ರಾಜಸ್ಥಾನದ ದೌಸಾ ಜಿಲ್ಲೆಯ ಒಂದು ಹಳ್ಳಿಯಾದ ಅಭನೇರಿಯು, ಜೈಪುರ್-ಆಗ್ರಾ ಹೆದ್ದಾರಿಯ ಮೇಲೆ ಜೈಪುರ್ ನಿಂದ 95 ಕಿ.ಮೀ ದೂರದಲ್ಲಿದೆ. ಈ ಸ್ಥಳವು ತನ್ನಲ್ಲಿರುವ ಭಾರಿ ಗಾತ್ರದ ಮೆಟ್ಟಿಲುಗಳ ಬಾವಿಯಾದ 'ಚಾಂದ್ ಬಾವರಿ' ಯಿಂದಾಗಿ ಅತ್ಯಂತ ಪ್ರಖ್ಯಾತಿಯಾಗಿದೆ. ಭಾರತದಲ್ಲಿ ಕಾಣಸಿಗುವ ಅತಿ ಸುಂದರ ಮೆಟ್ಟಿಲು ಬಾವಿಗಳಲ್ಲಿ ಇದೂ ಒಂದಾಗಿದೆ.
ಅಭಾನೇರಿ ಹಳ್ಳಿಯನ್ನು ಗುರ್ಜರ್ ಪ್ರತಿಹಾರ್ ನ ರಾಜನಾದ ಸಾಮ್ರಾಟ್ ಮಿಹೀರ್ ಭೋಜ್ ಎಂಬಾತನು ಸ್ಥಾಪಿಸಿದನು ಎಂದು ನಂಬಲಾಗಿದೆ. ಮೂಲತಃ ವಾಗಿ ಇದನ್ನು ಅಭಾ ನಗರಿ ಅಂದರೆ ''ಪ್ರಕಾಶತೆಯ ನಗರ" ಎಂದು ಹೆಸರಿಸಲಾಗಿದ್ದು, ಕಾಲಕ್ರಮೇಣ ತಪ್ಪು ಉಚ್ಛಾರಣೆಯಿಂದಾಗಿ ಅಭಾನೇರಿ ಎಂಬ ಹೆಸರನ್ನು ಪಡೆಯಿತು.
ಒಂದೊಮ್ಮೆ ಪ್ರಕಾಶತೆಯ ನಗರ ಅಥವಾ ಅಭಾ ನಗರಿ ಎಂದು ಕರೆಯಲಾಗುತ್ತಿದ್ದ ಈ ಸ್ಥಳವು, ಇಂದು ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ಅಸಂಖ್ಯಾತ ಪ್ರವಾಸಿಗರನ್ನು ಜಗತ್ತಿನ ಎಲ್ಲೆಡೆಯಿಂದ ಆಕರ್ಷಿಸುತ್ತಿದೆ. ಅಭಾನೇರಿಯು ತನ್ನಲ್ಲಿರುವ 'ಬಾವರಿ' ಅಂದರೆ, ಅಂದಿನ ಸಮಯದಲ್ಲಿ ಬೇಸಿಗೆ ಕಾಲಕ್ಕೆಂದು ಮಳೆ ನೀರನ್ನು ಸಂಗ್ರಹಿಸಿಡುವ ಬಾವಿಗಳಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿ ಕಾಣಸಿಗುವ ಎಲ್ಲ ಮೆಟ್ಟಿಲು ಬಾವಿಗಳಲ್ಲಿ, ಚಾಂದ್ ಬಾವರಿಯು ತನ್ನ ಮನಮೋಹಕವಾದ ಕಲ್ಲಿನ ವಾಸ್ತುಶಿಲ್ಪದಿಂದ ಅತಿ ಹೆಚ್ಚು ಪ್ರಸಿದ್ಧವಾಗಿದೆ. ಭಾರತದಲ್ಲಿರುವ ಅತಿ ದೊಡ್ಡದಾದ ಮತ್ತು ಆಳವಾದ ಮೆಟ್ಟಿಲು ಬಾವಿಗಳಲ್ಲಿ ಇದೂ ಕೂಡ ಒಂದು.
ಇಲ್ಲಿನ ಹರ್ಷತ್ ಮಾತಾ ದೇವಸ್ಥಾನವು, ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಭಾರತದ ಮಧ್ಯಯುಗದ ವಾಸ್ತುಶಿಲ್ಪದ ವೈಭವತೆಯನ್ನು ಇಲ್ಲಿ ಕಾಣಬಹುದು. ಈ ದೇವಸ್ಥಾನವು ಹರ್ಷತ್ ಮಾತಾಗೆ ಸಮರ್ಪಿತವಾಗಿದ್ದು, ಅವಳನ್ನು ಸಂತೋಷ ಹಾಗು ಉತ್ಸಾಹಗಳ ದೇವತೆಯೆಂದು ಪೂಜಿಸಲಾಗುತ್ತದೆ.
ಸಂಸ್ಕೃತಿಯ ಲಕ್ಷಣ - ಜಾನಪದ ನೃತ್ಯಗಳ ತವರು
ರಾಜಸ್ಥಾನದ ಅಭಾನೇರಿಯು, ಘೂಮರ್, ಕಲ್ಬೇಲಿಯಾ ಮತ್ತು ಭವಾಯಿ ಮುಂತಾದ ರಾಜಸ್ಥಾನಿ ಜಾನಪದ ನೃತ್ಯಗಳಿಗೆ ಹೆಸರುವಾಸಿಯಾಗಿದೆ. ಘೂಮರ್ ನೃತ್ಯವು ಭಿಲ್ ಬುಡಕಟ್ಟು ಜನಾಂಗದವರದ್ದಾಗಿದ್ದರೆ, ಕಲ್ಬೇಲಿಯಾ ನೃತ್ಯವನ್ನು ಕಲ್ಬೇಲಿಯಾ ಪಂಗಡದ ಮಹಿಳೆಯರು ಮಾಡುತ್ತಾರೆ ಮತ್ತು ಅವರು ಹಾವುಗಳನ್ನು ಹಿಡಿದು ಅದರ ವಿಷವನ್ನು ಮಾರುತ್ತಾ ಜೀವನ ಸಾಗಿಸುತ್ತಾರೆ. ಇನ್ನು ಭವಾಯಿ ನೃತ್ಯವನ್ನು ಭೂಮಾತಾ ಅಥವಾ ಅಂಬಾ ಮಾತಾಗೆ ಗೌರವ ಸೂಚಕವಾಗಿ ಮಾಡಲಾಗುತ್ತದೆ.
ಅಭಾನೇರಿಗೆ ತಲುಪುವ ಬಗೆ
ಜೈಪುರ್ ಗೆ 95 ಕಿ.ಮೀ ದೂರದಲ್ಲಿರುವ ಈ ಹಳ್ಳಿಯನ್ನು, ಭಾರತದ ಎಲ್ಲ ಭಾಗಗಳಿಂದ ಸರಳವಾಗಿ ತಲುಪಬಹುದಾಗಿದೆ. ಅಭಾನೇರಿಯು ತನ್ನ ಮಹತ್ವವುಳ್ಳ ಇತಿಹಾಸ ಮತ್ತು ವರ್ಣರಂಜಿತ ಸಂಸ್ಕೃತಿಯಿಂದ ಈಗಲೂ ಕೂಡ ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ತನ್ನ ಹೊಸ್ತಿಲಿಗೆ ಸೆಳೆಯುತ್ತಿದೆ.
ಭೇಟಿ ನೀಡಲು ಉತ್ತಮ ಕಾಲ
ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಅಭಾನೇರಿಗೆ ಭೇಟಿ ನೀಡಲು ಸೂಕ್ತವಾಗಿದೆ, ಏಕೆಂದರೆ ಈ ಸಮಯದಲ್ಲಿ ವಾತಾವರಣವು ಹಿತಕರವಾಗಿದ್ದು ಅನುಕೂಲಕರವಾಗಿರುತ್ತದೆ.