ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಜ್ಞಾನವೆಂಬ ಕತ್ತಲನ್ನು ಜ್ಞಾನದ ದೀಪದ ಮೂಲಕ ಬೆಳಕಾಗಿಸುವವನೆ ಗುರು. ಅದಕ್ಕಾಗಿಯೆ ಹಿಂದಿನಿಂದಲೂ ಭಾರತೀಯರು ಗುರು ಬ್ರಹ್ಮ, ಗುರು ವಿಷ್ಣು....ಎಂಬ ಶ್ಲೋಕವನ್ನು ಸಾಕ್ಷಾತ್ ದೈವ ಸ್ವರೂಪವಾದ ಗುರುವಿಗೆಂದೆ ಸಮರ್ಪಿಸಿದ್ದಾರೆ.
ಪೇಟಿಎಂ ಕೂಪನ್ನುಗಳು : 200 ರೂ.ಗಳ ಟಿಕೆಟ್ ಮೇಲೆ 15% ರಷ್ಟು ಹಣ ಮರುಪಾವತಿ ಹಾಗೂ ಐ ಫೋನ್ 6 ಗೆಲ್ಲುವ ಅವಕಾಶ
ಭಾರತವು ಅಗಾಧ ಜ್ಞಾನ ಭಂಡಾರವುಳ್ಳ, ಅದ್ಭುತ ಹಾಗೂ ವೈವಿಧ್ಯಮಯ ಸಂಸ್ಕೃತಿಯಿಂದ ಸಂಪದ್ಭರಿತವಾಗಿರುವ ಜಗತ್ತಿನ ಏಕೈಕ ವಿಶಿಷ್ಟ ರಾಷ್ಟ್ರವೆಂದರೆ ತಪ್ಪಾಗಲಿಕ್ಕಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಭಾರತದಲ್ಲಿ ಪ್ರಾಚೀನ ಸಮಯದಿಂದಲೆ ಆದ್ಯತೆ ನೀಡಲಾಗಿತ್ತು ಎಂಬುದಕ್ಕೆ ಇಂದು ಕಂಡುಬರುವ ನಾಳಂದಾ, ವಿಕ್ರಮಶಿಲಾ ವಿಶ್ವವಿದ್ಯಾಲಯಗಳಿರುವುದು ಸಾಕ್ಷಿ.
ವಿಶೇಷ ಲೇಖನ : ಭೇಟಿ ನೀಡಲೇಬೇಕಾದ ಶಿವನ ಮುಖ್ಯ ದೇವಾಲಯಗಳು
ಭಾರತೀಯ ಸಂಸ್ಕೃತಿಯು ಗುರುವನ್ನು ಅತಿ ಅಗ್ರ ಸ್ಥಾನದಲ್ಲಿ ಕೂರಿಸಿದೆ. ಎಷ್ಟೊ ಸಾಧು ಸಂತರು ಗುರುವಿನ ಕೃಪೆಯಿಲ್ಲದೆ ಸಾಧನೆಯು ಅಸಾಧ್ಯ ಹಾಗೂ ಮೋಕ್ಷವೂ ನಿರ್ಲಕ್ಷವಾದಂತೆ ಎಂದು ಹೇಳಿದ್ದಾರೆ. ಸನ್ನಡತೆಯ ಪರಿಪೂರ್ಣ ಬದುಕಿಗಾಗಿ ಗುರುವಿನ ಕೃಪೆ ಹಾಗೂ ಶಿಕ್ಷಣ ಅವಶ್ಯವೆಂದು ತಿಳಿದಿದ್ದುದರಿಂದ ಗುರುಕುಲಗಳು ಚಾಲ್ತಿಯಲ್ಲಿದ್ದವು.
ಭಾರತ ದೇಶವು ಅತ್ಯಂತ ಮಹಾ ಗುರುಗಳು ಎನ್ನಬಹುದಾದ ಅನೇಕ ಸಾಧು, ಸಂತರು, ಮಹರ್ಷಿಗಳು, ಜ್ಞಾನಿಗಳನ್ನು ನೀಡಿದ ಪುಣ್ಯ ಭೂಮಿಯಾಗಿದೆ. ಪ್ರಸ್ತುತ ಲೇಖನದ ಮೂಲಕ ಭಾರತದ ಕೆಲವು ಅಸಮಾನ್ಯ ಗುರುಗಳು ಹಾಗೂ ಅವರು ಹುಟ್ಟಿದ ಅಥವಾ ಸಾಧನೆಗೈದ ಸ್ಥಳಗಳ ಕುರಿತು ತಿಳಿಯಿರಿ ಮತ್ತು ಸಾಧ್ಯವಾದರೆ ಆ ಪುಣ್ಯ ಕ್ಷೇತ್ರಗಳಿಗೆ ಒಮ್ಮೆಯಾದರೂ ಭೇಟಿ ನೀಡಿ ಪುನಿತರಾಗಿ.

