ಕೋಲಾರವು ಕರ್ನಾಟಕ ಪೂರ್ವ ಭಾಗದಲ್ಲಿ ನೆಲೆಸಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಜಿಲ್ಲೆಯು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು 3,969ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಅಲ್ಲದೆ ಇದು ’ಕರ್ನಾಟಕದ ಪೂರ್ವದ ಹೆಬ್ಬಾಗಿಲು’ ಎಂಬ ಅಡ್ಡ ಹೆಸರನ್ನು ಸಹಾ ಪಡೆದಿದೆ. ಕೋಲಾರವು ಇಲ್ಲಿನ ಚಿನ್ನದ ಗಣಿಯಿಂದಾಗಿ ಖ್ಯಾತಿ ಪಡೆದಿದೆ. ಈ ಚಿನ್ನದ ಗಣಿಯು ಕೋಲಾರಕ್ಕೆ ಗತಕಾಲದಲ್ಲಿ ಸುವರ್ಣಯುಗವನ್ನು ತಂದುಕೊಟ್ಟಿದ್ದಲ್ಲದೆ, ಮನಮೋಹಕ ದೇವಾಲಯಗಳನ್ನು ಮತ್ತು ಕೋಟೆಕೊತ್ತಲಗಳನ್ನು ಸಹಾ ಒದಗಿಸಿದೆ.
ಕೋಲಾರದ ಕುರಿತ ದಂತಕತೆಗಳು.
ಕೋಲಾರದ ಸುತ್ತ ಹಲವು ದಂತಕತೆಗಳು ಹರಡಿವೆ. ಅವುಗಳ ಪ್ರಕಾರ ಕೋಲಾರವು ಮಹರ್ಷಿ ವಾಲ್ಮೀಕಿಯ ವಾಸಸ್ಥಾನವಾಗಿತ್ತಂತೆ. ರಾಮನು ವನವಾಸದ ಸಮಯದಲ್ಲಿ ವಾಲ್ಮೀಕಿಯ ಆಶ್ರಮಕ್ಕೆ ಭೇಟಿಕೊಟ್ಟಿದ್ದನಂತೆ. ನಂತರದ ಕಾಲದಲ್ಲಿ ಸೀತೆಯು ರಾಮನಿಂದ ರಾಜ್ಯ ಬಹಿಷ್ಕಾರಕ್ಕೊಳಪಟ್ಟಾಗ ಇದೇ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಳಂತೆ. ಕೋಲಾರದಲ್ಲಿನ ಇದೇ ಆಶ್ರಮದಲ್ಲಿ ಸೀತೆಯು ಲವ –ಕುಶರಿಗೆ ಜನ್ಮನೀಡಿದಳು. ವಿಷ್ಣುವಿನ ಅವತಾರಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿರುವ ವೀರ ಋಷಿ ಪರಶುರಾಮನು ಇದೇ ಕೋಲಾರದ ಪಶ್ಚಿಮಕ್ಕೆ ಇರುವ ಹಚ್ಚ ಹಸಿರಿನ ಬೆಟ್ಟಗಳಲ್ಲಿ ಕೆಲ ಕಾಲ ತಂಗಿದ್ದನೆಂದು ಹೇಳಲಾಗುತ್ತದೆ.
ಇತಿಹಾಸದ ಆಧಾರದ ಮೇಲೆ ’ಕೋಲಾರ’ ಎಂಬ ಪದವು ಕೋಲಾಹಲ ಪುರ ಎಂಬ ಮೂಲದಿಂದ ಬಂದಿದೆ. ಇದರರ್ಥ ಜಗಳದ, ಯುದ್ಧದ ಊರು ಎಂದಾಗುತ್ತದೆ.ಬೆಟ್ಟಗಳ ನಡುವಿನ ತಂಪಾದ ಈ ಊರು ಚಾಲುಕ್ಯ ಮತ್ತು ಚೋಳ ಸಾಮ್ರಾಜ್ಯಗಳ ನಡುವಿನ ಭೀಕರ ಕದನಗಳಿಗೆ ಸಾಕ್ಷಿಯಾಗಿದೆ.
ಈ ಕಾಲದ ಅದ್ಭುತ ಅವಶೇಷಗಳನ್ನು ನಾವು ಇಂದಿಗು ಕೋಲಾರದಲ್ಲಿ ನೋಡಬಹುದು. ಕೋಲಾರಮ್ಮ ದೇವಾಲಯ ಮತ್ತು ಸೋಮೇಶ್ವರ ದೇವಾಲಯವು ನೋಡಲೆ ಬೇಕಾದ ದೇವಾಲಯಗಳಾಗಿವೆ. ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಪ್ಯಾರಸೆಯ್ಲಿಂಗ್ ಮತ್ತು ಶಿಲಾರೋಹಣದಂತಹ ಸಾಹಸಕ್ರೀಡೆಗಳು ಇಲ್ಲಿ ನಡೆಯುತ್ತಿರುತ್ತವೆ. ಕೋಲಾರವು ಬೆಂಗಳೂರಿನಿಂದ 65ಕಿ.ಮೀ ದೂರದಲ್ಲಿದ್ದು ರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು.