ಹೌದು, ಈ ಸ್ಥಳಗಳಿಗೆ ಭೇಟಿ ನೀಡಿದರೆ ಸಾಕು ಜಿಹ್ವಾ ಚಾಪಲ್ಯ ಹೆಚ್ಚತೊಡಗುತ್ತದೆ, ನಾಲಿಗೆಯಲ್ಲಿ ನೀರೂರಿ ತಿನ್ನುವ ಹಂಬಲ ಏರತೊಡಗುತ್ತದೆ. ಅಂತಹ ಸ್ವಾದಿಷ್ಟ ಹಾಗೂ ರುಚಿಕರವಾದಂತಹ ಬಿರಿಯಾನಿಗಳು ಇಲ್ಲಿ ಲಭ್ಯ. ಅಷ್ಟೆ ಅಲ್ಲ ಆ ಸ್ಥಳಗಳ ಹೆಸರಿನಿಂದಲೆ ಈ ಬಿರಿಯಾನಿಗಳು ಪ್ರಸಿದ್ಧಿ ಪಡೆದಿವೆ.
ನಿಮಗಿಷ್ಟವಾಗಬಹುದಾದ : ಭಾರತ ದೇಶದಲ್ಲೊಂದು ಖಾದ್ಯಗಳ ಪ್ರವಾಸ
ಪ್ರಸ್ತುತ ಲೇಖನವು ಅಹಾರ ಪ್ರವಾಸೋದ್ಯಮಕ್ಕೆ ಮುಡಿಪಾಗಿದೆ ಎಂತಲೇ ಹೇಳಬಹುದು. ಆಹಾರ ಪ್ರವಾಸೋದ್ಯಮ ಎಂಬುದು ಪ್ರವಾಸೋದ್ಯಮದ ಒಂದು ಭಾಗವಾಗಿದ್ದು ಇದು ಮುಖ್ಯವಾಗಿ ವಿವಿಧ ಸ್ಥಳಗಳಿಗೆ ಪ್ರವಾಸದ ಅಂಗವಾಗಿ ಭೇಟಿ ನೀಡಿ ವಿಶೇಷವಾಗಿ ಅಲ್ಲಿ ದೊರಕುವ ಆಹಾರ ಅಥವಾ ಖಾದ್ಯಗಳನ್ನು ಸವಿಯುವುದಾಗಿದೆ.
ಚಿತ್ರಕೃಪೆ: Bhaskaranaidu
ಪ್ರಸ್ತುತ, ಲೇಖನದಲ್ಲಿ ದಕ್ಷಿಣ ಭಾರತದ ಯಾವೆಲ್ಲ ಸ್ಥಳಗಳು ಬಿರಿಯಾನಿ ಅದರಲ್ಲೂ ವಿಶೇಷವಾಗಿ ಚಿಕನ್ ಬಿರಿಯಾನಿ ಖಾದ್ಯಗಳಿಗೆ ಹೆಸರುವಾಸಿಯಾಗಿವೆ ಎನ್ನುವುದರ ಕುರಿತು ತಿಳಿಸಲಾಗಿದೆ. ನೀವು ಪ್ರವಾಸ ಮಾಡುವಾಗ
ಈ ಸ್ಥಳಗಳಿಗೇನಾದರೂ ಭೆಟಿ ನೀಡಿದರೆ ಮತ್ತು ಬಿರಿಯಾನಿ ನಿಮಗಿಷ್ಟವಿದ್ದಲ್ಲಿ ಖಂಡಿತವಾಗಿಯೂ ಅದರ ಸ್ವಾದವನ್ನು ಅನುಭವಿಸಿ.
ಬಿರಿಯಾನಿ ಮೂಲತಃ ಅನ್ನ, ಸಾಂಬಾರು ಪದಾರ್ಥಗಳು ಹಾಗೂ ಬೇಯಿಸಿದ ಮಾಂಸಗಳ ಮಿಶ್ರಣವಾಗಿದೆ. ಇದನ್ನು ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯಲ್ಲಿ ತಯಾರಿಸಿ ನೀಡಲಾಗುತ್ತದೆ. ಇದರ ಮುಲದ ಕುರಿತು ನಿಖರವಾದ ಮಾಹಿತಿ ಇಲ್ಲವಾದರೂ ಕೆಲವರ ಪ್ರಕಾರ, ಇದು ಭಾರತದಲ್ಲೆ ಹುಟ್ಟಿ ಅರೇಬಿಕ್ ದೇಶಗಳಿಗೆ ತೆರಳಿ ಮತ್ತೆ ಕೆಲ ಸಮಯದ ನಂತರ ಅವರಿಂದಲೆ ಇಲ್ಲಿ ಬಂದಿತೆನ್ನಲಾಗಿದೆ.
