ದಂತಕಥೆಯ ಪ್ರಕಾರ, ಒಂದೊಮ್ಮೆ ನಡೆದ ಒಂದು ಪ್ರಮುಖ ಘಟನೆಯಲ್ಲಿ ಉತ್ಪತ್ತಿಯಾದ ಘನಘೋರ ವಿಷದ ಪ್ರಭಾವದಿಂದ ಸೃಷ್ಟಿಯು ನಶಿಸಿ ಹೋಗುವ ಸಂದರ್ಭ ಎದುರಾದಾಗ ಶಿವನು ತನ್ನ ಒಂದು ಬಲಿದಾನದ ಮೂಲಕ ಸೃಷ್ಟಿಯನ್ನು ಕಾಪಾಡುವ ಪ್ರಸಂಗ ಅಥವಾ ಘಟನೆಗೆ ಸಾಕ್ಷಿಯಾಗಿದೆ ಈ ಸ್ಥಳ.
ಹಾಗಾಗಿ ಸಾಂಬ ಶಿವನು ಪ್ರಶಾಂತವಾಗಿ ನೆಲೆಸಿ ಭಕ್ತರನ್ನು ಹರಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ ಈ ಸ್ಥಳ. ಇಂದು ಇದು ನಂಜನಗೂಡು ಎಂಬ ಹೆಸರಿನಿಂದ ಜನರಲ್ಲಿ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕಪಿಲಾ ನದಿಯ (ಕಬಿನಿ) ತಟದಲ್ಲಿ ನೆಲೆಸಿರುವ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ.
ಮೈಸೂರು ನಗರ ಕೇಂದ್ರದಿಂದ 25 ಕಿ.ಮೀ ಗಳಷ್ಟು ದೂರವಿರುವ ನಂಜನಗೂಡು, ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ಬೆಂಗಳೂರಿನಿಂದ ಸುಮಾರು 175 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರಸ್ತುತ ಲೇಖನದ ಮೂಲಕ ನಂಜನಗೂಡಿನ ಕುರಿತು ಮಾಹಿತಿ ಪಡೆಯಿರಿ.

ವಿಷವ ಕುಡಿದ ಲೋಕ ರಕ್ಷಿಸಿದ
ವಿಷ ಕುಡಿದು, ನೀಳ ವರ್ಣ ಪಡೆದು ಲೋಕವನ್ನು ವಿನಾಶದಿಂದ ಕಾಪಾಡಿದ ಪ್ರಸಂಗ ನಡೆದ ಸ್ಥಳ ಇದೆಂದು ನಂಬಲಾಗಿದ್ದು ಇದರ ತರುವಾಯವೆ ನೀಳ ವರ್ಣದ ಶಿವನಿಗೆ ನೀಲಕಂಠ, ನಂಜುಂಡೇಶ್ವರ ಎಂಬ ಹೆಸರುಗಳು ಬಂದಿವೆನ್ನಲಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Eleleleven

ಮೈಸೂರಿನಲ್ಲಿದೆ
ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಬರುವ ಒಂದು ತಾಲೂಕು ಕೇಂದ್ರವಾಗಿದ್ದು ಪ್ರಮುಖವಾಗಿ ಶಿವನಿಗೆ ಮುಡಿಪಾದ ದೇವಾಲಯದಿಂದಾಗಿ ಹೆಚ್ಚಿನ ಪ್ರಖ್ಯಾತಿಗಳಿಸಿದೆ. ಅಲ್ಲದೆ ಈ ಪಟ್ಟಣದಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ದತ್ತಾತ್ರೇಯ ಮಂದಿರಗಳೂ ಸಹ ಸಾಕಷ್ಟು ಹೆಸರುವಾಸಿಯಾಗಿವೆ.
ಚಿತ್ರಕೃಪೆ: Dineshkannambadi

