Search
  • Follow NativePlanet
Share
» »ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

By Vijay

ಮಹಾರಾಷ್ಟ್ರ ರಾಜ್ಯವು ಸಾಕಷ್ಟು ಧಾರ್ಮಿಕ ಕ್ಷೇತ್ರಗಳನೊಳಗೊಂಡ ಭವ್ಯವಾದ ನಾಡಾಗಿದೆ. ರಾಜ್ಯದ ಹಲವೆಡೆ ತೀರ್ಥ ಯಾತ್ರಾ ಕೆಂದ್ರಗಳಿದ್ದು ವರ್ಷಪೂರ್ತಿ ಸಾಕಷ್ಟು ಭಕ್ತಾದಿಗಳನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಎಲ್ಲೆಡೆಯಿಂದ ಆಕರ್ಷಿಸುತ್ತವೆ. ಅಂತಹ ಕೆಲವು ಮುಖ್ಯ ಕ್ಷೇತ್ರಗಳ ಪೈಕಿ ಸೋಲಾಪುರ ಜಿಲ್ಲೆಯಲ್ಲಿರುವ ಪಂಢರಪುರವೂ ಸಹ ಒಂದು.

ನಿಮಗಿಷ್ಟವಾಗಬಹುದಾದ : ಜೇಜುರಿಯ ಖಂಡೋಬ

ಪಂಢರಪುರವು ಮುಖ್ಯವಾಗಿ ವಿಠ್ಠಲನ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ. ವಿಷ್ಣು ಅಥವಾ ಕೃಷ್ಣನ ಅವತಾರವೆನ್ನಲಾಗುವ ವಿಠ್ಠಲನು ಇಲ್ಲಿ ತನ ಪತ್ನಿ ರಕುಮಾಯಿ (ರುಕ್ಮಿಣಿ) ಜೊತೆ ನೆಲೆಸಿದ್ದು ಭಕ್ತರನ್ನು ಹರಸುತ್ತಿದ್ದಾನೆ. ಈ ದೇವಸ್ಥಾನವು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ದೇವಸ್ಥಾನಗಳ ಪೈಕಿ ಒಂದಾಗಿದೆ.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ: Redtigerxyz

ವಿಷ್ಣು, ಭೀಮಾ ನದಿ ತೀರದಲ್ಲಿರುವ ಪಂಢರಪುರದಲ್ಲಿ ವಿಠೋಬನಾಗಿ ನೆಲೆಸಿದ ಹಿನ್ನಿಲೆ/ಕಥೆಯೂ ಸಹ ಬಹು ರೋಚಕತೆಯಿಂದ ಕೂಡಿದೆ. ಈ ಕಥೆಯಲ್ಲಿ ಪುಂಡಲೀಕನೆ ಪ್ರಮುಖ ಪಾತ್ರಧಾರಿ. ಹಿಂದೆ ಈ ಕ್ಷೇತ್ರವು ಕಾಡಿನಿಂದ ಕೂಡಿದ ದಂದಿರ್ವನವಾಗಿತ್ತು. ಇಲ್ಲಿ ಪುಂಡಲೀಕನೆಂಬಾತ ತನ್ನ ತಂದೆ-ತಾಯಿಯರ ಸೇವೆ ಮಾಡುತ್ತ ಸುಖವಾಗಿ ಜೀವಿಸುತ್ತಿದ್ದ. ನಂತರ ಪುಂಡಲೀಕನಿಗೆ ಮದುವೆಯಾಯಿತು.

ನಿಮಗಿಷ್ಟವಾಗಬಹುದಾದ : ಸಮರ್ಥ ರಾಮದಾಸರ ಸ್ಥಳಕ್ಕೊಂದು ಭೇಟಿ

ಮದುವೆಯ ತರುವಾಯ ಪುಂಡಲೀಕ ಬದಲಾದ, ತಂದೆ ತಾಯಿಯರನ್ನು ಕಡೆಗಣಿಸಿದ. ಅವರನ್ನು ತುಚ್ಛವಾಗಿ ನೋಡಲಾರಂಭಿಸಿದ. ಒಂದೊಮ್ಮೆ ಕುಟುಂಬ ಸಮೇತನಾಗಿ ಕಾಶಿ ಯಾತ್ರೆಗೆಂದು ತೆರಳುತ್ತಿರುವಾಗ ಮಾರ್ಗ ಮಧ್ಯದ ಆಶ್ರಮವೊಂದರಲ್ಲಿ ಕುಟುಂಬ ವಿಶ್ರಾಂತಿಗೆಂದು ತಂಗಿತು. ಅಂದು ರಾತ್ರಿ ಎಚ್ಚರಗೊಂಡ ಪುಂಡಲೀಕ ಅಸಾಧಾರಣ ದೃಶ್ಯ ಕಂಡ. ಕೊಳೆ ಬಟ್ಟೆ ಹೊತ್ತ ಸುಂದರ ಸ್ತ್ರೀಯರು ಆ ಆಶ್ರಮಕ್ಕೆ ಬಂದು ಸೇವೆ ಮಾಡಿ ಪ್ರಾರ್ಥನೆ ಮಾಡಿ ತೆರಳುವಾಗ ಶುಭ್ರ ವಸ್ತ್ರಗಳಿಂದ ಮರಳಿದರು.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ:

