ಪೋರಬಂದರ್, ಗುಜರಾತ್ ರಾಜ್ಯದ ಒಂದು ಪ್ರಾಚೀನ ಬಂದರು ನಗರವಾಗಿದೆ. ಕತಿಬಾರ್ ನ ಕರಾವಳಿ ತೀರದಲ್ಲಿರುವ ಈ ನಗರವು ಎಲ್ಲರೂ ಸಾಮಾನ್ಯವಾಗಿ ತಿಳಿದೇ ಇರುವಂತೆ ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾಗಿದೆ.
ಇತಿಹಾಸ
ಭಾರತೀಯ ಪುರಾಣಗಳ ಪ್ರಕಾರ, ಈ ನಗರವು ಭಗವಾನ್ ಶ್ರೀ ಕೃಷ್ಣನ ಅಪ್ತಮಿತ್ರನಾದ ಸುಧಾಮನ ಜನ್ಮಸ್ಥಳವೂ ಕೂಡ ಆಗಿದ್ದು, ಈ ಕಾರಣಕ್ಕಾಗಿ ಈ ನಗರಕ್ಕೆ "ಸುಧಾಮಪುರಿ" ಎಂಬ ಮತ್ತೊಂದು ಹೆಸರೂ ಇದೆ. ಇಲ್ಲಿ ಕೈಗೊಂಡ ಉತ್ಖನನಗಳು, ಹೆಚ್ಹು ಕಡಿಮೆ ದ್ವಾರಕೆಯ ಕಾಲದ್ದು ಎನ್ನಬಹುದಾದ ಹರಪ್ಪನ್ ನಾಗರೀಕತೆಯ ಅವಶೇಷಗಳನ್ನು ತೋರಿಸಿಕೊಟ್ಟಿವೆ. 16 ನೆಯ ಶತಮಾನದ ಅವಧಿಯಲ್ಲಿ ಜೇಠಾ ರಾಜಪೂತ್, ಪೋರಬಂದರ್ ನಲ್ಲಿದ್ದ ಆಳುವ ವಂಶವಾಗಿದ್ದು, ಈ ಪಟ್ಟಣವು ಗುಜರಾತ್ ನ ಮುಘಲ್ ಗವರ್ನರ್ ನ ಅಧೀನದಲ್ಲಿ ಇದೊಂದು ರಾಜ್ಯವಾಗಿತ್ತು.
ತದನಂತರ, ಇಲ್ಲಿನ ಆಡಳಿತವು ಗಾಯಕ್ ವಾಡ್ ಮತ್ತು ಪೇಶ್ವೆಗಳ ಅಧೀನಕ್ಕೆ ಬಂದು, ಕಟ್ಟಕಡೆಗೆ ಆಡಳಿತವು ಬ್ರಿಟಿಷರ ಕೈವಶವಾಯಿತು. ಮೊಗಲರು, ಪೇಶ್ವೆಗಳು, ಮತ್ತು ಬ್ರಿಟೀಷರ ಅಧೀನದಲ್ಲಿ, ಪೋರಬಂದರ್, ಒಂದು ಕ್ರಿಯಾಶೀಲ ಹಾಗೂ ಬಿರುಸಿನ ಚಟುವಟಿಕೆಯಿಂದ ಕೂಡಿದ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿಂದ ಹಡಗುಗಳು ಪೂರ್ವ ಆಫ್ರಿಕಾ, ಅರಬ್ ರಾಷ್ಟ್ರಗಳು, ಮತ್ತು ಪರ್ಷಿಯನ್ ಗಲ್ಫ್ ನಂತಹ ದೇಶಗಳಿಗೆ ವಾಣಿಜ್ಯ ವಾಹಕವಾಗಿ ಸಂಚರಿಸುತ್ತಿದ್ದವು. ಭಾರತವು ಸ್ವಾತಂತ್ರ್ಯವಾದಾಗ, 'ಕತಿಯಾವರ್ ನ ಒಕ್ಕೂಟ ರಾಜ್ಯ' ದ ಭಾಗವಾಗಿದ್ದ ಪೋರಬಂದರ್ ನಗರವು, ಗುಜರಾತ್ ರಾಜ್ಯವನ್ನು ಸಾಕಾರಗೊಳಿಸಲು ಭಾರತ ದೇಶದೊಡನೆ ವಿಲೀನಕೊಂಡಿತು.
ಭೌಗೋಳಿಕತೆ
ಪೋರಬಂದರ್, ಕತಿಬಾರ್ ನ ಒಂದು ಭಾಗವಾಗಿದ್ದು, ಅರಬ್ಬೀ ಸಮುದ್ರದ ಪಕ್ಕದಲ್ಲಿ, ಗುಜರಾತ್ ನ ಪಶ್ಚಿಮ ಕರಾವಳಿಯಲ್ಲಿದೆ. ಈ ಪ್ರದೇಶವು ಹೆಚ್ಚು ಕಡಿಮೆ ಬಯಲು ಸೀಮೆಯಾಗಿದ್ದು, ಸ್ವರ್ಣ ಸದೃಶ ಕಡಲನ್ನು ಹೊಂದಿದೆ. ಅಪವಾದವೋ ಎಂಬಂತೆ ಬರ್ಡಾ ಬೆಟ್ಟಗಳಂತಹ ಕೆಲವು ಬೆಟ್ಟ ಪ್ರದೇಶಗಳನ್ನು ಹೊಂದಿದೆ. ಪೋರಬಂದರ್ ನ ಒಂದು ಪಾರ್ಶ್ವದಲ್ಲಿ ಅರಬ್ಬೀ ಸಮುದ್ರವಿದ್ದರೆ, ಇತರೆ 3 ಪಾರ್ಶ್ವಗಳಲ್ಲಿ ಭನ್ವಾಡ್, ಉಪ್ಲೆಟಾ, ಮತ್ತು ಕೆಶೊಡ್ ಗಳಂತಹ ನಗರಗಳಿವೆ.
ಹವಾಮಾನ
ಅರಬ್ಬೀ ಸಮುದ್ರವು ಸನಿಹದಲ್ಲಿಯೇ ಇರುವುದರಿಂದ, ಇಲ್ಲಿನ ಹವಾಮಾನವು ಹಿತಮಿತವಾದ ಬೇಸಿಗೆ ಮತ್ತು ಆಹ್ಲಾದಕರವಾದ ಚಳಿಗಾಲದಿಂದ ಕೂಡಿದೆ. ಆದರೆ, ಇಲ್ಲಿ ಮಳೆಗಾಲವು ಅತ್ಯಂತ ಅನಿಶ್ಚಿತತೆಯಿಂದ ಕೂಡಿದ್ದು, ಇದಕ್ಕೆ ಕಾರಣವು, ಗುಡುಗು ಸಿಡಿಲುಗಳ ಅರ್ಭಟ ಮತ್ತು ಅತಿ ಭಯಂಕರವಾದ ಮಳೆಯನ್ನು ಉಂಟು ಮಾಡುವ ಸಾಗರದ ಮಾರುತಗಳಾಗಿವೆ. ಸರ್ವೇಸಾಮಾನ್ಯವಾಗಿ, ಸಮುದ್ರದ ಕಾರಣದಿಂದ ಇಲ್ಲಿನ ವಾಯುಗುಣವು ಸ್ವಲ್ಪ ತೇವವಾಗಿರುತ್ತದೆ.
ಸಂಪರ್ಕ
ಪೋರಬಂದರ್ ಹೆದ್ದಾರಿ, ರೈಲ್ವೆ ಮಾರ್ಗ, ಮತ್ತು ವಾಯು ಮಾರ್ಗಗಳ ಮೂಲಕ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸರಿಯಾದ ರೀತಿಯಲ್ಲಿ ಸಂಪರ್ಕವನ್ನು ಸಾಧಿಸುತ್ತದೆ. ಇಲ್ಲಿನ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣವು ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತದೆ. ನಗರದೊಳಗಿನ ಪ್ರಯಾಣಕ್ಕಾಗಿ, ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಮತ್ತು ಅಟೋ ರಿಕ್ಷಾಗಳು ಲಭ್ಯವಿವೆ.