ರಸಬಾಳೆಹಣ್ಣುಗಳು
ನಂಜನಗೂಡು ಮತ್ತೊಂದಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಏನದು ಗೊತ್ತೆ? ಹೌದು, ರುಚಿಕರವಾದ ಬಾಳೆ ಹಣ್ಣುಗಳಿಗಾಗಿ! ನಂಜನಗೂಡಿನಲ್ಲಿ ಬೆಳೆಯಲಾಗುವ ರಸಬಾಳೆಗಳು ಸಾಮಾನ್ಯವಾಗಿ ಸಾಕಷ್ಟು ರುಚಿಕರವಾಗಿದ್ದು ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಇವುಗಳನ್ನು ನಂಜನಗೂಡಿನ ರಸಬಾಳೆ ಎಂದೆ ಕರೆಯಲಾಗುತ್ತದೆ.
ಚಿತ್ರಕೃಪೆ: Sarvagnya

ಧಾರ್ಮಿಕ ಮಹತ್ವ
ಇನ್ನೂ ದೇವಾಲಯದ ವಿಷಯಕ್ಕೆ ಬಂದರೆ ಶಿವನ ನಂಜುಂಡೇಶ್ವರ ದೇವಾಲಯವು ಪಟ್ಟಣದ ಪ್ರಮುಖ ಹಾಗೂ ಮಹತ್ವದ ಧಾರ್ಮಿಕ ಆಕರ್ಷಣೆಯಾಗಿದೆ. ನಂಜು ಎಂದರೆ ವಿಷ ಎಂಬ ಅರ್ಥವಿದೆ. ನಂಜನ್ನು ಉಂಡು ಬಿಟ್ಟ ಈಶ್ವರ ಇವನಾಗಿರುವುದರಿಂದ ಇವನಿಗೆ ನಂಜುಂಡೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗಿದೆ ಹಾಗೂ ಇದಕ್ಕೆ ಪೂರಕವಾಗಿ ರೋಚಕ ದಂತಕಥೆಯು ಹೀಗೆ ಸಾಗುತ್ತದೆ:
ಚಿತ್ರಕೃಪೆ: Kpksmailbox

ಅಮೃತ ಬೇಕು!
ಸೃಷ್ಟಿ ನಿರ್ಮಾಣವಾದ ಸಂದರ್ಭದಲ್ಲಿ ಸುರ ಹಾಗೂ ಅಸುರರಿಬ್ಬರಿಗೂ ಅಮರರಾಗುವ ಬಯಕೆ ಇತ್ತು. ಅದಕ್ಕಾಗಿ ಸಾಗರ/ಸಮುದ್ರವನ್ನು ಮಂಥನ ಮಾಡಿ ಅದರಿಂದ ಉತ್ಪತ್ತಿಯಾಗುವ ಅಮೃತವನ್ನು ಪಡೆಯುವುದು ಅವಶ್ಯಕವಾಗಿತ್ತು.
ಚಿತ್ರಕೃಪೆ: Pavithrah

ವಿಷ್ಣು ಆಧಾರ
ಹಾಗಾಗಿ ದೇವತೆಗಳು ಹಾಗೂ ದಾನವರಿಬ್ಬರೂ ಒಪ್ಪಂದವೊಂದನ್ನು ಮಾಡಿಕೊಂಡು ಸಮುದ್ರವನ್ನು ಕಡೆಯುವ ಅಥವಾ ಮಂಥನ ಮಾಡುವ ಕಾರ್ಯಾರಂಭಿಸಿದರು. ಇದಕ್ಕೆ ಮೇರು ಪರ್ವತವನ್ನು ಕಡುಗೋಲನ್ನಾಗಿಯೂ ವಿಷ್ಣುವಿನ ಅನಂತ ಸರ್ಪವನ್ನು ಕಡೆಯಲು ಅನುಕೂಲವಾಗುವ ಉಪಕರಣವನ್ನಾಗಿಯೂ ಬಳಸಿದರು. ಕೂರ್ಮಾವತಾರ ತಳೆದ ವಿಷ್ಣುವನ್ನು ಆಧಾರವಾಗಿಯೂ ಇಟ್ಟುಕೊಂಡು ಮಂಥನ ಪ್ರಾರಂಭಿಸಿದರು. ಇದನ್ನು ಪೌರಾಣಿಕವಾಗಿ ಸಮುದ್ರ ಮಂಥನ ಅಥವಾ ಕ್ಷೀರ ಮಂಥನ ಎಂತಲೂ ಕರೆಯಲಾಗುತ್ತದೆ.
ಚಿತ್ರಕೃಪೆ: wikimedia

