Search
  • Follow NativePlanet
Share
» »ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

By Vijay

ಹಲವು ಕೌತುಕಗಳು, ಅಚ್ಚರಿಗಳು, ವಿಸ್ಮಯಗಳನ್ನು ನಾವು ನೋಡುತ್ತಲೂ ಹಾಗೂ ಕೇಳುತ್ತಲೂ ಬಂದಿದ್ದೆವೆ. ವೈಜ್ಞಾನಿಕ ದೃಷ್ಟಿಯಿಂದ ವಿವರಣೆಗಳು ಏನೆ ಇದ್ದರೂ ನಂಬಿಕೆ ಎಂಬುದು ಎಂದಿಗೂ ಬಿಡಲಾರದ ನಂಟಾಗಿ ಅವುಗಳಿಗೆ ತಳುಕು ಹಾಕಿಕೊಂಡೆ ಬಂದಿರುತ್ತವೆ. ಕೆಲ ಸ್ಥಳಗಳು ಭೂತ ಪಿಶಾಚಗ್ರಸ್ಥವಾದವುಗಳು ಎಂದು ಕುಖ್ಯಾತಿ ಪಡೆದಿದ್ದರೆ ಇನ್ನೂ ಹಲವು ದೈವಿಕ ಅಚ್ಚರಿಗಳನ್ನು ಒಳಗೊಂಡಿರುವುದನ್ನು ಕಾಣಬಹುದು.

ಭಾರತದ ರಹಸ್ಯಮಯ ಸ್ಥಳಗಳು

ಹೀಗೆ ನಾನಾ ವಿಧದ, ವಿಚಿತ್ರ ಹಿನ್ನಿಲೆಗಳ ಸಾಕಷ್ಟು ರಚನೆಗಳಾಗಲಿ, ಸ್ಥಳಗಳಿಗಾಗಲಿ ನಮ್ಮ ದೇಶದಲ್ಲಿ ಕೊರತೆ ಏನೂ ಇಲ್ಲ. ಇವು ಕೂಡ ಒಂದು ರೀತಿಯಲ್ಲಿ ಆಯಾ ಪ್ರದೇಶಗಳ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಲೆ ಇವೆ. ಈ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ದೇವರ ನಾಡು ಎಂಬ ಖ್ಯಾತಿಯ ಕೇರಳ ರಾಜ್ಯದಲ್ಲಿ ಕಂಡುಬರುವ ಏಳು ಕೌತುಕಮಯ ದೇವಸ್ಥಾನಗಳ ಕುರಿತು ತಿಳಿಸುತ್ತದೆ.

ವಿಶೇಷ ಲೇಖನ : ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಅದ್ಭುತ ರಚನೆಗಳು

ಪನಚಿಕ್ಕಾಡು ದೇವಾಲಯ: ಇದು ಸರಸ್ವತಿ ದೇವಿಗೆ ಮುಡಿಪಾದ ದೇವಾಲಯವಾದರೂ ಮೊದಲಿಗೆ ನಾರಾಯಣನನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ಆಸಕ್ತಿಕರ ವಿಷಯವೆಂದರೆ, ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲಿ ಮೂಲ ವಿಗ್ರಹಗಳು ಗರ್ಭಗೃಹದಿಂದ ಸುತ್ತುವರೆದಿರುತ್ತದೆ. ಆದರೆ ಇಲ್ಲಿ ದೇವಿಯು ನೈಸರ್ಗಿಕವಾಗಿ ಉದ್ಭವವಾಗುವ ನೀರಿನ ಕೊಳವೊಂದರ ಮಧ್ಯದಲ್ಲಿ ಯಾವುದೆ ಛಾವಣಿಯಿಲ್ಲದೆ ವಿರಾಜಮಾನಳಾಗಿದ್ದಾಳೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಚಿತ್ರಕೃಪೆ: arunpnair