ಸಂದರ್ಶಿಸಬೇಕಾದ ತಾಣಗಳು
ಪೋರಬಂದರ್ ನಲ್ಲಿ ಸಂದರ್ಶಿಸಬೇಕಾದ ಕೆಲವು ಪ್ರಮುಖ ಸ್ಥಳಗಳೆಂದರೆ, ಪೋರಬಂದರ್ ಪಕ್ಷಿಧಾಮ, ಮಿಯಾನಿ ಬೀಚ್, ಬರ್ಡಾ ಬೆಟ್ಟಗಳ ವನ್ಯಜೀವಿ ರಕ್ಷಿತಾರಣ್ಯ, ಕೃತಿ ಮಂದಿರ್, ಮತ್ತು ಪೋರಬಂದರ್ ಬೀಚ್. ಕೃತಿ ಮಂದಿರ್, ಗಾಂಧೀಜಿ ಮತ್ತು ಅವರ ಪೂರ್ವಜರ ನಿವಾಸವಾಗಿದ್ದು, ಈಗ ಇದೊಂದು ವಸ್ತು ಸಂಗ್ರಹಾಲಯವಾಗಿ (museum) ಆಗಿ ಪರಿವರ್ತಿತವಾಗಿದೆ. ಭಾರತಿ ಮಂದಿರ್ ಮತ್ತೊಂದು ಮ್ಯೂಸಿಯಂ ಆಗಿದ್ದು, ಇಲ್ಲಿ ಭಾರತೀಯ ಪರಂಪರೆಯ ಕೆತ್ತನೆಯ ಕೃತಿಗಳು ಮತ್ತು ಚಿತ್ರಕಲೆಯ ಸೊಬಗನ್ನು ಕಾಣಬಹುದು.
ಬರ್ಡಾ ಬೆಟ್ಟದ ವನ್ಯಜೀವಿ ಅಭಯಾರಣ್ಯವು, ಒಂದು ಕಾಲದಲ್ಲಿ ರಾಜಕುಮಾರನ ಆಳ್ವಿಕೆಗೆ ಒಳಪಟ್ಟಿದ್ದ ರಣವವ್ ಅಥವಾ ಪೋರಬಂದರ್ ರಾಜ್ಯದ ಖಾಸಗೀ ಸೊತ್ತಾಗಿತ್ತು. ಈ ಕಾರಣಕ್ಕಾಗಿ, ಇಂದಿಗೂ ಕೂಡ ಈ ಅಭಯಾರಣ್ಯವು ರಾಣಾ ಬಾದ್ರ ಮತ್ತು ಜಾಮ್ ಬದ್ರ ಎಂದು ಕರೆಯಲ್ಪಡುತ್ತದೆ. ಇಲ್ಲಿ "ರಾಣಾ (Rana)" ಅಥವಾ "ಜಾಮ್ (Jam)" ಎಂಬುದರ ಅರ್ಥ ರಾಜಾ ಎಂದಾಗಿದೆ. ಅಭಯಾರಣ್ಯದ ಪಕ್ಕದ ಜಾಗದಲ್ಲಿ ಜೌಗು ಭೂಮಿ, ಅರಣ್ಯಗಳು, ಮತ್ತು ಸಾಗುವಳಿ ಭೂಮಿಗಳಿವೆ.
ಇಲ್ಲಿ ನಾನಾ ಪ್ರಕಾರದ ವನ್ಯ ಮೃಗಗಳಿದ್ದು, ವೈವಿದ್ಯಮಯವಾದ ಪ್ರಾಣಿಸಂಕುಲವು ಈ ಅರಣ್ಯದಲ್ಲಿ ಲಭ್ಯವಿದೆ. ವೈವಿಧ್ಯಮಯ, ವರ್ಣಮಯ ಚಿಟ್ಟೆಗಳು, ಸಿಂಹ, ಕಡವೆ, ಸಾಂಬಾರ್ (ಸಾರಂಗ), ಚುಕ್ಕೆಗಳುಳ್ಳ ಜಿಂಕೆ, ಚುಕ್ಕೆಗಳುಳ್ಳ ಹದ್ದು, ಜುಟ್ಟುಳ್ಳ ಹದ್ದು ಇವು ಈ ಅರಣ್ಯದಲ್ಲಿರುವ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳಾಗಿವೆ.