ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ ರೂಪುಗೊಂಡಂತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಪೃಕೃತಿ ರಮ್ಯತೆಯೊಂದಿಗೆ, ಔದ್ಯೋಗಿಕ ಹಾಗೂ ವ್ಯಾಪಾರೀ ಕ್ಷೇತ್ರವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ. ’ಕೊಚ್ಚಿ’ ಅಂದರೆ ಮಲಯಾಳಂ ನಲ್ಲಿ ಒಂದು ಸಣ್ಣಗಿನ ತಗ್ಗಾದ ಪ್ರದೇಶ ಎಂಬಂರ್ಥವಿದೆ. ಕೋಚು ಮತ್ತು ಅಝಿ ಎಂಬೆರಡು ಶಬ್ದಗಳ ಕೂಡುವಿಕೆಯಿಂದ ಈ ಹೆಸರಿನ ಉತ್ಪತ್ತಿಯಾಗಿದೆ. ಈ ಹೆಸರು ಬಂದರು ನಗರಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ವಿಶ್ವದಾದ್ಯಂತ ಈ ಹೆಸರಿಗೆ ಮೆಚ್ಚುಗೆಯಿದೆ. ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಅನೇಕರು ತಮ್ಮ ಗ್ರಂಥಗಳಲ್ಲಿ ಕೊಚ್ಚಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಪ್ರದೇಶ ಪೋರ್ಚುಗೀಸರ ಆಯಕಟ್ಟಿನ ಸ್ಥಳವಾಗಿತ್ತು. ಇವತ್ತಿಗೂ ತನ್ನ ವಿಶಿಷ್ಠವಾದ ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕೃತಿಯ ಸಾಮರಸ್ಯದಿಂದಾಗಿ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಸಮೃದ್ಧ ಸಾಂಸ್ಕೃತಿಕ ಇತಿಹಾಸ
ಪ್ರತಿಯೊಬ್ಬರ ಆಸಕ್ತಿಯನ್ನೂ ತಣಿಸುವಷ್ಟು ವೈವಿಧ್ಯವನ್ನು ಕೊಚ್ಚಿ ಹೊಂದಿದೆ. 14 ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಸ್ಥಳ ಅಂದಿನಿಂದಲೂ ಮಸಾಲೆ ಪದಾರ್ಥ ಮತ್ತು ಗಿಡಮೂಲಿಕೆಗಳ ಪ್ರಮುಖ ವ್ಯಾಪಾರೀ ಕೇಂದ್ರವಾಗಿತ್ತು. ಕೇರಳದ ಅತ್ಯಂತ ಶ್ರೀಮಂತ ಪ್ರದೇಶಗಳ ಪಟ್ಟಿಯಲ್ಲಿ ಕೊಚ್ಚಿ ಪ್ರಮುಖವಾದದ್ದು. ಯಹೂದಿಗಳು, ಚೀನಿಯರು, ಪೋರ್ಚುಗೀಸರು, ಗ್ರೀಕರು, ಅರಬ್ಬರು ಮತ್ತು ರೋಮನ್ ವ್ಯಾಪಾರಿಗಳು ಮಸಾಲೆ ಪದಾರ್ಥಗಳ ಖರೀದಿಗಾಗಿ ಇಲ್ಲಿಗೆ ಬರುತ್ತಿದ್ದರು. ಬಂದಾಗ ಇಲ್ಲಿಯೇ ಬಹಳ ಕಾಲ ತಂಗುತ್ತಿದ್ದರು. ಇದರ ಪರಿಣಾಮವಾಗಿ ಅವೆಲ್ಲ ನಾಡುಗಳ ವಿಭಿನ್ನ ಸಂಸ್ಕತಿ, ಪದ್ಧತಿಗಳು ಇಲ್ಲಿನ ಜನಜೀವನದೊಂದಿಗೆ ಬೆರೆತಿದೆ. ವಿಶ್ವದೆಲ್ಲೆಡೆಯ ಸಂಸ್ಕೃತಿಯ ’ ಕೋಲಾಜ್’ ಅನ್ನು ಇಲ್ಲಿ ಕಾಣಬಹುದಾಗಿದ್ದು , ಬೇರೆ ಬೇರೆ ದೇಶದ ಲೇಖಕರು ಈ ಬಗೆಯ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಆಹಾರ ಪ್ರಿಯರ ಸ್ವರ್ಗ!
