ಗಣೇಶ, ಗಣಪತಿ, ವಿನಾಯಕ, ವಿಘ್ನೇಶ್ವರ ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿಯು ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಇಷ್ಟವಾಗುವ ದೇವ. ಯಾವುದೆ ಶುಭ ಸಮಾರಂಭಗಳಿರಲಿ ಅಥವಾ ಪೂಜೆಯಿರಲಿ ಮೊದಲಿಗೆ ಗಣೇಶನನ್ನು ಪೂಜಿಸಿ ನಂತರ ಎಲ್ಲ ಕಾರ್ಯಗಳು ಪ್ರಾರಂಭವಾಗುತ್ತವೆ.
ಅಷ್ಟೊಂದು ಮಹತ್ವವನ್ನು ಗಣೇಶನಿಗೆ ಪುರಾಣ, ಪುಣ್ಯ ಕಥೆಗಳಲ್ಲಿ ನೀಡಲಾಗಿದೆ. ಅಂತೆಯೆ ಗಣೇಶನಿಗೆ ಮುಡಿಪಾದ ದೇವಾಲಯಗಳನ್ನು ಸಾವಿರಾರು ಸಂಖ್ಯೆಯಲ್ಲಿ ಭಾರತದಾದ್ಯಂತ ಕಾಣಬಹುದು. ಎಷ್ಟೊ ದೇವಾಲಯಗಳು ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಾವಿರಾರುಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಆದರೆ ಪ್ರಸ್ತುತ ಲೇಖನದಲ್ಲಿ ವಿನಾಯಕನಿಗೆ ಮುಡಿಪಾದ ಕೆಲವು ಆಯ್ದ ಅತ್ಯಂತ ಪುರಾತನ, ಪ್ರಾಚೀನ ಗನೇಶನ ದೇವಾಲಯಗಳ ಕುರಿತು ತಿಳಿಸುತ್ತದೆ. ಗಣೇಶನ ಈ ದೇವಾಲಯಗಳು ಸಾಕಷ್ಟು ಪುರಾತನವಾಗಿದ್ದು ಇಂದಿಗೂ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿರುವುದು ವಿಶೇಷ.
ಪ್ರಾಚೀನ ಗಣೇಶನ ದೇವಾಲಯಗಳು:
ಸಾಸಿವೆಕಾಳು ಗಣೇಶ : ಇದು ಪ್ರಖ್ಯಾತ ಪ್ರವಾಸಿ ತಾಣವಾದ ಹಂಪಿಯ ಸಂಕೀರ್ಣದಲ್ಲಿ ನೋಡಬಹುದಾದ ಹದಿನೈದನೇಯ ಶತಮಾನದಲ್ಲಿ ನಿರ್ಮಿತವಾದ ಗಣೇಶನ ದೇವಾಲಯ. ಒಂದೆ ಬಂಡೆಯಲ್ಲಿ ಗಣೇಶನನ್ನು ಕೆತ್ತಲಾಗಿದ್ದು ಸುಮಾರು ಎಂಟು ಅಡಿಗಳಷ್ಟು ಎತ್ತರವಿದೆ. ಹಂಪಿಯ ಹೇಮಕೂಟ ದೇವಾಲಯಗಳ ಸಂಕೀರ್ಣದಲ್ಲಿ ಈ ಗಣೇಶನ ದೇವಾಲಯವಿದೆ.
