ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ ವಾಸ್ತುಶಿಲ್ಪ ಸೌಂದರ್ಯವನ್ನು ಹೊಂದಿದೆ. ಈ ಪುರಾತನವಾದ ನಗರವು 3000 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿದೆ. ಭುವನೇಶ್ವರ್ ನಗರದ ಈ ಭೂಮಿಯು ಒಂದು ಕಾಲದಲ್ಲಿ 2000 ಕ್ಕಿಂತಲೂ ಅಧಿಕ ದೇವಾಲಯಗಳನ್ನು ಹೊಂದಿತ್ತು ಎಂದು ನಂಬಲಾಗಿದೆ.
ಈ ಕಾರಣಕ್ಕಾಗಿ ಭುವನೇಶ್ವರ್ ನಗರವನ್ನು ಭಾರತದ ದೇವಾಲಯಗಳ ನಗರ ಎಂದು ಗುರುತಿಸಲ್ಪಟ್ಟಿದೆ. ಭುಬನೇಶ್ವರದ ಪ್ರವಾಸೋದ್ಯಮವು ಪುರಾತನ ಕಾಲದ, ಶ್ರೀಮಂತವಾದ ದೇವಾಲಯ ನಿರ್ಮಾಣದ ಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ಭುವನೇಶ್ವರ, ಪುರಿ, ಮತ್ತು ಕೊನಾರ್ಕ್ ಈ ಮೂರೂ ಸುಪ್ರಸಿದ್ಧ ಸ್ಥಳಗಳು ಒಟ್ಟಾಗಿ ಭಾರತದ ಪೂರ್ವ ಭಾಗದ "ಸ್ವರ್ಣ ತ್ರಿ-ಭುಜ" ಅಥವಾ ಪ್ರವಾಸೀ ತಾಣಗಳ ಸುವರ್ಣ ತ್ರಿಕೋನ, ತ್ರಿವೇಣಿ ಸಂಗಮವನ್ನಾಗಿ ಮಾಡಿವೆ.
ಭುವನೇಶ್ವರ್ : ಕಾಲಧರ್ಮವನ್ನೂ ಮೀರಿ ನಿಂತ ಸೌಂದರ್ಯ
ಭುವನೇಶ್ವರವು ಲಿಂಗರಾಜ್ ಅಥವಾ ಸಮಸ್ತ ಹಿಂದೂ ವರ್ಗದ ಆರಾಧ್ಯ ದೈವ ಭಗವಾನ್ ಶಿವನ ಸನ್ನಿಧಿ ಎಂದೇ ಪರಿಗಣಿತವಾಗಿದೆ. ಪುರಾತನ ಕಾಲದ ದೇವಾಲಯದ ವಾಸ್ತುಶಿಲ್ಪವು ಅರಳಿ, ಸಮೃದ್ಧಿಯನ್ನು ಹೊಂದಿದ್ದು ಈ ಸ್ಥಳದಲ್ಲಿಯೇ. ಈ ವಾಸ್ತುಶಿಲ್ಪದ ಒಂದು ಅದ್ವಿತೀಯತೆ ಏನೆಂದರೆ, ಇಂದಿಗೂ ಕೂಡ ಈ ಕಲಾ ಕೌಶಲ್ಯವನ್ನು ವೀಕ್ಷಿಸುವ ಜನತೆಯನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಆ ಪುರಾತನ ಕಾಲದಲ್ಲಿ, ಶಿಲೆಗಳಲ್ಲಿ ಕೆತ್ತಲ್ಪಟ್ಟ ಅದ್ಭುತ ಕಲಾಕೌಶಲ್ಯವನ್ನು ಇಂದಿಗೂ ಸಹ ಜನರು ಎವೆಯಿಕ್ಕದಂತೆ, ತದೇಕಚಿತ್ತದಿಂದ ನೋಡುವಂತೆ ಮಾಡುವ ನಾವೀನ್ಯತೆ, ಆಕರ್ಷಣೆಯನ್ನು ಉಳಿಸಿಕೊಂಡಿದೆ.
