ನೀರಿರುವ ಕೊಳ, ಬಾವಿ, ಹಳ್ಳ, ಕಲ್ಯಾಣಿ, ಕೆರೆ, ನದಿಗಳೆಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ನೀರಿನಲ್ಲಿ ಆಡುವುದೆಂದರೆ, ಈಜುವುದೆಂದರೆ ಬಲು ಇಷ್ಟಾವಾಗುವ ಚಟುವಟಿಕೆ. ಹೀಗಾಗಿ ನೀರಿರುವ ಸ್ಥಳಗಳೂ ಸಹ ಪ್ರವಾಸ ಹೊರಡಲು ಯೋಗ್ಯವಾದ ಸ್ಥಳಗಳಾಗಿವೆ.
ಇನ್ನೂ ನದಿಗಳೆಂದರೂ ಸಾಕು ಎಲ್ಲರಿಗೂ ಅದನ್ನು ನೋಡುವ ತವಕ, ಬಯಕೆ ಇದ್ದೆ ಇರುತ್ತದೆ. ನದಿಗಳು ಸಾಮಾನ್ಯವಾಗಿ ಕಣಿವೆಗಳು, ವನ್ಯಜೀವಿ ಧಾಮಗಳು, ಕಾಡುಗಳು ಹಾಗೂ ಬೆಟ್ಟ ಗುಡ್ಡಗಳ ಮಧ್ಯೆ ಹರಿದು ಹೋಗುವುದರಿಂದ ಸ್ವಾಭಾವಿಕವಾಗಿ ಪ್ರಕೃತಿ ಸೌಂದರ್ಯದ ಪ್ರದೇಶಗಳಿಂದ ಸುತ್ತುವರೆದಿರುತ್ತವೆ. ಆದ್ದರಿಂದ ಪ್ರಕೃತಿ ಪ್ರೀಯರಿಗೆ ನದಿ ತಾಣಗಳಿಗೆ ಭೇಟಿ ನೀಡುವುದೆಂದರೆ ಬಲು ಇಷ್ಟವಾದ ಪ್ರವಾಸವಾಗಬಹುದು.
ವಿಶೇಷ ಲೇಖನ : ದಕ್ಷಿಣ ಭಾರತದ ಸುಂದರ ಕೆರೆಗಳು
ಕೆಲವು ನದಿಗಳು ಮಳೆಗಾಲದ ಸಂದರ್ಭದಲ್ಲಿ ಮೈದುಂಬಿ ಹರಿದರೆ ಇನ್ನೂ ಕೆಲವು ವರ್ಷಪೂರ್ತಿ ಹರಿಯುತ್ತಿರುತ್ತವೆ. ಮನುಷ್ಯರ ಕುಡಿಯುವ ನೀರಿನ ಅವಶ್ಯಕತೆ, ವಿದ್ಯುತ್ ಉತ್ಪಾದನೆ, ಕೃಷಿ ಚಟುವಟಿಕೆ ಮುಂತಾದ ಹಲವು ಕಾರ್ಯಗಳಲ್ಲಿ ನದಿಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ.
ಕರ್ನಾಟಕದಲ್ಲೂ ಸಹ ಸಾಕಷ್ಟು ನದಿಗಳು ಹಾಗೂ ಉಪನದಿಗಳು ಹರಿದಿರುವುದನ್ನು ಕಾಣಬಹುದು. ಇವುಗಳಲ್ಲಿ ಅದೆಷ್ಟೊ ನದಿಗಳು ಪ್ರವಾಸಿ ಆಕರ್ಷಣೆಗಳಾಗಿ ಅದರಲ್ಲೂ ವಿಶೇಷವಾಗಿ ಜಲಪಾತಗಳನ್ನು ರೂಪಿಸಿಕೊಂಡು ಹೆಸರುವಾಸಿಯಾಗಿವೆ. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿ ಹರಿಯುವ ಅಥವಾ ಹರಿದಿರುವ ಕೆಲವು ಸುಂದರ ನದಿಗಳು ಯಾವುವು ಎಂದು ತಿಳಿಯಿರಿ.

ಕರ್ನಾಟಕದ ಸುಂದರ ನದಿಗಳು:
ಕಬಿನಿ : ಕಪಿಲಾ ಎಂತಲೂ ಕರೆಯಲ್ಪಡುವ ಕಬಿನಿ ನದಿಯು ಕೇರಳದ ವಯನಾಡ್ ಜಿಲ್ಲೆಯಲ್ಲಿ ಉಗಮಗೊಳ್ಳುವ ನದಿಯಾಗಿದೆ. ಮೂಲತಃ ಇದೊಂದು ಪನಾಮರಂ ಹಾಗೂ ಮನಂತವಾಡಿ ನದಿಗಳ ಸಂಗವಾಗಿದ್ದು ಮುಂದೆ ಪೂರ್ವದಲ್ಲಿ ಹರಿಯುತ್ತ ಕರ್ನಾಟಕ ಪ್ರವೇಶಿಸುತ್ತದೆ.
ಚಿತ್ರಕೃಪೆ: Gnissah

ಕರ್ನಾಟಕದ ಸುಂದರ ನದಿಗಳು:
ಹೀಗೆ ಕರ್ನಾಟಕದಲ್ಲಿ ಹರಿಯುತ್ತ ಸಾಗುವ ಈ ನದಿಯು ಮುಂದೆ ತಿರುಮಕೂಡಲು ನರಸೀಪುರ ಅಥವಾ ಟಿ.ನರಸೀಪುರದಲ್ಲಿ ಕಾವೇರಿ ನದಿಯಲ್ಲಿ ಸಮಾಗಮಗೊಂಡು ಕೊನೆಯದಾಗಿ ಬಂಗಾಳ ಕೊಲ್ಲಿ ಸಮುದ್ರಕ್ಕೆ ಸೇರುತ್ತದೆ.
ಚಿತ್ರಕೃಪೆ: romana klee

