ಕರ್ನಾಟಕದ ಪ್ರಖ್ಯಾತ ಮಹಾನಗರಗಳ ಪೈಕಿ ಮಂಚೂಣಿಯಲ್ಲಿರುವ ಬೆಂಗಳೂರು ಹಾಗೂ ಮೈಸೂರು ನಗರಗಳು ಒಂದಕ್ಕೊಂದು ಹತ್ತಿರದಲ್ಲಿರುವುದರಿಂದ ಈ ಎರಡೂ ನಗರಗಳ ವಾಸಿಗಳಿಗೆ ಪ್ರವಾಸ ಕೈಗೊಳ್ಳುವುದು ಒಂದು ಸಂತಸ ಕರುಣಿಸುವ ರೋಮಾಂಚಕ ಚಟುವಟಿಕೆಯಾಗಿದೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾದ ಮೈಸೂರು ವರ್ಷದ ಎಲ್ಲ ಸಮಯದಲ್ಲೂ ಭೇಟಿ ನೀಡಬಹುದಾದ ಯೋಗ್ಯ ತಾಣವಾದರೂ ಅಕ್ಟೋಬರ್ ನಂತರದ ಸಮಯದಲ್ಲಿ ಇಲ್ಲಿಗೆ ಬರುವವರ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವಾಗಿದೆ ದಸರಾ ಉತ್ಸವದ ಸಂದರ್ಭ. ಅಲ್ಲದೆ ಈ ಸಮಯದಲ್ಲಿ ಮಳೆಯ ಪ್ರಮಾಣವು ತಗ್ಗಿ, ಹಿತಕರವಾದ ಚಳಿಗಾಲದ ಪ್ರಾರಂಭಿಕ ಹಂತ ಬರುವುದು.
ವಿಶೇಷ ಲೇಖನ : ಹಾಸನ ಮತ್ತು ಶಿವಮೊಗ್ಗಗಳಲ್ಲಿರುವ ದೇವಾಲಯಗಳು
ಇನ್ನೂ ಬೆಂಗಳೂರು ಸಹ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಬರ ಮಾಡಿಕೊಳ್ಳುತ್ತದೆ. ಈ ಎರಡೂ ನಗರಗಳಲ್ಲಿ ಪ್ರವಾಸಿ ಆಕರ್ಷಣೆಗಳೂ ಸಾಕಷ್ಟಿದ್ದರೂ, ಹಲವು ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ಇಂಬು ನೀಡುವಂತೆ ಈ ನಗರಗಳಲ್ಲಿರುವ ಹಾಗೂ ಸುತ್ತಮುತ್ತಲಿರುವ ತೀರ್ಥ ಕ್ಷೇತ್ರ ಅಥವಾ ಪವಿತ್ರ ಹಾಗೂ ವಿಶಿಷ್ಟ ದೇವಾಲಯಗಳಿಗೆ ಭೇಟಿ ನೀಡುವ ಉದ್ದೇಶದಿಂದ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಾರೆ.
ಬೆಂಗಳೂರು - ಮೈಸೂರು ನಗರಗಳು 150 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಸಾಕಷ್ಟು ರೈಲುಗಳು, ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಸಂಪರ್ಕವನ್ನು ಹೊಂದಿವೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವುದಾಗಲಿ ಅಥವಾ ಮೈಸೂರಿನಿಂದ ಬೆಂಗಳೂರಿಗೆ ಬರುವುದಾಗಲಿ ನೀರು ಕುಡಿದಷ್ಟೆ ಸರಳವಾಗಿದೆ. ಪ್ರಸ್ತುತ ಲೇಖನದ ಮೂಲಕ ಈ ಎರಡೂ ನಗರಗಳಲ್ಲಿರುವ ಹಾಗೂ ಸುತ್ತಮುತ್ತಲಿರುವ ಕೆಲವು ವಿಶಿಷ್ಟ ತೀರ್ಥ ಕ್ಷೇತ್ರಗಳು ಹಾಗೂ ದೇವಾಲಯಗಳ ಪ್ರವಾಸ ಮಾಡಿ. ಕೆಲವೆ ಕೆಲವು ಆಯ್ದ ಸ್ಥಳಗಳ ಕುರಿತು ಮಾತ್ರವೆ ತಿಳಿಸಲಾಗಿದೆ.
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ರಂಗನಾಥಸ್ವಾಮಿ ದೇವಾಲಯ : ಬೆಂಗಳೂರಿನ ಹೃದಯ ಭಾಗವಾದ ಚಿಕ್ಕಪೇಟೆ ಪ್ರದೇಶದಲ್ಲಿ ಈ ಸುಂದರ ರಂಗನಾಥ ಸ್ವಾಮಿಯ ದೇವಾಲಯವಿದೆ. 16 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿರುವ ಈ ದೇವಾಲಯವು ವಿಜಯನಗರ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ರಂಗನಾಥನು ತನ್ನ ಪತ್ನಿಯರಾದ ಶ್ರೀದೇವಿ ಹಾಗೂ ನೀಲಾ ದೇವಿಯರ ಸಮೇತನಾಗಿ ನೆಲೆಸಿದ್ದಾನೆ. ದೇವಾಲಯದ ಮುಂದಿನ ರಸ್ತೆಯನ್ನು ದೇವಾಲಯ ಬೀದಿ ಅಥವಾ "ಟೆಂಪಲ್ ಸ್ಟ್ರೀಟ್" ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: ASG Balaji
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಅಲಸೂರು ಸೋಮನಾಥೇಶ್ವರ ದೇವಾಲಯ : ಶಿವನಿಗೆ ಮುಡಿಪಾದ, ಚೋಳರ ಕಾಲಮಾನದಲ್ಲಿ ನಿರ್ಮಾಣಗೊಂಡ, ಪ್ರಸ್ತುತ ಬೆಂಗಳೂರಿನ ಅತಿ ಪುರಾತನವಾದ ದೇವಾಲಯ ಇದಾಗಿದೆ. ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಈ ದೇವಾಲಯದಲ್ಲಿ ಯಥೇಚ್ಚವಾಗಿ ಕಾಣಬಹುದು. ನಂತರ ವಿಜಯನಗರದ ಆಡಳಿತವಿದ್ದಾಗಲೂ ಸಹ ಸಾಕಷ್ಟು ನವೀಕರಣಕ್ಕೆ ಈ ದೇವಾಲಯ ಒಳಗಾಯಿತು.
