ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅತ್ಯಂತ ದೂರದ ಹಾಗೂ ಸುಲಭವಾಗಿ ಲಭಿಸದ ಜಿಲ್ಲೆ ಪೂಂಚ್. ಅಲ್ಲದೇ ಇದು ಮಿನಿ ಕಾಶ್ಮೀರ ಎಂಬ ಖ್ಯಾತಿಯನ್ನೂ ಹೊಂದಿದೆ. ಅತ್ಯಾಕರ್ಷಕ ನೈಸರ್ಗಿಕ ಸೌಂದರ್ಯ ಹೊತ್ತು ನಿಂತಿರುವ ಈ ತಾಣದ ಇನ್ನೊಂದು ವೈಶಿಷ್ಟ್ಯ ಅಂದರೆ ತನ್ನ ಮೂರು ದಿಕ್ಕುಗಳಲ್ಲಿ ಸೀಮಾ ರೇಖೆ (ಎಎಲ್ಸಿ)ಯನ್ನು ಹೊಂದಿರುವುದು.
ಪೂಂಚ್ ಜಿಲ್ಲೆಯು ಅದ್ಭುತ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಈ ಭಾಗವನ್ನು ಸಾಕಷ್ಟು ಸ್ಥಳೀಯ ಹಾಗೂ ವಿದೇಶಿ ಆಡಳಿತಗಾರರು ಆಳಿದ್ದಾರೆ. ಚೈನಾದ ಅತ್ಯಂತ ಪ್ರಸಿದ್ಧ ಪ್ರವಾಸಿಗ ಹುಯೆನ್ ತ್ಸಾಂಗ್ ಇಲ್ಲಿಗೆ ಆರನೇ ಶತಮಾನದಲ್ಲಿ ಭೇಟಿ ನೀಡಿದ್ದ. ಆನಂತರ ತನ್ನ ಬರಹದಲ್ಲಿ ಇಲ್ಲಿನ ವಿಶೇಷಗಳ ಬಗ್ಗೆ ಉಲ್ಲೇಖಿಸಿದ್ದ. ಅವನ ಪ್ರಕಾರ, ಈ ಪ್ರದೇಶ ಅತ್ಯುತ್ತಮ ಕುದುರೆಗಳಿಗೆ, ಗ್ರಾಫಿಕ್ಸ್ಗಳಿಗೆ, ಮುಸ್ಲೋಮ್ ಹೆಸರಿನ ಆಕರ್ಷಕ ಚಹಾಕ್ಕೆ ಪ್ರಸಿದ್ಧ ಎಂದು ಹೇಳಿದ್ದ.ಪೂಂಚ್ ಮಿ. ನಾರ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ನಾರ್ ಪೂಂಚ್ನ ಒಬ್ಬ ಸ್ವಘೋಷಿತ ರಾಜನಾಗಿದ್ದ. ಈತ ಮೂಲತಃ ಕುದುರೆ ವ್ಯಾಪಾರಿ.
ಸುಮಾರು 850ನೇ ಇಸವಿ ಹೊತ್ತಿಗೆ ಈತ ಇಲ್ಲಿ ಆಳ್ವಿಕೆ ನಡೆಸಿದ್ದ. ನಂತರ ಅಂದರೆ 1596 ರಲ್ಲಿ ಮೊಘಲ್ ಅರಸು ಜಹಾಂಗೀರನು ಇಲ್ಲಿನ ರಾಜನನ್ನಾಗಿ ಸಿರಾಜ್-ಉದ್-ದಿನ್ ನನ್ನು ನೇಮಕ ಮಾಡಿದ. ಆನಂತರ ಅಂದರೆ 1798 ರಲ್ಲಿ ರೂಹ್- ಉಲ್ಲಾಹ್- ಸಂಗು ಇದರ ಪ್ರಭುತ್ವ ಸಾಧಿಸಿದ. ಈತ ಗುಜ್ಜಾರ ಮುಖಂಡನಾಗಿದ್ದು, ಈ ಎಲ್ಲಾ ಭಾಗದ ಮೇಲೆ ಪ್ರಭುತ್ವವನ್ನು ಸಾಧಿಸಿ ಆಳ್ವಿಕೆ ನಡೆಸಿದ.
ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೀಯ ತಾಣಗಳಿವೆ. ಇದರಲ್ಲಿ ಐತಿಹಾಸಿಕ ತಾಣಗಳು, ಧಾರ್ಮಿಕ ಕೇಂದ್ರಗಳು, ಅತ್ಯಾಕರ್ಷಕ ಜಲಪಾತ, ಕಣಿವೆ, ಬೆಟ್ಟದ ತಪ್ಪಲು ಹಾಗೂ ಕೆರೆಗಳು ಗಮನ ಸೆಳೆಯುತ್ತವೆ. ಇನ್ನು ಪೂಂಚ್ ಕೋಟೆಯು ಇನ್ನೊಂದು ಐತಿಹಾಸಿಕ ಪ್ರಸಿದ್ಧ ನಿರ್ಮಾಣ. ಇದೂ ಈ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇದೆ. ಪೂಂಚ್ ಅನ್ನು ಆಳಿದ ಅರಸು ರಾಜಾ ರುಸ್ತುಮ್ ಸಿಂಗ್ 1713 ರಲ್ಲಿ ಈ ಕೋಟೆಯನ್ನು ನಿರ್ಮಿಸಿದ. ಈ ನಿರ್ಮಾಣ ಶೈಲಿಯು ಮೊಘಲ್ ವಾಸ್ತುಶಿಲ್ಪವನ್ನು ಹೋಲುತ್ತದೆ.