ಕರ್ನಾಟಕದ ಸುಂದರ ನದಿಗಳು:
ಕಬಿನಿಯು ತನ್ನ ಹರಿಯುವ ಪಥದಲ್ಲಿ ಸಾಕಷ್ಟು ಪ್ರಕೃತಿ ವೈಭವದಿಂದ ತುಂಬಿರುವ ಪ್ರದೇಶಗಳನ್ನು ಹಾದು ಹೋಗುತ್ತದೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರು ಪಟ್ಟಣದ ಬಳಿ ಕಬಿನಿ ಜಲಾಶಯ ಹಾಗೂ ಹಿನ್ನೀರು ತಾಣವಿದೆ.
ಚಿತ್ರಕೃಪೆ: Prashant Ram

ಕರ್ನಾಟಕದ ಸುಂದರ ನದಿಗಳು:
ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಕಬಿನಿ ಹಿನ್ನೀರು ಪ್ರದೇಶವು ಹುಲ್ಲುಗಾವಲುಗಳಿಂದ ಸುತ್ತುವರೆದು ಜೀವ ವೈವಿಧ್ಯತೆಯಿಂದ ಕಂಗೊಳಿಸುತ್ತದೆ. ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ವೀಕ್ಷಕರಿಗೆ ಕಬಿನಿ ಹಿನ್ನೀರು ಒಂದು ನೆಚ್ಚಿನ ಪ್ರವಾಸಿ ಕೇಂದ್ರವಾಗಿದೆ.
ಚಿತ್ರಕೃಪೆ: Sankara Subramanian

ಕರ್ನಾಟಕದ ಸುಂದರ ನದಿಗಳು:
ಕಬಿನಿಯನ್ನು ಸಂತೋಷಕರವಾಗಿ ನೋಡುತ್ತ ಆಸ್ವಾದಿಸಬೇಕೆಂದಿದ್ದರೆ ಮೈಸೂರಿನ ಪ್ರಖ್ಯಾತ ತೀರ್ಥ ಕ್ಷೇತ್ರ ನಂಜನಗೂಡಿನಲ್ಲಿ ನೋಡಬಹುದು. ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಈ ನದಿಯು ಪ್ರಶಾಂತವಾಗಿ ಹರಿದಿದ್ದು ಭೇಟಿ ನೀಡುವವರ ಮನ ಹಾಗೂ ಚಕ್ಷುಗಳನ್ನು ತಣಿಸುತ್ತದೆ.
ಚಿತ್ರಕೃಪೆ: Nayvik

ಕರ್ನಾಟಕದ ಸುಂದರ ನದಿಗಳು:
ಕಾವೇರಿ : ಕಾವೇರಿಯು ಕರ್ನಾಟಕದ ಪ್ರಮುಖ ನದಿಯಾಗಿದ್ದು ಜೀವನದಿ ಎಂದೆ ಕರೆಸಿಕೊಳ್ಳುತ್ತದೆ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ನೆಲೆಸಿರುವ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿಯು, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿಯುತ್ತದೆ ನಂತರ ಅಲ್ಲಿಂದ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಹರಿಯುವ ಈ ನದಿಯು ಸುಮಾರು 765 ಕಿ.ಮಿ.ಗಳಷ್ಟು ಉದ್ದವಾಗಿದೆ.
ಚಿತ್ರಕೃಪೆ: Ramesh NG

ಕರ್ನಾಟಕದ ಸುಂದರ ನದಿಗಳು:
ದಕ್ಷಿಣ ಭಾರತದಲ್ಲಿ ಕಂಡುಬರುವ ಮಹಾನದಿ ಕಾವೇರಿಯಾಗಿದೆ. ಪುರಾಣಗಳಲ್ಲಿ ವರ್ಣಿಸಲಾದ ಏಳು ಪುಣ್ಯ ನದಿಗಳಲ್ಲಿ ಕಾವೇರಿಯನ್ನೂ ಸಹ ಉಲ್ಲೇಖಿಸಲಾಗಿದೆ. ಆದ್ದರಿಂದ ಕಾವೇರಿಯನ್ನು ದಕ್ಷಿಣದ ಗಂಗೆ ಎಂದೂ ಸಂಬೋಧಿಸಲಾಗುತ್ತದೆ. ನಂಬಿಕೆಯಂತೆ ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುತ್ತವೆ. ಕೊಡಗಿನ ಜನರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ.
ಚಿತ್ರಕೃಪೆ: Vensatry

ಕರ್ನಾಟಕದ ಸುಂದರ ನದಿಗಳು:
ಕೊಡಗಿನಿಂದ ಉಗಮಗೊಳ್ಳುವ ಈ ನದಿಯು ಕೊಡಗನ್ನು ಬಿಟ್ಟ ನಂತರ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಮುಖ ಮಾಡಿ ಹರಿಯುತ್ತದೆ. ಈ ಸಂದರ್ಭದಲ್ಲಿ ಹಲವಾರು ಪ್ರವಾಸಿ ಕೇಂದ್ರಗಳ ಮೂಲಕ ಈ ನದಿ ಹರಿದು ಹೋಗುತ್ತದೆ. ಅದರಲ್ಲಿ ಸಂಗಮ ಕೂಡ ಒಂದು. ಬೆಂಗಳೂರು - ಮೈಸೂರು ನಗರಗಳಿಂದ ಸಾಕಷ್ಟು ಜನರು ವಾರಾಂತ್ಯದ ರಜೆಗಳಲ್ಲಿ ಸಂಗಮ, ತಲಕಾಡು ಕೇಂದ್ರಗಳಿಗೆ ಭೇಟಿ ನೀಡುತ್ತಲೆ ಇರುತ್ತಾರೆ.
ಚಿತ್ರಕೃಪೆ: Philanthropist 1