ಚಿತ್ರಕೃಪೆ: Ravibhalli
ಪ್ರಾಚೀನ ಗಣೇಶನ ದೇವಾಲಯಗಳು:
ಮೊದಲೆ ಗಣೇಶನು ಆಹಾರಪ್ರಿಯ. ಒಂದೊಮ್ಮೆ ಗಣೇಶನು ಹೊಟ್ಟೆ ತುಂಬಿ ಇನ್ನೇನು ಒಡೆಯಬೇಕು ಅನ್ನುವಷ್ಟು ತಿಂದಿದ್ದ. ಆ ಸಂದರ್ಭದಲ್ಲಿ ಹೊಟ್ಟೆ ಒಡೆಯಬಾರದೆಂದು ಸರ್ಪವೊಂದನ್ನು ಹಿಡಿದು ತನ್ನ ಹೊಟ್ಟೆಗೆ ಬಿಗಿದುಕೊಂಡ. ಹಾಗಾಗಿ ಅದೇ ರೀತಿಯ ಭಂಗಿಯಲ್ಲಿರುವ ಗಣೇಶನನ್ನು ಇಲ್ಲಿ ಕೆತ್ತಲಾಗಿದೆ. ಹೊಟ್ಟೆಯು ಸಾಸಿವೆಕಾಳು ಇರುವ ಹಾಗೆ ಗೋಚರಿಸುವುದರಿಂದ ಇತನನ್ನು ಸಾಸಿವೆಕಾಳು ಗಣೇಶನೆಂದು ಕರೆಯಲಾಗುತ್ತದೆ.
ಚಿತ್ರಕೃಪೆ: Ssenthilkumaran
ಪ್ರಾಚೀನ ಗಣೇಶನ ದೇವಾಲಯಗಳು:
ಕಡಲೆಕಾಳು ಗಣೇಶ : ಈ ದೇವಾಲಯವಿರುವುದು ಸಹ ಹಮ್ಪಿಯಲ್ಲೆ. ಅದೂ ಸಹ ಸಾಸಿವೆಕಾಳು ಗಣೇಶನ ದೇಗುಲಕ್ಕೆ ಹತ್ತಿರದಲ್ಲೆ ಕಡಲೆಕಾಳು ಗಣೇಶನ ದೇವಾಲಯವಿದೆ. ಬೃಹತ್ತಾದ ಬಂಡೆಯೊಂದರಲ್ಲಿ ಗಣೇಶನ ವಿಗ್ರಹ ಕಡಿಯಲಾಗಿದ್ದು ಗಣೇಶನ ಹೊಟ್ಟೆಯು ಅಕ್ಷರಶಃ ಕಡಲೆ ಕಾಳನ್ನು ನೆನಪಿಸುವಂತಿದೆ. ಹೀಗಾಗಿ ಇತನಿಗೆ ಕಡಲೆ ಕಾಳು ಗಣೇಶನೆಂದೆ ಕರೆಯುತ್ತಾರೆ.
ಚಿತ್ರಕೃಪೆ: Anannyadeb
ಪ್ರಾಚೀನ ಗಣೇಶನ ದೇವಾಲಯಗಳು:
ಕುರುಡುಮಲೆ ಸಾಲಿಗ್ರಾಮ ಗಣೇಶ ದೇವಾಲಯ : ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನಲ್ಲಿರುವ ಕುರುಡುಮಲೆ ಎಂಬ ಗ್ರಾಮದಲ್ಲಿರುವ ಈ ಗಣೇಶನ ದೇವಾಲಯ ಸಾಕಷ್ಟು ಜಾಗೃತ ಹಾಗೂ ಶಕ್ತಿಶಾಲಿ ಅಲ್ಲದೆ ಸಾಕಷ್ಟು ಪುರಾತನವಾದ ದೇವಾಲಯವಾಗಿದೆ. ಯಾವುದೆ ಕಾರ್ಯ, ವ್ಯವಹಾರ ಅಥವಾ ಕೆಲಸ ಪ್ರಾರಂಭಿಸುದಕ್ಕಿಂತ ಮುಂಚೆ ಈ ಗಣೇಶನ ದರ್ಶನ ಪಡೆದು ತದನಂತರ ಆರಂಭಿಸುತ್ತಾರೆ. ಇದರಿಂದ ಕೈಗೆತ್ತಿಕೊಂಡ ಎಲ್ಲ ಕಾರ್ಯಗಳು ಯಾವ ವಿಘ್ನಗಳಿಲ್ಲದೆ ಸುಸೂತ್ರವಾಗಿ ಆಗುತ್ತದೆ ಎಂಬ ನಮ್ಬಿಕೆಯಿದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಅರೆಹೊಳೆ ವಿನಾಕ ದೇವಾಲಯ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೌಪರ್ಣಿಕಾ ನದಿ ತಟದ ಅರೆಹೊಳೆ ಗ್ರಾಮವು ಶ್ರೀಕ್ಷೇತ್ರವಾಗಿದೆ. ಇಲ್ಲಿರುವ ಮುನ್ನೂರು ವರ್ಷಗಳ ಇತಿಹಾಸದ ಶಿವ ಹಾಗೂ ಗಣೆಶನ ದೇವಾಲಯವು ಸಾಕಷ್ಟು ಪುರಾತನ ಹಾಗೂ ಪ್ರಭಾವಶಾಲಿಯಾದ ದೇವಾಲಯವಾಗಿದೆ.
ಚಿತ್ರಕೃಪೆ: Csarva
ಪ್ರಾಚೀನ ಗಣೇಶನ ದೇವಾಲಯಗಳು:
ಪುರಾತನ ಕೋಟೆಗಳ, ಅರಮನೆಗಳ ರಾಜ್ಯವೆಂದೆ ಪ್ರಖ್ಯಾತಿಗಳಿಸಿದ ರಾಜಸ್ಥಾನದಲ್ಲೂ ಸಹ ಹೆಸರುವಾಸಿಯಾದ ಒಂದು ವಿಶೇಷವಾದ ಗಣೇಶನ ದೇವಾಲಯವಿದೆ. ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಗಣೇಶನಿಗೆ ಕೇವಲ ಎರಡು ಕಣ್ಣುಗಳಿದ್ದರೆ, ಈ ಲೇಖನದಲ್ಲಿ ಹೇಳಲಾಗಿರುವ ಗಣೇಶನಿಗೆ ಅಪ್ಪನ ಹಾಗೆ ಮೂರು ಕಣ್ಣುಗಳಿವೆ. ಹಾಗಾಗಿ ಇತನನ್ನು ತ್ರಿನೇತ್ರ ಗಣೇಶನೆಂದೆ ಕರೆಯುತ್ತಾರೆ. ರಣಥಂಬೋರ್ ಕೋಟೆಯ ಸಂಕೀರ್ಣದಲ್ಲಿ ಗಣೇಶನ ಈ ಪ್ರಾಚೀನ ದೇವಾಲಯವಿದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಕಾಣಿಪಾಕಂ ವಿನಾಯಕ ದೇವಾಲಯ/ವರಸಿದ್ಧಿ ವಿನಾಯಕ ದೇವಸ್ಥಾನ: ಆಂಧ್ರದ ಚಿತ್ತೂರು ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಕಾಣಿಪಾಕಂ ಎಂಬಲ್ಲಿದೆ ಗಣಪನಿಗೆ ಮುಡಿಪಾದ ಈ ಐತಿಹಾಸಿಕ ದೇವಾಲಯ. ರೋಚಕ ಹಿನ್ನಿಲೆಯನ್ನು ಹೊಂದಿರುವ ಈ ದೇವಸ್ಥಾನದ ಗಣಪನು ಸ್ವಯಂಭು ಎಂದು ಹೇಳಲಾಗುತ್ತದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಕೊಟ್ಟಾರಕ್ಕರಾ ಶ್ರೀ ಮಹಾಗಣಪತಿ ದೇವಸ್ಥಾನ: ದಕ್ಷಿಣ ಭಾರತದ ಪ್ರಸಿದ್ಧ ಶ್ರೀಕ್ಷೇತ್ರಗಳ ಪೈಕಿ ಒಂದಾಗಿರುವ ಕೊಟ್ಟಾರಕ್ಕರಾ ಮಹಾಗಣಪತಿ ದೇವಸ್ಥಾನವು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕರಾ ಎಂಬ ಪಟ್ಟಣದಲ್ಲಿದೆ. ಸಾಕಷ್ಟು