ಭುವನೇಶ್ವರ ಮತ್ತು ಅದರ ಸುತ್ತಮುತ್ತಲೂ ಇರುವ ಪ್ರವಾಸೀ ತಾಣಗಳು
ಸಂದರ್ಶಕರನ್ನು ರೋಮಾಂಚನಗೊಳಿಸಿ ಅವರ ಮನೋಲ್ಲಾಸವನ್ನು ಹೆಚ್ಚಿಸುವ ವಿಶಾಲ ಶ್ರೇಣಿಯ ಆಕರ್ಷಣೆಗಳನ್ನು ಭುವನೇಶ್ವರ್ ಪ್ರವಾಸೋದ್ಯಮವು ಒದಗಿಸುತ್ತದೆ. ಒಡಿಶಾ ರಾಜ್ಯದ ಅತಿ ದೊಡ್ಡ ನಗರವಾದ ಭುವನೇಶ್ವರವು ದೇವಾಲಯಗಳು ಮತ್ತು ಸರೋವರಗಳು, ಗುಹೆಗಳು ಮತ್ತು ವಸ್ತು ಸಂಗ್ರಹಾಲಯಗಳು, ಉದ್ಯಾನಗಳು ಮತ್ತು ಅಣೆಕಟ್ಟುಗಳು ಮುಂತಾದ ವಿವಿಧ ಅದ್ಭುತಗಳ ಮಿಶ್ರಣವನ್ನು ಹೊಂದಿದೆ. ಲಿಂಗರಾಜ್ ದೇವಾಲಯ, ಮುಕ್ತೇಸ್ವರ್ ದೇವಾಲಯ, ರಾಜರಾಣಿ ದೇವಾಲಯ, ಇಸ್ಕಾನ್ ದೇವಾಲಯ, ರಾಮ್ ಮಂದಿರ್, ಶಿರಡಿ ಸಾಯಿ ಬಾಬಾ ಮಂದಿರ್, ಹಿರಪುರ್ ನ ಯೋಗಿನಿ ದೇವಾಲಯ ಮತ್ತು ಇತರೆ ದೊಡ್ಡ ಸಂಖ್ಯೆಯ ದೇವಾಲಯಗಳು ಒಡಿಶಾದ ದೇವಾಲಯಗಳ ವಾಸ್ತುಶಿಲ್ಪ ಕೌಶಲ್ಯದ ಜ್ವಲಂತ ಸಾಕ್ಷಿಗಳಾಗಿವೆ.
ಭುವನೇಶ್ವರದ ದೃಶ್ಯ ವೈಭವವು ಬಿಂದು ಸಾಗರ್ ಸರೋವರ, ಉದಯಗಿರಿ ಮತ್ತು ಖಂದಗಿರಿಯ ಗುಹೆಗಳು, ಧೌಲಿ ಗಿರಿ, ಚಂದಕ ಅಭಯಾರಣ್ಯ, ಅತ್ರಿಯ ಬಿಸಿ ನೀರಿನ ಬುಗ್ಗೆ ಇವೇ ಮೊದಲಾದ ಪ್ರಾಕೃತಿಕ ಅದ್ಭುತಗಳ ಉಪಸ್ಥಿತಿಯಿಂದ ನೂರ್ಮಡಿಗೊಂಡಿದೆ. ತರುಣರ ಮತ್ತು ಹಿರಿಯರ ಆಸಕ್ತಿಯನ್ನು ತಣಿಸುವಂತಹ, ನಂಬಲಸಾಧ್ಯವಾದ ವಸ್ತುವೈವಿಧ್ಯವನ್ನು ಭುಬನೇಶ್ವರ ಪ್ರವಾಸೋದ್ಯಮವು ಒಳಗೊಂಡಿದೆ. ಇತಿಹಾಸ ಮತ್ತು ಪ್ರಾಚೀನ ಜಗತ್ತಿನ ಕುರಿತು ಆಸಕ್ತಿಯುಳ್ಳವರಿಗೆ ಒರಿಸ್ಸಾ ರಾಜ್ಯ ವಸ್ತು ಸಂಗ್ರಹಾಲಯ, ಬುಡಕಟ್ಟು ಕಲೆ ಮತ್ತು ಕರಕೌಶಲ್ಯದ ವಸ್ತು ಸಂಗ್ರಹಾಲಯ, ಮತ್ತು ನಗರದ ಹಳೆಯ ಭಾಗವು ಖಂಡಿತವಾಗಿಯೂ ಭೇಟಿ ನೀಡಲು ಅತ್ಯಾಕರ್ಷಕ ತಾಣಗಳಾಗಿವೆ.
