ಸರಿಸ್ಕ ರಾಜಸ್ಥಾನದ ಅಲವರ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಜೈಪುರದಿಂದ 110 ಕಿ.ಮೀ ದೂರದಲ್ಲಿದೆ.
ಈ ಸ್ಥಳವು ಇಲ್ಲಿರುವ ಸರಿಸ್ಕ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಇದನ್ನು 1955 ರಲ್ಲಿ ಸ್ಥಾಪಿಸಲಾಯಿತು. ಈ ಸಂರಕ್ಷಿತ ಅರಣ್ಯವು 1979ರಲ್ಲಿ ಅಭಯಾರಣ್ಯವೆಂದು ಘೋಷಿಸಲ್ಪಟ್ಟಿತು. ಈ ಅಭಯಾರಣ್ಯವು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಸರಿಸ್ಕ ಹುಲಿಧಾಮ
ಸರಿಸ್ಕ ರಾಷ್ತ್ರೀಯ ಉದ್ಯಾನವನವು ತನ್ನಲ್ಲಿ ವಿಪುಲವಾಗಿರುವ ಹುಲಿ. ಚಿರತೆ, ಚಿತಲ್, ನೀಲ್ ಗಾಯ್, ಲಂಗೂರ್, ಕತ್ತೆ ಕಿರುಬ, ಸಾಂಬರ್ ಮತ್ತು ಚಿನ್ನದ ಬಣ್ಣದ ಗುಳ್ಳೆ ನರಿಗಳಿಂದ ಕೂಡಿದ್ದು ಯಾತ್ರಾರ್ಥಿಗಳಿಗೆ ಕಾಡಿನಲ್ಲಿ ಸಫಾರಿ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ. ಈ ಉದ್ಯಾನವನದಲ್ಲಿ ಮಿಂಚುಳ್ಳಿ ಮತ್ತು ಮರಕುಟುಕಗಳಂತಹ ಪಕ್ಷಿಗಳನ್ನು ಯಥೇಚ್ಛವಾಗಿ ನೋಡಬಹುದು. ಈ ಹುಲಿಧಾಮದ ಒಳಗೆ ಖಾಸಗಿ ವಾಹನಗಳನ್ನು ಬಿಡುವುದಿಲ್ಲ. ಅದಕ್ಕಾಗಿ ಪ್ರವಾಸಿಗರು ಇಲ್ಲಿ ದೊರೆಯುವ ಜೀಪ್ ಸಫಾರಿ ಮತ್ತು ಆನೆ ಸಫಾರಿಗಳ ಮೂಲಕ ಈ ಕಾಡಿನಲ್ಲಿ ಸುತ್ತಾಡಬಹುದು.
ಇಲ್ಲಿನ ಕೋಟೆ, ದೇವಾಲಯಗಳು ಮತ್ತು ಕೆರೆಗಳ ಕುರಿತು
ಸರಿಸ್ಕವು ಹಲವಾರು ಬೃಹತ್ ಕೋಟೆಗಳನ್ನು , ದೇವಾಲಯಗಳನ್ನು ಮತ್ತು ಕೆರೆಗಳನ್ನು ಹೊಂದಿದೆ. ಇಮ್ಮಡಿ ಜೈ ಸಿಂಗ್ ನಿಂದ 17 ಶತಮಾನದಲ್ಲಿ ನಿರ್ಮಾಣಗೊಂಡ ಕಂಕವಾರಿ ಕೋಟೆಯು ತನ್ನ ಐತಿಹಾಸಿಕ ಮಹತ್ವದಿಂದಾಗಿ ಪ್ರಸಿದ್ಧಿ ಪಡೆದಿದೆ. ಈ ಪ್ರಾಂತ್ಯದಲ್ಲಿ ಭಂಗಾರ್ ಕೋಟೆ, ಪ್ರತಾಪ್ ಘರ್ ಕೋಟೆ ಮತ್ತು ಅಜಬ್ ಘರ್ ಕೋಟೆಗಳಂತಹ ಸ್ಮಾರಕಗಳು ನೆಲೆಗೊಂಡಿವೆ.