ಚಿತ್ರಕೃಪೆ: Dineshkannambadi
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಕೋಟೆ ವೆಂಕಟರಮಣಸ್ವಾಮಿ ದೇವಾಲಯ : ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿ ಈ ದೇವಾಲಯವಿರುವುದನ್ನು ಕಾಣಬಹುದು. ಟಿಪ್ಪು ಸುಲ್ತಾನನ ಅರಮನೆಯ ಪಕ್ಕದಲ್ಲೆ ಕೋಟೆ ವೆಂಕಟರಮಣನ ದೇವಸ್ಥಾನವಿದ್ದು ಸಾಕಷ್ಟು ಭಕ್ತಾದಿಗಳು ದಿನನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Omshivaprakash
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಬೇಗೂರು ನಾಗನಾಥೇಶ್ವರ ದೇವಾಲಯ, ಬೇಗೂರು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ನೆಲೆಸಿರುವ ಬೇಗೂರು ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಇದು ಸುಮಾರು 1300 ವರ್ಷಗಳಷ್ಟು ಪುರಾತನವದುದು. ಈ ದೇವಾಲಯವು ಚೋಳ ವಂಶದ ಮೊದಲನೇಯ ಕುಲಾತುಂಗ ರಾಜಾ ಹಾಗು ತಲಕಾಡ್ ಗಂಗಾ ವಂಶದ ರಾಜಸಿಂಹನಂದಿ ಅವರುಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಐದು ಲಿಂಗಗಳಿರುವುದರಿಂದ ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂತಲೂ ಕರೆಯಲಾಗುತ್ತದೆ. ಆ ಐದು ಲಿಂಗಗಳೆಂದರೆ ಶ್ರೀ ನಾಗೇಶ್ವರ, ಚೋಳೇಶ್ವರ, ಕಾಲಿ ಕಮಟೇಶ್ವರ, ನಗಾರೇಶ್ವರ ಹಾಗು ಕರಣೇಶ್ವರ. ಅಲ್ಲದೆ ಪಾರ್ವತಿಗೆ ಮೀಸಲಾದ ದೇಗುಲವೂ ಇದ್ದು, ಪಶ್ಚಿಮಕ್ಕೆ ಮುಖ ಮಾಡಿದ ಸೂರ್ಯನ ಮೂರ್ತಿಯನ್ನು ಇಲ್ಲಿ ಕಾಣಬಹುದು. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ.
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಬನಶಂಕರಿ ದೇವಸ್ಥಾನ ಬೆಂಗಳೂರು ದಕ್ಷಿಣದಲ್ಲಿರುವ ಬನಶಂಕರಿ ಬೆಂಗಳೂರಿಗರಿಗೆ ಅತಿ ಚಿರಪರಿಚಿತವಿರುವ ಪ್ರದೇಶ. ಬೃಹತ್ತಾಗಿ ವಿಸ್ತರಿಸಿರುವ ಈ ಪ್ರದೇಶಕ್ಕೆ ಬನಶಂಕರಿ ಎಂಬ ಹೆಸರು ಬರಲು ಕಾರಣ ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನ. ಸೊಮಣ್ಯ ಶೆಟ್ಟಿ ಎಂಬ ಬನಶಂಕರಿ ಅಮ್ಮನ ಭಕ್ತರು ಈ ದೇವಸ್ಥಾನವನ್ನು 1915 ರಲ್ಲಿ ನಿರ್ಮಿಸಿದ್ದಾರೆ. ಇವರು ದೇವಿಯ ಮೂರ್ತಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ದೇವಸ್ಥಾನದ ವಿಶೇಷತೆಯೆಂದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಘಳಿಗೆಯಲ್ಲ ಎಂದು ನಂಬಲ್ಪಡುವ ರಾಹು ಕಾಲದಲ್ಲಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಎಲ್ಲ ವಿಘ್ನಗಳನ್ನು ಪರಿಹರಿಸುತ್ತಾಳೆ ಎಂಬುದು ಇದರ ಸಂಕೇತವಾಗಿದೆ. ಅರ್ಧ ಸಿಳಿದ ನಿಂಬೆ ಹಣ್ಣಿನ ತೊಗಟೆಯನ್ನು ಹಣತೆಯನ್ನಾಗಿ ಮಾಡಿ ಅದರಲ್ಲಿ ದೀಪ ಬೆಳಗಿ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಬನಶಂಕರಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಗವಿ ಗಂಗಾಧರೇಶ್ವರ ದೇವಸ್ಥಾನ : ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಭಾರತೀಯ ಶಿಲಾ ಕೆತ್ತನೆ ವಾಸ್ತುಶಿಲ್ಪ (ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್) ಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಅತಿ ಆಸಕ್ತಿದಾಯಕ ವಿಷಯವೆಂದರೆ ವರ್ಷದ ಒಂದು ನಿಗದಿತ ಸಮಯ (ಮಕರ ಸಂಕ್ರಾಂತಿ) ದಲ್ಲಿ ಸೂರ್ಯನ ಕಿರಣವು ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುವುದು.