ಶಕ್ತಿಶಾಲಿ ವಿಷ
ಹೀಗೆ ಮಂಥನ ನಡೆಯುತ್ತಿದ್ದ ಸಂದರ್ಭದಲ್ಲಿ ಲೋಕಕ್ಕೆ ಕಲ್ಯಾಣ ಉಂಟುಮಾಡುವ ಹಾಗೂ ಘಾತಕ ಉಂಟುಮಾಡುವ ವಸ್ತುಗಳು ಉತ್ಪತ್ತಿಯಾಗುತ್ತಲೆ ಇದ್ದವು. ಹೀಗೊಂದು ಸಂದರ್ಭದಲ್ಲಿ ಅತ್ಯಂತ ಶಕ್ತಿಶಾಲಿಯಾದ ಹಾಗೂ ಬಲು ಘಾತಕವಾದ ವಿಷ ಉತ್ಪತ್ತಿಯಾಗೆ ಅದರ ಪ್ರಭಾವದಿಂದ ಸೃಷ್ಟಿಯೆ ನಾಶ ಹೊಂದುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಎಲ್ಲ ಸುರ ಅಸುರರು ಚಿಂತಿತರಾಗಿ ಏನೂ ಮಾಡಲಾಗದೆ ಅಸಹಾಯಕರಾಗಿ ನೋಡಹತ್ತಿದರು.
ಚಿತ್ರಕೃಪೆ: wikimedia

ಪಾರ್ವತಿಯ ಆಗಮನ
ಪರಿಸ್ಥಿತಿಯ ತೀವ್ರತೆಯನ್ನು ಅರಿತ ಶಿವನು ತಕ್ಷಣವೆ ಕಾರ್ಯಪ್ರವೃತ್ತನಾಗಿ ಆ ಎಲ್ಲ ವಿಷವನ್ನು ತಾನೆ ನುಂಗಿ ಲೋಕವನ್ನು ಕಾಪಾಡಿದನು. ಹೀಗೆ ನುಂಗಿದ ವಿಷವು ಶಿವನನ್ನು ನೀಳ ವರ್ಣಕ್ಕೆ ತಿರುಗಿಸಿತು. ಇನ್ನೂ ಶಿವನ ಕಂಠದಿಂದ ವಿಷವು ಶಿವನ ದೇಹದೊಳಗೆ ಪ್ರವೇಶಿಸುವ ಮುಂಚೆ ಪಾರ್ವತಿಯು ಶಿವನನ್ನು ಗಟ್ಟಿಯಾಗಿ ಅಂಟಿಕೊಂಡು ವಿಷವು ಪಸರಿಸದಂತೆ ತಡೆ ಹಿಡಿದಳು.
ಚಿತ್ರಕೃಪೆ: Elishams

ಶಿವನನ್ನು ಕೊಂಡಾಡಿದರು
ಈ ಒಂದು ಪ್ರಸಂಗದಿಂದ ಸೃಷ್ಟಿಯು ನಾಶ ಹೊಂದುವುದರಿಂದ ಉಳಿಯಿತು ಹಾಗೂ ಅಲ್ಲಿ ನೆರೆದ ಸಕಲ ದೇವತೆಗಳು, ಅಸುರರು, ಋಷಿ-ಮುನಿಗಳು ಶಿವನನ್ನು ಕುರಿತು ವಂದನರ್ಪಣೆಗಳನ್ನು ಸಲ್ಲಿಸಿದರು. ಈ ಒಂದು ಘಟನೆಯಿಂದಲೆ ಶಿವನು ನೀಲಕಂಠೇಶ್ವರನೆಂಬ ಹೆಸರು ಅಡೆದನು. ದೇವಾಲಯದಲ್ಲಿರುವ ಗಿರಿಜಾ ಕಲ್ಯಾಣ ಮೂರ್ತಿ.
ಚಿತ್ರಕೃಪೆ: Dineshkannambadi

