ಮಹಾರಾಷ್ಟ್ರ ರಾಜ್ಯದ ಉತ್ತರ ಮುಂಬೈನ ದಹನು ಎಂಬ ಸಣ್ಣ ಪಟ್ಟಣದ ಬೋರ್ಡಿ ಎಂಬ ಊರು ನಿಸರ್ಗದ ಸಿರಿ ಸೊಬಗಿಗೆ ಹೆಸರುವಾಸಿ. ಕಡಲತಡಿಯ ಕೊಪ್ಪಲು ಎಂದೇ ಕರೆಯಲಾಗುವ ಬೋರ್ಡಿ ಒಡಲಿನಲ್ಲಿ ಇದೆ ಹೆಸರಿನ ಪ್ರಶಾಂತ, ನಿರ್ಮಲವಾದ ಸರೋವರವಿದೆ. ಇಂದಿಗೂ ತನ್ನ ನೈಸರ್ಗಿಕ ಗುಣ, ರಚನೆಯನ್ನೆ ಉಳಿಸಿಕೊಂಡಿರುವ ಕಡಲ ಕಿನಾರೆಯ ಮರಳು ಕಪ್ಪು ಬಣ್ಣದಲ್ಲಿದ್ದು, ಜಿಗುಟಾಗಿದೆ. ಸರೋವರದ ಕಾಂತಿಗೆ ಮುಕುಟವಿಟ್ಟಂತಿರುವ ಸಪೋಟಾ ಮರಗಳು ಪ್ರದೇಶಕ್ಕೆ ವಿಶೇಷ ಆಕರ್ಷಣೆಯಾಗಿವೆ. ಬೋರ್ಡಿ ಸರೋವರದ ಮತ್ತೊಂದು ವಿಶೇಷವೆಂದರೆ ನೀರಿನಲ್ಲಿ ಅರ್ಧ ಕಿ.ಮಿನಷ್ಟು ನಡೆದುಹೋದರೂ ಸೊಂಟದ ಮಟ್ಟಕ್ಕಿಂತ ಮೇಲೆ ನೀರು ನಿಲ್ಲುವುದಿಲ್ಲ. ಹೀಗಾಗಿ, ಈ ಸರೋವರ ಆಟವಾಡಲು, ಈಜಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ಮುಂಬೈನಿಂದ 145 ಕಿ.ಮೀ ಅಂತರದಲ್ಲಿರುವ ಬೋರ್ಡಿ ಬೀಚ್ ಸುತ್ತಲೂ ಹಲವು ಪ್ರವಾಸಿ ತಾಣಗಳಿದ್ದು, ಅದ್ಭತ ಅನುಭವ ಕೊಡುವುದಂತೂ ಖಚಿತ.
ಪಿಕ್ನಿಕ್ ತಾಣವೂ ಹೌದು
ಮಹಾರಾಷ್ಟ್ರ ಅರಣ್ಯ ಸಂರಕ್ಷಣಾ ಇಲಾಖೆ ಪ್ರವಾಸೋದ್ಯಮಕ್ಕೆ ಸೂಕ್ತ ಅವಕಾಶ ಕಲ್ಪಿಸಿರುವುದರ ಜೊತೆಗೆ, ನೈಸರ್ಗಿಕ ಸೊಬಗಿಗೆ ಯಾವುದೇ ರೀತಿ ಅಡ್ಡಿಯಾಗದಂತೆ ಕ್ರಮ ವಹಿಸಿರುವುರಿಂದಲೆ ಬೋರ್ಡಿ ಬೀಚಿನ ಪ್ರಾಕೃತಿಕ ಸೌಂದರ್ಯ ಮಾಸಿಲ್ಲ. ಕುದುರೆ ಓಟ, ಸರೋವರದ ಸುತ್ತಲಿನ ಸಪೋಟ ಮರಗಳೊಂದಿಗಿನ ಒಡನಾಟ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ. ಜೋರಾಸ್ಟ್ರಿಯನ್ ಎಂಬ ಸಮುದಾಯದ ಪವಿತ್ರ ಧಾರ್ಮಿಕ ಸ್ಥಳವಾಗಿರುವ ಬೋರ್ಡಿ ಪ್ರದೇಶದಲ್ಲಿ, ಇದೆ ಸಮುದಾಯದವರ ಮೆಕ್ಕಾ ಎಂದು ಕರೆಯಲ್ಪಡುವ, ಶತಮಾನಗಳಿಂದಲೂ ಪಾಲಿಸಿಕೊಂಡು ಬಂದಿರುವ ನಿರಂತರವಾಗಿ ಬೆಳಗುವ ಪವಿತ್ರಜ್ಯೋತಿಯ ಅಚ್ಚರಿಯನ್ನು ಕಣ್ತುಂಬಿಕೊಳ್ಳಬಹುದು. ಬೋರ್ಡಿ ಸಮುದಾಯದಲ್ಲಿ ಪ್ರಮುಖವಾಗಿ ಸ್ನೇಹಮಯ ಆತಿಥ್ಯ ನೀಡುವ ಪಾರ್ಸಿ ಜನಾಂಗದ್ದೇ ಮೇಲುಗೈ. ಸಾಂಪ್ರದಾಯಿಕ ವೈವಿಧ್ಯಮಯ ಪಾರ್ಸಿ ಅಡುಗೆಯೊಂದಿಗೆ ಪ್ರವಾಸಿಗರಿಗೆ ಬಂಗಲೆಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ.