ಇದರಿಂದ ಆಶ್ಚರ್ಯಗೊಂಡ ಪುಂಡಲೀಕ ಮರುದಿನ ಮತ್ತೆ ಇದೆ ದೃಶ್ಯ ಗೋಚರಿಸಿದಾಗ ಆ ಸ್ತ್ರಿಯರನ್ನು ಸಮೀಪಿಸಿ ಅವರ ಕುರಿತು ಕೇಳಿದ. ಅದಕ್ಕವರು ತಾವು ಪವಿತ್ರ ನದಿಗಳಾದ ಗಂಗಾ, ಯಮುನಾ ಸರಸ್ವತಿಗಳೆಂದು ಜನರು ತಮ್ಮ ಪಾಪಕಳೆದುಕೊಳ್ಳಲು ಸ್ನಾನ ಮಾಡಿದಾಗ ಆ ಪಾಪಗಳಿಂದ ತಮ್ಮ ಬಟ್ಟೆ ಕೊಳೆ ಆಗುತ್ತವೆಂದು ಹೇಳಿ, ಪುಂಡಲೀಕನಿಗೆ ತಂದೆ ತಾಯಿಯನ್ನು ಕಡೆಗಣಿಸಿದ್ದರಿಂದ ನಿನ್ನ ಪಾಪವು ಅತ್ಯಧಿಕವಾಗಿದೆ ಎಂದು ಹೇಳಿ ಹೋದರು. ಇದಾದ ನಂತರ ಪುಂಡಲೀಕನಿಗೆ ತನ್ನ ತಪ್ಪಿನ ಅರಿವಾಗಿ ಅಂದಿನಿಂದ ತನ್ನ ಹೆತ್ತವರನ್ನು ಅತ್ಯಂತ ಶುದ್ಧ ಮನಸ್ಸಿನಿಂದ ಗೌರವಿಸತೊಡಗಿದ.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ: RashT27

ಹೀಗೆ ಪುಂಡಲೀಕ ತನ್ನ ತಂದೆ ತಾಯಿಯರ ಸೇವೆಯನ್ನು ತನ್ನ ಪ್ರಥಮ ಆದ್ಯತೆಯನ್ನಾಗಿಸಿದ. ವೈಕುಂಠದಲ್ಲಿ ವಿಷ್ಣು ಇವನ ಈ ನಿಷ್ಠೆಗೆ ಪ್ರಸನ್ನನಾಗಿ ಅವನಿಗೆ ದರ್ಶನ ಕೊಡಲು ಸಾಕ್ಷಾತ್ ಅವನೆ ಪುಂಡಲೀಕನ ಮನೆಗೆ ಬಂದ. ಆ ಸಮಯದಲ್ಲಿ ತಂದೆ-ತಾಯಿಯರ ಸೇವೆಯಲ್ಲಿ ನಿರತನಾಗಿದ್ದ ಪುಂಡಲೀಕನಿಗೆ ಸಾಕ್ಷಾತ್ ವಿಷ್ಣು ಬಂದಿರುವ ವಿಚಾರ ತಿಳಿದರೂ ಅಪ್ಪ ಅಮ್ಮನ ಸೇವೆ ಮುಗಿಸದೆ ಹೊರಬರಲಾಗಲಿಲ್ಲ. ಆದರೆ, ಮನೆ ಮುಂದೆ ಮಳೆಗಾಲದ ಸಮಯವಾಗಿದ್ದರಿಂದ ಕೆಸರಾಗಿತ್ತು. ಹೀಗೆ ಕೆಸರಿನಲ್ಲಿ ಅತಿಥಿಯನ್ನು ನಿಲ್ಲಿಸಬಾರದೆಂದು ಇಟ್ಟಿಗೆಯೊಂದನ್ನು ಹೊರ ಬಿಸಿ ವಿಷ್ಣುವನ್ನು ಅದರ ಮೇಲೆ ನಿಂತುಕೊಳ್ಳಲು ವಿನಂತಿಸಿದ.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ: Redtigerxyz