ಕರ್ನಾಟಕದ ಸುಂದರ ನದಿಗಳು:
ಇನ್ನೂ ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರವಿದ್ದರೆ ತಮಿಳುನಾಡಿನಲ್ಲಿ ಶ್ರೀರಂಗವಿದೆ. ಇವುಗಳನ್ನೆ ಪೌರಾಣಿಕವಾಗಿ ಆದಿ ರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳೆಂದು ಗುರುತಿಸಲಾಗಿದೆ. ಶಿವನ ಸಮುದ್ರದಲ್ಲಿ ಕಾವೇರಿಯಿಂದುಂಟಾದ ಜಲಪಾತ ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ. ಗಗನ ಚುಕ್ಕಿ ಹಾಗೂ ಭರ ಚುಕ್ಕಿಗಳೆಂದು ಈ ಜಲಪಾತಗಳನ್ನು ಕರೆಯಲಾಗುತ್ತದೆ. ಗಗನ ಚುಕ್ಕಿ ಜಲಪಾತ.
ಚಿತ್ರಕೃಪೆ: M.arunprasad

ಕರ್ನಾಟಕದ ಸುಂದರ ನದಿಗಳು:
ಶಿವನಸಮುದ್ರದಲ್ಲೆ ಇರುವ ಕಾವೇರಿಯಿಂದ ಒಡಮೂಡಿದ ಭರಚುಕ್ಕಿ ಜಲಪಾತ.
ಚಿತ್ರಕೃಪೆ: wikimedia

ಕರ್ನಾಟಕದ ಸುಂದರ ನದಿಗಳು:
ಶ್ರೀರಂಗಪಟ್ಟಣದ ಬಳಿಯಲ್ಲೆ ಕಾವೇರಿಯ ನದಿ ತಟದಲ್ಲಿ ನಿಮಿಷಾಂಬಾಳ ದೇವಸ್ಥಾನವಿದೆ. ಇಲ್ಲಿಗೆ ಮೈಸೂರು ಹಾಗೂ ಬೆಂಗಳೂರಿನಿಂದ ಸಾಕಷ್ಟು ಜನ ಭಕ್ತಾದಿಗಳು ಬರುತ್ತಾರೆ. ನಂಬಿಕೆಯಂತೆ ಈ ದೇವಿಯನ್ನು ಮನಃಪೂರ್ವಕವಾಗಿ, ಭಕ್ತಿ, ಶೃದ್ಧೆ ಹಾಗೂ ನಂಬಿಕೆಯಿಂದ ಪ್ರಾರ್ಥಿಸಿದರೆ ನಿಮಿಷದಲ್ಲೆ ಎಲ್ಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವಂತೆ. ಅಂತೆಯೆ ಈ ಅಂಬಾ ದೇವಿಯನ್ನು ನಿಮಿಷಾಂಬಾ ಅಥವಾ ನಿಮಿಷಾಂಬಿಕಾ ಎಂದು ಕರೆಯುತ್ತಾರೆ.
ಚಿತ್ರಕೃಪೆ: Rayabhari

ಕರ್ನಾಟಕದ ಸುಂದರ ನದಿಗಳು:
ಹೆಮ್ಮೆಯ ವಿಷಯವೆಂದರೆ ಭಾರತದ ಮೊದಲ ಜಲವಿದ್ಯುತ್ ಉತ್ಪಾದನೆ ಯೋಜನೆಯನ್ನು ಕಾವೇರಿ ನದಿಯಲ್ಲೆ ರೂಪಿಸಲಾಗಿದ್ದು, ಶಿವನಸಮುದ್ರದಲ್ಲಿ 1902 ನಿರ್ಮಾಣ ಮಾಡಲಾಯಿತು. ಇದು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೀಗೆ ನದಿಯು ಮುಂದೆ ಹರಿಯುತ್ತ ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸಿ ನಂತರ ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಹೊಗೇನಕಲ್ ಜಲಪಾತ.
ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ನದಿಗಳು:
ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳ ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಆಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಆಣೆಕಟ್ಟಿನಿಂದ ಹೊರಡುವ ಕಾಲುವೆ 72 ಮೈಲಿಗಳಷ್ಟು ಉದ್ದವಿದ್ದು, 10,000 ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯವೆಂದರೆ ಕೃಷ್ಣರಾಜಸಾಗರ. ಇದು ಮೈಸೂರಿಗೆ ಹತ್ತಿರದಲ್ಲಿರುವ ಪ್ರಖ್ಯಾತ ಪ್ರವಾಸಿ ಕೇಂದ್ರವೂ ಆಗಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೃಂದಾವನ ಉದ್ಯಾನ ಪ್ರಮುಖ ಪ್ರವಾಸಿ ಆಕರ್ಷಣೆ.
ಚಿತ್ರಕೃಪೆ: PP Yoonus

ಕರ್ನಾಟಕದ ಸುಂದರ ನದಿಗಳು:
ಕಾಳಿ ನದಿ : ಇದು ದಿಗ್ಗಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಯಾಗಿದೆ. ನಾಲ್ಕುಅ ಲಕ್ಷ ಉತ್ತರ ಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿರುವ ಈ ನದಿಯು ಸುಮಾರು 184 ಕಿ.ಮೀ ಉದ್ದ ಹರಿದು ಕೊನೆಯದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಚಿತ್ರಕೃಪೆ: solarisgirl

ಕರ್ನಾಟಕದ ಸುಂದರ ನದಿಗಳು:
ಕರ್ನಾಟಕದ ಪ್ರಸಿದ್ಧ ಆಣೆಕಟ್ಟುಗಳ ಪೈಕಿ ಒಂದಾದ ಸೂಪಾ ಆಣೆಕಟ್ಟನ್ನು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಲ್ಲದೆ ಕಾರವಾರದ ಅರಬ್ಬಿ ಸಮುದ್ರಕ್ಕೆ ಈ ನದಿ ಸೇರುವ ಸ್ಥಳದಲ್ಲಿ ಪ್ರಸಿದ್ಧ ಸದಾಶಿವಗಡ್ ಕೋಟೆಯನ್ನು ನಿರ್ಮಿಸಲಾಗಿದೆ. ಇದೊಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ.