ಚಿತ್ರಕೃಪೆ: Manojk
ಉತ್ತರ ಭಾರತದಲ್ಲಿ ಉತ್ತರ ಪ್ರದೇಶದ ಲಖನೌ ಇದಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಂತೆಯೆ ದಕ್ಷಿಣ ಭಾರತದಲ್ಲೂ ಸಹ ಸಾಕಷ್ಟು ಜನಪ್ರೀಯವಾದ ಬಿರಿಯಾನಿಗಳನ್ನು ಕಾಣಬಹುದು. ದಕ್ಷಿಣ ಭಾರತದ ಜನಪ್ರೀಯ ಬಾಣಸಿಗ ಜಾಕೋಬ್ ಸಹಾಯ್ ಕುಮಾರ್ ಅರುಣಿ ಪ್ರಕಾರ, ಎರಡನೇಯ ಶತಮಾನದ ತಮಿಳು ಸಾಹಿತ್ಯ ಸಂಗಮದಲ್ಲಿ ಉಲ್ಲೇಖಿಸಲಾದ "ಊಣ್ ಸೋರು" (ಮಾಂಸದ ಅನ್ನ) ಈ ಬಿರಿಯಾನಿಯ ಪೂರ್ವಜವಂತೆ.
ಅದೇನೆ ಇರಲಿ, ಇಂದು ಮಾಂಸಾಹರ ಪ್ರೀಯರ ಪ್ರಥಮ ಆಯ್ಕೆಯಾಗಿದೆ ಬಿರಿಯಾನಿ ಅನ್ನ. ಹಾಗಾದರೆ ಯಾವೆಲ್ಲ ಸ್ಥಳಗಳು ತಮ್ಮದೆ ಆದ ವಿಶಿಷ್ಟ ರಿತಿಯ ಬಿರಿಯಾನಿಗೆ ಪ್ರಸಿದ್ಧವಾಗಿವೆ ಎಂದು ತಿಳಿಯಿರಿ.
ಹೈದರಾಬಾದಿ ಬಿರಿಯಾನಿ : ಕೇವಲ ದಕ್ಷಿಣ ಮಾತ್ರವಲ್ಲ ಉತ್ತರ ಭಾರತದಲ್ಲೂ ಸಹ ಸಾಕಷ್ಟು ಜನಪ್ರೀಯವಾಗಿದೆ "ಹೈದರಾಬಾದಿ ಬಿರಿಯಾನಿ". ಹಿಂದೆ ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿ ಇಂದು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಕಚ್ಚಿ ಹಾಗೂ ಪಕ್ಕಿ ಎಂಬ ಎರಡು ರುಪಗಳಲ್ಲಿ ಈ ಬಿರಿಯಾನಿ ಹೈದರಾಬಾದ್ ನಗರದಾದ್ಯಂತ ದೊರೆಯುತ್ತವೆ.
ಚಿತ್ರಕೃಪೆ: Rameshng
ತಲಚೇರಿ ಬಿರಿಯಾನಿ : ಕೇರಳ ಬಿರಿಯಾನಿ ಎಂತಲೂ ಕರೆಯಲಾಗುವ ಈ ಖಾದ್ಯವು ಮುಲತಃ ತಲಚೇರಿ ಪ್ರದೇಶದಿಂದ ಜನಮನ್ನಣೆಗಳಿಸಿದ ಖಾದ್ಯವಾಗಿದೆ. ಇದರ ವಿಶೆಷತೆ ಎಂದರೆ ಸಾಮಾನ್ಯ ಬಿರಿಯಾನಿಗಳಲ್ಲಿ ಬಳಸಲಾಗುವ ಅಕ್ಕಿಯ ಬದಲಾಗಿ ಇಲ್ಲಿ ವಿಶೇಷವಾದ ಖೈಮಾ/ಜೀರಾಕಸಲಾ (ಚಿಕ್ಕ ಅಕ್ಕಿ) ಅಕ್ಕಿಯ ಅನ್ನವನ್ನು ತಯಾರಿಸಿ ಬಿರಿಯಾನಿ ಮಾಡಲಾಗುತ್ತದೆ. ಇದನ್ನು ಬಿರಿಯಾನಿ ಅನ್ನ ಎಂತಲೂ ಕರೆಯುತ್ತಾರೆ.
ನಿಮಗಿಷ್ಟವಾಗಬಹುದಾದ : ಇಳಿ ಸಂಜೆಯ ಎಳೆ ಬಿಸಿಲು ಬೆಂಗಳೂರಿನ ಈ ಹೋಟೆಲುಗಳಲ್ಲಿ ಕಳೆ ಕಟ್ಟುವಂತಿರುತ್ತವೆ
ಭಟ್ಕಳ ಬಿರಿಯಾನಿ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಉಗಮಗೊಂಡ ಈ ಬಿರಿಯಾನಿಯು ಭಟ್ಕಳ ಬಿರಿಯಾನಿ ಎಂತೆಲೆ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿದೆ. ಭಟ್ಕಳದ ನವಾಯತ್ ಎಂಬ ಮುಸ್ಲಿಮ್ ಕುಟುಂಬದಿಂದ ಸಿದ್ಧಪಡಿಸಲಾದ ಈ ಬಿರಿಯಾನಿಯು ಇತರೆ ಬಿರಿಯಾನಿಗಳಿಂತರದೆ ಹೆಚ್ಚಿನ ಪ್ರಮಾಣದ ಇರುಳ್ಳಿ ಹಾಗೂ ಟೊಮ್ಯಾಟೊಗಳಿರುವ ವಿಶೇಷವಾದ ಸ್ವಾದ ಹೊಂದಿರುವ ಬಿರಿಯಾನಿಯಾಗಿದೆ.
ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ ಮಹತ್ತರ ಭಾಗ ತಮಿಳುನಾಡಿನ ಅಂಬೂರ್ ನಲ್ಲಿರುವುದರಿಂದ ಇದನ್ನು "ದಕ್ಷಿಣ ಭಾರತದ ಚರ್ಮದ ನಗರ" ಎಂತಲೂ ಸಹ ಕರೆಯುತ್ತಾರೆ. ಅಂಬೂರ್ ಚರ್ಮ ಕೈಗಾರಿಕೆಯಲ್ಲದೆ ತನ್ನಲ್ಲಿ ದೊರಕುವ ವಿಶಿಷ್ಟ ಸ್ವಾದದ ಬಿರಿಯಾನಿಗೂ ಸಹ ಪ್ರಸಿದ್ಧವಾಗಿದೆ. ಇದು ಎಲ್ಲೆಡೆ ಅಂಬೂರ್ ಬಿರಿಯಾನಿ ಎಂತಲೆ ಪ್ರಸಿದ್ಧವಾಗಿದೆ.
ಚಿತ್ರಕೃಪೆ: Satadaldas1966
ಕೊಲ್ಕತ್ತಾ ಬಿರಿಯಾನಿ : ಪಶ್ಚಿಮ ಬಂಗಾಳದ ರಾಜಧಾನಿ ನಗರ ಕೊಲ್ಕತ್ತಾ ಎನ್ನುತ್ತಲೆ ಸಾಕಷ್ಟು ಜನರ ಬಾಯಲ್ಲಿ ನೀರೂರುತ್ತದೆ. ಏಕೆಂದರೆ ಇಲ್ಲಿ ಸಿಹಿ ತಿನಿಸುಗಳು ಹಾಗೂ ಮೀನಿನ ಖಾದ್ಯಗಳು ಸಾಕಷ್ಟು ಹೆಸರುವಾಸಿ. ಆದರೆ ಇವುಗಳ ಹೊರತಾಗಿ ಇಲ್ಲಿ ದೊರಕುವ ಮತ್ತೊಂದು ರುಚಿಕರವಾದ ಖಾದ್ಯ ಎಂದರೆ ಕೊಲ್ಕತ್ತಾ ಬಿರಿಯಾನಿ. ಇದರಲ್ಲಿ ಹೇರಳವಾಗಿ ಬೇಯಿಸಿದ ಆಲುಗಡ್ಡೆಯನ್ನು ಬಳಸಲಾಗುವುದು ವಿಶೇಷ.
ಚಿತ್ರಕೃಪೆ: Twit Rajat
ಲಖನೌ ಬಿರಿಯಾನಿ : ಭಾರತದಲ್ಲಿ ಪ್ರಮುಖವಾಗಿ ತಯಾರಿಸಲಾಗುವ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದಿರುವ ಬಿರಿಯಾನಿ ಎಂದರೆ ಉತ್ತರ ಪ್ರದೇಶದ ಅತಿ ದೊಡ್ಡ ನಗರವಾದ ಲಖನೌ. ಮುಘಲರ ಕಾಲದಿಂದ ಇಲ್ಲಿ ಸಾಂಪ್ರದಾಯಿಕವಾಗಿ ಬಿರಿಯಾನಿಯನ್ನು ಅದ್ಭುತವಾಗಿ ತಯಾರಿಸಲಾಗುತ್ತದೆ. ಈ ನಗರದ ಕೆಲವು ಹೋಟೆಲುಗಳು ಬಿರಿಯಾನಿಗೆಂದೆ ಹೆಚ್ಚು ಪ್ರಸಿದ್ಧಿ ಪಡೆದಿವೆ.
ತಲಪಾಕಟ್ಟಿ ಬಿರಿಯಾನಿ : ಈ ಬಿರಿಯಾನಿಗೆ ಈ ಹೆಸರು ಬರಲೂ ಸಹ ವಿಚಿತ್ರವಾದ ಹಿನ್ನಿಲೆಯಿದೆ. ನಾಗಸ್ವಾಮಿ ನಾಯ್ಡು ಎಂಬುವವರು ಈ ವಿಶೇಷ ರೀತಿಯ ಬಿರಿಯಾನಿಯ ನಿರ್ಮಾತೃ. ಇವರು ಸದಾ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ಇವರನ್ನು ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೆ ಕರೆಯುತ್ತಿದ್ದರು. (ತಮಿಳಿನಲ್ಲಿ ತಲಪಾಕಟ್ಟಿ ಎಂದರೆ ಪೇಟ ಕಟ್ಟಿಕೊಂಡವ ಎಂಬರ್ಥವಿದೆ). ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂದಿದೆ. ಇದು ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯ ಪ್ರಸಿದ್ಧ ಖಾದ್ಯವಾಗಿದೆ.