ಸಂಸ್ಕೃತದಿಂದ ಬಂದಂತಹ ಪದವೆ ಪಂಚ ಪ್ರಯಾಗ. ಪಂಚ ಎಂದರೆ ಐದು ಹಾಗೂ ಪ್ರಯಾಗ ಎಂದರೆ ಸಂಗಮ ಎಂತಲು ಅರ್ಥ ಬರುತ್ತದೆ. ಅಂದರೆ ಒಟ್ಟಾರೆಯಾಗಿ ಪಂಚ ಪ್ರಯಾಗವೆಂದರೆ ಐದು ಸಂಗಮಗಳು ಎಂದು ಅರ್ಥೈಸಬಹುದು. ಹಿಂದೂ ಧರ್ಮದಲ್ಲಿ ಹೆಳಲಾಗಿರುವ ಈ ಪವಿತ್ರ ಐದು ಸಂಗಮಗಳು ವಿಶಿಷ್ಟವಾಗಿದ್ದು ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಬರುತ್ತವೆ.
ವಿಶೇಷ ಲೇಖನ : ಪವಿತ್ರ ನಾಲ್ಕುಧಾಮಗಳ ಯಾತ್ರೆ
ಈ ಪವಿತ್ರ ಐದು ನದಿಗಳ ಸಂಗಮದ ತಾಣವನ್ನು ದರ್ಶಿಸುವುದರಿಂದ ಸಾಕಷ್ಟು ಪುಣ್ಯ ಲಭಿಸಿ, ಮೋಕ್ಷದ ಹಾದಿ ಸುಗಮವಾಗುತ್ತದೆಂದು ಹಿಂದೂ ಭಕ್ತರಲ್ಲಿ ನಂಬಿಕೆಯಿದೆ. ಅಂತೆಯೆ ಇದೊಂದು ಐದು ಸಂಗಮಗಳ ತೀರ್ಥ ಯಾತ್ರೆ ಎಂದೆ ಜನಜನಿತವಾಗಿದೆ ಹಾಗೂ ಯೋಗ್ಯವಾದ ಋತುಮಾನದಲ್ಲಿ ಈ ತಾಣಗಳನ್ನು ದರ್ಶಿಸಲು ದೇಶದೆಲ್ಲೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುತ್ತಾರೆ.
ಪ್ರಸ್ತುತ ಲೇಖನವು ಆ ಪಂಚ ಪ್ರಯಾಗಗಳು ಯಾವುವು? ಯಾವೆಲ್ಲ ನದಿಗಳ ಸಂಗಮ ಇಲ್ಲಿ ಕಂಡು ಬರುತ್ತವೆ? ಈ ಸ್ಥಳಗಳಿಗೆ ಹೇಗೆ ತೆರಳಬಹುದು? ವರ್ಷದ ಯಾವ ಸಮಯವು ಈ ಸ್ಥಳಗಳನ್ನು ದರ್ಶಿಸಲು ಯೋಗ್ಯವಾಗಿದೆ ಹಾಗೂ ಮತ್ತೇನೇಲ್ಲ ಇಲ್ಲಿ ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿದೆ. ಸಮಯ ಸಿಕ್ಕರೆ ಇವುಗಳಿಗೆ ಭೇಟಿ ನೀಡಲು ಮರೆಯದಿರಿ.
ಹೆಚ್ಚಿನ ಲೇಖನಗಳು : ಪಾವಿತ್ರ್ಯತೆಯ ಪಂಚರಾಮ ಕ್ಷೇತ್ರಗಳು ಪಂಚಭೂತ ಸ್ಥಳಗಳು ಗೊತ್ತೆ?
ಪಂಚ ಪ್ರಯಾಗಗಳು:
ಮೊಟ್ಟ ಮೊದಲಿಗೆ ಆ ಪಂಚ ಪ್ರಯಾಗಗಳು ಯಾವುವೆಂದರೆ ದೇವಪ್ರಯಾಗ, ರುದ್ರ ಪ್ರಯಾಗ, ನಂದ ಪ್ರಯಾಗ, ವಿಷ್ಣು ಪ್ರಯಾಗ ಹಾಗೂ ಕರ್ಣ ಪ್ರಯಾಗ. ಇವೆಲ್ಲ ತಾಣಗಳು "ದೇವ ಭೂಮಿ" ಎಂದೆ ಪ್ರಸಿದ್ಧವಾದ ಉತ್ತರಾಖಂಡ ರಜ್ಯದಲ್ಲಿ ನೆಲೆಸಿವೆ.