ಕರ್ನಾಟಕದ ಸುಂದರ ನದಿಗಳು:
ಅರ್ಕಾವತಿ ನದಿ : ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಹುಟ್ಟುವ ಅರ್ಕಾವತಿ ನದಿಯು ಒಂದು ಮಹತ್ವದ ಪರ್ವತ ನದಿಯಾಗಿದೆ. ನಂತರ ಈ ನದಿಯು ಕನಕಪುರದ ದಕ್ಷಿಣಕ್ಕೆ ಕಾವೇರಿ ನದಿಯೊಂದ ಸಮಾಗಮಗೊಳ್ಳುತ್ತದೆ. ಈ ಸ್ಥಳವೆ ಸಂಗಮ ಎಂದು ಪ್ರಸಿದ್ಧಿ ಪಡೆದ ಪ್ರವಾಸಿ ತಾಣವಾಗಿದೆ. ನಂದಿ ಬಟ್ಟಗಳಲ್ಲಿ ಅರ್ಕಾವತಿ ನದಿಯ ಮೂಲ ಸ್ಥಳ.
ಚಿತ್ರಕೃಪೆ: Tinucherian

ಕರ್ನಾಟಕದ ಸುಂದರ ನದಿಗಳು:
ಈ ನದಿಯು ಪರ್ವತದ ಎತ್ತರಗಳಲ್ಲಿ ಸ್ವಾಭಾವಿಕವಾಗಿ ಶುದ್ಧಿಕರಣಗೊಳ್ಳುವುದರಿಂದ ಸಾಕಷ್ಟು ಸ್ವಚ್ಛವಾಗಿರುತ್ತದೆ. ನಂತರ ಈ ನದಿಯು ಕನಕಪುರ, ರಾಮನಗರ ಸಂಗಮ ಮಾರ್ಗವಾಗಿ ಹರಿಯುತ್ತ ಕೊನೆಯದಾಗಿ ಕಣಿವೆನಾರಾಯಣಪುರದ ಚಿಕ್ಕರಾಯಪ್ಪನ ಕೆರೆಯಲ್ಲಿ ಸೇರುತ್ತದೆ. ಬೆಂಗಳೂರು ನಗರದ ಕುಡಿಯುವ ನೀರಿನ ಬೇಡಿಕೆಗಾಗಿ ಈ ನದಿಯ ನೀರನ್ನು ಬಹುತೇಕವಾಗಿ ಬಳಸಲಾಗುತ್ತದೆ. ಈ ಚಿಕ್ಕ ನದಿಗೆ ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿಗಳಲ್ಲಿ ಜಲಾಶಯ ನಿರ್ಮಿಸಲಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯ.
ಚಿತ್ರಕೃಪೆ: Sanjaykattimani

ಕರ್ನಾಟಕದ ಸುಂದರ ನದಿಗಳು:
ಚಂದ್ರಗಿರಿ ನದಿ : ಕರ್ನಾಟಕದ ಕೊಡಗಿನ ಕೊಯ್ನಾಡು ಎಂಬಲ್ಲಿ ಉಗಮಗೊಂಡು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮೂಲಕ ಹರಿದು ನಂತರ ಕೇರಳಕ್ಕೆ ಪ್ರವೇಶಿಸಿ ಕೊನೆಯದಾಗಿ ಅರಬ್ಬಿ ಸಮುದ್ರದಲ್ಲಿ ಸೇರುವ ನದಿ ಇದಾಗಿದೆ. ಸುಳ್ಯ ತಾಲೂಕಿನ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಾಗಿ ಈ ನದಿಯ ನೀರು ಮುಖ್ಯವಾಗಿ ಬಳಸಲ್ಪಡುತ್ತದೆ.
ಚಿತ್ರಕೃಪೆ: ARUNKUMAR P.R

ಕರ್ನಾಟಕದ ಸುಂದರ ನದಿಗಳು:
ಕರ್ನಾಟಕದ ಸುಳ್ಯದಿಂದ ಈ ನದಿಯು ಮುಂದಕ್ಕೆ ಕಾಸರಗೋಡಿನ ಪಶ್ಚಿಮಕ್ಕೆ ಪ್ರವೇಶಿಸುತ್ತದೆ. ಕೊನೆಯದಾಗಿ ಕಾಸರಗೋಡಿನ ಮೂಲಕವಾಗಿ ಕೇರಳದ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇರಳದಲ್ಲಿ ವಿಶೇಷವಾಗಿ ಕಾಸರಗೋಡಿನ ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಈ ನದಿಯನ್ನು ಪಾಚಿನಿ ಹಾಗೂ ಪಯಸ್ವಿನಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಕಾಸರಗೋಡಿನ ಪುರಸಭೆಯನ್ನು ಚೆಮ್ನಾಡ್ ಗ್ರಾಮಪಂಚಾಯತಿಯೊಂದಿಗೆ ಬೆಸೆಯುವ ಚಂದ್ರಗಿರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ.
ಚಿತ್ರಕೃಪೆ: ARUNKUMAR P.R

ಕರ್ನಾಟಕದ ಸುಂದರ ನದಿಗಳು:
ಹೇಮಾವತಿ ನದಿ : ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಬಲ್ಲಾಳರಾಯನ ದುರ್ಗದ ಬಳಿ ಪ್ರಾರಂಭವಾಗುವ ಹೇಮಾವತಿ ನದಿಯು ಕಾವೇರಿಯ ಪ್ರಮುಖ ಉಪನದಿಯಾಗಿದೆ. ಮುಂದೆ ತುಮಕೂರು, ಹಾಸನ ಹಾಗೂ ಮೈಸೂರು ಮಾರ್ಗವಾಗಿ ಹರಿದು ಕೊನೆಯದಾಗಿ ಕೃಷ್ಣರಾಜಸಾಗರದಲ್ಲಿ ಕಾವೇರಿಯೊಂದಿಗೆ ಸಮಾಗಮಗೊಳ್ಳುತ್ತದೆ.