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಸಂತ ಜ್ಞಾನೇಶ್ವರ : ಮಹಾರಾಷ್ಟ್ರದ ಪ್ರಸಿದ್ಧ ಸಂತರು, ಯೋಗಿ, ಕವಿ ಹಾಗೂ ಅಧ್ಯಾತ್ಮಿಕ ಗುರುಗಳು. ಯಾದವ ದೊರೆ ರಾಮದೇವರ ಆಡಳಿತದಲ್ಲಿ ಅಂದರೆ 13 ನೇಯ ಶತಮಾನದಲ್ಲಿ ಗೋದಾವರಿ ನದಿ ತಟದಲ್ಲಿ ನೆಲೆಸಿರುವ ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯ ಪೈಥಾನಿ ತಾಲೂಕಿನ ಆಪೆಗಾಂವ್ ಎಂಬ ಗ್ರಾಮದಲ್ಲಿ ಇವರ ಜನನವಾಯಿತು. ಮಾನವ ಕಲ್ಯಾಣಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿ ಇವರು ಕೊನೆಯದಾಗಿ ಆಳಂದಿಯ ಇಂದ್ರಯಾಣಿ ನದಿ ತಟದಲ್ಲಿ ಸಂಜೀವಿನಿ ಸಮಾಧಿ ತೆಗೆದುಕೊಂಡರು. ಆಳಂದಿಯ ಇಂದ್ರಯಾಣಿ ನದಿ ತಟ. ಇಂದಿಗೂ ಇಲ್ಲಿ ಭೇಟಿ ನೀಡಿದಾಗ ಒಂದು ರೀತಿಯ ಅಲೌಕಿಕ ಶಾಂತಿಯ ಅನುಭೂತಿಯಾಗುತ್ತದೆಂದು ಅನೇಕ ಜನರು ಹೇಳುತ್ತಾರೆ.
ಚಿತ್ರಕೃಪೆ: rohit gowaikar
ಚಿತ್ರಕೃಪೆ: Swapniladitya

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಶಿರಡಿ ಸಾಯಿಬಾಬಾ : "ಸಬ್ ಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಆಲಿಸುತ್ತ ಪರಿಹರಿಸುತ್ತಿರುವ ಶ್ರೀ ಸದ್ಗುರು ಸಾಯಿನಾಥರು ನೆಲೆಸಿರುವ ಶ್ರೀಕ್ಷೇತ್ರವೆ ಶಿರಡಿ ಪಟ್ಟಣ. ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯು ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ. ಅಲ್ಲದೆ ಭಾರತದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿಯೂ ಶಿರಡಿಯ ಸಾಯಿ ದೇವಸ್ಥಾನವು ಒಂದಾಗಿದೆ. ಸಾಯಿ ನೆಲೆಯ ದಿವ್ಯ ಸೆಲೆ ಶಿರಡಿ.
ಚಿತ್ರಕೃಪೆ: ~Beekeeper~

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಸತ್ಯ ಸಾಯಿಬಾಬಾ : ತಮ್ಮ ಕುರಿತು ಸಾಕಷ್ಟು ವಿರೋಧವಿದ್ದರೂ ಅದಕ್ಕೆ ಪ್ರತಿಕ್ರಯಿಸದೆ ಮಾನವನ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಬಡವರ ಅನುಕೂಲಕ್ಕಾಗಿ ಸಾಕಷ್ಟು ಸೇವೆಗಳನ್ನು ಒದಗಿಸಿ ಸಾವಿರಾರು ಜನರ ಪಾಲಿಗೆ ಗುರುವಾಗಿದ್ದರು ಸತ್ಯ ಸಾಯಿ ಬಾಬಾರವರು. ಇವರು ಹುಟ್ಟಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಎಂಬ ಕುಗ್ರಾಮದಲ್ಲಿ. ಆದರೆ ಇಂದು ಪಟ್ಟಣಗಳೂ ನಾಚುವಷ್ಟರ ಮಟ್ಟಿಗೆ ಸೌಲಭ್ಯಗಳನ್ನು ಇ ಗ್ರಾಮ ಹೊಂದಿದೆ. ವಿಶೇಷವೆಂದರೆ ಇಂದಿಗೂ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಸಂಭ್ರಮ ಹಾಗೂ ಶೃದ್ಧೆಯಿಂದ ಆಚರಿಸಲಾಗುತ್ತದೆ.
ಚಿತ್ರಕೃಪೆ: J929

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಶ್ರೀ ಶಂಕರಾಚಾರ್ಯರು : ಅದ್ವೈತ ಸಿದ್ಧಾಂತವನ್ನು ಪ್ರತಿ ಪಾದಿಸಿ, ದಕ್ಷಿಣದಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಅಲ್ಪಾಯುವಿನಲ್ಲೆ ಪ್ರಯಾಣಿಸಿ, ಹಿಂದೂ ಧರ್ಮದ ವೇದೋಪನಿಶತ್ತುಗಳ ತಿರುಳು ಸಾರುತ್ತ, ಪವಿತ್ರ ಭಾರತದ ನಾಲ್ಕು ದಿಕ್ಕುಗಳಲ್ಲಿ ಜಗತ್ಪೀಠಗಳನ್ನು ಸ್ಥಾಪಿಸಿ ಅಸಂಖ್ಯಾತ ಭಕ್ತ ಪರಿಪಾಲಕರನ್ನು ಹೊಂದಿರುವ ಶ್ರೀ ಆದಿ ಗುರು ಶಂಕರಾಚಾರ್ಯರು ಹುಟ್ಟಿದ್ದು ಕೇರಳ ರಾಜ್ಯದ ಕಾಲಡಿ ಎಂಬ ಪಟ್ಟಣದಲ್ಲಿ. ಕಾಲಡಿ, ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಹರಿದಿರುವ ಪೆರಿಯಾರ್ ನದಿಯ ತಟವೊಂದರಲ್ಲಿ ಶಾಂತವಾಗಿ ನೆಲೆಸಿರುವ ಒಂದು ಪಟ್ಟಣವಾಗಿದೆ. ವಿಶೇಷವೆಂದರೆ ಈ ಪಟ್ಟಣವು ನಕ್ಷೆಯಲ್ಲಿ 19 ನೆಯ ಶತಮಾನದವರೆಗೂ ಗುರುತಿಸಿಕೊಂಡಿರಲಿಲ್ಲ. ಅದೆ ಶತಮಾನದ ಕೊನೆಯಲ್ಲಿ ಅಂದಿನ ಕರ್ನಾಟಕದ ಶೃಂಗೇರಿ ಪೀಠದ ಪೀಠಾಧಿಪತಿಗಳಾಗಿದ್ದ ಶಂಕರಾಚಾರ್ಯರಿಂದ ಈ ಸ್ಥಳವು ಶೋಧಿಸಲ್ಪಟ್ಟು, 1910 ರಲ್ಲಿ ಆದಿ ಗುರು ಶಂಕರರಿಗೆ ಮುಡಿಪಾದ ದೇಗುಲವನ್ನು ಪ್ರತಿಷ್ಠಾಪಿಸುವುದರ ಮೂಲಕ ಪ್ರವರ್ಧಮಾನಕ್ಕೆ ಬಂದಿತು. ಶಂಕರರ ಕಾಲಡಿಗೊಂದು ಭೇಟಿ.
ಚಿತ್ರಕೃಪೆ: Ranjithsiji

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಶ್ರೀ ರಾಘವೇಂದ್ರ ಸ್ವಾಮಿಗಳು : ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪವಿತ್ರ ಶ್ರೀ ಕ್ಷೇತ್ರವೆ ಮಂತ್ರಾಲಯ. ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ ಮೇಲೆ ನೆಲೆಸಿದೆ. ಗುರು ರಾಘವೇಂದ್ರರ ಬೃಂದಾವನವಿರುವ ಈ ಕ್ಷೇತ್ರವು ಪ್ರತಿ ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಮಂತ್ರಾಲಯ ಕುರಿತು ಹೆಚ್ಚಿನ ಮಾಹಿತಿ.