ಚಿತ್ರಕೃಪೆ: Pavithrah
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ಬಸವನಗುಡಿ : ಬೆಂಗಳೂರಿನ ಒಂದು ಪ್ರಮುಖ ಹಾಗು ಜನಪ್ರಿಯ ಪ್ರದೇಶವಾದ ಬಸವನಗುಡಿ ತನ್ನ ಹೆಸರನ್ನು ಬಸವನ ಗುಡಿ (ದೇವಸ್ಥಾನ) ಯಿಂದಲೆ ಪಡೆದಿದೆ. ಬಸವ ಎಂದರೆ ಶಿವನ ವಾಹನ ನಂದಿಯಾಗಿದ್ದು ಅದಕ್ಕೆ ಸಮರ್ಪಿತವಾದ ದೇವಸ್ಥಾನ ಇದಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ 4.8 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದ್ದು ಮೆಜೆಸ್ಟಿಕ್ ನಿಲ್ದಾಣದಿಂದಲೂ ಸಹ ಬಿ.ಎಂ.ಟಿ.ಸಿ ಬಸ್ಸುಗಳ ಮೂಲಕ ತಲುಪಬಹುದು. ನಂದಿಗೆ ಸಮರ್ಪಿತವಾಗಿರುವ ಹಾಗು ನಂದಿಯ ಬೃಹತ್ ವಿಗ್ರಹವಿರುವ ಜಗತ್ತಿನ ಏಕಮಾತ್ರ ದೇವಸ್ಥಾನವೆಂದು ನಂಬಲಾಗಿದೆ.
ಚಿತ್ರಕೃಪೆ: js42
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು
ದೊಡ್ಡ ಗಣಪತಿ ದೇವಸ್ಥಾನ : ಬಸವನಗುಡಿಯು ಚಿಕ್ಕದಾದ ಬೆಟ್ಟವೊಂದರ ಮೇಲೆ ನೆಲೆಸಿದ್ದು ಮೆಟ್ಟಿಲುಗಳನ್ನು ಏರುವುದರ ಮೂಲಕ ತಲುಪಬಹುದಾಗಿದೆ. ಅದೆ ಮೆಟ್ಟಿಲುಗಳನ್ನು ಇಳಿದು ಬಲಭಾಗಕ್ಕೆ ತೆರಳಿದರೆ ಏಕ ಶಿಲೆಯಲ್ಲಿ ಒಡಮೂಡಿರುವ ದೊಡ್ಡ ಗಣೇಶನ ದೇವಸ್ಥಾನವನ್ನು ನೋಡುತ್ತೇವೆ. ಈ ಗಣಪನ ದರುಶನ ಕೋರಿ ಬಹು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಂತೂ ಈ ವಿನಾಯಕನ ದರುಶನ ಪಡೆಯಲು ಸುಮಾರು ಎರಡು ಮೂರು ಕಿ.ಮೀ ಗಳಷ್ಟು ಉದ್ದದ ಸರತಿಯ ಸಾಲಿನಲ್ಲಿ ನಿಲ್ಲಲೇಬೇಕು.
ಚಿತ್ರಕೃಪೆ: Mallikarjunasj
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಕಾಡು ಮಲ್ಲೇಶ್ವರ ದೇವಸ್ಥಾನ : ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯ 15 ನೆ ಕ್ರಾಸ್, ಸಂಪಿಗೆ ರಸ್ತೆಯಲ್ಲಿರುವ ಕಾಡು ಮಲ್ಲೇಶ್ವರನ ಪುರಾತನ ದೇವಸ್ಥಾನವು ಶಿವನಿಗೆ ಮುಡಿಪಾದ ಸುಂದರ ದೇವಾಲಯವಾಗಿದೆ. ಶಿವಾಜಿಯ ಸಹೋದರನಾದ ವೆಂಕೋಜಿಯಿಂದ 17 ನೆಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: McZusatz
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ದಕ್ಷಿಣ ನಂದೀಶ್ವರ ತೀರ್ಥ : ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದ ಎದುರಿನಲ್ಲೆ ಅಥವಾ ಸಂಪಿಗೆ ರಸ್ತೆಯ ಸಮಾನಾಂತರದಲ್ಲಿರುವ ರಸ್ತೆಯಲ್ಲೆ ದಕ್ಷಿಣ ನಂದಿ ತೀರ್ಥ ದೇವಾಲಯವಿದೆ. ಇಲ್ಲಿ ಶಿವಲಿಂಗವಿದ್ದು ಅದರ ಮೇಲೆ ಇನ್ನೂ ಗುರುತಿಸಲಾಗದ ನೀರಿನ ಮೂಲವೊಂದರಿಂದ ನೀರು ಬೀಳುತ್ತಲೆ ಇರುತ್ತದೆ. ಆ ನೀರು ನಂದಿಯ ಮುಖದಿಂದ ಬೀಳುತ್ತಿರುವ ಹಾಗೆ ನಂದಿ ವಿಗ್ರಹವನ್ನು ನಿರ್ಮಿಸಲಾಗಿದ್ದು, ಲಿಂಗದ ಎದುರಿಗೆ ಕಲ್ಯಾಣಿಯನ್ನು ಕಾಣಬಹುದು. ಕಲ್ಯಾಣಿಯಲ್ಲಿ ನೀರು ಸದಾ ಲಭ್ಯವಿದ್ದು ಆ ನೀರಿಗೆ ಔಷಧೀಯ ಮಹತ್ವವಿದೆ ಎಂದು ಇಲ್ಲಿರುವ ಹಲವರ ನಂಬಿಕೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Vaikoovery
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ರಾಗಿಗುಡ್ಡ ಆಂಜನೇಯ ದೇವಸ್ಥಾನ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಜಯನಗರ 9 ನೆಯ ಬ್ಲಾಕಿನಲ್ಲಿ ಹನುಮನಿಗೆ ಮುಡಿಪಾದ ಈ ಸುಂದರ ದೇವಾಲಯವಿದೆ. ಪುಟ್ಟ ಗುಡ್ಡವೊಂದರ ಮೇಲೆ ಹನುಮನು ನೆಲೆಸಿದ್ದು ರಾಗಿಗುಡ್ಡ ಅಂಜನೇಯ ಸ್ವಾಮಿಯೆಂದೆ ಪ್ರಸಿದ್ಧನಾಗಿದ್ದಾನೆ.
