ಭಾರತದಲ್ಲಿರುವ ಅತಿ ಪವಿತ್ರ ಸ್ಥಳಗಳಲ್ಲಿ ಪುಷ್ಕರ್ ಕೂಡ ಒಂದೆಂದು ಪರಿಗಣಿಸಲಾಗಿದೆ. ಈ ಪಟ್ಟಣವು ಅಜ್ಮೇರ್ ನಗರದಿಂದ 14 ಕಿ.ಮೀ ದೂರದಲ್ಲಿದೆ. ಸುಮಾರು ನಾಲ್ಕನೇ ಶತಮಾನದಲ್ಲಿ ಚಿನಿ ಯಾತ್ರಿಕನಾದ ಫಾ-ಹೈನ್ ತನ್ನ ಪ್ರಯಾಣದ ವಿವರದ ಹೊತ್ತಿಗೆಯಲ್ಲಿ ಪುಷ್ಕರ್ ನ ಕುರಿತು ಉಲ್ಲೇಖಿಸಿದ್ದು, ಆಗತಾನೆ ಮುಘಲರು ಭಾರತವನ್ನು ಆಕ್ರಮಿಸಿದ್ದರು. ಇಷ್ಟೆ ಅಲ್ಲ, ಭಾರತದ ಒಬ್ಬ ಶ್ರೇಷ್ಠ ಕವಿಯಾದ ಕವಿರತ್ನ ಕಾಳಿದಾಸನು, ತನ್ನ ಪ್ರಸಿದ್ಧ ಕೃತಿಯಾದ 'ಅಭಿಗ್ಯಾನ್ ಶಾಕುಂತಲಮ್' ನಲ್ಲಿ ಪುಷ್ಕರ್ ಅನ್ನು ಮಹತ್ವಪೂರ್ಣವಾಗಿ ವಿವರಿಸಿದ್ದಾನೆ. ಚಿಕ್ಕ ಪಟ್ಟಣವಾಗಿದ್ದರೂ ಕೂಡ, 400 ಕ್ಕೂ ಅಧಿಕ ದೇವಸ್ಥಾನಗಳು ಮತ್ತು 52 ಘಾಟ್ ಗಳನ್ನು ಹೊಂದಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿರುವ ಇನ್ನಿತರ ಪ್ರಸಿದ್ಧ ದೇವಾಲಯಗಳೆಂದರೆ ವರಾಹ ದೇವಸ್ಥಾನ, ಆಪ್ತೈಶ್ವರ ದೇವಸ್ಥಾನ ಮತ್ತು ಸಾವಿತ್ರಿ ದೇವಸ್ಥಾನ.
ಇಲ್ಲಿರುವ ಪವಿತ್ರ ಪುಷ್ಕರ್ ಸರೋವರವು ಮತ್ತೊಂದು ಧಾರ್ಮಿಕ ಆಕರ್ಷಣೆಯಾಗಿದ್ದು, ಅದರ ಮೂಲವು ಒಂದು ದಂತಕಥೆಯನ್ನೇ ಒಳಗೊಂಡಿದೆ. ಅದರ ಪ್ರಕಾರ ಬ್ರಹ್ಮ ದೇವನು ಕಮಲದ ಹೂವಿನಿಂದ ವಜ್ರ ನಾಭನೆಂಬ ಅಸುರನನ್ನು ಸಂಹರಿಸಿದನು.
ಪರಿಣಾಮವಾಗಿ ಕಮಲದ ಹೂವಿನ ಮೂರು ಪಕುಳಿಗಳು ಕೆಳಗೆ ಬಿದ್ದು, ಅದರಲ್ಲಿಯ ಒಂದು ಪಕುಳಿ ಪುಷ್ಕರ್ ನಲ್ಲಿ ಬಿದ್ದು ಈ ಸರೋವರದ ಉದ್ಭವವಾಯಿತು.ಪ್ರತಿ ಕಾರ್ತಿಕ ಪೂರ್ಣಿಮೆಯಂದು ಲಕ್ಷಾಂತರ ಜನರು ಈ ಸರೋವರದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ, ಏಕೆಂದರೆ ಇದು ಮೋಕ್ಷಕ್ಕೆ ದಾರಿ ಎಂದು ಗಾಢವಾಗಿ ನಂಬಲಾಗಿದೆ. ಪುಷ್ಕರ್ ಜಾತ್ರೆ ಹಾಗು ಹಬ್ಬಗಳಿಗೂ ಕೂಡ ಹೆಸರುವಾಸಿಯಾಗಿದೆ. ವಿಶ್ವದಲ್ಲೇ ದೊಡ್ಡದೆನ್ನಬಹುದಾದಂತಹ ದನಗಳ ಜಾತ್ರೆಯಾದ 'ಪುಷ್ಕರ್ ಕ್ಯಾಟಲ್ ಫೇರ್' ನ್ನು ಪ್ರತಿ ವರ್ಷ ನವಂಬರ್ ತಿಂಗಳಿನಲ್ಲಿ ಇಲ್ಲಿ ಆಯೋಜಿಸಲಾಗುತ್ತದೆ. ದನಗಳ ವ್ಯಾಪಾರದ ಹೊರತಾಗಿ, ರಾಜಸ್ಥಾನಿನ ಸಂಪ್ರದಾಯ ಹಾಗು ಸಂಸ್ಕೃತಿಯ ಛಾಯೆಯನ್ನೂ ಈ ಜಾತ್ರೆಯಲ್ಲಿ ಕಾಣಬಹುದಾಗಿದೆ.
ಪುಷ್ಕರ್ ಅನ್ನು ಎಲ್ಲ ಭಾಗಗಳಿಂದ ಸುಲಭವಾಗಿ ತಲುಪಬಹುದಾಗಿದೆ. ಸಂಗನೇರ್ ವಿಮಾನ ನಿಲ್ದಾಣ, ಜೈಪುರ್ ಇದಕ್ಕೆ ಹತ್ತಿರದ ನಿಲ್ದಾಣವಾಗಿದ್ದು, ಅಜ್ಮೇರ್ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಅಜ್ಮೇರ್ ರಸ್ತೆಯ ಮೂಲಕವು ರಾಜ್ಯದ ಇತರೆ ಪ್ರಮುಖ ಪಟ್ಟಣಗಳಾದ ಜೈಪುರ್, ಜೈಸಲ್ಮೇರ್ ಮತ್ತು ಉದಯ್ ಪುರ್ ಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಚಳಿಗಾಲವು ಪುಷ್ಕರ್ ಗೆ ಭೇಟಿ ನೀಡಲು ಸೂಕ್ತವಾಗಿದ್ದು ಸಾಮಾನ್ಯವಾಗಿ ತಾಪಮಾನವು 8°C ಯಿಂದ 25°C ಇರುತ್ತದೆ.