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಉತ್ತರ ಪ್ರದೇಶ ರಾಜ್ಯದ ವಾರಣಾಸಿಯ ಈಶಾನ್ಯಕ್ಕೆ ಸುಮಾರು 15 ಕಿ.ಮೀ ದೂರದಲ್ಲಿರುವ ಸಾರನಾಥ ಎಂಬಲ್ಲಿ ಗುರು ಪೌರ್ಣಮಿಯನ್ನು ಬಹು ಭಕ್ತಿಯಿಂದ ಆಚರಿಸಲಾಗುತ್ತದೆ. ಪರಮ ಗುರುವಾದ ಗೌತಮ ಬುದ್ಧನು ತನ್ನ ಮೊದಲ ಪ್ರವಚನ ಹಾಗೂ ನಾಲ್ಕು ಪರಮ ಸತ್ಯಗಳನ್ನು ತನ್ನ ಶಿಷ್ಯರಿಗೆ ಬೋಧಿಸಿದ್ದ. ಬೌದ್ಧ ಧರ್ಮಿಯರು ಇಂದಿಗೂ ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Ekabhishek

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ರಾಮಕೃಷ್ಣ ಪರಮಹಂಸ : ಭಾರತದ ಪರಮ ಗುರುಗಳಲ್ಲಿ ಒಬ್ಬರಾದ ಹಾಗೂ ಸ್ವಾಮಿ ವಿವೇಕಾನಂದರ ಗುರುವಾದ ರಾಮಕೃಷ್ಣ ಪರಮಹಂಸರು ಪಶ್ಚಿಮ ಬಂಗಾಳ ರಾಜ್ಯದ ದಕ್ಷಿನೇಶ್ವರದಲ್ಲಿರುವ ಪ್ರಖ್ಯಾತ ಕಾಳಿ ಮಂದಿರದ ಅರ್ಚಕರಾಗಿದ್ದರು. ಇವರು ಹೂಗ್ಲಿ ಜಿಲ್ಲೆಯ ಕಮರ್ಕಪುರ ಎಂಬಲ್ಲಿ ವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಇಂದಿಗೂ ದಕ್ಷಿಣೇಶ್ವರದಲ್ಲಿರುವ ಕಾಳಿ ಮಂದಿರವು ಪ್ರಖ್ಯಾತವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Nikkul

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಸ್ವಾಮಿ ವಿವೇಕಾನಂದ : ರಾಮಕೃಷ್ಣ ಪರಮ ಹಂಸರು ಪ್ರಮುಖ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರನ್ನೂ ಸಹ ಯುವ ಪಿಳಿಗೆಯವರ ಪರಿಣಾಮಕಾರಿ ಗುರು ಎಂದು ಪರಿಗಣಿಸಲಾಗುತ್ತದೆ. ಇವರು ಸದಾ ತಮ್ಮ ಧನಾತ್ಮಕ ವಿಚಾರಧಾರೆ ಹಾಗೂ ಅತ್ಯದ್ಭುತ ಜ್ಞಾನಯುಕ್ತ ನುಡಿಗಳಿಂದ ಯುವಜನರನ್ನು ಸನ್ನಡತೆಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿದ್ದರು. ವಿದೇಶಗಳಲ್ಲೆಲ್ಲ ಸುತ್ತಿ ತಮ್ಮ ವಾಕ್ಚಾತುರ್ಯ ಹಾಗೂ ಬುದ್ಧಿಮತ್ತೆಯಿಂದ ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ಗುರು. ಇವರು ಕೊಲ್ಕತ್ತಾದ ಗೌರ್ ಮೋಹನ್ ಮುಖರ್ಜೀ ಬೀದಿಯ ಬಂಗಾಳಿ ಕುಟುಂಬವೊಂದರಲ್ಲಿ ಜನಿಸಿದ್ದರು. ಇಂದು ಈ ಸ್ಥಳವು ಸಂಗ್ರಹಾಲಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Biswarup Ganguly