ಚಿತ್ರಕೃಪೆ: Rkrish67
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ ದೇವಾಲಯ : ಬೆಂಗಳೂರಿನ ರಾಜಾಜಿ ನಗರ ಬಡಾವಣೆಯ ಐದನೆಯ ಹಾಗೂ ಆರನೆಯ ಬ್ಲಾಕುಗಳ ಮಧ್ಯದಲ್ಲಿ ಈ ಕ್ಷೇತ್ರವಿದೆ. ಇಲ್ಲಿನ ದೇವಾಲಯದಲ್ಲಿ ಶಿವ, ವಿಷ್ಣು, ದೇವಿ ಹಾಗೂ ಇತರೆ ದೇವರುಗಳ ಸನ್ನಿಧಿಗಳಿದ್ದು ವಿಶೇಷವಾಗಿ ವಿಷ್ಣು ಶಯನಾವಸ್ಥೆಯಲ್ಲಿ ಪ್ರತಿಷ್ಠಾಪಿತನಾಗಿರುವುದು ಇಲ್ಲಿನ ವಿಶೇಷ. ಪ್ರತಿ ನಿತ್ಯ ಸಾಕಷ್ಟು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: wikimedia
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಏರ್ ಪೋರ್ಟ್ ರೋಡ್ ಶಿವ ದೇವಾಲಯ : ಬೆಂಗಳೂರಿನ ಹಳೆಯ ಏರ್ ಪೋರ್ಟ್ ರಸ್ತೆಯಲ್ಲಿರುವ ಈ ಅದ್ಭುತ ಶಿವ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೇವಲ ದೇಶದ ನಾನಾ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯದ ಮುಖ್ಯ ಆಕರ್ಷಣೆ ಅತಿ ಎತ್ತರವಾದ ಮಾರ್ಬಲ್ ಕಲ್ಲಿನಲ್ಲಿ ಕೆತ್ತಲಾದ ಶ್ವೇತಮಯ ಶಿವನ ಸುಂದರ ಪ್ರತಿಮೆ.
ಚಿತ್ರಕೃಪೆ: vhines200
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಧರ್ಮರಾಯಸ್ವಾಮಿ ದೇವಸ್ಥಾನ : ಬೆಂಗಳೂರಿನ ತಿಗಳರಪೇಟೆಯ ಒ.ಟಿ.ಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಐತಿಹಾಸಿಕವಾಗಿ ಒಂದು ವಿಶೀಷ್ಟವಾದ ದೇವಸ್ಥಾನವಾಗಿದೆ. ಭಾರತ ದೇಶದಲ್ಲೆ ಪಾಂಡವರಿಗೆ ಸಮರ್ಪಿಸಲಾದ ಅನನ್ಯ ದೇವಾಲಯ ಇದಾಗಿದೆ. ಈ ದೇವಾಲಯವು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿಯಲಾಗಿದೆ. ಇವರು ಮೂಲತಃ ಉತ್ತರ ತಮಿಳುನಾಡಿನಿಂದ ದಕ್ಷಿಣ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದವರಾಗಿದ್ದಾರೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಕರಗ. ಈ ಉತ್ಸವ ಬೆಂಗಳೂರು ಕರಗ ಎಂಬ ಪ್ರಸಿದ್ಧಿಯನ್ನು ಪಡೆದಿದೆ.
ಚಿತ್ರಕೃಪೆ: Thigala4u
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಗಾಳಿ ಆಂಜನೇಯ ದೇವಸ್ಥಾನ : ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಆಂಜನೇಯನ ಈ ದೇವಸ್ಥಾನ ಸ್ಥಿತವಿದೆ. ಶಿರಸಿ ವೃತ್ತದಿಂದ ಮೈಸೂರು ವೃತ್ತಕ್ಕೆ ಹೋಗುವ ಮೈಸೂರು ರಸ್ತೆಯ ಮೇಲೆ ಈ ದೇವಸ್ಥಾನವಿದೆ. ವಿಶೇಷವಾಗಿ ಈ ಆಂಜನೇಯನು ಧೈರ್ಯ, ಶಕ್ತಿ ಕರುಣಿಸುವ ದೇವನಾಗಿ ನೆಲೆಸಿದ್ದಾನೆ. ಪ್ರತೀತಿಯಂತೆ ಗಾಳಿ ಹಿಡಿದುಕೊಂದವರು (ಗ್ರಾಮೀಣ ಭಾಷೆಯಲ್ಲಿ ಗಾಳಿ ಹಿಡಿದವರು ಎಂದರೆ ಭೂತ, ಆತ್ಮಗಳ ವಶಕ್ಕೆ ಒಳಗಾದವರು ಎಂಬರ್ಥ ಬರುತ್ತದೆ) ಈ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮನನ್ನು