ಕ್ರಿ.ಶ 1540 ರಲ್ಲಿ ಜಾಮ್ ರಾವಲ್ ತನ್ನ ನವನಗರ ರಾಜ್ಯದ ರಾಜಧಾನಿಯನ್ನಾಗಿ ಜಾಮ್ ನಗರವನ್ನು ನಿರ್ಮಿಸಿದನು. ರಂಗಮತಿ ಮತ್ತು ನಾಗಮತಿ ನದಿಗಳ ಸಂಗಮ ಸ್ಥಾನದ ಬಳಿ ಇರುವ ರಣ್ ಮಲ್ ಸರೋವರದ ಬಳಿಯಲ್ಲಿ ಈ ನಗರವನ್ನು ಕಟ್ಟಲಾಗಿದೆ. ಇದನ್ನು ನಂತರ 1920 ರಲ್ಲಿ ಮಹಾರಾಜಾ ಕುಮಾರ್ ಶ್ರೀ ರಂಜಿತ್ ಸಿಂಹಜೀ ನವೀಕರಿಸಿದರು ಹಾಗೂ ಆ ಸಮಯದಲ್ಲಿ ಇದನ್ನು ಜಾಮ್ ನಗರ ಅಥವಾ ‘ಜಾಮರ ನಗರ’ ಎಂದು ಕರೆಯಲಾಯಿತು. ಇಲ್ಲಿ ‘ಜಾಮ್’ ಎಂಬ ಪದದ ಅರ್ಥ ರಾಜ ಎಂಬುದಾಗಿದೆ ಈ ಪ್ರದೇಶವನ್ನು ಜಡೇಜಾ ರಜಪೂತ ಮನೆತನದವರು ಆಳ್ವಿಕೆ ನಡೆಸಿದರು. ಈ ವಂಶಸ್ಥರ ಪೂರ್ವಜರು ಕೃಷ್ಣನ ಯಾದವ ಕುಲದವರು ಎಂದು ನಂಬಲಾಗಿದೆ. ಜಾಮ್ ನಗರ ಜಿಲ್ಲೆಯಲ್ಲಿ ಬರುವ ದ್ವಾರಕಾಕ್ಕೆ ಕೃಷ್ಣನು ಮಥುರಾ ದಿಂದ ಯಾದವರನ್ನು ಕರೆತಂದಿದ್ದನು.
ಸ್ಥಾಪನೆ
ಜಾಮ್ ರವಾಲ್ ಅವರ ತಂದೆ ಜಾಮ್ ಲಕಾಜಿ ಅವರು ಬಹದೂರ್ ಶಾ ಅವರಿಂದ ಹನ್ನೆರಡು ಗ್ರಾಮಗಳನ್ನು ಉಡುಗೊರೆಯಾಗಿ ಪಡೆದಿದ್ದನು. ನಂತರರಾಮ್ ಜವಾಲ್ ಕಾಥಿವಾರ್ ಗೆ ತನ್ನ ವಾಸಸ್ಥಳವನು ಬದಲಾಯಿಸಿದನು ಹಾಗೂ ಅಲ್ಲಿ ನವನಗರ (ಹೊಸ ನಗರ) ವನ್ನು ಕಟ್ಟಿಸಿದನು. 1852 ರಲ್ಲಿ ಜಾಮ್ ವಿಭಾಜಿ ಅವರ ಆಳ್ವಿಕೆಯ ಅಡಿಯಲ್ಲಿ ಈ ನಗರವು ಬಹಳವಾಗಿ ಅಭಿವೃದ್ಧಿಯನ್ನು ಕಂಡಿತು. ಹೊಸ ಶಾಲೆಗಳು, ಆಸ್ಪತ್ರೆಗಳು ಮತ್ತು ರಾಜ್ ಕೋಟ್ ಗೆ ರೈಲ್ವೆ ಮಾರ್ಗಗಳು ನಿರ್ಮಾಣವಾದವು.
ಮಹಾರಾಜಾ ಕುಮಾರ್ ಶ್ರೀ ರಂಜಿತ್ ಸಿಂಹ್ ಜೀ
ಮಹಾರಾಜಾ ಕುಮಾರ್ ಶ್ರೀ ರಂಜಿತ್ ಸಿಂಹ್ ಜೀ ಅವರು ನವನಗರದ ಪ್ರಸಿದ್ಧ ರಣಜಿ ಕ್ರಿಕೆಟ್ ಆಟಗಾರರಾಗಿದ್ದರು. ಅವರು ಜಾಮ್ ನಗರದ ಅಭಿವೃದ್ಧಿಯಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ಇವರು ಜಾಮ್ ನಗರವನ್ನು 1907 – 1933 ತನಕ ಆಳ್ವಿಕೆ ನಡೆಸಿದರು. ಹಾಗೂ 1914 ರಲ್ಲಿ ಸರ್ ಎಡ್ವರ್ಡ್ ಲುಟಿನೆಸ್ ಅವರ ಸಹಾಯದಿಂದ ನಗರದ ಮರಿನಿರ್ಮಾಣ ಮಾಡಿದರು. ಇವರು ಯುರೋಪಿಯನ್ ವಾಸ್ತುಶಿಲ್ಪದಿಂದ ಬಹಳವೇ ಪ್ರಭಾವಿತರಾಗಿದ್ದರು ಹಾಗೂ ಇದೇ ಆಕರ್ಷಣೆಯನ್ನು ಮರು ನಿರ್ಮಾಣ ಮಾಡಿದ ನಗರದಲ್ಲೂ ನಾವು ಕಾಣಬಹುದಾಗಿದೆ.