ಕರ್ನಾಟಕದ ಸುಂದರ ನದಿಗಳು:
ನಂತರ ಈ ನದಿಯು ಹಾಸನ ಜಿಲ್ಲೆಗೆ ಪ್ರವೇಶಿಸಿ ಅಲ್ಲಿ ಇದರ ಮುಖ್ಯ ಉಪನದಿಯಾದ ಯಗಚಿ ನದಿಯೊಂದಿಗೆ ಸೇರುತ್ತದೆ. ಹಾಸನದ ಗೋರೂರು ಎಂಬಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಇದೊಂದು ಪ್ರವಾಸಿ ಆಕರ್ಷಣೆಯೂ ಆಗಿದೆ.
ಚಿತ್ರಕೃಪೆ: Technofreak

ಕರ್ನಾಟಕದ ಸುಂದರ ನದಿಗಳು:
ಹಿರಣ್ಯಕೇಶಿ ನದಿ : ಇದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಉಗಮಗೊಳ್ಳುವ ನದಿಯಾಗಿದ್ದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಭಾಗಶಃ ಹರಿದಿದ್ದು ಕೊನೆಯದಾಗಿ ಕೃಷ್ಣಾ ನದಿಯ ಮುಖ್ಯ ಉಪನದಿಯಾದ ಘಟಪ್ರಭಾದಲ್ಲಿ ಸೇರುತ್ತದೆ. ಬೆಳಗಾವಿಯ ಸಂಕೇಶ್ವರದ ಬಳಿ ಈ ನದಿಯನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Drpansarerahul

ಕರ್ನಾಟಕದ ಸುಂದರ ನದಿಗಳು:
ಸಿಂಧುದುರ್ಗ ಜಿಲ್ಲೆಯ ಪ್ರಖ್ಯಾತ ಗಿರಿಧಾಮವಾದ ಅಂಬೋಲಿ ಬಳಿಯಿರುವ ಹಿರಣ್ಯಕೇಶ್ವರ ದೇವಸ್ಥಾನದ ಬಳಿ ಈ ನದಿಯು ಉಗಮವಾಗುವುದರಿಂದ ಇದಕ್ಕೆ ಹಿರಣ್ಯಕೇಶಿ ಎಂಬ ಹೆಸರುಬಂದಿದೆ.
ಚಿತ್ರಕೃಪೆ: Nilesh2 str

ಕರ್ನಾಟಕದ ಸುಂದರ ನದಿಗಳು:
ಈ ನದಿಯ ಮಾರ್ಗದಲ್ಲಿ ದೊರೆಯುವ ಒಂದು ಸುಂದರ ಧಾರ್ಮಿಕ ಪ್ರವಾಸಿ ಆಕರ್ಷಣೆ ಎಂದರೆ ರಾಮತೀರ್ಥ ಜಲಪಾತ. ಇದು ಮಹಾರಾಷ್ಟ್ರದ ಅಜ್ರಾ ಎಂಬಲ್ಲಿದ್ದರೂ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಕೇವಲ 38 ಕಿ.ಮೀ ಗಳಷ್ಟು ದೂರದಲ್ಲಿದೆ. ಅಂಬೋಲಿ - ಗಢೀಂಗ್ಲಜ್ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ರಾಮತೀರ್ಥವು ಮುಖ್ಯವಾಗಿ ರಾಮ ಹಾಗೂ ಶಿವನು ನೆಲೆಸಿರುವ ರಾಮತೀರ್ಥೇಶ್ವರ ದೇವಾಲಯಕ್ಕೆ ಹೆಸರು ಪಡೆದಿದೆ. ಅಲ್ಲದೆ ದೇವಾಲಯದ ಬಳಿಯೆ ಹಿರಣ್ಯಕೇಶಿ ನದಿಯಿಂದ ರೂಪಿತವಾಗಿರುವ ಜಲಪಾತ ಕಾಣಬಹುದು. ಸ್ಥಳ ಪುರಾಣದ ಪ್ರಕಾರ, ಹಿಂದೆ ರಾಮನು ವನವಾಸದಲ್ಲಿದ್ದಾಗ ಈ ತಾಣದಲ್ಲಿ ಕೆಲ ಸಮಯ ತಂಗಿದ್ದನಂತೆ.
ಚಿತ್ರಕೃಪೆ: Drpansarerahul