ನೂರಿ ಛಂಬ್ ಇನ್ನೊಂದು ಪ್ರಮುಖ ಪ್ರವಾಸಿ ತಾಣ. ಪೂಂಚ್ನಿಂದ ಇದು 45 ಕಿ.ಮೀ. ದೂರದಲ್ಲಿದೆ. ಮೊಘಲ್ ಅರಸು ಜಹಾಂಗೀರ್ ಈ ಪ್ರದೇಶದ ಸೌಂದರ್ಯಕ್ಕೆ ಮಾರುಹೋಗಿದ್ದ. ಇದರಿಂದಾಗಿಯೇ ಈ ತಾಣಕ್ಕೆ ಮುಂದೆ ತನ್ನ ಪ್ರೀತಿಯ ಪತ್ನಿ ನೂರ್ ಜಹಾನ್ಳ ಹೆಸರನ್ನೇ ಇರಿಸಿದ್ದ. ಇಲ್ಲೊಂದು ಆಕರ್ಷಕ ಜಲಪಾತವೊಂದಿದ್ದು, ರಾಣಿಯು ಇಲ್ಲಿಯೇ ಸ್ನಾನ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ.
ಗುರುದ್ವಾರ ನಂಗಲಿ ಸಾಹೀಬ್ ಒಂದು ಪ್ರಮುಖ ಸಿಕ್ ಧಾರ್ಮಿಕ ಕೇಂದ್ರವಾಗಿ ಜನಪ್ರಿಯವಾಗಿದೆ. ಪೂಂಚ್ನಿಂದ ಇದು ಏಳು ಕಿ.ಮೀ. ದೂರದಲ್ಲಿದೆ. ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿಯೂ ಇದು ಕಂಗೊಳಿಸುತ್ತದೆ. ಈ ಗುರುದ್ವಾರವನ್ನು 1803 ರಲ್ಲಿ ಠಾಕೂರ್ ಭಾಯಿಮೇಲಾ ಸಿಂಗ್ ನಿರ್ಮಿಸಿದರು. 1947ರಲ್ಲಿ ಈ ಗುರುದ್ವಾರವು ಸುಟ್ಟು ಹೋಯಿತು. ಆದರೆ ಮಹಾಂತ ಭಟ್ಟಾಚಾರ್ಯ ಸಿಂಗ್ ಎಂಬುವರು ಇದನ್ನು ನವೀಕರಿಸಿದರು. ಪ್ರತಿ ವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಾರ್ಥನೆ ಸಲ್ಲಿಸುವುದು, ಸಿಕ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನೇಕರು ಆಗಮಿಸುತ್ತಾರೆ. ಸಿಖ್ ಹಬ್ಬ ಬೈಸಾಕಿಯನ್ನು ಇಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.
ಪೂಂಚ್ನ ಇನ್ನೊಂದು ಜನಪ್ರಿಯ ತಾಣ ಬುದ್ಧ ಅಮರ್ನಾಥ್ ಜಿ ಮಂದಿರ. ಇದು ಹಿಂದು ದೇವರಾದ ಶಿವನಿಗೆ ಮೀಸಲಾದ ಮಂದಿರ. ಪೂಂಚ್ನಿಂದ 25 ಕಿ.ಮೀ. ದೂರದಲ್ಲಿದೆ. ಇದು ಪಂಚಲಾ ಬೆಟ್ಟಗಳ ಶ್ರೇಣಿಯಲ್ಲಿ ನಿರ್ಮಾಣಗೊಂಡಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕಿಗೆ ತಲಾ ಒಂದೊಂದು ಬಾಗಿಲುಗಳು ಈ ದೇವಾಲಯಕ್ಕೆ ಇದೆ. ಹಿಂದುಗಳ ಎಲ್ಲಾ ನಾಲ್ಕು ಜಾತಿಯನ್ನು ಇದು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.
ಶ್ರೀ ದಶಾನಮಿ ಅಕ್ಷರ ಮಂದಿರ, ರಾಮ ಮಂದಿರ, ಜೈರತ್ ಚೊಟ್ಟೆ ಷಾ ಸಾಹೀಬ್, ಜೈರತ್ ಸೈನ್ ಇಲ್ಲಾಹಿ ಭಕ್ಷ ಸಾಹೀಬ್ ಹಾಗೂ ಜೈರತ್ ಸೆನ್ ಮಿರಾನ್ ಸಾಹೀಬ್ ಈ ಜಿಲ್ಲೆಯಲ್ಲಿ ಕಾಣಬಹುದಾದ ಇತರೆ ಧಾರ್ಮಿಕ ಕೇಂದ್ರಗಳಾಗಿವೆ.