ಪಾರ್ವತಿಯ ಕೊಡುಗೆ
ಅಷ್ಟೆ ಅಲ್ಲ, ಶ್ರೀಯು ಶಿವನನ್ನು ಗಟ್ಟಿಯಾಗಿ ಅಂಟಿಕೊಂಡಿದ್ದರಿಂದ ಶಿವನಿಗೆ ಶ್ರೀಕಂಠೇಶ್ವರ ಎಂಬ ಹೆಸರು ಬಂದಿತು. ಪಾರ್ವತಿ ದೇವಿಯನ್ನು ಶ್ರೀ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಹೀಗಾಗಿ ನಂಜನಗೂಡಿನಲ್ಲಿರುವ ಪ್ರಖ್ಯಾತ ಶಿವನ ದೇವಾಲಯವು ನಂಜುಂಡೇಶ್ವರ ಹಾಗೂ ಶ್ರೀಕಂಠೇಶ್ವರ ಎಂಬ ಎರಡೂ ಹೆಸರುಗಳಿಂದ ಸಾಮಾನ್ಯವಾಗಿ ಕರೆಯಲ್ಪಡುತ್ತದೆ.
ಚಿತ್ರಕೃಪೆ: Dineshkannambadi

ಅಷ್ಟೆ ಮಹತ್ವ
ಉತ್ತರದಲ್ಲಿರುವ ಶಿವನ ಅತಿ ಮುಖ್ಯ ಸ್ಥಳವಾದ ಕಾಶಿಯಲ್ಲಿರುವ ವಿಶ್ವನಾಥನಂತೆ ಇಲ್ಲಿರುವ ಶಿವನೂ ಸಹ ಅಪಾರ ಮಹತ್ವ ಪಡೆದಿರುವುದರಿಂದ ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಅಥವಾ "ದಕ್ಷಿಣದ ವಾರಣಾಸಿ" ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Dineshkannambadi

ಕಾಣಿಕೆ ನಿಡಿದ್ದ!
ಇತಿಹಾಸದ ದಾಖಲೆಗಳಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನನ ಹೆಸರೂ ಸಹ ಕೇಳಿ ಬರುತ್ತದೆ. ಈ ಪ್ರದೇಶದಲ್ಲಿ ಹಿಂದೊಮ್ಮೆ ಟಿಪ್ಪುವಿನ ಆಡಳಿತವಿದ್ದ ಸಂದರ್ಭದಲ್ಲಿ ಅವನ ನೆಚ್ಚಿನ ಆನೆಯೊಂದು ಹಟಾತ್ತಾಗಿ ತನ್ನ ದೃಷ್ಟಿಯನ್ನು ಕಳೆದುಕೊಂಡಿತು. ಇದರಿಂದ ಟಿಪ್ಪುವಿಗೆ ಬಲು ಬೇಸರ್ವಾಯಿತು.
ಚಿತ್ರಕೃಪೆ: sai sreekanth mulagaleti

ಫಲ ಸಿದ್ಧಿಸಿತು!
ಆತನ ಆಸ್ಥಾನದಲ್ಲಿದ್ದ ಹಿಂದು ಪಂಡಿತರೊಬ್ಬರ ಸಲಹೆಯಂತೆ ಟಿಪ್ಪು ನಂಜುಂಡೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜಾರ್ಚನೆಗಳಿಗೆ ಏರ್ಪಾಡು ಮಾಡಿದನು. ಇದಾದ ಕೆಲವು ದಿನಗಳ ನಂತರ ಆನೆಗೆ ಕಳೆದು ಹೋದ ದೃಷ್ಟಿ ಮತ್ತೆ ತನ್ನಿಂತಾನೆ ಮರಳಿ ಬಂದಿತು. ಕಬಿನಿ ನದಿ ತಟ.
ಚಿತ್ರಕೃಪೆ: sai sreekanth mulagaleti