ಅಲ್ಲದೆ ದೇವಸ್ಥಾನದಲ್ಲಿ ಗಣಪ [ಗಣೇಶನ ವಿಶೇಷ ದೇವಾಲಯಗಳು], ಶಿವ [ಶಿವನ ಅನನ್ಯ ದೇವಾಲಯಗಳು] ಯಕ್ಷಿಯ ವಿಗ್ರಹಗಳನ್ನೂ ಸಹ ಕಾಣಬಹುದಾಗಿದೆ. ಇಲ್ಲಿ ನೈಸರ್ಗಿಕವಾಗಿ ಉದ್ಭವಿಸುವ ನೀರ್ನಿಂದಲೆ ವಿಗ್ರಹಗಳ ಪೂಜೆ ಮಾಡಲಾಗುತ್ತದೆ. ಈ ನೀರಿನ ತೊರೆಯು ಎಂದಿಗೂ ಬತ್ತದ ನೀರಿನ ಮೂಲವಾಗಿದೆ. ಈ ದೇವಾಲಯವು ಕೊಟ್ಟಾಯಂ ಜಿಲ್ಲೆಯ ಪನಚಿಕಾಡು ಎಂಬ ಗ್ರಾಮದಲ್ಲಿದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಒಚಿರಾ ದೇವಾಲಯ
ಚಿತ್ರಕೃಪೆ: Neon

ಒಚಿರಾ ದೇವಾಲಯ: ಇದು ಕೇರಳದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿದ್ದು, ಕೊಲ್ಲಂ ಜಿಲ್ಲೆಯ ಒಚಿರಾ ಎಂಬಲ್ಲಿ ಸ್ಥಿತವಿದೆ. ಸಾಂಕೇತಿಕವಾಗಿ ಕೆಸರಿನಲ್ಲಿ ಆಡುವ ಕುಸ್ತಿಗೆ ಹಾಗೂ ಕೇರಳದಲ್ಲೆ ಅತಿ ಪ್ರಮುಖ ಹಬ್ಬವಾದ ಓಣಂ ಮುಗಿದ 28 ನೇಯ ದಿನಕ್ಕೆ ಮತ್ತೊಮ್ಮೆ ಅದ್ದೂರಿಯಾಗಿ ಓಣಂ ಆಚರಿಸುವ ಉತ್ಸವಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ. ಚಕಿತಗೊಳಿಸುವ ವಿಷಯವೆಂದರೆ ಈ ಒಚಿರಾ ದೇವಾಲಯಕ್ಕೆ ಯಾವುದೆ ಕಟ್ಟಡ ರಚನೆಯಿಲ್ಲ. ನಿರಾಕಾರ ಪರಬ್ರಹ್ಮನ ರೂಪದಲ್ಲಿ ಶಿವನನ್ನು ಗಿಡಗಳ ಮೂಲಕವಾಗಿ ಪೂಜಿಸಲಾಗುತ್ತದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ತಿರಿಕ್ಕಾಕರಾ ದೇವಾಲಯ
ಚಿತ್ರಕೃಪೆ: Ssriram mt

ತಿರಿಕ್ಕಾಕರಾ ದೇವಾಲಯ: ಭಾರತದಲ್ಲಿ ಕಂಡುಬರುವ ವಾಮನ ದೇವರಿಗೆ ಮುಡಿಪಾದ ಕೆಲವೆ ಕೆಲವು ದೇವಾಲಯಗಳ ಪೈಕಿ ಕೊಚ್ಚಿ ಜಿಲ್ಲೆಯಲ್ಲಿರುವ ತಿರಿಕ್ಕಾಕರಾ ಹಳ್ಳಿಯಲ್ಲಿರುವ ಈ ದೇವಾಲಯವೂ ಸಹ ಒಂದು. ಅಲ್ಲದೆ ಕೇರಳದಲ್ಲಿರುವ ಏಕೈಕ ವಾಮನ ದೇವಾಲಯವೂ ಸಹ ಆಗಿದೆ. ಆಸಕ್ತಿಕರ ವಿಷಯವೆಂದರೆ ಇಲ್ಲಿ ಒಣಸದ್ಯಾ (ಓಣಂ ಊಟ) ಉತ್ಸವವನ್ನು ಅತಿ ಸಡಗರದಿಂದ, ಏಕತೆಯಿಂದ ಆಚರಿಸಲಾಗುತ್ತದೆ. ಹೇಗೆಂದರೆ ಈ ಒಂದು ಉತ್ಸವದಲ್ಲಿ ಯಾವುದೆ ಜಾತಿ, ಧರ್ಮ, ಮತ ಭೇದವಿಲ್ಲದೆ ಎಲ್ಲರೂ ಏಕ ಮನಸ್ಸಿನಿಂದ ಪಾಲ್ಗೊಳ್ಳುತ್ತಾರೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಪಾಂಬುಮ್ಮೆಕ್ಕಟ್ಟು ಮನ
ಚಿತ್ರಕೃಪೆ: Aruna