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಸ್ವಾಮಿ ಸಮರ್ಥ ರಾಮದಾಸರು ಮಹಾರಾಷ್ಟ್ರದಲ್ಲಿದ್ದ 17 ನೆಯ ಶತಮಾನದ ಪ್ರಮುಖ ಸಂತರು ಹಾಗೂ ಅಧ್ಯಾತ್ಮಿಕ ಕವಿಗಳು. ಕೇವಲ ಮಹಾರಾಷ್ಟ್ರವಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲೂ ಸಾಕಷ್ಟು ಇವರ ಅನುಯಾಯಿಗಳನ್ನು ಇಂದಿಗೂ ನಾವು ಕಾಣಬಹುದು. ಇವರಿಂದ ರಚಿತವಾದ ಅದ್ವೈತ ಸಿದ್ಧಾಂತವನ್ನು ಹೊಂದಿರುವ ದಾಸಬೋಧ ಕೃತಿಯು ಅತ್ಯಂತ ಜನಪ್ರೀಯ ಆಧ್ಯಾತ್ಮಿಕ ಕೃತಿಯಾಗಿದೆ. ಇವರು ಆಂಜನೇಯನ ಹಾಗೂ ರಾಮನ ಪರಮ ಭಕ್ತರಾಗಿದ್ದರು. ಇವರು ಜೀವನದ 22 ವರ್ಷಗಳನ್ನು ಒಂದು ಗುಹೆಯಲ್ಲಿ ಕಳೆದಿದ್ದರೆನ್ನಲಾಗಿದ್ದು ಆ ಗುಹೆಯೆ ಶಿವಥರ ಘಳ ಅಥವಾ ಸುಂದರಮಠ. ಶಿವಥರ ಘಳದಲ್ಲಿ ಇಂದು ಜಲಪಾತದ ಹಿಂಬದಿಯಲ್ಲಿರುವ ಮೂಲ ಗುಹೆ, ಸಮರ್ಥ ರಾಮದಾಸರಿಗೆ ಮುಡಿಪಾದ ದೇವಾಲಯ, ಪ್ರಸಾದ ಕೊಠಡಿ ಹಾಗೂ ವಸತಿ ಕೋಣೆಯನ್ನು ಕಾಣಬಹುದಾಗಿದೆ. ಮಧ್ಯಾಹ್ನ 12 ರಿಂದ 1.30 ಮಧ್ಯದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು ಇಲ್ಲವೆ ಪ್ರವಾಸಿಗರಿಗೆ ಪ್ರಸಾದ ವಿತರಿಸಲಾಗುತ್ತದೆ.
ಚಿತ್ರಕೃಪೆ: Mvkulkarni23

ಮಹಾನ್ ಗುರುಗಳು ಹಾಗೂ ಪುಣ್ಯ ಕ್ಷೇತ್ರಗಳು:
ಕೊನೆಯದಾಗಿ ಈ ಗುರುಪೂರ್ಣಿಮೆಯನ್ನು ಯಾರ ನೆನಪಿಗಾಗಿ ಆಚರಿಸಲಾಗುತ್ತದೋ ಅವರ ಪರಿಚಯ. ಅವರೆ ವೇದಗಳ ಜನಕ, ಪುರಾಣಗಳ ಪಿತಾಮಹ ಎಂದು ಕರೆಯಿಸಿಕೊಳ್ಳುವ ಶ್ರೀ ವೇದವ್ಯಾಸ ಮಹರ್ಷಿಗಳು. ಮಹಾಭಾರತ ಮಹಾಕಾವ್ಯದ ಲೇಖಕರು. (ಬರೆದದ್ದು ಮಾತ್ರ ಗಣೇಶನು). ಇವರ ಗೌರವಾರ್ಥವಾಗಿಯೆ ಹಿಂದೂಗಳು ಜುನ್/ಜುಲೈ ಸಂದರ್ಭದಲ್ಲಿ ಬರುವ ಪೌರ್ಣಮಿಯನ್ನು ಗುರು ಪೂರ್ಣಿಮೆಯನ್ನಾಗಿ ಆಚರಿಸುತ್ತಾರೆ. ಇದು ಅವರ ಹುಟ್ಟು ಹಬ್ಬದ ದಿನವೆಂದು ನಂಬಲಾಗಿದೆ. ದೇಶದ ಬಹುತೇಕ ಎಲ್ಲಾ ಸ್ಥಳಗಳಲ್ಲಿಯೂ ಗುರು ಪೂರ್ಣಿಮೆಯನ್ನು ಭಕ್ತಿ ಪೂರ್ವಕವಾಗಿ ಅದರಲ್ಲೂ ವಿಶೇಷವಾಗಿ ಸಾಕಷ್ಟು ಶಾಲಾ/ಕಾಲೇಜುಗಳಲ್ಲಿ ಆಚರಿಸಲಾಗುತ್ತದೆ.


Click it and Unblock the Notifications


