ವೈದ್ಯ ನಂಜುಂಡೇಶ್ವರ!
ಇದರಿಂದ ಸಂತಸಗೊಂಡ ಟಿಪ್ಪು ನಂಜುಂಡೇಶ್ವರನನ್ನು ಹಕೀಮ್ ನಂಜುಂಡೇಶ್ವರ ಎಂದು ಕರೆದನು. ಹಕೀಮ್ ಎಂದರೆ ವೈದ್ಯ ಎಂಬರ್ಥವಿದೆ. ಅಲ್ಲದೆ ಬೆಲೆಯುಳ್ಳ ಕಲ್ಲಿನಿಂದ ತಯಾರಿಸಲಾದ ಶಿವಲಿಂಗ ಹಾಗೂ ಹಾರವನ್ನು ದೇಣಿಗೆಯನ್ನಾಗಿ ದೇವಾಲಯಕ್ಕೆ ಸಮರ್ಪಿಸಿದ. ಇಂದಿಗೂ ವಿಶೇಷ ಉತ್ಸವದ ಸಂದರ್ಭಗಳಲ್ಲಿ ಶಿವನನ್ನು ಇದರಿಂದ ಅಲಂಕರಿಸಲಾಗುತ್ತದೆ. ದೇವಾಲಯವಿರುವ ಸ್ಥಳದಲ್ಲಿರುವ ಸುಂದರ ಶಿವನ ಪ್ರತಿಮೆ.
ಚಿತ್ರಕೃಪೆ: Prof tpms

ಇತರೆ ದೇಗುಲಗಳಿವೆ
ಇನ್ನೂ ಈ ಶಿವನ ದೇವಾಲಯವು ಒಂದು ದೊಡ್ಡ ದೇವಾಲಯ ಸಂಕೀರ್ಣವಾಗಿದ್ದು ಮುಖ್ಯ ಶಿವನ ದೇವಾಲಯವನ್ನು ಹೊರತುಪಡಿಸಿ ಆಂಜನೇಯ, ಗಣೇಶ, ಅಷ್ಟದಿಕ್ಪಾಲಕರ ಸನ್ನಿಧಿಗಳು ಹೀಗೆ ಮುಂತಾದ ಹಲವು ದೇಗುಲ ಸನ್ನಿಧಿಗಳನ್ನು ಇಲ್ಲಿ ಕಾಣಬಹುದು. ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1 ಗಂಟೆ ಹಾಗೂ ಸಂಜೆ: 4 ಗಂಟೆಯಿಂದ ರಾತ್ರಿ 8:30 ಗಂಟೆವರೆಗೆ ದೇವಾಲಯ ತೆರೆದಿರುತ್ತದೆ. ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಂದು ದೇವಸ್ಥಾನವು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8:30 ಗಂಟೆ ವರೆಗೆ ತೆರೆದಿರುತ್ತದೆ.
ಚಿತ್ರಕೃಪೆ: Sharanabasaveshwar

ಕಾಲಕ್ಕೆ ತಕ್ಕಂತೆ ನವೀಕರಣಗೊಂಡಿದೆ
ನಂಜುಂಡೇಶ್ವರನ ಈ ದೇವಾಲಯವು ಸಾವಿರಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದ ದೇವಾಲಯವಾಗಿದೆ. ದೇವಾಯಲಕ್ಕೆ ಸಂಬಂಧಿಸಿದಂತೆ ಅತಿ ಪುರಾತನ ದಾಖಲೆಗಳು ಗಂಗರ ಕಾಲದಿಂದ (325-1000) ದೊರೆಯುತ್ತವೆ. ಆದಾಗ್ಯೂ ನಂತರ ಬಂದ ಚೋಳರು, ವಿಜಯನಗರ ಅರಸರು ಹಾಗೂ ಮೈಸೂರು ಅರಸರು ಸಮಯಕ್ಕೆ ತಕ್ಕಂತೆ ದೇವಾಲಯವನ್ನು ನವೀಕರಣಗೊಳಿಸಿದರು. ಮಾರ್ಚ್-ಏಪ್ರಿಲ್ ಸಮಯದಲ್ಲಿ ದೊಡ್ಡ ಜಾತ್ರೆ ಉತ್ಸವವನ್ನು ಆಚರಿಸಲಾಗುತ್ತದೆ. ರಥವನ್ನು ಬೀದಿಗಳಲ್ಲಿ ಮೆರವಣಿಗೆ ಒಯ್ಯಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Softhunterdevil