ಪಾಂಬುಮ್ಮೆಕ್ಕಟ್ಟು ಮನ: ಮಲಯಾಳಂ ಭಾಷೆಯಲ್ಲಿ ಪಾಂಬು ಎಂದರೆ ಸರ್ಪ ಹಾಗೂ ಮನ ಎಂದರೆ ಮನೆ ಅಥವಾ ನಿಲಯ ಎಂದರ್ಥವಾಗುತ್ತದೆ. ಇನ್ನು ಮ್ಮೆಕ್ಕಟ್ಟು ಎನ್ನುವುದು ಮನೆಯ ಹೆಸರಾಗಿದೆ. ಹಿಂದೆ ಬರಿ ಮ್ಮೆಕ್ಕಟ್ಟು ನಿಲಯವಾಗಿದ್ದ ಈ ಮನೆಯ ವಾಸುಕಿ ಸರ್ಪವು ಬಂದು ನೆಲೆಸಲಾಗಿ ಇದಕ್ಕೆ ಪಾಂಬುಮ್ಮೆಕ್ಕಟ್ಟು ಮನ ಎಂಬ ಹೆಸರು ಬಂದಿದೆ. ಅಂದರೆ ಸರ್ಪಗಳಿಗೆ ಮುಡಿಪಾದ ದೇವಸ್ಥಾನ ಮನೆಯಿದು. ಸರ್ಪ ದೋಷದಿಂದ ಮುಕ್ತರಾಗ ಬಯಸುವವರು ಈ ದೇವಸ್ಥಾನಕ್ಕೆ ನಿಗದಿತ ಸಮಯದಲ್ಲಿ ತೆರಳಿ ಪೂಜೆ ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಾರೆ.

ವಿಶೇಷ ಲೇಖನ : ಸರ್ಪದೋಷ ನಿವಾರಕ ಸ್ಥಳ

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಅನಂತಪುರ ಕೆರೆ ದೇವಾಲಯ
ಚಿತ್ರಕೃಪೆ: Vinayaraj

ಅನಂತಪುರ ಕೆರೆ ದೇವಾಲಯ: ಅನಂತಪುರ ಕೆರೆ ದೇವಾಲಯವು ಕೇರಳದಲ್ಲಿರುವ ಕೆರೆಯ ಮಧ್ಯದ ಏಕೈಕ ದೇವಾಲಯ. ಕಾಸರಗೋಡಿನಲ್ಲಿರುವ ಈ ದೇವಾಲಯವು ಪುರಾಣದ ಪ್ರಕಾರ, ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಸ್ವಾಮಿಯ ಮೂಲ ಸ್ಥಾನ. ಆಸಕ್ತಿಕರ ವಿಷಯವೆಂದರೆ ಈ ದೇವಾಲಯದ ಕೆರೆಯಲ್ಲಿ ಒಂದು ಮೊಸಳೆಯನ್ನು ಕಾಣಬಹುದು. ಅಷ್ಟೆ ಅಲ್ಲ ಇಲ್ಲಿನ ಮೊಸಳೆಯು ಮರಣ ಹೊಂದಿದರೆ ಅತ್ಯಾಶ್ಚರ್ಯ ಎಂಬಂತೆ ಇಲ್ಲಿ ಇನ್ನೊಂದು ಮೊಸಳೆ ಬಂದು ಸೇರುತ್ತದೆ. ಇದು ದೇವಾಲಯದ ರಕ್ಷಕ ಎನ್ನಲಾಗಿದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಕಾರ್ತ್ಯಾಯಿನಿ ದೇವಾಲಯ
ಚಿತ್ರಕೃಪೆ: Vanischenu