ಭಕ್ತಿಯಿಂದ ಪೂಜಿಸಿ, ತಾಳಿತವನ್ನು ಕಟ್ಟಿಸಿಕೊಂಡಾಗ ಆ ಭಾದೆಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗುತ್ತದೆ. ಆದ ಕಾರಣ ಈ ಆಂಜನೇಯಸ್ವಾಮಿ ಗಾಳಿ ಆಂಜನೇಯನೆಂದೆ ಪ್ರಖ್ಯಾತನಾಗಿದ್ದಾನೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Ekadashmukhihanumanji
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಪ್ರಸನ್ನ ವೀರಾಂಜನೇಯ ದೇವಸ್ಥಾನ : ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದಾದ ಮಹಾಲಕ್ಷ್ಮಿ ಬಡಾವಣೆಯಲ್ಲಿದೆ ಈ ದೇವಸ್ಥಾನ. ಬೆಂಗಳೂರಿನ ಇತರೆ ಜನಪ್ರಿಯ ನಗರಗಳಾದ ರಾಜಾಜಿ ನಗರ, ಬಸವೇಶ್ವರ ನಗರ ಮತ್ತು ಯಶವಂತಪುರಗಳಿಂದ ಇಲ್ಲಿಗೆ ಬಸ್ ಅಥವಾ ಆಟೊಗಳ ಮೂಲಕ ಸುಲಭವಾಗಿ ತಲುಪಬಹುದು. 7 ಜೂನ್ 1976 ರಲ್ಲಿ ಅಂದಿನ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರಿಂದ ಈ ದೇವಸ್ಥಾನದ ಉದ್ಘಾಟನೆಯಾಯಿತು. ಏಕಶಿಲೆಯಲ್ಲಿ ಕೆತ್ತಲಾದ ಆಂಜನೇಯನ ಸುಂದರವಾದ ಪ್ರತಿಮೆಯನ್ನು ಇಲ್ಲಿ ಕಾಣಬಹುದು. ಸುತ್ತಲಿನ ಶಾಂತ ಪರಿಸರವು ಹಸಿರಿನಿಂದ ಕೂಡಿದ್ದು ಒಂದೊಳ್ಳೆ ಅನುಭವವನ್ನು ಭೇಟಿ ನೀಡಿದವರಿಗೆ ಕರುಣಿಸುತ್ತದೆ. ಇಲ್ಲಿ ಧ್ಯಾನಮಂದಿರವೂ ಇದ್ದು, ರಾಮಾಂಜನೇಯರ ವಿಗ್ರಹಗಳು ಧ್ಯಾನಾಸಕ್ತರ ಮನಸೆಳೆಯುತ್ತವೆ. ಪ್ರತಿ ಅಗಸ್ಟ್ ತಿಂಗಳಲ್ಲಿ ಮಾಡಲಾಗುವ ಬೆಣ್ಣೆ ಅಲ್ಂಕಾರವು ಈ ದೇವಸ್ಥಾನದ ಪ್ರಮುಖ ಆಕರ್ಷಣೆ. ಇದಕ್ಕಾಗಿ 420 ಕೆ.ಜಿಯಷ್ಟು ಬೆಣ್ಣೆಯನ್ನು ವ್ಯಯಿಸಲಾಗುತ್ತದೆ. ಇದೊಂದು ಭೇಟಿ ನೀಡಲೇಬೇಕಾದ ದೇವಸ್ಥಾನವಾಗಿದೆ.
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಜಗನ್ನಾಥ ದೇವಾಲಯ : ಒಡಿಶಾದ ಪುರಿಯಲ್ಲಿರುವ ಪ್ರಖ್ಯಾತ ಜಗನ್ನಾಥ ದೇವಾಲಯದ ಮಾದರಿಯ ಗೋಪುರದಿಂದಲೆ ನಿರ್ಮಿಸಲಾದ ಈ ದೇವಾಲಯ ಬೆಂಗಳೂರಿನ ಆಗರದ ಸರ್ಜಾಪುರ ರಸ್ತೆಯಲ್ಲಿದೆ. ಬೆಂಗಳೂರಿನ ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ಈ ದೇವಾಲಯ ಜಗನ್ನಾಥ ಹಾಗೂ ಅವನ ಸಹೋದರನಾದ ಬಾಲಭದ್ರ ಹಾಗೂ ಸಹೋದರಿಯಾದ ಸುಭದ್ರಳಿಗೆ ಮುಡಿಪಾಗಿದೆ.
ಚಿತ್ರಕೃಪೆ: Veera.sj
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ದ್ವಾದಶ ಜ್ಯೋತಿರ್ಲಿಂಗ ದೇವಾಲಯ : ಬೆಂಗಳೂರಿನ ರಾಜರಾಜೇಶ್ವರಿ ಪ್ರದೇಶದಲ್ಲಿರುವ ಓಂಕಾರ ಹಿಲ್ಸ್ ನಲ್ಲಿ ಈ ದೇವಾಲಯವಿದೆ. ಈ ವಿಶಿಷ್ಟ ದೇವಾಲಯವು ವಿಶಾಲವಾಗಿದ್ದು ಕರ್ನಾಟಕದ ದೊಡ್ಡ ದೇವಾಲಯಗಳಲ್ಲಿ ಒಂದಾಗಿ ಇದನ್ನು ಪರಿಗಣಿಸಬಹುದು. ಪುರಾಣದಲ್ಲಿ ಹೇಳಲಾಗಿರುವ 12 ದ್ವಾದಶ ಜ್ಯೋತಿರ್ಲಿಂಗಗಳನ್ನು ಈ ದೇವಾಲಯ ಪ್ರತಿನಿಧಿಸುತ್ತದೆ.