ಇಲ್ಲಿಂದ 8 ಕಿ.ಮೀ. ಸಮೀಪದಲ್ಲೆ, ಬೆಹ್ರೋಟ್ ಬೆಟ್ಟದ ತಪ್ಪಲಿನಲ್ಲಿರುವ ಬೆಹ್ರೋಟ್ ಗುಹೆಗಳು ಮತ್ತೊಂದು ಪ್ರಮುಖ ಆಕರ್ಷಣೆ. 1,500 ಅಡಿಗಳಷ್ಟು ಎತ್ತರವಾದ ಬೆಹ್ರೋಟ್ ಬೆಟ್ಟ ಪಾರ್ಸಿ ಸಮುದಾಯದ ಪವಿತ್ರ ಪ್ರದೇಶವೂ ಹೌದು. ಜೊತೆಗೆ, ಜೈನ ಸಮುದಾಯದ ಪವಿತ್ರ ಸ್ಥಳ ಮಲ್ಲಿನಾಥ ತೀರ್ಥ ಕೊಸ್ಬಾದ್ ದೇವಾಲಯವೂ ಸಮೀಪದ ಪ್ರಭಾದೇವಿ ಬೆಟ್ಟದ ತಪ್ಪಲಿನಲ್ಲಿದ್ದು, ರಿಷಭ ದೇವರ ಮೂಲಸ್ಥಾನವಾಗಿದೆ. ಉಂಬರಗಾವ್ನಿಂದ 10 ಕಿ.ಮೀ ದೂರದಲ್ಲಿ ಕಲ್ಪತರು ಸಸ್ಯಕಾಶಿಯು ನೆಲೆಗೊಂಡಿದೆ. ಇದರ ಹತ್ತಿರದಲ್ಲಿರುವ ವೃಂದಾವನ್ ಸ್ಟುಡಿಯೋಗಳು ಮನಮೋಹಕವಾಗಿದ್ದು, ಪೌರಾಣಿಕ ಧಾರಾವಾಹಿಗಳಾದ ರಾಮಾಯಣ ಹಾಗು ಮಹಾಭಾರತದ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿವೆ.
ಒಂದಾನೊಂದು ಕಾಲದಲ್ಲಿ ಕೈದಿಖಾನೆಯಾಗಿ ಬಳಸಲ್ಪಡುತ್ತಿದ್ದ ದಹನು ಕೋಟೆಯು, ಇಂದು ಭಾರತದ ಶ್ರೀಮಂತ ಪರಂಪರೆಯನ್ನು ತೋರುವ ಕುರುಹಾಗಿ ನಿಂತಿದೆ. ಮಳೆಗಾಲ ಮುಗಿದ ನಂತರ ಹಾಗೂ ಚಳಿಗಾಲದ ಆರಂಭಕ್ಕೂ ಮುನ್ನದ ಅವಧಿಯಲ್ಲಿ ಬೋರ್ಡಿ ಪ್ರದೇಶಕ್ಕೆ ಬಂದರೆ ಅತ್ಯುತ್ತಮ ಅನುಭವ ನಿಮ್ಮದಾಗುತ್ತದೆ.
ಬೋರ್ಡಿಯ ಹವಾಗುಣ ನವಂಬರ್ ನಿಂದ ಫೆಬ್ರುವರಿ ತಿಂಗಳೊಳಗೆ ಈ ಪ್ರದೇಶ ಹಿತಕರ, ಸಮಶೀತೋಷ್ಣದ ವಾತಾವರಣದೊಂದಿಗೆ 12 ಡಿಗ್ರಿ ಸೆಲ್ಶಿಯಸ್ ನಷ್ಟು ಕಡಿಮೆ ತಾಪಮಾನ ಹೊಂದಿರುತ್ತದೆ.
ಮುಂಬೈ ಸಮೀಪದಲ್ಲಿರುವ ಬೋರ್ಡಿಗೆ ವಿಮಾನ, ರೈಲು, ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ. ವಿಮಾನದಲ್ಲಿ ಹೋಗುವುದಾದರೆ, ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಮೀಪದಲ್ಲಿದೆ. ರೈಲು ಮಾರ್ಗವಾಗಿ ಹೋಗುವುದಾದರೆ, ದಹನು ರೈಲು ನಿಲ್ದಾಣದಲ್ಲಿ ಇಳಿದರೆ ಅನುಕೂಲ. ಇನ್ನು, ಬಸ್ ಮಾರ್ಗವಾಗಿ ಹೋಗುವುದಾದರೆ, ಮುಂಬೈನಿಂದ ಸಾಕಷ್ಟು ನಗರ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ಗಳು ಲಭ್ಯವಿದೆ. ವಾರಾಂತ್ಯ ಪ್ರವಾಸಕ್ಕೆ ಹೇಳಿಮಾಡಿಸಿದಂತಿರುವ ತಾಣ ಬೋರ್ಡಿ ಸರೋವರ. ಒತ್ತಡದ ಜೀವನಶೈಲಿಯಲ್ಲಿ ಬದಲಾವಣೆ ಬೇಕೆನಿಸಿದಾಗ ಈ ಪ್ರದೇಶಕ್ಕೆ ಪ್ರಯಾಣ ಬೆಳೆಸಬಹುದು. ಈ ಬೀಚ್, ಆರಾಮವಾಗಿ ಕಾಲ ಕಳೆಯಲು, ನೀರಿನಲ್ಲಿ ಆಟವಾಡಲು, ವಿಭಿನ್ನ ಸಂಸ್ಕೃತಿ ಪರಿಚಯ ಮಾಡಿಕೊಳ್ಳಬಹುದಾದ ಅವಕಾಶ ಒದಗಿಸುತ್ತದೆ.