ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ನವೆಂಬರ್ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ವಂದೇ ಭಾರತ್ ರೈಲಿನ ಸೇವೆಗೆ ಚಾಲನೆ ನೀಡಲಿದ್ದಾರೆ.
ಈ ಯಾತ್ರೆಗೆ ಹೊರಡುತ್ತಿರುವ ರೈಲು ನವೆಂಬರ್ 11 ರಂದು ಬೆಂಗಳೂರಿನಿಂದ ಹೊರಟು ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಗಳ ಪ್ರವಾಸ ಮುಗಿಸಿ ನವೆಂಬರ್ 18 ರಂದು ವಾಪಸ್ ಬೆಂಗಳೂರಿಗೆ ಬರಲಿದೆ. ಅಲ್ಲದೆ ಈ ರೈಲು ಬೆಂಗಳೂರು, ಬೀರೂರು ಹಾವೇರಿ, ಹುಬ್ಬಳ್ಳಿ. ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗ್ ರಾಜ್ ಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತದೆ. ಮುಂದಿನ ಪ್ರವಾಸಕ್ಕಾಗಿ ನವೆಂಬರ್ 23 ರಂದು ಯೋಜಿಸಲಾಗಿದೆ.
ಈ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲ ರೈಲು ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿಯಾಗಿದೆ. ಅಕ್ಟೋಬರ್ ೩೦ ರಿಂದ ಈ ಬುಕ್ಕಿಂಗ್ ಪ್ರಾರಂಭಗೊಂಡಿದ್ದು, ಮೊದಲ ದಿನವೇ 200 ಬುಕ್ಕಿಂಗ್ ಮಾಡಲಾಗಿತ್ತು. ಮೂರನೇ ದಿನ ಎಲ್ಲಾ 540 ಸೀಟ್ ಗಳು ಭರ್ತಿಯಾಗಿವೆ ಇದೊಂದು ನೂತನ ದಾಖಲೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಹೋಟೆಲ್ಗಳಲ್ಲಿ ಆಹಾರ ಮತ್ತು ವಸತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರು ಈ ಟೂರ್ ಪ್ಯಾಕೇಟ್ ನ ಟಿಕೆಟ್ನ ನಿಜವಾದ ವೆಚ್ಚ 20,000 ರೂಗಳು. ರಾಜ್ಯ ಸರ್ಕಾರವು ಕಾಶಿ ಪ್ರವಾಸಕ್ಕೆ 5,000 ರೂ.ಗಳ ಸಹಾಯಧನವನ್ನು ನೀಡುತ್ತಿರುವುದರಿಂದ, ಪ್ರತಿ ವ್ಯಕ್ತಿಗೆ 15,000 ರೂ ವೆಚ್ಚ ತಗುಲುತ್ತದೆ. ಒಟ್ಟಾರೆ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ಅನ್ನು ತಲುಪಲು ಅವಕಾಶವಿದಾಗಿದೆ.