ಚಿತ್ರಕೃಪೆ: Sagar Sakre
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಯಲಹಂಕ ಗೇಟ್ ಆಂಜನೇಯ ದೇವಸ್ಥಾನ : ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಆಂಜನೇಯನ ಪುರಾತನ ದೇವಾಲಯ ಇದಾಗಿದೆ. ಸಂಚಾರ ದಟ್ಟನೆಯಿರುವ ಕೆಜಿ ರಸ್ತೆಗೆ ಹೊಂದಿಕೊಂಡಂತೆ ಈ ದೇವಾಲಯವಿದ್ದು ಅವೆನ್ಯೂ ರಸ್ತೆಗೆ ಪ್ರವೇಶ ಸೂಚಕವಾಗಿ ನೆಲೆಸಿದೆ. ಬೆಂಗಳೂರು ಕೋಟೆಯ ಯಲಹಂಕ ದ್ವಾರದ ದಿಕ್ಕಿನಲ್ಲಿ ಈ ದೇವಾಲಯವಿದ್ದುದರಿಂದ ಅದಕ್ಕೆ ಗೌರವಸೂಚಕವಾಗಿ ಈ ದೇವಸ್ಥಾನಕ್ಕೆ ಯಲಹಂಕ ಗೇಟ್ ಆಂಜನೇಯ ದೇವಸ್ಥಾನ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Nvvchar
ಬೆಂಗಳೂರು, ಮೈಸೂರಿನಲ್ಲಿರುವ ದೇವಾಲಯಗಳು:
ಇಸ್ಕಾನ್ ದೇವಸ್ಥಾನ : ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲೆ ಮಹಾಲಕ್ಷ್ಮಿ ಬಡಾವಣೆಯ ಎಂಟ್ರನ್ಸ್ ನಿಲ್ದಾಣದ ಬಳಿ ಈ ದೇವಸ್ಥಾನವಿದೆ. ವಾರಾಂತ್ಯಗಳಂದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರಿಂದ ಹಾಗೂ ಭಕ್ತರಿಂದ ಈ ದೇವಾಲಯ ತುಂಬಿರುತ್ತದೆ. ಕೃಷ್ಣ ಜಯಂತಿ ಮುಂತಾದ ಉತ್ಸವಗಳನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದೊಂದು ಬೆಂಗಳೂರಿನ ಪ್ರತಿಷ್ಠಿತ ದೇವಾಲಯವಾಗಿದೆ.
ಚಿತ್ರಕೃಪೆ: Svpdasa
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಚಾಮುಂಡೇಶ್ವರಿ ದೇವಾಲಯ : ಮೈಸೂರು ನಗರದಿಂದ 30 ರಿಂದ 40 ನಿಮಿಷಗಳಷ್ಟು ಪ್ರಯಾಣಾವಧಿಯಷ್ಟು ದೂರದಲ್ಲಿದೆ ಈ ಚಾಮುಂಡಿ ಬೆಟ್ಟ. ನಗರ ಕೇಂದ್ರದಿಂದ ಬಸ್ಸು ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಈ ಬೆಟ್ಟದ ತುದಿಗೆ ಸುಲಭವಾಗಿ ತಲುಪಬಹುದು. ಬೆಟ್ಟದ ಮೇಲಿರುವ ದೇವಾಲಯದ ಪ್ರಮುಖ ದೇವತೆ ಚಾಮುಂಡೇಶ್ವರಿ ದೇವಿ. ಆದ್ದರಿಂದ ಇದನ್ನು ಚಾಮುಂಡಿ ಬೆಟ್ಟ ಎಂದು ಕರೆಯಲಾಗುತ್ತದೆ. ದೇವಾಲಯದಿಂದ 500 ಮೀಟರುಗಳ ಅಂತರದಲ್ಲಿ ವಾಹನ ನಿಲುಗಡೆಯ ಸ್ಥಳವಿದೆ. ದೇವಾಲಯ ತೆರೆದಿರುವ ಸಮಯ ಬೆಳಿಗ್ಗೆ 7.30 ಮಧ್ಯಾಹ್ನ 2 pm, 3.30 pm ನಿಂದ 6 pm,7.30 pm ನಿಂದ 9 pm ವರೆಗೆ. ಈ ದೇವಾಲಯದಿಂದ ಮೈಸೂರು ನಗರಕ್ಕೆ ಕೊನೆಯ ಬಸ್ಸಿನ ಸಮಯ ರಾತ್ರಿ 9 ಘಂಟೆಗಿರುತ್ತದೆ.
ಚಿತ್ರಕೃಪೆ: Sriram Jagannathan
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಚಂದ್ರಮೌಳೇಶ್ವರ ದೇವಾಲಯ : ಶಿವನಿಗೆ ಮುಡಿಪಾದ ಚಂದರಮೌಳೇಶ್ವರ ದೇವಾಲಯವು ಮೈಸೂರಿನ ಒಂಟಿಕೊಪ್ಪಲ ಪ್ರದೇಶದಲ್ಲಿದೆ. ದಿನನಿತ್ಯ ಸಾಕಷ್ಟು ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Christopher J. Fynn
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಮೈಸೂರು ಅರಮನೆ ಮೈದಾನದ ದೇವಾಲಯಗಳು: ಮೈಸೂರಿನ ಅಂಬಾವಿಲಾಸ ಮೈದಾನದಲ್ಲಿ ಸಾಕಷ್ಟು ದೇವಾಲಯಗಳನ್ನು ಕಾಣಬಹುದು. ಈ ದೇವಾಲಯಗಳು ಮೈಸೂರಿನ ಅರಸ ವಂಶವಾದ ಒಡೇಯರ್ ಅವರ ಕಾರ್ಯಾಭಾರದಲ್ಲಿ ನಿರ್ಮಿತವಾದ ದೇಗುಲಗಳಾಗಿವೆ. ಚಿತ್ರದಲ್ಲಿರುವುದು ಶ್ವೇತ ವಾರಹ ಸ್ವಾಮಿ ದೇವಾಲಯ.