ಪ್ರಾಚೀನವಾದ ಈ ದೇವಾಲಯ ಕೇರಳ ರಾಜ್ಯದಲ್ಲಿ ಕಂಡುಬರುವ ಗಣೇಶನ ಪ್ರಮುಖ ದೇವಾಲಯವಾಗಿದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಮಧುರ ದೇವಸ್ಥಾನ: ಕೇರಳದ ಕಾಸರಗೋಡು ಪಟ್ಟಣದಿಂದ ಏಳು ಕಿ.ಮೀ ದೂರದಲ್ಲಿ ಮಧುರ ಗಣಪತಿ ದೇವಸ್ಥಾನವಿದೆ. ಸ್ಥಳಪುರಾಣದ ಪ್ರಕಾರ, ಒಮ್ಮೆ ಮಾದ ಸಮುದಾಯದ ಮಹಿಳೆಯೊಬ್ಬಳು ಇಲ್ಲಿ ಸ್ವಯಂಭು ಲಿಂಗವನ್ನು ಶೋಧಿಸಿದಳು ನಂತರ ಇದು ಮಾಧನಾಥೇಶ್ವರ ದೇವಾಲಯವಾಯಿತು. ತರುವಾಯ ಬ್ರಾಹ್ಮಣ ಹುಡುಗನೊಬ್ಬ ಗರ್ಭಗೃಹದ ಗೋಡೆಯ ಮೇಲೆ ಗಣಪನ ಚಿತ್ತಾರ ಬಿಡಿಸಿದ. ದಿನ ಕಳೆದಂತೆ ಗಣಪನ ವಿಗ್ರಹವು ಬೆಳೆಯಿತು ಹಾಗೂ ಪ್ರಸ್ತುತ ಗಣಪನಿಗೆ ಮುಡಿಪಾದ ರೋಚಕ ದೇಗುಲ ಇದಾಗಿದೆ.
ಚಿತ್ರಕೃಪೆ: Vinayaraj
ಪ್ರಾಚೀನ ಗಣೇಶನ ದೇವಾಲಯಗಳು:
ಖಜ್ರಾನಾ ಗಣೇಶ ದೇವಾಲಯ: ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರದಲ್ಲಿರುವ ಖಜ್ರಾನಾ ಗಣೇಶನ ದೇವಾಲಯವು ಸರ್ಕಾರದ ಸುಪರ್ದಿಯಲ್ಲಿರುವ ಗಣೇಶನಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಾಗಿದೆ. ಪ್ರಸ್ತುತ ಭಟ್ ಪರಿವಾರದವರಿಂದ ನಿರ್ವಹಿಸಲ್ಪಡುತ್ತಿದೆ. ಹಿಂದೆ ಔರಂಗಜೇಬನ ಆಕ್ರಮಣದಿಂದ ತಡೆಯಲು ದೇಗುಲದ ಮೂಲ ವಿಗ್ರಹವನ್ನು ಬಾವಿಯಲ್ಲಿ ಇರಿಸಲಾಗಿತ್ತು. ನಂತರ 1735 ರಲ್ಲಿ ಹೋಲ್ಕರ್ ಮನೆತನದ ಅಹಿಲ್ಯಾಬಾಯಿ ಹೋಲ್ಕರ್ ಬಾವಿಯಿಂದ ವಿಗ್ರಹವನ್ನು ಹೊರತೆಗೆಸಿ ದೇಗುಲವನ್ನು ಪುನರ್ಸ್ಥಾಪಿಸಿದರು.
