತ್ತು ಘಂಟೆಯವರೆಗೆ ದೇವಿಯು ಭಕ್ತರನ್ನು ಹರಸುತ್ತಾಳೆ.
ಚಿತ್ರಕೃಪೆ: Sujithvv

ಹಳೆಯ ಸಂಪ್ರದಾಯಗಳು
ಇದೊಂದು ಪುರಾತನ ದೇವಾಲಯವಾಗಿರುವುದರಿಂದ ಇಲ್ಲಿ ಇಂದಿಗೂ ಅತಿ ಪ್ರಾಚೀನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಕೆಲವು ದ್ರಾವಿಡ ಆಚರಣೆಗಳನ್ನೆ ಮಾಡಿಕೊಂಡು ಬಂದಿರುವುದರಿಂದ ಇದು ವಿಶಿಷ್ಟವೆನಿಸುತ್ತದೆ. ಈ ಆಚರಣೆಗಳು ಇತ್ತೀಚಿನ ಹೊಸದಾದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ.
ಚಿತ್ರಕೃಪೆ: Ssriram mt


Click it and Unblock the Notifications


