ಚಿತ್ರಕೃಪೆ: Lexicofreak
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ಭುವನೇಶ್ವರಿ ದೇವಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ಲಕ್ಷ್ಮಿ ರಮಣಸ್ವಾಮಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ತ್ರೀನಯನೇಶ್ವರ ಸ್ವಾಮಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ಖಿಲ್ಲೆ ವೆಂಕಟರಮಣ ಸ್ವಾಮಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅಂಬಾವಿಲಾಸ ಮೈದಾನದಲ್ಲಿರುವ ಗಾಯಿತ್ರಿ ದೇವಿ ದೇವಾಲಯ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ನಂಜುಂಡೇಶ್ವರ ದೇವಾಲಯ : ಮೈಸೂರು ನಗರದಿಂದ ಸುಮಾರು 25 ಕಿ.ಮೀ ಗಳಷ್ಟು ದೂರವಿರುವ ಶ್ರೀಕ್ಷೇತ್ರ ನಂಜನಗೂಡು ಶ್ರೀಕಂಠೇಶ್ವರ / ನಂಜುಂಡೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿರುವ ಪಟ್ಟಣವಾಗಿದೆ. ಕಪಿಲಾ (ಕಬಿನಿ) ನದಿ ತಟದಲ್ಲಿ ನೆಲೆಸಿರುವ ಈ ಕ್ಷೇತ್ರವು ಭಕ್ತವೃಂದದಲ್ಲಿ "ದಕ್ಷಿಣ ಕಾಶಿ" ಎಂದು ಕರೆಯಲ್ಪಟ್ಟಿದ್ದು ಅತಿ ಪುರಾತನವಾದಂತಹ ಶ್ರೀಕಂಠೇಶ್ವರ ದೇಗುಲದಿಂದಾಗಿ ಪ್ರಖ್ಯಾತವಾಗಿದೆ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ನಂಜನಗೂಡಿನಲ್ಲಿರುವ ಮತ್ತೊಂದು ಪ್ರಸಿದ್ಧವಾದ ತಾಣ ಶ್ರೀ ಗುರು ರಾಘವೇಂದ್ರ ಮಠ. ಶ್ರೀಕಂಠೇಶ್ವರ ದೇವಾಲಯದಿಂದ ಅರ್ಧ ಕಿ.ಮೀ ದೂರದಲ್ಲೆ ಗುರು ರಾಯರ ಈ ಮಠವಿದೆ. ಈ ಮಠದ ಹೆಗ್ಗಳಿಕೆ ಎಂದರೆ ರಾಯರ ಬೃಂದಾವನದ ಹೊರತಾಗಿ ಕಲ್ಲಿನಲ್ಲಿ ಕೆತ್ತಲಾದ ರಾಯರ ವಿಗ್ರಹವನ್ನೂ ಸಹ ಇದು ಹೊಂದಿರುವುದು. ಈ ರೀತಿ ರಾಯರ ಕಲ್ಲಿನ ವಿಗ್ರಹ ಹೊಂದಿದ ಕರ್ನಾಟಕದ ಏಕೈಕ ಮಠ ಇದಾಗಿದೆ.
ಚಿತ್ರಕೃಪೆ: Raod07
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಪರಕಾಲ ಮಠ : ಇದೊಂದು ಹಿಂದೂ ಸಂಪ್ರದಾಯದ ಮಠಗಳ ಕ್ರಮದಲ್ಲಿರುವ ಮಠವಾಗಿದ್ದು ವೈಷ್ಣವ ಪಂಥಿಯ ಮೊದಲ ಕೇಂದ್ರವಾಗಿದೆ. ಶ್ರೀ ಶ್ರೀ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠವನ್ನು ಮೊದಲ ಬಾರಿಗೆ ವೇದಾಂತ ದೇಸಿಕ ಸ್ವಾಮಿಗಳ ಶಿಷ್ಯರಾದ ಶ್ರೀ ಶ್ರೀ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಜೀಯಾರ್ ಅವರು ಸ್ಥಾಪಿಸಿದ್ದಾರೆ. ಈ ಮಠವು ಮೈಸೂರು ಅರಮನೆಗೆ ಬಹು ಹತ್ತಿರದಲ್ಲಿ ನೆಲೆಸಿದೆ.
ಚಿತ್ರಕೃಪೆ: Christopher J. Fynn
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಸೀತಾರಾಮಸ್ವಾಮಿ ದೇವಾಲಯ : ಶ್ರೀ ಕಂಚಿ ಕಾಮ ಕೋಟಿ ಪೀಠದ ಶ್ರೀ ಶಂಕರ ಮತದ ಶ್ರೀ ಸೀತಾರಾಮಸ್ವಾಮಿ ದೇವಸ್ಥಾನವು ಮೈಸೂರಿನ ಸೀತಾ ವಿಲಾಸ ರಸ್ತೆಯಲ್ಲಿ ಸ್ಥಿತವಿದೆ.
ಚಿತ್ರಕೃಪೆ: Christopher J. Fynn
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ : ಮೈಸೂರಿಗೆ ಹತ್ತಿರದಲ್ಲಿ ನೋಡಬಹುದಾದ ಮತ್ತೊಂದು ಸುಂದರ ದೇವಾಲಯ ಶ್ರೀ ವೇಣುಗೋಪಾಲ ಸ್ವಾಮಿಯದ್ದು. ಕೃಷ್ಣರಾಜ ಸಾಗರದ ಬಳಿಯಿರುವ ಹೊಸ ಕನ್ನಂಬಾಡಿಯಲ್ಲಿ ಕೃಷ್ಣನ ಈ ದೇವಸ್ಥಾನವಿದೆ.