ನಗರದಲ್ಲಿ ಅನೇಕ ಉದ್ಯಾನಗಳಿರುವುದರಿಂದ ಪ್ರಕೃತಿಪ್ರಿಯರಿಗೆ ಭುವನೇಶ್ವರವು ಒಂದು ಆದರ್ಶ ತಾಣವಾಗಿದೆ. ಈ ಉದ್ಯಾನಗಳ ಪೈಕಿ ಬಿಜು ಪಾಟ್ನಾಯಕ್ ಉದ್ಯಾನ, ಬುದ್ಧ ಜಯಂತಿ ಉದ್ಯಾನ, I. G. ಉದ್ಯಾನ, ಅರಣ್ಯ ಉದ್ಯಾನ (Forest Park), ಗಾಂಧಿ ಉದ್ಯಾನ, ಎಕಾಮ್ರಾ ಕನನ್ (Ekamra Kanan), ಐ.ಎಮ್.ಎಫ್.ಎ (IMFA) ಉದ್ಯಾನ, ಖರವೇಲ ಉದ್ಯಾನ, ಎಸ್. ಪಿ. ಮುಖರ್ಜಿ ಉದ್ಯಾನ, ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನ ಮುಂತಾದವುಗಳು ಉಲ್ಲೇಖಾರ್ಹವಾಗಿವೆ. ಕ್ರೀಡೆ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಆಸಕ್ತಿಯುಳ್ಳವರಿಗಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಠಾನಿ ಸಮಂತ ತಾರಾಲಯ, ಮತ್ತು ಕಳಿಂಗ ಕ್ರೀಡಾಂಗಣಗಳು ಅನ್ವೇಷಿಸಲ್ಪಡಲು ಸುಂದರ ಆಯ್ಕೆಗಳಾಗಿವೆ. ಮಕ್ಕಳಂತೂ ನಂದನ್ ಕಣ್ಣನ್ ಮೃಗಾಲಯಕ್ಕೆ ಭೇಟಿ ನೀಡಲು ಕಾತರರಾಗಿರುತ್ತಾರೆ.
ಇವು ಮಾತ್ರವಲ್ಲದೇ,ಪಿಪ್ಲಿ ಎಂಬ ಅದ್ಭುತ ಗ್ರಾಮ, ಡೇರಸ್ ಆಣೆಕಟ್ಟು, ಬಾಯಾ ಬಾಬಾ ಮಠ, ಸಿಸುಪಲ್ಗರ್ಥ್, ಬಿ.ಡಿ.ಎ ನಿಕ್ಕೊ ಉದ್ಯಾನ, ಫಾರ್ಚ್ಯೂನ್ ಸಿಟಿ, ಇನ್ಫೋ ಸಿಟಿ ಇವೇ ಮೊದಲಾದ ಇತರೆ ಆಕರ್ಷಕ ತಾಣಗಳಿವೆ. ಭುವನೇಶ್ವರ್ ನಗರವು ಒಂದು ಮಾರಾಟ ಕೇಂದ್ರವೂ ಆಗಿದ್ದು, ಪ್ರವಾಸಿಗರು ಟಾಯ್ ಮತ್ತು ಡೈ ಬಟ್ಟೆಗಳು, ಹಿತ್ತಾಳೆ ಲೋಹದ ಕಲಾಕೃತಿಗಳು, ಮರದ ಕಲಾಕೃತಿಗಳು ಇವೇ ಮೊದಲಾದ ವಸ್ತುಗಳನ್ನು ಖರೀದಿಸಲು ಅವಕಾಶವಿದೆ.