ಪಂಡುಪೊಲ್ ನ ಹನುಮಾನ್ ದೇವಾಲಯ, ನೀಲಕಂಠ್ ದೇವಾಲಯ ಮತ್ತು ಭ್ರಾತೃಹರಿ ದೇವಾಲಯಗಳು ಇಲ್ಲಿರುವ ಕೆಲವು ದೇವಾಲಯಗಳಲ್ಲಿ ಹೆಸರಿಸ ಬಹುದಾದಂತಹವುಗಳಾಗಿದ್ದು , ದೇಶದ ಎಲ್ಲೆಡೆಯಿಂದ ಭಕ್ತಾಧಿಗಳನ್ನು ತಮ್ಮೆಡೆಗೆ ಆಕರ್ಷಿಸುತ್ತಿವೆ. ಇಲ್ಲಿನ ಸಿಲ್ಸೆರ್ ಕೆರೆ ಮತ್ತು ಜೈಸಮಂಡ್ ಕೆರೆಗಳು ವಿಹಾರಕ್ಕಾಗಿ ಹೆಸರುವಾಸಿಯಾಗಿರುವ ನೀರಿನ ತಾಣಗಳಾಗಿವೆ. ಈ ಸ್ಥಳದಲ್ಲಿರುವ ಸರಿಸ್ಕ ಅರಮನೆಯು ಒಂದೊಮ್ಮೆ ಮಹಾರಾಜ ಜೈ ಸಿಂಗ್ ರ ಬೇಟೆಯ ತಂಗುದಾಣವಾಗಿ ಕಾರ್ಯ ನಿರ್ವಹಿಸಿತ್ತು. ಈಗ ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಸರಿಸ್ಕಗೆ ತಲುಪುವುದು ಹೇಗೆ
ರಾಜಸ್ಥಾನ್ ರಾಜ್ಯದ ಎಲ್ಲ ನಗರಗಳಿಂದ ಸರಿಸ್ಕಗೆ ರಸ್ತೆಯ ಮೂಲಕ ತಲುಪಲು ಉತ್ತಮವಾದ ರಸ್ತೆಗಳ ಸಂಪರ್ಕ ಜಾಲವಿದೆ, ಇಲ್ಲಿಂದ ಕ್ರಮವಾಗಿ 200 ಮತ್ತು 110 ಕಿ,ಮೀ ದೂರದಲ್ಲಿರುವ ದೆಹಲಿ ಮತ್ತು ಜೈಪುರಗಳಿಂದ ಬಸ್ಸುಗಳು ಸಹ ನಿಮ್ಮನ್ನು ಇಲ್ಲಿಗೆ ತಲುಪಿಸಲು ನೆರವಾಗುತ್ತದೆ. ಇಲ್ಲಿಂದ 110 ಕಿ.ಮೀ ದೂರದಲ್ಲಿರುವ ಜೈಪುರ್ ನ ಸಂಗನೇರ್ ವಿಮಾನ ನಿಲ್ದಾಣವು ಸರಿಸ್ಕಗೆ ಸಮೀಪದ ವಿಮಾನನಿಲ್ದಾಣವಾಗಿದೆ. ಇದರ ಜೊತೆಗೆ ಪ್ರವಾಸಿಗರು ಇಲ್ಲಿಂದ 36 ಕಿ.ಮೀ ದೂರದಲ್ಲಿರುವ ಅಲ್ವಾರ್ ರೈಲ್ವೆ ನಿಲ್ದಾಣದಿಂದ ಸಹ ಸರಿಸ್ಕಗೆ ತಲುಪಬಹುದು.
ಸರಿಸ್ಕಗೆ ಯಾವಾಗ ಹೋಗಬೇಕು?
ಸರಿಸ್ಕಗೆ ಹೋಗಲು ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಕಾಲವು ಉತ್ತಮವಾಗಿದೆ. ಆಗ ಇಲ್ಲಿನ ಹವಾಮಾನವು ತಂಪಾಗಿರುತ್ತದೆ. ಮಾರ್ಚ್-ಏಪ್ರಿಲ್ ನಲ್ಲಿ ಇಲ್ಲಿ ಆಚರಿಸುವ ಗಂಗೌರ್ ಹಬ್ಬವು ಈ ಪ್ರಾಂತ್ಯದ ಪ್ರಸಿದ್ಧ ಉತ್ಸವವಾಗಿದೆ.