ಚಿತ್ರಕೃಪೆ: Christopher J. Fynn
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಲಕ್ಷ್ಮಿಕಾಂತ ದೇವಾಲಯ, ಕಾಳಲೆ : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಳಲೆ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. 18 ನೆಯ ಶತಮಾನಕ್ಕೆ ಸಂಬಂಧಿಸಿದ ಈ ದೇವಾಲಯವು ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿದ್ದು ವಿಷ್ಣುವಿಗೆ ಮುಡಿಪಾದ ದೇವಸ್ಥಾನವಾಗಿದೆ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಅರಕೇಶ್ವರ ದೇವಾಲಯ, ಹಳೆಯೆಡೆತೊರೆ : ಮೈಸೂರಿನ ಕೃಷ್ಣ ರಾಜ ನಗರ ತಾಲೂಕು ಪ್ರದೇಶದಿಂದ ಕೆಲವೆ ಕೆಲವು ಕಿ.ಮೀ ಗಳಷ್ಟು ದೂರದಲ್ಲಿರುವ ಹಳೆಯೆಡತೊರೆ ಎಂಬ ಗ್ರಾಮದಲ್ಲಿ ಶಿವನಿಗೆ ಮುಡಿಪಾದ ಈ ದೇವಸ್ಥಾನವಿದೆ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಕರಿಘಟ್ಟ ದೇವಾಲಯ : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬರುವ ಶ್ರೀರಂಗಪಟ್ಟಣಕ್ಕಿಂತ ಕೆಲವು ಕಿ.ಮೀ ಗಳ ಮುಂಚೆಯೆ ಇರುವ ಕರಿಘಟ್ಟ ಎಂಬ ಬೆಟ್ಟವೊಂದರ ಮೇಲೆ ಈ ದೇವಾಲಯವಿದೆ. ಈ ದೇವಾಲಯವು ವಿಷ್ಣುವಿಗೆ ಮುಡಿಪಾಗಿದ್ದು ಅವನನ್ನು ಕರಿಗಿರಿವಾಸ, ಶ್ರೀನಿವಾಸ, ಬೈರಾಗಿ ವೆಂಕಟರಮಣ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ವರಾಹ ಪುರಾಣದಲ್ಲಿ ಈ ಕ್ಷೇತ್ರವನ್ನು ನೀಲಾಚಲ ಎಂದು ಉಲ್ಲೇಖಿಸಲಾಗಿದ್ದು ಜೀವನದಲ್ಲಿ ಕಷ್ಟ ಪಡುತ್ತಿರುವವರು ಕೆಲವು ನಿರ್ದಿಷ್ಟ ಪೂಜೆಗಳನ್ನು ಇಲ್ಲಿ ಮಾಡುವುದರಿಂದ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆಂದು ನಂಬಲಾಗಿದೆ.
ಚಿತ್ರಕೃಪೆ: Pratheepps
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಗುಂಜ ನರಸಿಂಹಸ್ವಾಮಿ ದೇವಾಲಯ, ಟಿ.ನರಸೀಪುರ : ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ಕ್ಷೇತ್ರಕ್ಕೆ ನರಸೀಪುರ ಎಂಬ ಹೆಸರು ಕೂಡ ಇಲ್ಲಿ ಹರಿದಿರುವ ಕಬಿನಿ ನದಿಯ ಬಲ ದಂಡೆಯ ಮೇಲೆ ನೆಲೆಸಿರುವ ಗುಂಜ ನರಸಿಂಹಸ್ವಾಮಿ ದೇವಾಲಯದಿಂದ ಬಂದುದಾಗಿದೆ ಎನ್ನುತ್ತದೆ ಇಲ್ಲಿನ ಐತಿಹ್ಯ. ಕರ್ನಾಟ್ಕದ ಏಕೈಕ ಕುಂಭ ಮೇಳದ ಸ್ಥಳವಾಗಿರುವುದರಿಂದ ಇದನ್ನು ಪ್ರಯಾಗ್ ನಷ್ಟೆ ಪವಿತ್ರವಾದುದೆಂದು ಭಾವಿಸಲಾಗುತ್ತದೆ.
ಚಿತ್ರಕೃಪೆ: romana klee
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಚೆನ್ನಕೇಶವ ದೇವಾಲಯ, ಸೋಮನಾಥಪುರ : ಮೂಲವಾಗಿ ಸೋಮನಾಥಪುರ ಒಂದು ಗ್ರಾಮೀಣ ಪ್ರದೇಶವಾಗಿದ್ದು ಪ್ರಸಿದ್ಧ ಐತಿಹಾಸಿಕ ಹಾಗೂ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನಿಂದ 35 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸೋಮನಾಥಪುರವು ವಿಶೇಷವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ಹೆಸರು ಪಡೆದಿದೆ. ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ಕೃಷ್ಣನ ಈ ದೇವಸ್ಥಾನವು ನಿರ್ಮಾಣಗೊಂಡಿದೆ. ಅಂದರೆ 700 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಇದಾಗಿದೆ.
ಚಿತ್ರಕೃಪೆ: Dineshkannambadi
ಮೈಸೂರು ಹಾಗೂ ಸುತ್ತಮುತ್ತಲಿನ ದೇವಾಲಯಗಳು:
ಹೊಯ್ಸಳ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿರುವ ಈ ದೇವಾಲಯವು ಸಂಕೀರ್ಣ ಹಾಗೂ ಅದ್ಭುತವಾದ ಶಿಲ್ಪಕಲೆಯನ್ನು ಹೊಂದಿದ್ದು, ಶಿಲ್ಪ ಕಲಾಪ್ರಿಯರು ನೋಡಿದಾಗ ಬೆರುಗುಗೊಳಿಸುವಂತೆ ಮಾಡುತ್ತದೆ. ದೇವಾಲಯದ ಬಹುತೇಕ ರಚನೆಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದು, ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಸುಂದರ ಶಿಲ್ಪಕಲೆಯ ದೇವಾಲಯದ ಹೊರತಾಗಿ ಇತರೆ ಆಕರ್ಷಣೆಯೆಂದರೆ ಇಲ್ಲಿ ಸೌಮ್ಯವಾಗಿ ಹರಿಯುವ ಕಾವೇರಿ ನದಿ.
ಚಿತ್ರಕೃಪೆ: Jean-Pierre Dalbéra