ಕರ್ನಾಟಕದ ಸುಂದರ ನದಿಗಳು:
ಘಟಪ್ರಭಾ ನದಿ : ಮಹಾರಾಷ್ಟ್ರದಲ್ಲಿ ಉಗಮಗೊಂಡರೂ ಸಹ ಈ ನದಿಯು ಮಹಾರಾಷ್ಟ್ರದಲ್ಲಿ ಕಡಿಮೆ ವ್ಯಾಪ್ತಿಯನ್ನು ಹೊಂದಿದೆ. ಸಿಂಧುದುರ್ಗ ಜಿಲ್ಲೆಯ ಸಾವಂತವಾಡಿಯ ಚೌಕುಲ್ ಎಂಬ ಗ್ರಾಮದಲ್ಲಿ ಮೂಲತಃ ಈ ನದಿಯು ಉಗಮಗೊಂಡು ಕರ್ನಾಟಕದ ಗೋಕಾಕ್, ಮುಧೋಳ ಹಾಗೂ ಬಾಗಲಕೋಟೆಯ ಮೂಲಕ ಹರಿದು ಕೊನೆಯದಾಗಿ ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಸೇರುತ್ತದೆ. ಈ ನದಿಯು ತನ್ನ ಹರಿಯುವ ಪಥದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿದೆ ಗೋಕಾಕ್ ಜಲಪಾತ. ಇದು ಪ್ರೀತಿಯಿಂದ "ಕರ್ನಾಟಕದ ನಯಾಗ್ರಾ" ಎಮ್ತಲೂ ಸಹ ಕರೆಯಲ್ಪಡುತ್ತದೆ.
ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ನದಿಗಳು:
ಮಲಪ್ರಭಾ ನದಿ : ಘಟಪ್ರಭಾದ ಹಾಗೆಯೆ ಮಲಪ್ರಭಾ ನದಿಯೂ ಸಹ ಕೃಷ್ಣಾದ ಉಪನದಿಯಾಗಿದೆ. ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಭಾಗದಲ್ಲಿ ಉಗಮಗೊಂಡು ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹರಿದು ಕೊನೆಯದಾಗಿ ಕೂಡಲಸಂಗಮದಲ್ಲಿ ಕೃಷ್ಣಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ.
ಚಿತ್ರಕೃಪೆ: Mankalmadhu

ಕರ್ನಾಟಕದ ಸುಂದರ ನದಿಗಳು:
ಬೆಳಗಾವಿ ಜಿಲ್ಲೆಯ ಧಾರ್ಮಿಕ ಸ್ಥಳವಾದ ಸವದತ್ತಿ (ಸೌಂದತ್ತಿ ಅಥವಾ ಎಲ್ಲಮ್ಮಗುಡ್ಡ)ಯ ನವೀಲುತೀರ್ಥ ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿ ಆಕರ್ಷಣೆಯೂ ಹೌದು.
ಚಿತ್ರಕೃಪೆ: Manjunath Doddamani Gajendragad

ಕರ್ನಾಟಕದ ಸುಂದರ ನದಿಗಳು:
ಸವದತ್ತಿಯು ಎಲ್ಲಮ್ಮನ (ರೇಣುಕಾ ದೇವಿ) ದೇವಸ್ಥಾನಕ್ಕೆ ಪ್ರಸಿದ್ಧವಾಗಿರುವುದರಿಂದ, ನವೀಲುತೀರ್ಥದಲ್ಲಿ ಕಟ್ಟಲಾದ ಆಣೆಕಟ್ಟಿನಿಂದ ನಿರ್ಮಿತವಾಗಿರುವ ವಿಶಾಲವಾದ ಜಲಾಶಯವನ್ನು ರೇಣುಕಾ ಸಾಗರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Manjunath Doddamani Gajendragad

ಕರ್ನಾಟಕದ ಸುಂದರ ನದಿಗಳು:
ಕೃಷ್ಣಾ ನದಿ : ಗಂಗಾ, ಗೋದಾವರಿ ಹಾಗೂ ನರ್ಮದಾ ನದಿಗಳ ನಂತರ ಭಾರತದಲ್ಲಿ ಹರಿಯುವ ನಾಲ್ಕನೆಯ ಉದ್ದವಾದ ನದಿ ಇದಾಗಿದೆ. ಸಾಕಷ್ಟು ಉಪನದಿಗಳನ್ನು ಹೊಂದಿರುವ ಕೃಷ್ಣಾ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೈ ತಾಲೂಕಿನ ಜೋರ್ ಎಂಬ ಪ್ರದೇಶದ ಬಳಿ ಉಗಮಗೊಳ್ಳುತ್ತದೆ. ಅಮ್ದರೆ ಪೂರ್ವದ ಮಹಾರಾಷ್ಟ್ರದಲ್ಲಿ ಉಗಮಗೊಂಡುಮೂರು ರಾಜ್ಯಗಳನ್ನು ಕ್ರಮಿಸಿ ಕೊನೆಯದಾಗಿ ಪಶ್ಚಿಮದಲ್ಲಿ ಆಂಧ್ರಪ್ರದೇಶದ ಬಂಗಾಳ ಕೊಲ್ಲಿಯಲ್ಲಿ ಸೇರುತ್ತದೆ.
ಚಿತ್ರಕೃಪೆ: Zeman

ಕರ್ನಾಟಕದ ಸುಂದರ ನದಿಗಳು:
ಕೃಷ್ಣಾ ನದಿಯ ಪಥದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳು ಅದು ಹರಿದಿರುವ ಎಲ್ಲ ರಾಜ್ಯಗಳಲ್ಲಿಯೂ ಕಾಣಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಆಲಮಟ್ಟಿ ಜಲಾಶಯವು ಒಂದು ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಕೂಡಲಸಂಗಮ ಹಾಗೂ ಆಣೆಕಟ್ಟು ಹೆಚ್ಚು ಪ್ರಸಿದ್ಧಿ ಪಡೆದಿವೆ.
ಚಿತ್ರಕೃಪೆ: Murughendra

ಕರ್ನಾಟಕದ ಸುಂದರ ನದಿಗಳು:
ಆಲಮಟ್ಟಿಯಲ್ಲಿ ಜಲಾಶಯದ ಬಳಿಯಲ್ಲೆ ವಿಶಾಲ ಹಾಗೂ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಗಿದ್ದು ಕುಟುಂಬಸಮೇತ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. ಸಾಕಷ್ಟು ಸ್ತಬ್ಧ ಚಿತ್ರಗಳನ್ನು ಇಲ್ಲಿ ರಚಿಸಲಾಗಿದೆ.
ಚಿತ್ರಕೃಪೆ: Murughendra

ಕರ್ನಾಟಕದ ಸುಂದರ ನದಿಗಳು:
ತುಂಗಾ ನದಿ : ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಗಂಗಾಮೂಲ ಎಂಬಲ್ಲಿರುವ ವರಾಹಪರ್ವತದಲ್ಲಿ ಈ ನದಿಯು ಉಗಮಗೊಳ್ಳುತ್ತದೆ. 147 ಕಿ.ಮೀ ಉದ್ದವಿರುವ ಈ ನದಿಯು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹರಿದು ಕೊನೆಯದಾಗಿ ಕೂಡ್ಲಿಯ ಭದ್ರಾ ನದಿ ಜಲಾಶಯದಲ್ಲಿ ಸೇರುತ್ತದೆ. ತುಂಗಾ ನದಿಯ ನೀರು ತನ್ನ ಸಿಹಿಯಾದ ರುಚಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ. ಅದರಿಂದಾಗಿಯೆ "ಗಂಗಾ ಸ್ನಾನಂ ತುಂಗಾ ಪಾನಂ" ಎಂಬ ನಾಣ್ಣುಡಿಯು ಚಾಲ್ತಿಯಲ್ಲಿದೆ.
ಚಿತ್ರಕೃಪೆ: Ashwatham

ಕರ್ನಾಟಕದ ಸುಂದರ ನದಿಗಳು:
ತುಂಗಾ ನದಿಯು ಪ್ರಸಿದ್ಧ ಧಾರ್ಮಿಕ ಪ್ರವಾಸಿ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿ, ಕೂಡ್ಲಿ ಹಾಗೂ ಹರಿಹರಪುರದ ಮೂಲಕ ಹಾದು ಹೊಗಿದೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ.
ಚಿತ್ರಕೃಪೆ: Guru ns

ಕರ್ನಾಟಕದ ಸುಂದರ ನದಿಗಳು:
ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿರುವ ಶ್ರೀ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠವಿರುವ ಮಠದ ಮುಂಭಾಗದಲ್ಲಿ ಹರಿದಿರುವ ತುಂಗಾ ನದಿ.
ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ನದಿಗಳು:
ಪವಿತ್ರ ಕ್ಷೇತ್ರ ಶೃಂಗೇರಿಯ ಶಾರದಾ ಪೀಠ ದೇವಸ್ಥಾನದ ಬಳಿ ಹರಿದಿರುವ ತುಂಗಾ ನದಿ.
ಚಿತ್ರಕೃಪೆ: Philanthropist 1

ಕರ್ನಾಟಕದ ಸುಂದರ ನದಿಗಳು:
ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಮಾಗಮಗೊಳ್ಳುವ ತುಂಗಾ ನದಿ. ಈ ಸ್ಥಳದಿಂದ ಮುಂದೆ ಈ ನದಿಯು ಪೂರ್ವಾಭಿಮುಖದಲ್ಲಿ ಹರಿಯುತ್ತ ತುಂಗಭದ್ರಾ ನದಿಯೆಂದು ಗುರುತಿಸಿಕೊಳ್ಳುತ್ತದೆ.
ಚಿತ್ರಕೃಪೆ: PP Yoonus

ಕರ್ನಾಟಕದ ಸುಂದರ ನದಿಗಳು:
ಭದ್ರಾ ನದಿ : ಕರ್ನಾಟಕದ ಕುದುರೆಮುಖದ ಗಂಗಾಮೂಲ ಎಂಬಲ್ಲಿ ಈ ನದಿಯು ಉಗಮಗೊಂಡು ಪೂರ್ವಾಭಿಮುಖವಾಗಿ ಹರಿಯುತ್ತ ಕಳಸ, ಹೊರನಾಡು, ಬಾಳೆಹೊನ್ನೂರು, ಭದ್ರಾವತಿ ಮೂಲಕ ಸಾಗುತ್ತ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ನದಿಯೊಂದಿಗೆ ಸಂಗಮ ಹೊಂದುತ್ತದೆ. ನಂತರ ಅಲ್ಲಿಂದ ಈ ನದಿಯು ತುಂಗಭದ್ರಾ ನದಿಯಾಗಿ ಆಂಧ್ರದತ್ತ ಹರಿಯುತ್ತದೆ. ಭದ್ರಾ ನದಿಗೆ ಅಡ್ಡಲಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಲೂಕಿನ ಲಕ್ಕವಳ್ಳಿ ಎಂಬಲ್ಲಿ ಆಣೆಕಟ್ಟನ್ನು ನಿರ್ಮಿಸಲಾಗಿದ್ದು, ಇದರಿಂದ ಭದ್ರಾ ಜಲಾಶಯದ ನಿರ್ಮಾಣವಾಗಿದೆ. ಇದೊಂದು ಪ್ರಖ್ಯಾತ ಪ್ರವಾಸಿ ಕೇಂದ್ರವಾಗಿದೆ.
ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ನದಿಗಳು:
ಭದ್ರಾ ಜಲಾಶಯದ ವಿಶಾಲತೆಯನ್ನು ಅನಾವರಣಗೊಳಿಸುವ ಮನಮೋಹಕ ಚಿತ್ರ.
ಚಿತ್ರಕೃಪೆ: Dineshkannambadi