ಹಿಂದೆ ಗೋಡೆಗಳಿಂದ ಮತ್ತು ಕೋಟೆಗಳಿಂದ ಆವೃತವಾಗಿದ್ದ ನಗರ ಮರು ನಿರ್ಮಾಣದ ನಂತರ ತೆರೆದ ನಗರವಾಯಿತು ಮತ್ತು ಮನೆಗಳ ನಿರ್ಮಾಣದಲ್ಲಿ ಆಧುನಿಕತೆಯನ್ನು ಬಳಸಲಾಯಿತು ಮತ್ತು ಎಲ್ಲಾ ಮನೆಗಳನ್ನು ಏಕ ಪ್ರಕಾರವಾಗಿ ನಿರ್ಮಾಣ ಮಾಡುವ ಶೈಲಿಯನ್ನು ಅಳವಡಿಸಿಕೊಳ್ಳಲಾಯಿತು. ಜಾಮ್ ನಗರವನ್ನು ಭಾರತದ ಪ್ಯಾರಿಸ್ ಎಂದೂ ಕರೆಯುತ್ತಾರೆ. ಇಲ್ಲಿನ್ ವಿಲ್ಲಿಂಗ್ಡನ್ ಕ್ರೆಸೆಂಟ್, ಪ್ರತಾಪ್ ವಿಲಾಸ್ ಅರಮನೆ, ಸೋಲಾರಿಯಮ್ ಗಳಂತಹ ಪ್ರಸಿದ್ಧ ಕಟ್ಟಡಗಳೆಲ್ಲವೂ ಇದೇ ಅವಧಿಯಲ್ಲಿ ಕಟ್ಟಲಾಗಿದ್ದವು.
ಬೇಡಿ ಬಂದರನ್ನೂ ಕೂಡ ಇದೇ ಅವಧಿಯಲ್ಲಿ ಕಟ್ಟಲಾಯಿತು ಹಾಗೂ ರೈಲ್ವೆ ಸಂಪರ್ಕವೂ ಈ ಅವಧಿಯಲ್ಲಿ ಹೆಚ್ಚಾಯಿತು.
ನಗರದ ಇನ್ನಿತರ ಪ್ರಸಿದ್ಧ ಸ್ಥಳಗಳು
ಬಹಳ ಕಾಲದ ಹಿಂದೆ ಜಾಮ್ ನಗರ ಸಣ್ಣ ಹವಳಗಳನ್ನು ಹಿಡಿಯುವ ನಗರವಾಗಿ ಪ್ರಸಿದ್ಧಿ ಪಡೆದಿತ್ತು. ಇದು ಅಂದಿನಿಂದ ಇಂದಿಗೂ ಬಟ್ಟೆಗಳಿಗೆ ಬಣ್ಣ ನೀಡುವಲ್ಲಿ ಬಹಳವೇ ಸಮಯ ತೆಗೆದುಕೊಳ್ಳುವ ಟೈ- ಡೈ ಮತ್ತು ಬಂಧನಿ ತಂತ್ರಜ್ಞಾನಕ್ಕೆ ಹೆಸರುವಾಸಿ. ನಗರವೂ ಈ ತಂತ್ರಜ್ಞಾನದಲ್ಲಿ ಕಳೆದ 500 ವಿಶೇಷ ಪರಿಣಿತಿ ಪಡೆದಿದೆ ಎಂಬನಂಬಿಕೆ ಇದೆ.
ಸಂಸ್ಕೃತಿ
ಗುಜರಾತಿ ಭಾಷೆಯ ಒಂದು ಸ್ಥಳೀಯ ಆವೃತಿಯಾದ ಕಾಥಿಯಾವಾಡಿ ಭಾಷೆ ಇಲ್ಲಿ ದಿನನಿತ್ಯದ ಉಪಯೋಗಕ್ಕಾಗಿ ಬಳಸುವ ಭಾಷೆಯಾಗಿದೆ. ಆದರೂ ಕೆಲವು ಜನರು ಕುಚಿ ಭಾಷೆಯನ್ನೂ ಮಾತನಾಡುತ್ತಾರೆ.