ಚೆರ್ತಲಾ ಕಾರ್ತ್ಯಾಯಿನಿ ದೇವಾಲಯ: ಕೇರಳದ ಅಲ್ಲೆಪ್ಪಿ ಅಥವಾ ಅಲಪುಳಾದಲ್ಲಿರುವ ಚೆರ್ತಲಾ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣದಲ್ಲಿ ಕಾರ್ತ್ಯಾಯಿನಿಯು ನೆಲೆಸಿರುವುದರಿಂದ ಇದಕ್ಕೆ ಚೆರ್ತಲಾ ಕಾರ್ತ್ಯಾಯಿನಿ ದೇವಾಲಯ ಎಂಬ ಹೆಸರು ಬಂದಿದೆ. ವಿಶಿಷ್ಟವೆಂದರೆ ಇಲ್ಲಿ ಆಚರಿಸಲಾಗುವ ಕಾರ್ತ್ಯಾಯಿನಿ ಉತ್ಸವದ ಸಂದರ್ಭದಲ್ಲಿ ಈ ದೇವಿಯನ್ನು ಸಾಂಕೇತಿಕವಾಗಿ ಬೈಯುತ್ತ ಆರಾಧಿಸಲಾಗುತ್ತದೆ. ಇದರ ಹಿಂದೆ ರೋಚಹಕವಾದ ಹಿನ್ನಿಲೆಯೂ ಸಹ ಇದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಬಲಿಗೆ ಸಿದ್ಧವಾಗಿರುವ ಹುಂಜಗಳು
ಚಿತ್ರಕೃಪೆ: Vanischenu

ಮತ್ತೊಂದು ವಿಶೇಷವೆಂದರೆ ಇಲ್ಲಿ ದೇವಿಯ ಮುಖವು ಮಾತ್ರ ಗೋಚರಿಸುತ್ತದೆ. ಶರೀರದ ಉಳಿದ ಭಾಗವು ಕೆಳ ನೆಲದಲ್ಲಿ ನೆಲೆಸಿದೆ ಎನ್ನಲಾಗುತ್ತದೆ. ಕಾರ್ತ್ಯಾಯಿನಿ ದೇವಿಯನ್ನು ಪ್ರಸನ್ನಗೊಳಿಸಲು ಹುಂಜಗಳನ್ನು ಭಕ್ತಾದಿಗಳಿಂದ ಬಲಿ ಕೊಡಲಾಗುತ್ತದೆ.

ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು

ಕೊಟ್ಟಿಯೂರು ದೇವಾಲಯ
ಚಿತ್ರಕೃಪೆ: Deepesh ayirathi

ಕೊಟ್ಟಿಯೂರು ದೇವಾಲಯ: ಕೊಟ್ಟಿಯೂರಿನಲ್ಲಿ ಆಚರಿಸಲಾಗುವ ವೈಷಾಖ ಮಹೋತ್ಸವದಿಂದಾಗಿ ಈ ದೇವಾಲಯ ಪ್ರಸಿದ್ಧವಾಗಿದೆ. ಹಬ್ಬದ ಸಂದರ್ಭದಲ್ಲಿ ಮಾತ್ರವೆ ಇಲ್ಲಿನ ಪ್ರಮುಖ ದೇವಾಲಯ ತಾತ್ಕಾಲಿಕವಾಗಿ ನಿರ್ಮಾಣಗೊಳ್ಳುತ್ತದೆ. ಅದೂ ಕೂಡ ಗುಡಿಸಲಿನ ರೂಪದಲ್ಲಿ ಮಾತ್ರವೆ. ಮೂಲತಃ ಕೊಟ್ಟಿಯೂರು ವೈಶಾಖ ಮಹೋತ್ಸವವನ್ನು ಸತಿಯ ತಂದೆಯಾಗಿದ್ದ ದಕ್ಷ ಪ್ರಜಾಪತಿಯು ನಡೆಸಿದ ಯಾಗದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ದೇವಸ್ಥಾನವನ್ನು ಕೊಟ್ಟಿಯೂರು ವಡಕ್ಕೇಶ್ವರಂ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ.

ವಿಶೇಷ ಲೇಖನ: ಕೊಟ್ಟಿಯೂರು ವೈಶಾಖ ಮಹೋತ್ಸವ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+