ಪಂಚ ಪ್ರಯಾಗಗಳು:
ಈ ಪಂಚ ಪ್ರಯಾಗಗಳಲ್ಲಿ ಮೊದಲನೆಯದಾಗಿ ದರ್ಶಿಸಬೇಕಾಗಿರುವುದು ವಿಷ್ಣು ಪ್ರಯಾಗ. ಸಾತೋಪಂತ್ ಹಿಮನದಿಯಿಂದ ಉದ್ಭವಿಸುವ ಅಲಕನಂದಾ ನದಿಯು ಧೌಲಿ ಗಂಗಾ ನದಿಯೊಂದಿಗೆ ವಿಷ್ಣು ಪ್ರಯಾಗದಲ್ಲಿ ಸಂಗಮ ಹೊಂದುತ್ತದೆ. ಇಲ್ಲಿಂದ ಇದಕ್ಕೆ ವಿಷ್ಣು ಗಂಗಾ ನದಿ ಎಂದೂ ಸಹ ಕರೆಯುತ್ತಾರೆ. ದಂತ ಕಥೆಯ ಪ್ರಕಾರ ನಾರದ ಮಹರ್ಷಿಯು ವಿಷ್ಣು ಭಗವಂತನನ್ನು ಕುರಿತು ಇಲ್ಲಿ ಪೂಜೆಗೈದಿದ್ದನಂತೆ.
ಚಿತ್ರಕೃಪೆ: Fowler&fowler
ಪಂಚ ಪ್ರಯಾಗಗಳು:
ಎರಡನೆಯದಾಗಿ ನಂದಪ್ರಯಾಗ. ಇಲ್ಲಿ ನಂದಾಕಿನಿ ನದಿಯು ಅಲಕನಂದಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ದಂತ ಕಥೆಯೊಂದರ ಪ್ರಕಾರ, ಯಾದವ ದೊರೆ ನಂದನು ಭಗವಂತನನ್ನು ಪ್ರಸನ್ನಗೊಳಿಸಲು ಇಲ್ಲಿ ಯಜ್ಞ ಮಾಡಿದ್ದರಿಂದ ಇದಕ್ಕೆ ನಂದಪ್ರಯಾಗ ಎಂಬ ಹೆಸರು ಬಂದಿತು. ಇನ್ನೂ ಕೆಲವು ದಂತ ಕಥೆಗಳ ಪ್ರಕಾರ, ಕಣ್ವ ಮುನಿಯು ಇಲ್ಲಿ ತಪಸ್ಸನ್ನಾಚರಿಸಿದ್ದರು ಹಾಗೂ ದುಶ್ಯಂತ ಮತ್ತು ಶಕುಂತಲೆಯ ವಿವಾಹವೂ ಇಲ್ಲಿ ನೆರವೇರಿತ್ತು.
ಚಿತ್ರಕೃಪೆ: Fowler&fowler
ಪಂಚ ಪ್ರಯಾಗಗಳು:
ಮೂರನೆಯದಾಗಿ ಕರ್ಣಪ್ರಯಾಗ. ಪಿಂಡರ್ ಹಿಮನದಿಯಿಂದ ರೂಪಗೊಂಡು ಹರಿಯುವ ಪಿಂಡರ್ ನದಿಯು ಅಲಕನಂದಾ ನದಿಯೊಂದಿಗೆ ಸಂಗಮ ಹೊಂದುವ ಸ್ಥಳವೆ ಕರ್ಣಪ್ರಯಾಗ ಹೆಸರಿನಿಂದ ಪ್ರಸಿದ್ಧವಾಗಿದೆ. ಮಹಾಭಾರತದ ಒಂದು ಮುಖ್ಯ ಪಾತ್ರಧಾರಿಯಾದ ಕರ್ಣನು ಹಿಂದೆ ಈ ಸ್ಥಳದಲ್ಲಿ ಕಠಿಣ ತಪಸ್ಸನ್ನಾಚರಿಸಿ ಪಿತೃವಾದ ಸೂರ್ಯ ಭಗವಂತನಿಂದ ಕವಚ ಕುಂಡಲಗಳನ್ನು ಪಡೆದಿದ್ದರಿಂದ ಇದಕ್ಕೆ ಕರ್ಣಪ್ರಯಾಗ ಎಂಬ ಹೆಸರು ಬಂದಿತು.