ಪ್ರವಾಸಿ ಆಕರ್ಷಣೆಗಳು
ಜಾಮ್ ನಗರ ಪ್ರಾಕೃತಿಕ ಉದ್ಯಾನಗಳು ಮತ್ತು ಅಭಯಾರಣ್ಯಗಳಿಗೆ ಹೆಸರುವಾಸಿ. ಭಾರತದ ಏಕ ಮಾತ್ರ ನೀರಿನ ರಾಷ್ಟ್ರೀಯ ಉದ್ಯಾನ ಮೆರೀನ್ ನ್ಯಾಷನಲ್ ಪಾರ್ಕ್ ಜಾಮ್ ನಗರದ ಸಮೀಪದಲ್ಲಿರುವ ಪಿರೋಟನ್ ನ ಕೋರಲ್ ರೀಫ್ ದ್ವೀಪದಲ್ಲಿದೆ. ಖಿಜಾಡಾ ಪಕ್ಷಿಧಾಮ, ಗಾಗಾ ವನ್ಯಜೀವಿಧಾಮ ಮತ್ತು ಪೀಟರ್ ಸ್ಕಾಟ್ ಪ್ರಕೃತಿ ಧಾಮ ಜಾಮ್ ನಗರದಲ್ಲಿರುವ ಇತರ ಪರಿಸರ ಸಂಬಂಧೀ ತಾಣಗಳು. ಜಾಮ್ ನಗರದಲ್ಲಿ ಅಮೃತ ಶಿಲೆಯಿಂದ ಮಾಡಿದ ನಾಲ್ಕು ಜೈನ ಮಂದಿರಗಳೂ ಇವೆ.
ಅವುಗಳೆಂದರೆ ವರ್ಧಮಾನ ಷಾ ದೇವಾಲಯ, ರೈಸಿ ಷಾ ದೇವಾಲಯ, ಷೇತ್ ದೇವಾಲಯ ಮತ್ತು ವಾಸು ಪೂಜ್ಯ ಸ್ವಾಮಿ ದೇವಾಲಯ. ಇಲ್ಲಿನ ಬಾಲ ಹನುಮಾನ ದೇವಾಲಯಕ್ಕೆ ತನ್ನದೇ ಆದ ವಿಶೇಷತೆ ಇದೆ. ಇದರ ಹೆಸರು ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ನಲ್ಲಿದೆ. ಆಗಸ್ಟ್ 1, 1964 ರಿಂದ ನಿರಂತರವಾಗಿ ‘ರಾಮ್ ಧುನ್’ ನ ಪಠನೆಗೆ ಈ ದಾಖಲೆ ಇದೆ. ಜಾಮ್ ರಾಣ್ ಮಲ್ಜೀ ಅವರ ಸಮಯದಲ್ಲಿ ಬರ ಪರಿಹಾರಕ್ಕೆ ಕಟ್ಟಿದ ಲಖೋಟಾ ಸರೋವರದ ಸಮೀಪದಲ್ಲಿರುವ ಲಖೋಟಾ ಗೋಪುರ ಇಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ.
ರಂಜಿತ್ ಸಾಗರ ಅಣೆಕಟ್ಟು, ಪ್ರತಾಪ್ ವಿಲಾಸ್ ಅರಮನೆ, ರತನ್ ಬಾಯಿ ಮಸೀದಿ, ದರ್ಬಾರ್ ಗಡ್, ಭಿಡ್ ಭಂಜನ್ ದೇವಾಲಯ, ಖಿಜಾಡಿಯಾ ದೇವಾಯಲ, ಬೋಹ್ರಾ ಹಜಿರಾ, ಭುಜಿಯೋ ಕೋಥೊ, ಮನೇಕ್ ಬಾಯಿ ಮುಕ್ತಿ ಧಾಮ, ರೋಝಿ ಕೋಟೆ ಮತ್ತು ಬೇಡಿ ಜಾಮ್ ನಗರದಲ್ಲಿರುವ ಇನ್ನಿತರ ಪ್ರವಾಸಿ ಆಕರ್ಷಣೆಗಳಾಗಿವೆ.
ಜಡೇಜಾ ರಜಪೂತರ ಜಾಮರ ಹೆಸರುಗಳೊಂದಿಗೆ ಸಂಬಂಧ ಹೊಂದಿರುವ ಮತ್ತು ಪ್ರಸಿದ್ಧ ಕ್ರಿಕೆಟ್ ಆಟಗಾರ ರಂಜಿತ್ ಸಿಂಹಜೀ ಅವರು ಕಟ್ಟಿದ ಜಾಮ್ ನಗರ ಖಂಡಿತವಾಗಿಯೂ ಒಂದು ನೋಡಲೇಬೇಕಾದ ನಗರವಾಗಿದೆ.