ಗಿರಣ್ ಧೋಕ್ ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ತಾಣ. ಏಳು ಕೆರೆಗಳ ಕಣಿವೆಯಿಂದಾಗಿ ಇದು ಜನಪ್ರಿಯವಾಗಿದೆ. ಈ ಕಣಿವೆಯಲ್ಲಿ ಏಳು ಪ್ರಮುಖ ಕೆರೆಗಳಾದ ಗುಮ್ಸಾಗರ, ಕಲಡಚಿನಿಸಾರ, ನಂದನಸಾರ, ಭಾಗಸಾರ, ನೀಲಸಾರ, ಕಠೋರಸಾರ ಹಾಗೂ ಶುಕಸಾರಗಳು ಇಲ್ಲಿವೆ. ಈ ಏಳು ಕೆರೆಗಳಲ್ಲಿ ನಂದನಸಾರ ಅತ್ಯಂತ ದೊಡ್ಡ ಕೆರೆ. ಒಂದು ಮೈಲಿ ಉದ್ದ ಹಾಗೂ ಅರ್ಧ ಮೈಲಿ ಅಗಲವಾಗಿದೆ ಈ ಕೆರೆ. ಬೆಹ್ರಾಂಗಲ್, ನಂದಿ ಶೂಲ, ಸುರಾನ್ಕೋಟೆ, ಮಾನಂದಿ, ದೆಹ್ರಾ-ಗಲಿ ಹಾಗೂ ಲೋಜಿನ್ ಗಳು ಇಲ್ಲಿನ ಇತರೆ ಜನಪ್ರಿಯ ತಾಣಗಳಾಗಿವೆ.
ಪ್ರಮುಖ ಎಲ್ಲಾ ವಿಧದ ಸಾರಿಗೆ ಮಾರ್ಗಗಳ ಉತ್ತಮ ಸಂಪರ್ಕವನ್ನು ಪೂಂಚ್ ಹೊಂದಿದೆ. ಇಲ್ಲಿಗೆ ಸಮೀಪದ ಡೊಮೆಸ್ಟಿಕ್ ನಿಲ್ದಾಣ ಜಮ್ಮು ವಿಮಾನ ನಿಲ್ದಾಣ. ಪೂಂಚ್ನಿಂದ 250 ಕಿ.ಮೀ. ದೂರದಲ್ಲಿದೆ. ಈ ನಿಲ್ದಾಣಕ್ಕೆ ದೇಶದ ಪ್ರಮುಖ ಭಾಗಗಳಾದ ಗೋವಾ, ಮುಂಬಯಿ, ದಿಲ್ಲಿ, ಶ್ರೀನಗರ, ಜೈಪುರ, ಚಂಡಿಘಡ, ಲೇಹ್ ಮತ್ತಿತರ ಭಾಗದಿಂದ ಸಂಪರ್ಕವಿದೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ದಿಲ್ಲಿ ವಿಮಾನ ನಿಲ್ದಾಣ ಅತ್ಯಂತ ಸಮೀಪದ್ದು.
ಪೂಂಚ್ಗೆ ಸಮೀಪದ ರೈಲು ನಿಲ್ದಾಣ ಜಮ್ಮುವಿನ ತಾವಿ ರೈಲು ನಿಲ್ದಾಣ. ಜಮ್ಮುವಿನಿಂದ ಪೂಂಚ್ಗೆ ಪ್ರವಾಸಿಗರು ಬಸ್ ಅಥವಾ ಖಾಸಗಿ ವಾಹನ ಪಡೆದುಕೊಂಡೂ ಬರಬಹುದು. ಇಲ್ಲಿಗೆ ನಿರಂತರವಾಗಿ ರಾಷ್ಟ್ರದ ಹಲವೆಡೆಯಿಂದ ಸಂಪರ್ಕ ಇದೆ. ಇನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆಯೂ ಉತ್ತಮವಾಗಿದ್ದು, ಕಡಿಮೆ ಬೆಲೆಗೆ ಪ್ರಯಾಣ ಮಾಡಬಹುದಾಗಿದೆ.
ಪೂಂಚ್ ಭಾಗವು ಸಮ ಪ್ರಮಾಣದ ತಾಪಮಾನ ಸ್ಥಿತಿ ಹೊಂದಿದೆ. ವರ್ಷದ ಎಲ್ಲಾ ಸಮಯವೂ ಪ್ರವಾಸಿಗರಿಗೆ ಬರಲು ಸೂಕ್ತ ವಾತಾವರಣ ಇಲ್ಲಿರುತ್ತದೆ. ಅಕ್ಟೋಬರ್ನಿಂದ ನವೆಂಬರ್ ನಡುವಿನ ಸಮಯ ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ.


Click it and Unblock the Notifications