ಚಿತ್ರಕೃಪೆ: Jainnys
ಪಂಚ ಪ್ರಯಾಗಗಳು:
ನಾಲ್ಕನೆಯದಾಗಿ ರುದ್ರಪ್ರಯಾಗ. ಇಲ್ಲಿ ಅಲಕನಂದಾ ನದಿಯೊಂದಿಗೆ ಮಂದಾಕಿನಿ ನದಿಯು ಸಂಗಮಗೊಳ್ಳುತ್ತದೆ. ಈ ಸ್ಥಳದಲ್ಲಿ ಶಿವನು ನಾರದ ಮುನಿಗೋಸ್ಕರ ರುದ್ರ ವೀಣೆಯನ್ನು ನುಡಿಸಿದ್ದುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಅಲ್ಲದೆ ಇನ್ನೂ ಹಲವು ದಂತಕಥೆಗಳೂ ಸಹ ಈ ತಾಣದ ಕುರಿತು ಪ್ರಚಲಿತದಲ್ಲಿವೆ.
ಚಿತ್ರಕೃಪೆ: Vvnataraj
ಪಂಚ ಪ್ರಯಾಗಗಳು:
ಇನ್ನೂ ಕೊನೆಯದಾಗಿ ಭೇಟಿ ನೀಡ ಬೇಕಾಗಿರುವುದು ದೇವಪ್ರಯಾಗ. ಇದು ಅಲಕನಂದಾ ಹಾಗೂ ಭಾಗಿರತಿ ನದಿಗಳು ಸಂಗಮಗೊಳ್ಳುವ ಪವಿತ್ರ ತಾಣವಾಗಿದೆ. ಬದರಿನಾಥಕ್ಕೆ ಹೋಗುವಾಗ ದೊರೆಯುವ ಮೊದಲ ಪ್ರಯಾಗ ಇದಾಗಿದೆ. ಅಲ್ಲದೆ ಈ ಸಂಗಮವು ಮುಂದೆ ಹರಿಯುತ್ತ ಪವಿತ್ರ ಗಂಗಾ ನದಿಯಾಗಿ ಉತ್ತರ ಭಾರತದ ಹಲವೆಡೆ ಹರಿಯುತ್ತದೆ.
ಚಿತ್ರಕೃಪೆ: Mkeranat
ಪಂಚ ಪ್ರಯಾಗಗಳು:
ಪಂಚ ಪ್ರಯಾಗ ಸ್ಥಳಗಳಿಗೆ ಭೇಟಿ ನೀಡಲು ಚಳಿಗಾಲ ಬಿಟ್ಟು ಮಿಕ್ಕೆಲ್ಲ ಸಮಯ ಯೋಗ್ಯವಾಗಿರುತ್ತದೆ. ರಿಶಿಕೇಶ - ಬದರಿನಾಥ ಹೆದ್ದಾರಿಯು ಈ ಸ್ಥಳಗಳಿಗೆ ಭೇಟಿ ನೀಡಲು ಪ್ರಾರಂಭಿಕ ಘಟ್ಟವಾಗಿ ಪರಿಗಣಿಸಬಹುದು. ರಿಶಿಕೇಶದಿಂದ ಎಲ್ಲ ಸ್ಥಳಗಳಿಗೆ ಬಾಡಿಗೆ ಕಾರುಗಳು ಲಭ್ಯವಿದೆ ಹಾಗೂ ಬಸ್ಸುಗಳೂ ಸಹ ದೊರೆಯುತ್ತವೆ. ರಿಶಿಕೇಶದಿಂದ - ಜೋಶಿಮಠದ ಮೂಲಕ ವಿಷ್ಣುಪ್ರಯಾಗ (256 ಕಿ.ಮೀ), ನಂದಪ್ರಯಾಗ (190 ಕಿ.ಮೀ), ಕರ್ಣಪ್ರಯಾಗ (169 ಕಿ.ಮೀ), ರುದ್ರಪ್ರಯಾಗ (140 ಕಿ.ಮೀ) ಹಾಗೂ ದೇವಪ್ರಯಾಗ (70 ಕಿ.ಮೀ). ಸಾಂದರ್ಭಿಕ ಚಿತ್ರ. ಭಾಗಿರತಿ ನದಿ.
ಚಿತ್ರಕೃಪೆ: Atarax42