ಚಿತ್ರಕೃಪೆ: Ssanjayjain
ಪ್ರಾಚೀನ ಗಣೇಶನ ದೇವಾಲಯಗಳು:
ರತ್ನಾಗಿರಿ ಪಟ್ಟಣದಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಗಣಪತಿಪುಳೆ ಎಂಬ ಕಡಲ ತಡಿಯ ಗ್ರಾಮವು ಒಂದು ಆಕರ್ಷಕ ಹಾಗೂ ಮಹತ್ವ ಪಡೆದ ಪುಣ್ಯ ಕ್ಷೇತ್ರವಾಗಿದೆ. ಹೆಸರೆ ಸೂಚಿಸುವಂತೆ ಈ ಗ್ರಾಮವು ಸಮುದ್ರ ತೀರದಲ್ಲೆ ಇರುವ ಗಣೇಶನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: Kprateek88
ಪ್ರಾಚೀನ ಗಣೇಶನ ದೇವಾಲಯಗಳು:
ಇಡಗುಂಜಿ ಮಹಾಗಣಪತಿ ದೇವಸ್ಥಾನ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯಿರುವ ಇಡಗುಂಜಿ ಗ್ರಾಮವು ಮಹಾಗಣಪತಿಯ ದೇವಸ್ಥಾನಕ್ಕೆ ಬಹು ಪ್ರಖ್ಯಾತಿ ಪಡೆದಿದೆ. ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇಡಗುಂಜಿ ಗಣಪನ ದರುಶನ ಕೋರಿ ಈ ಕ್ಷೇತ್ರಕ್ಕೆ ಬರುತ್ತಾರೆ. ಸಾಕಷ್ಟು ಪುರಾತನವಾದ ಗಣೇಶನ ದೇವಾಲಯ ಇದಾಗಿದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಮನಕುಳ ವಿನಾಯಕರ್ ದೇವಸ್ಥಾನ: ಭಾರತದ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾದ ಪುದುಚೆರಿ ಅಥವಾ ಪಾಂಡಿಚೆರಿಯಲ್ಲಿ ಗಣೇಶನ ಈ ಪ್ರಮುಖ ದೇವಸ್ಥಾನವಿದೆ. ತಮಿಳಿನಲ್ಲಿ ಮನಲ್ ಅಂದರೆ ಮರಳು ಕುಳಂ ಎಂದರೆ ಕೊಳ ಎಂದಾಗುತ್ತದೆ. ಅಂತೆಯೆ ಇದಕ್ಕೆ ಮನಕುಳಂ ವಿನಾಯಕ ದೇವಸ್ಥಾನ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Jonas Buchholz
ಪ್ರಾಚೀನ ಗಣೇಶನ ದೇವಾಲಯಗಳು:
ಕರ್ಪಕಾ ವಿನಾಯಕರ್ ದೇವಸ್ಥಾನ/ಪಿಳ್ಳಯಾರ್ಪಟ್ಟಿ ದೇವಸ್ಥಾನ: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರಪತ್ತೂರಿನಲ್ಲಿರುವ ಕರ್ಪಕಾ ವಿನಾಯಕನ ದೇವಸ್ಥಾನವು ಬಹು ಖ್ಯಾತಿ ಪಡೆದ ಗಣಪನ ದೇವಸ್ಥಾನವಾಗಿದೆ. ದೇವಾಲಯದ ಗರ್ಭಗೃಹವು ಒಂದು ಗುಹೆಯಾಗಿದ್ದು ಆರು ಅಡಿಗಳಷ್ಟು ಎತ್ತರದ ಬಂಡೆಯಲ್ಲಿ ಕೆತ್ತಲಾದ ವಿನಾಯಕನ ವಿಗ್ರಹವನ್ನು ಹೊಂದಿದೆ.
ಪ್ರಾಚೀನ ಗಣೇಶನ ದೇವಾಲಯಗಳು:
ಉಚ್ಚಿ ಪಿಳ್ಳಯಾರ್ ಗಣೇಶನ ದೇವಾಲಯ: ತಮಿಳುನಾಡಿನ ತಿರುಚ್ಚಿಯಲ್ಲಿರುವ ಕಲ್ಲಿನ ಕೋಟೆಯ ಮೇಲೆ ಗಣೇಶನಿಗೆ ಮುಡಿಪಾದ ಈ ಸುಪ್ರಸಿದ್ಧ ದೇವಾಲಯವಿದೆ. ಪೌರಾನಿಕತೆಯ ಪ್ರಕಾರ, ಈ ಒಂದು ಸ್ಥಳದಲ್ಲಿ ಗಣೇಶನು ಶ್ರೀರಂಗಂನಲ್ಲಿ ರಂಗನಾಥನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ವಿಭಿಷಣನಿಂದ ತಪ್ಪಿಸಿಕೊಳ್ಳುತ್ತಾನೆ.
ಚಿತ್ರಕೃಪೆ: Neilsatyam
ಪ್ರಾಚೀನ ಗಣೇಶನ ದೇವಾಲಯಗಳು:
ಅಷ್ಟ ವಿನಾಯಕರ ದೇವಾಲಯಗಳು : ಮಹಾರಾಷ್ಟ್ರ ರಾಜ್ಯದ ಪುಣೆಯ ಸುತ್ತಮುತ್ತಲಿರುವ ಅಷ್ಟಗಣಪತಿಯರ ದೇವಾಲಯಗಳು ಸಾಕಷ್ಟು ಪುರಾತನ ಹಾಗೂ ಪ್ರಸಿದ್ಧಿ ಪಡೆದ ದೇವಾಲಯಗಳಾಗಿವೆ. ಒಂದೆ ದಿನದಲ್ಲಿ ಎಂಟೂ ಗಣಪತಿಯರ ದರ್ಶನ ಮಾಡುವುದರಿಂದ ಎಲ್ಲ ಭಾಗ್ಯಗಳು ಲಭಿಸುತ್ತವೆ ಎನ್ನಲಾಗಿದೆ. ಆ ಅಷ್ಟ ಗಣಪತಿಯರೆಂದರೆ ಮೋರೇಶ್ವರ ಗಣಪತಿ, ಸಿದ್ಧಿ ವಿನಾಯಕ ಗನಪತಿ, ಬಲ್ಲಾಳೇಶ್ವರ ಗಣಪತಿ, ವರದವಿನಾಯಕ, ಚಿಂತಾಮಣಿ ಗಣಪತಿ, ಗಿರಿಜಾತ್ಮಜ ಗಣಪತಿ, ವಿಘ್ನೇಶ್ವರ ಹಾಗೂ ಮಹಾಗಣಪತಿ. ಚಿತ್ರದಲ್ಲಿರುವುದು ಗಿರಿಜಾತ್ಮಜ ಗಣಪತಿ.
ಚಿತ್ರಕೃಪೆ: Magiceye
ಪ್ರಾಚೀನ ಗಣೇಶನ ದೇವಾಲಯಗಳು:
ಪದ್ಮಾಲಯ ಗಣಪತಿ : ಇದು ಎರಡುವರೆ ಗಣೇಶನ ಶಕ್ತಿಪೀಠಗಳಲ್ಲೊಂದಾಗಿದ್ದು ಅರ್ಧ ಗಣೇಶ ಶಕ್ತಿಪೀಠವಾಗಿದೆ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಲಗಾಂವ್ ಪಟ್ಟಣದಿಂದ 32 ಕಿ.ಮೀ ಗಳಷ್ಟು ದೂರದಲ್ಲಿರುವ ಪದ್ಮಾಲಯ ಎಂಬ ಗ್ರಾಮದಲ್ಲಿದೆ. ವಿಶೇಷವೆಂದರೆ ಇಲ್ಲಿ ಎರಡು ಸ್ವಯಂಭು ಗಣೇಶನ ವಿಗ್ರಹಗಳು ಒಡಮೂಡಿದ್ದು ಒಂದು ಗಣೇಶನ ಸೊಂಡಿಲು ಬಲಕ್ಕೆ ಹೊರಲಿದ್ದರೆ ಇನ್ನೊಂದರ ಸೊಂಡಿಲು ಎಡಕ್ಕೆ ಹೊರಳಿದೆ. ಈ ಎರಡೂ ಗಣಪರನ್ನು ಅಮೋದ್ ಹಾಗೂ ಪ್ರಮೋದ್ ಎಮ್ದು ಕರೆಯಲಾಗುತ್ತದೆ.
ಚಿತ್ರಕೃಪೆ: Sandiperl