ನಿಮಗೆ ಆಹಾರ ಪದಾರ್ಥಗಳ ಬಗ್ಗೆ ಮೋಹವಿದ್ದರೆ ಕೊಚ್ಚಿಗೆ ಬನ್ನಿ. ವಿಶ್ವದ ನಾನಾ ಭಾಗಗಳ ವೈವಿಧ್ಯಮಯ ಖಾದ್ಯಗಳು, ಊಟ, ತಿನಿಸುಗಳು ಇಲ್ಲಿ ಸಿಗುತ್ತವೆ. ಹಾಗಾಗಿ ಇದು ಆಹಾರ ಪ್ರಿಯರ ಸ್ವರ್ಗವೂ ಹೌದು! ಇಲ್ಲಿ ಹೋಟೆಲ್ ಗಳ ಸಂಖ್ಯೆಯೂ ಅಧಿಕವಾಗಿದೆ. ವಿಶ್ವದ ಯಾವುದೇ ಮೂಲೆಯಿಂದ ಬಂದರೂ ನೀವು ನಿಮ್ಮದೇ ಸ್ಥಳದ ಊಟದ ಸವಿಯನ್ನು ಸವಿಯಬಹುದಾಗಿದೆ ಎಂಬುದು ಕೊಚ್ಚಿಯ ಹೆಚ್ಚುಗಾರಿಕೆ. ಈ ಎಲ್ಲ ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡನ್ನೂ ಸಿದ್ಧಪಡಿಸುವಲ್ಲಿ ಸ್ಥಳೀಯ ಬಾಣಸಿಗರೇ ಪರಿಣಿತಿ ಹೊಂದಿರುವುದು ಅಚ್ಚರಿ ಮೂಡಿಸುತ್ತದೆ. ಖಾದ್ಯಗಳಂತೂ ಬಾಯಲ್ಲಿ ನೀರೂರಿಸುತ್ತವೆ. ಇವೆಲ್ಲಾ ಏನೇ ಇದ್ದರೂ ಕೊಚ್ಚಿಯ ಪ್ರಮುಖ ಮೀನಿನ ಖಾದ್ಯಗಳನ್ನು ತಿನ್ನುವುದಕ್ಕೆ ಮರೆಯಬೇಡಿ!
ಪ್ರತಿಯೊಬ್ಬರಿಗೂ ಉಪಯುಕ್ತ
ಇಲ್ಲಿ ನಮಗೆ ಬೇಕಾಗಿದ್ದು ಏನೂ ಇಲ್ಲ ಎನ್ನುತ್ತಾ ನಿರಾಶರಾಗಿ ಯಾರೂ ವಾಪಸ್ ಹೋಗುವಂತಿಲ್ಲ. ಪ್ರತಿಯೊಬ್ಬರ ಆಸಕ್ತಿಯನ್ನು ತಣಿಸುವಷ್ಟು ವಿಶೇಷತೆಗಳು ಇಲ್ಲವೆ. ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರಗಳು, ಮಕ್ಕಳಿಗಾಗಿ ಆಟಿಕೆಯ ಪಾರ್ಕುಗಳು, ಶಾಪಿಂಗ್ ಪ್ರಿಯರಿಗಾಗಿ ತರಹೇವಾರಿ ಬೃಹತ್ ವ್ಯಾಪಾರೀ ಮಳಿಗೆಗಳು, ಹೋಟೆಲ್ಗಳು, ಪ್ರವಾಸೀ ಪ್ರಿಯರಿಗಾಗಿ ಸುಂದರ ತಾಣಗಳು, ಐತಿಹಾಸಿಹ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವ ಹತ್ತಾರು ಸ್ತಳಗಳು... ಒಂದಾ ಎರಡಾ ಕೊಚ್ಚಿಗೆ ಕೊಚ್ಚಿಯೇ ಸಾಟಿ ಎಂದು ಹುಬ್ಬೇರಿಸುವಷ್ಟು ವಿಶೇಷಗಳಿಂದ ಕೂಡಿದೆ ಈ ಪ್ರದೇಶ. ಒಂದೆಡೆ ಅರಬ್ಬಿ ಸಮುದ್ರ, ಕೊಂಚವೇ ದೂರದಲ್ಲಿ ಅಥಿರಾಪಲ್ಲಿ ಜಲಪಾತ, ವನ್ಯಜೀವಿಧಾಮ, ಎಲ್ಲವೂ ತಮ್ಮ ವೈಭವಗಳಿಂದಾಗಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅರಬ್ಬಿ ಸಮುದ್ರಕ್ಕೆ ಸಮಾನಾಂತರವಾಗಿ ಇನ್ನೊಂದು ಪಾರ್ಶ್ವದಲ್ಲಿರುವ ಹಿನ್ನೀರು ಪ್ರೀತಿ ಪಾತ್ರರೊಂದಿಗೆ ಸಂಜೆಯ ವೇಳೆ ವಿಹಾರಕ್ಕೆ ತೆರಳಲು ಹೇಳಿ ಮಾಡಿಸಿದಂಥ ಸ್ಥಳ. ಈ ಹಿನ್ನೀರು ವೇಂಬನಾಡ್ ಸರೋವರದ ಮುಂದುವರಿದ ಭಾಗ. ಆರಾಮವಾಗಿ ದೋಣಿವಿಹಾರ ಮಾಡುತ್ತ ಮೋಜಿನಲ್ಲಿ ಇಳಿಸಂಜೆಯನ್ನು ಕಳೆಯಬಹದಾಗಿದೆ. ಯಾಂತ್ರಿಕ ಜೀವನದ ಜಂಜಡಗಳಿಂದ ಬಿಡಿಸಿಕೊಳ್ಳುವ ಮನಸಿದ್ದರೆ ಈ ಪ್ರದೇಶಕ್ಕೆ ಭೇಟಿ ನೀಡಬಹುದು. ಪ್ರೀತಿ ಪಾತ್ರರೊಂದಿಗೆ ಸುತ್ತಾಡಬಹುದು. ಇಲ್ಲಿಯ ಮೃದುವಾದ ತಂಗಾಳಿ ನಿಮ್ಮ ಮನಸನ್ನು ಪ್ರಫುಲ್ಲಗೊಳಿಸುತ್ತದೆ. ಹೀಗೆ ಸುತ್ತಾಡಿ ಹಸಿವಾದರೆ, ನಿಮಗೆ ಬೇಪ್ರೈಡ್ ಮಾಲ್ ಸಿಗುತ್ತದೆ. ಅಲ್ಲಿ ಸಿಗುವ ವಿಶೇಷ ಮೀನಿನ ಖಾದ್ಯಗಳನ್ನು ಚಪ್ಪರಿಸಿ ಇಲ್ಲಿನ ಉಪಚಾರ ಸ್ವೀಕರಿಸಬಹುದು. ಇಲ್ಲಿಂದ ಮುಂದುವರೆದು ಕೊಚ್ಚಿಯ ಮಾಟೆಂಚರಿ ಅರಮನೆಯನ್ನು ನೋಡಬಹುದು. ಕೊಂಚ ದೂರದಲ್ಲಿ ಸಾಂಟಾಕ್ರೂಜ್ ಬೆಸೆಲಿಕಾ ಇದೆ. ಚೈನೀಸ್ ಬಲೆಗಳಲ್ಲಿ ಮೀನು ಹಿಡಿಯುವುದಕ್ಕೂ ಇಲ್ಲಿ ಅವಕಾಶವಿದೆ. ಕೊಚ್ಚಿಯ ಸಾಸ್ಕೃತಿಕ ಪಂರಂಪರೆಯನ್ನು ಇಲ್ಲಿ ನಡೆದಾಡುತ್ತಾ ನಮ್ಮ ಅನುಭವಕ್ಕೆ ಪಡೆಯಬಹುದು. ಕೊಚ್ಚಿ ಕೋಟೆಯಲ್ಲಿ ವಿಶಿಷ್ಠ ರೀತಿಯಲ್ಲಿ ಆಯುರ್ವೇದ ಮಸಾಜ್ ಮಾಡುತ್ತಾರೆ. ಅದನ್ನು ಪಡೆಯುವುದಕ್ಕೆ ಮರೆಯಬೇಡಿ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ವಾಯುಯಾನ, ಬಸ್, ಹಾಗೂ ರೈಲು ಸೌಕರ್ಯವಿದೆ. ಸದಾಕಾಲ ಪ್ರವಾಸಿಗರು ಇಲ್ಲಿಗೆ ಬರುತ್ತಲೇ ಇರುವುದರಿಂದ ಟಿಕೆಟ್ ಸಿಗುವುದು ದುಸ್ತರ. ಮೊದಲೇ ಟಿಕೆಟ್ ಬುಕ್ ಮಾಡಿಟ್ಟುಕೊಳ್ಳಬಹುದು. ವರ್ಷದ ಯಾವುದೇ ದಿನದಲ್ಲಿ ಇಲ್ಲಿಗೆ ಬರಬಹುದಾಗಿದ್ದು, ಮೇ ತಿಂಗಳು ಇಲ್ಲಿಗೆ ಬರುವುದಕ್ಕೆ ತುಂಬಾ ಉತ್ತಮವಾಗಿದೆ. ಅಗಸ್ಟ್ ಮತ್ತು ಸಪ್ಟೆಂಬರ್ ಗಳಲ್ಲಿ ವಿಪರೀತ ಮಳೆ ಇರುವುದರಿಂದ ಪ್ರವಾಸ ಪ್ರಯಾಸವಾಗಬಹುದು! ಹಾಗಾಗಿ ಜನೆವರಿಯಿಂದ ಏಪ್ರಿಲ್ ಮತ್ತು ಅಕ್ಟೋಬರ್ - ಡಿಸೆಂಬರ್ ವರೆಗೆ ಇಲ್ಲಿಗೆ ಬರಲು ಸಕಾಲ. ಉಳಿದುಕೊಳ್ಳುವುದಕ್ಕೆ ಯಾವುದೇ ಚಿಂತೆ ಬೇಡ. ನಿಮ್ಮ ಬಜೆಟ್ಗೆ ಒಗ್ಗುವಂತ ವಸತಿ ವ್ಯವಸ್ಥೆ ಇಲ್ಲಿ ಲಭ್ಯವಿದೆ. ಇಲ್ಲಿನ ಹೋಟೆಲ್ಗಳು, ರೆಸಾರ್ಟ್ಗಳು, ನಿಮಗೆ ಸ್ಥಳೀಯ ಜನಜೀವನದ ಒಳನೋಟಗಳ ಜತೆಯಲ್ಲಿ ಉತ್ತಮವಾದ ಉಳಿದುಕೊಳ್ಳವ ವ್ಯವಸ್ಥೆಯನ್ನೂ ನೀಡುತ್ತವೆ.