ದುರ್ಶೆಟ್ ಎಂಬುದು ಅಂಬಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯಾಗಿದೆ. ಪಾಲಿ ಮತ್ತು ಮಹದ್ನ ಪವಿತ್ರ ಅಷ್ಟ ವಿನಾಯಕ ದೇವಸ್ಥಾನದ ನಡುವೆ ನೆಲೆಸಿರುವ ಈ ಊರು ಕಾಡಿನ ನಡುವೆ ಸುಮಾರು 42 ಎಕರೆಯಷ್ಟು ಪ್ರದೇಶದಲ್ಲಿ ತಲೆ ಎತ್ತಿದೆ.
ದುರ್ಶೆಟ್ ಊರು ಹೆದ್ದಾರಿಯ ಪಕ್ಕದ ಕಫೋಲಿ ಎಂಬ ಹಳ್ಳಿಗೆ ಸ್ವಲ್ಪದೂರದಲ್ಲಿ ಸಹ್ಯಾದ್ರಿಯ ಮಡಿಲಿನಲ್ಲಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಆರಾಮವಾಗಿ ನೆಲೆಸಿದೆ. ಈ ಪ್ರಸಿದ್ಧ ಪ್ರವಾಸಿ ತಾಣವು ಮುಖ್ಯವಾಗಿ ಮಾವು ಮತ್ತು ಮಾಹು ತೋಪುಗಳ ಹಚ್ಚ ಹಸಿರಿನಿಂದ ಆವೃತ್ತವಾಗಿವೆ. ನಗರದ ಜಂಜಡಗಳಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸುವವರಿಗೆ ವಾರಾಂತ್ಯದಲ್ಲಿ ಇದು ಪ್ರಶಸ್ತವಾದ ಸ್ಥಳವಾಗಿದೆ.
ದುರ್ಶೆಟ್ ಮುಂಬೈ ಮತ್ತು ಪುಣೆಗಳಂತಹ ಪ್ರಮುಖ ನಗರಗಳಿಗೆ ಸಮೀಪದಲ್ಲಿರುವುದರಿಂದಾಗಿ ನಗರದ ಗೌಜು ಗದ್ದಲಗಳಿಂದ ದೂರವಿರಲು ಬಯಸುವ ಜನರು ಇಲ್ಲಿಗೆ ಬಂದು ವಿಶ್ರಾಂತಿ ಪಡೆದು ಹೋಗಲು ಸಹಾಯಕವಾಗಿದೆ.
ದುರ್ಶೆಟ್ - ಹಚ್ಚ ಹಸಿರಿನ ಹಳ್ಳಿ.
ದುರ್ಶೆಟ್ ಸಹ್ಯಾದ್ರಿ ಪರ್ವತ ಶ್ರೇಣಿಗಳ ಭವ್ಯವಾದ ನೋಟವನ್ನು ಒದಗಿಸುತ್ತದೆ. ಈ ಪರ್ವತಗಳ ನಡುವೆ ಒಂದು ಸಣ್ಣ ನಡಿಗೆಯನ್ನು ಕೈಗೊಂಡರೆ ಸಾಕು ನೀವು ಅದ್ಭುತವಾದ ಮತ್ತು ಅಪರೂಪವಾದ ಪಕ್ಷಿಗಳ ಪ್ರಭೇದಗಳನ್ನು ಕಣ್ತುಂಬಿಕೊಳ್ಳಬಹುದು. ಹಕ್ಕಿಗಳ ಕಲರವ ಮತ್ತು ಪರಿಶುದ್ಧವಾದ ಹವೆ, ಹಚ್ಚ ಹಸಿರಿನ ವನಸಿರಿ ನಿಮ್ಮ ನಡಿಗೆಯ ಆಯಾಸವನ್ನು ಹತ್ತಿರ ಸುಳಿಯದಂತೆ ಮಾಡುತ್ತವೆ.
ದುರ್ಶೆಟ್ನಲ್ಲಿ ತಂಪಾದ ಹವೆ ಮತ್ತು ಶುಭ್ರವಾದ ಆಕಾಶವನ್ನು ನೋಡಿ ಅನುಭವಿಸುವ ಅದ್ಭುತವಾದ ಅವಕಾಶವು ಸಿಗುತ್ತದೆ. ಮಳೆಗಾಲದಲ್ಲಿ ನೀವು ಇಲ್ಲಿ ಮಣ್ಣಿನ ಘಮಲನ್ನು ಮತ್ತು ಪ್ರಕೃತಿ ಮಾತೆಯ ಸಾಮೀಪ್ಯದ ಅನುಭವವನ್ನು ಸಹ ಅನುಭವಿಸಬಹುದು.
ದುರ್ಶೆಟ್ನಲ್ಲಿ ಏನೇನು ನೋಡಬಹುದು?
ಅದ್ಭುತವಾದ ಪರಿಸರದಿಂದ ಕೂಡಿರುವ ದುರ್ಶೆಟ್ ಚಾರಣಿಗರಿಗೆ ಮತ್ತು ವನ್ಯಜೀವಿಗಳನ್ನು ನೋಡಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಪಾಳಿ ಗಣಪತಿ ದೇವಾಲಯ ಮತ್ತು ಮಹದ್ ಗಣಪತಿ ದೇವಾಲಯಗಳು ಇಲ್ಲಿಗೆ ಆಗಮಿಸುವವರ ಧಾರ್ಮಿಕ, ಅಧ್ಯಾತ್ಮಿಕ ಮತ್ತು ನಂಬಿಕೆಗಳನ್ನು ಮರು ಪೂರಣ ಮಾಡುವ ಸ್ಥಳಗಳಾಗಿ ಖ್ಯಾತಿ ಪಡೆದಿವೆ.
ಎಲ್ಲರಿಗು ತಿಳಿದಿರುವ ಒಂದು ವಿಚಾರವೇನೆಂದರೆ ದುರ್ಶೆಟ್ ಒಂದಾನೊಂದು ಕಾಲದಲ್ಲಿ ಉಂಬರ್ ಖಿಂಡ್ಗೆ ರಣರಂಗವಾಗಿ ಸೇವೆ ಸಲ್ಲಿಸಿತ್ತು. ಇಲ್ಲಿ ಶಿವಾಜಿ ಮಹಾರಾಜನು ಕರ್ಟಲಬ್ ಖಾನ್ನೊಂದಿಗೆ ಯುದ್ಧ ಮಾಡಿದ್ದನು. ದುರ್ಶೆಟ್ಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.