ಪರಶುರಾಮ ಕ್ಷೇತ್ರ
ನಂಜನಗೂಡಿನಲ್ಲಿ ನೋಡಬೇಕಾದ ಮತ್ತೊಂದು ಸ್ಥಳವೆಂದರೆ ಪರಶುರಾಮರ ದೇವಾಲಯ. ಇದು ಪರಶುರಾಮ ಕ್ಷೇತ್ರದಲ್ಲಿದೆ. ಕಬಿನಿ ಹಾಗೂ ಕೌಂಡಿನ್ಯ ನದಿಗಳು ಸಂಗಮ ಹೊಂದುವ ಕ್ಷೇತ್ರವೆ ಪರಶುರಾಮ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಪ್ರತೀತಿಯಂತೆ ಹಿಂದೆ ಪರಶುರಾಮರು ಇಲ್ಲಿ ಮಾನಸಿಕ ನೆಮ್ಮದಿ ಪಡೆದು ತಪಗೈದಿದ್ದರು. ಈ ದೇವಾಲಯಕ್ಕೆ ಭೇಟಿ ನೀಡದ ಹೊರತು ನಂಜನಗೂಡಿನ ಪ್ರವಾಸ ಸಂಪೂರ್ಣವಾಗುವುದಿಲ್ಲವೆಂಬ ನಂಬಿಕೆ ಭಕ್ತರಲ್ಲಿದೆ.
ಚಿತ್ರಕೃಪೆ: Prof tpms

ರಾಘವೇಂದ್ರರ ವಿಗ್ರಹವಿದೆ
ರಾಘವೇಂದ್ರ ಮಠ ನಂಜನಗೂಡಿನ ಇನ್ನೊಂದು ಧಾರ್ಮಿಕ ಆಕರ್ಷಣೆ. ನಂಜುಂಡೇಶ್ವರ ದೇವಾಲಯದಿಂದ ಅರ್ಧ ಕಿ.ಮೀ ಕಡಿಮೆ ದೂರದಲ್ಲಿ ಈ ಮಠವಿದೆ. ಇದರ ಹೆಗ್ಗಳಿಕೆ ಎಂದರೆ ರಾಯರ ಬೃಂದಾವನದ ಜೊತೆ ಕಲ್ಲಿನಲ್ಲಿ ಕೆತ್ತಲಾದ ವಿಶಿಷ್ಟ ರಾಯರ ವಿಗ್ರಹವೂ ಇರುವುದು.
ಚಿತ್ರಕೃಪೆ: Raod07

ರಸ್ತೆ ಹಾಗೂ ಹಳಿ!
ಅತಿ ಪುರಾತನ ಸೇತುವೆ : ನಂಜನಗೂಡಿನ ಮಗದೊಂದು ಆಕರ್ಷಣೆ. ಭಾರತದಲ್ಲೆ ರೈಲು ಹಳಿ ಹಾಗೂ ರಸ್ತೆಯಿರುವ ಅತ್ಯಂತ ಪುರಾತನ ಸೇತುವೆ ಎಂಬ ಬಿರುದಿಗೆ ಇದು ಪಾತ್ರವಾಗಿದೆ. 1735 ರಲ್ಲಿ ನಿರ್ಮಾಣವಾದ ಈ ಸೇತುವೆ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು ನಂಜನಗೂಡು ಪ್ರವೇಶಿಸುವ ಸಂದರ್ಭದಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Suraj T S


Click it and Unblock the Notifications
