ಈ ನಗರವು ಭುವನೇಶ್ವರ್ ಎಂಬ ತನ್ನ ಹೆಸರನ್ನು ತ್ರಿಭುವನೇಶ್ವರ್ ಎಂಬ ಪದದಿಂದ ಪಡೆದುಕೊಂಡಿದೆ. ತ್ರಿಭುವನೇಶ್ವರ್ ಎಂಬ ಪದವು ನಮಗೆಲ್ಲಾ ತಿಳಿದಿರುವಂತೆ ಹಿಂದೂ ದೇವರಾದ ಭಗವಾನ್ ಶಿವನನ್ನು ಸೂಚಿಸುತ್ತದೆ. ಈ ಕಾರಣದಿಂದ, ಶಿವನ ಪ್ರಭಾವವು ಈ ನಗರದ ಹೆಚ್ಚಿನ ದೇವಾಲಯಗಳಲ್ಲಿ ಢಾಳಾಗಿ ಕಂಡುಬರುತ್ತದೆ. ಭಗವಾನ್ ಶಿವನ ಆರಾಧನೆಗಾಗಿ ಕಟ್ಟಲ್ಪಟ್ಟ ಅನೇಕ ದೇವಾಲಯಗಳಲ್ಲಿ ಅತಿ ಮುಖ್ಯವಾದ ಕೆಲವು ದೇವಾಲಯಗಳೆಂದರೆ, ಅಷ್ಟಶಂಭು ದೇವಾಲಯಗಳು, ಭೃಂಗೇಶ್ವರ ಶಿವ ದೇವಾಲಯ, ಬ್ಯಾಮೋಕೇಶ್ವರ ದೇವಾಲಯ, ಭಾಸ್ಕರೇಶ್ವರ ದೇವಾಲಯ, ಗೋಕರ್ಣೇಶ್ವರ ಶಿವ ದೇವಾಲಯ, ಗೋಸಗಾರೇಶ್ವರ ಪ್ರಾಂತೀಯ ಶಿವ ದೇವಾಲಯ, ಜಾಲೇಶ್ವರ ಶಿವ ದೇವಾಲಯ, ಕಪಿಲೇಶ್ವರ ಶಿವ ದೇವಾಲಯ, ಸರ್ವತ್ರೇಶ್ವರ ಶಿವ ದೇವಾಲಯ, ಶಿವತೀರ್ಥ ಮಠ, ಸ್ವಪ್ನೇಶ್ವರ ಶಿವ ದೇವಾಲಯ, ಉತ್ತರೇಶ್ವರ ಶಿವ ದೇವಾಲಯ, ಮತ್ತು ಯಮೇಶ್ವರ ದೇವಾಲಯ.
ಕಾಲಕ್ಕೇ ಸಡ್ಡು ಹೊಡೆದು ತಲೆಯೆತ್ತಿ ನಿಂತಿರುವ ಪುರಾತನ ದೇವಾಲಯಗಳ ಬಗ್ಗೆ ಭುವನೇಶ್ವರ್ ನಗರವು ನಿಜಕ್ಕೂ ಹೆಮ್ಮೆ ಪಡುವಂತಿದೆ. ಭಗವಾನ್ ಶಿವನ ಕೆಲವು ಸುಪ್ರಸಿದ್ಧ ದೇವಾಲಯಗಳೆಂದರೆ ಐಸಾನೇಶ್ವರ ಶಿವ ದೇವಾಲಯ, ಅಷ್ಟಶಂಭು ದೇವಾಲಯಗಳು, ಭೃಂಗೇಶ್ವರ ಶಿವ ದೇವಾಲಯ, ಭಾರತಿ ಮಠ ದೇವಾಲಯ, ಭೃಕುಟೇಶ್ವರ ಶಿವ ದೇವಾಲಯ, ಚಂಪಕೇಶ್ವರ ಚಂದ್ರಶೇಖರ ಮಹಾದೇವ ದೇವಾಲಯ, ಚಕ್ರೇಶ್ವರಿ ಶಿವ ದೇವಾಲಯ, ಮತ್ತು ದಿಶಿಶ್ವರ ಶಿವ ದೇವಾಲಯ. ಇತರೆ ದೇವಾಲಯಗಳೆಂದರೆ ಚಿಂತಾಮಣೀಶ್ವರ ಶಿವ ದೇವಾಲಯ, ಗಣೇಶ್ವರ ಶಿವ ದೇವಾಲಯ, ಗೋಕರ್ಣೇಶ್ವರ ಶಿವ ದೇವಾಲಯ, ಜಾಲೇಶ್ವರ ಶಿವ ದೇವಾಲಯ, ಕಪಿಲೇಶ್ವರ ಶಿವ ದೇವಾಲಯ, ಲಬೇಶ್ವರ ಶಿವ ದೇವಾಲಯ, ಲಖೇಶ್ವರ ಶಿವ ದೇವಾಲಯ, ಮದ್ಣೇಶ್ವರ್ ಶಿವ ದೇವಾಲಯ, ಮಂಗಳೇಶ್ವರ ಶಿವ ದೇವಾಲಯ, ನಾಗೇಶ್ವರ ದೇವಾಲಯ, ಪುರ್ವೇಶ್ವರ ಶಿವ ದೇವಾಲಯ, ಸರ್ವತ್ರೇಶ್ವರ ಶಿವ ದೇವಾಲಯ, ಶಿವತೀರ್ಥ ಮಠ, ಗೋಸಗಾರೇಶ್ವರ ಪ್ರಾಂತೀಯ ಶಿವ ದೇವಾಲಯ, ಸುಬರ್ಣೇಶ್ವರ ಶಿವ ದೇವಾಲಯ, ಸುಕುತೇಶ್ವರ ದೇವಾಲಯ, ಸ್ವಪ್ನೇಶ್ವರ ಶಿವ ದೇವಾಲಯ, ತಾಲೇಶ್ವರ ಶಿವ ದೇವಾಲಯ, ಉತ್ತರೇಶ್ವರ ಶಿವ ದೇವಾಲಯ, ಯಮೇಶ್ವರ ದೇವಾಲಯ ಮತ್ತು ಇನ್ನೂ ಅನೇಕ.