ಕರ್ನಾಟಕದ ಸುಂದರ ನದಿಗಳು:
ನೇತ್ರಾವತಿ ನದಿ : ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ಪ್ರಮುಖವಾದ ನದಿಯಾಗಿದೆ ನೇತ್ರಾವತಿ. ಈ ನದಿಯು ಹಲವು ಧಾರ್ಮಿಕ ಕ್ಷೇತ್ರಗಳು ಅದರಲ್ಲೂ ವಿಶೇಷವಾಗಿ ಧರ್ಮಸ್ಥಳದ ಮೂಲಕ ಹರಿದು ಹೋಗಿರುವುದರಿಂದ ಕರ್ನಾಟಕದ ಪವಿತ್ರ ನದಿಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: PP Yoonus

ಕರ್ನಾಟಕದ ಸುಂದರ ನದಿಗಳು:
ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುವ ಈ ನದಿಯು ಹರಿಯುತ್ತ ದಕ್ಷಿಣ ಕನ್ನಡದ ಉಪ್ಪಿನಂಗಡಿ ಎಂಬಲ್ಲಿ ಕುಮಾರಧಾರಾ ನದಿಯೊಂದಿಗೆ ಸಂಗಮವಾಗಿ ಕೊನೆಗೆ ಅರಬ್ಬೀ ಸಮುದ್ರವನ್ನು ಸೇರುತ್ತದೆ. ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರೈಲು ಸೇತುವೆ. ಈ ಸೇತುವೆಯನ್ನು ಮಂಗಳೂರಿನ ಹೆಬ್ಬಾಗಿಲು ಎಂದು ಕರೆಯಬಹುದು.
ಚಿತ್ರಕೃಪೆ: Kensplanet

ಕರ್ನಾಟಕದ ಸುಂದರ ನದಿಗಳು:
ಶರಾವತಿ ನದಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಎಂಬಲ್ಲಿ ಈ ನದಿಯು ಉಗಮಗೊಳ್ಳುತ್ತದೆ. ಕರ್ನಾಟಕದಲ್ಲೆ ಹುಟ್ಟಿ ಸಂಪೂರ್ಣವಾಗಿ ಕರ್ನಾಟಕದ ವಿವಿಧೆಡೆಯಲ್ಲಿ ಹರಿದು ಕೊನೆಗೆ ಕರ್ನಾಟಕದ ಮೂಲಕವೆ ಅರಬ್ಬೀ ಸಮುದ್ರಕ್ಕೆ ಸೇರುವ ನದಿ ಇದಾಗಿದೆ.
ಚಿತ್ರಕೃಪೆ: Ashwin Kumar

ಕರ್ನಾಟಕದ ಸುಂದರ ನದಿಗಳು:
ಇದು ಒಟ್ಟಾರೆ 128 ಕಿ.ಮೀ ಉದ್ದ ಹೊಂದಿದ್ದು ಅನೇಕ ವೈವಿಧ್ಯಮಯ ಜೀವ ಸಂಪತ್ತುಗಳಿಗೆ ಆಶ್ರಯ ಒದಗಿಸಿದೆ. ಜಗತ್ಪ್ರಸಿದ್ಧ ಜೋಗದ ಗುಂಡಿ ಅಥವಾ ಜೋಗ ಜಲಪಾತವು ಈ ನದಿಯಿಂದಲೆ ರೂಪಗೊಂಡಿದೆ. ಇದು ಕೊನೆಯದಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.
ಚಿತ್ರಕೃಪೆ: Prakashmatada

ಕರ್ನಾಟಕದ ಸುಂದರ ನದಿಗಳು:
ಮಾಂಡೋವಿ ನದಿ : ಮಹದಾಯಿ ಎಂತಲೂ ಕರೆಯಲ್ಪಡುವ ಈ ನದಿಯು ಭಾರತದ ಚಿಕ್ಕ ರಾಜ್ಯವಾದ ಗೋವಾದ ಜೀವನಾಡಿಯಾಗಿದೆ. ಒಟ್ಟಾರೆ 77 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದ್ದು ಅದರಲ್ಲಿ ಸುಮಾರು 29 ಕಿ.ಮೀ ಗಳಷ್ಟು ಉದ್ದವು ಕರ್ನಾಟಕದ ಮೂಲಕ ಹಾದು ಹೋಗಿದೆ. ದೂಧ್ ಸಾಗರ್ ಹಾಗೂ ಬೆಳಗಾವಿ ಬಳಿಯಿರುವ ಜಾಂಬೋಟಿ ಅರಣ್ಯ ಪ್ರದೇಶವು ಈ ನದಿಯ ಪಥದಲ್ಲಿ ನೋಡಬಹುದಾದ ಎರಡು ಅದ್ಭುತ ಪ್ರವಾಸಿ ಆಕರ್ಷಣೆಗಳಾಗಿವೆ.
ಚಿತ್ರಕೃಪೆ: Mark Sheffield

ಕರ್ನಾಟಕದ ಸುಂದರ ನದಿಗಳು:
ಈ ನದಿಯನ್ನು ಬೆಳಗಾವಿ ಹಾಗೂ ಗೋವಾದ ಕೆಲ ಭಾಗಗಳಲ್ಲಿ ಗೋಮತಿ ಎಂದೂ ಸಹ ಕರೆಯುತ್ತಾರೆ. ಬೆಳಗಾವಿ ಬಳಿ ಇರುವ ಜಾಂಬೋಟಿ ಅರಣ್ಯ ಪ್ರದೇಶವು ಅದ್ಭುತವಾದ ಪ್ರಕೃತಿ ಸಂಪತ್ತಿನಿಂದ ಕಂಗೊಳಿಸುವ ಪ್ರದೇಶವಾಗಿದೆ. ಇಲ್ಲಿಯೆ ಇನ್ನೊಂದು ವಿಶೇಷವಾದ ಹಾಗೂ ನಯನಮನೋಹರವಾದ ವಜ್ರಪೋಹ ಜಲಪಾತವನ್ನು ಕಾಣಬಹುದು.
ಚಿತ್ರಕೃಪೆ: Milindpk


Click it and Unblock the Notifications


