ಭಗವಾನ್ ಶಿವನ ದೇವಾಲಯಗಳು ಮಾತ್ರವಲ್ಲದೇ, ಭುವನೇಶ್ವರ್ ನ ಪ್ರವಾಸೋಧ್ಯಮವು ಇತರೆ ಹಿಂದೂ ದೇವರುಗಳಾದ ಕೃಷ್ಣ ಮತ್ತು ಚಂಡಿಯಂತಹ ದೇವಾಲಯಗಳನ್ನೂ ಸಹ ಒಳಗೊಂಡಿದೆ. ಇತರೆ ದೇವತೆಗಳಿಗೆ ಸೇರಿದ ಕೆಲವು ಜನಪ್ರಿಯ ದೇವಸ್ಥಾನಗಳೆಂದರೆ ಅನಂತ ವಾಸುದೇವ ದೇವಸ್ಥಾನ, ಅಖದಚಂಡಿ ದೇವಸ್ಥಾನ, ಬ್ರಹ್ಮ ದೇವಸ್ಥಾನ, ದೇವಸಭಾ ದೇವಸ್ಥಾನ, ಗೋಪಾಲ್ ತೀರ್ಥ ಮಠ, ಜನಪಥ್ ರಾಮ್ ಮಂದಿರ್, ರಾಮೇಶ್ವರ್ ದೇವುಲಾ, ಸುಕಾ ದೇವಸ್ಥಾನ, ವೈತಾಳ ದೇವುಲಾ, ವಿಷ್ಣು ದೇವಸ್ಥಾನ ಮತ್ತು ಇನ್ನೂ ಅನೇಕ.
ಭುವನೇಶ್ವರ್ ಅನ್ನು ಸಂದರ್ಶಿಸಲು ಪ್ರಶಸ್ತ ಸಮಯ
ಭುಬನೇಶ್ವರಕ್ಕೆ ಪ್ರವಾಸ ಕೈಗೊಳ್ಳಲು ಅತಿ ಸೂಕ್ತ ಕಾಲಾವಧಿಯೆಂದರೆ ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಅವಧಿ. ಈ ಅವಧಿಯಲ್ಲಿ ಮುಖ್ಯವಾಗಿ ತಾಪಮಾನವು ಪಟ್ಟಣದ ಪ್ರಕೃತಿ ವೈಭವನ್ನು ಸವಿಯಲು ಪೂರಕ ವಾತಾವರಣವನ್ನು ಕಲ್ಪಿಸುತ್ತದೆ.
ಭುವನೇಶ್ವರ್ ಅನ್ನು ತಲುಪುವುದು ಹೇಗೆ ?
ಭುಬನೇಶ್ವರವು ಪೂರ್ವ ಭಾರತದ ಅತಿ ಪ್ರಮುಖವಾದ ಪ್ರವಾಸೀ ತಾಣವಾಗಿದೆ. ಈ ನಗರವನ್ನು ವಿಮಾನ, ರಸ್ತೆ, ಮತ್ತು ರೈಲ್ವೆ ಜಾಲಗಳ ಮೂಲಕ ಬಹು ಸುಲಭವಾಗಿ ತಲುಪಬಹುದು.