ನಂತರ ಬಿಡುವಾದಾಗ ಹೊರ ಬಂದ ಪುಂಡಲೀಕ ವಿಷ್ಣುವಿನಲ್ಲಿ ಕ್ಷಮಾಪಣೆ ಕೇಳಿದ. ಆದರೆ, ವಿಷ್ಣು ಪುಂಡಲೀಕನ ನಿಷ್ಠೆ, ಭಕ್ತಿಗೆ ಅತೀವ ಸಂತಸಪಟ್ಟು ಬೇಕಾದ ವರದಾನ ಕೇಳಲು ಹೇಳಿದ. ಅದಕ್ಕೆ ಪುಂಡಲೀಕ ವಿಷ್ಣುವಿಗೆ ಇಲ್ಲಿಯೆ ನೆಲೆಸಬೇಕೆಂದು, ಸಕಲ ಜನರಿಗೆ ಕಲ್ಯಾಣ ಉಂಟುಮಾಡಬೇಕೆಂದು ಕೇಳಿಕೊಂಡ. ಹಾಗಾಗಿ ವಿಷ್ಣು ವಿಠೋಬನಾಗಿ ಇಟ್ಟಿಗೆಯ ಮೇಲೆ ರುಕ್ಮಿಣಿಯೊಡನೆ ನೆಲೆಸಿ ಪಂಢರಪುರದ ವಿಠ್ಠಲನಾದ ಹಾಗೂ ಭಕ್ತಿಯಿಂದ ಬೇಡಿಕೊಂಡು ಬರುವ ಸರ್ವ ಜನರ/ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ಪುಂಡಲೀಕ ವಿಠ್ಠಲನಾದ.

ನಿಮಗಿಷ್ಟವಾಗಬಹುದಾದ : ಸೋಲಾಪುರ ಹಾಗೂ ಸುತ್ತಮುತ್ತಲಿನ ಪ್ರಭಾವಿ ಸ್ಥಳಗಳು

ವಿಠ್ಠಲನಿಗೆ ನಡೆದುಕೊಳ್ಳುವ ಸಹಸ್ರಾರು ಭಕ್ತರು/ಜನರು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿದ್ದಾರೆ. ವಾರಕರಿ ಪಂಥದವರು ವಿಠ್ಠಲನ ಅಪ್ರತಿಮ ಭಕ್ತ ಜನಾಂಗವಾಗಿದೆ. ಇವರು ಭಕ್ತಿ ಚಳುವಳಿಯ ಪ್ರಮುಖ ವ್ಯಕ್ತಿಗಳಾದ ಸಂತ ತುಕಾರಾಮ, ಸಂತ ಜ್ಞಾನೇಶ್ವರ, ಸಂತ ನಾಮದೇವ, ಸಂತ ಏಕನಾಥನಂಥವರ ಅನುಯಾಯಿಗಳಾಗಿದ್ದಾರೆ. ಪ್ರತಿ ವರ್ಷ ಆಷಾಢ ಏಕಾದಶಿ (ಜೂನ್-ಜುಲೈ) ಹಾಗೂ ಕಾರ್ತಿಕ ಏಕಾದಶಿ (ನವಂಬರ್) ಗಳಂದು ವಾರಕರಿ ಜನಾಂಗದವರು ವಿಠ್ಠಲನ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ: Shubhi Shrivastava

ಇವರು ಗುಂಪುಗಳಾಗಿ, ಪಾಲ್ಕಿ ಸಮೇತರಾಗಿ ವಿಠ್ಠಲನ ದರ್ಶನಕ್ಕೆಂದು ಪಂಢರಪುರಕ್ಕೆ ತೆರಳುತ್ತಾರೆ. ಈ ಗುಂಪುಗಳನ್ನು ದಿಂಡಿಗಳೆಂದು ಕರೆಯುತ್ತಾರೆ. ಈ ಯಾತ್ರೆಯನ್ನು ಪಂಢರಪುರ ವರಿ/ವಾರಿ ಎಂದು ಕರೆಯಲಾಗುತ್ತದೆ. ಪಾಲ್ಕಿಗಳಲ್ಲಿ ಹಲವು ಸಂತರ ಅದರಲ್ಲೂ ವಿಶೇಷವಾಗಿ ತುಕಾರಾಮ ಹಾಗೂ ಜ್ಞಾನೇಶ್ವರರ ಪಾದುಕೆಗಳನ್ನು ಹೊತ್ತೊಯ್ಯುತ್ತಾರೆ. ಇದೊಂದು ಸಾವಿರ ವರ್ಷಗಳಿಂದಲೂ ನಡೆದುಕೊಂಡುಬಂದ ಅದ್ಭುತ ಸಂಪ್ರದಾಯವಾಗಿದ್ದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಸಕಲ ಕಷ್ಟಗಳನ್ನು ನಿವಾರಿಸುವ ಪಂಢರಪುರದ ವಿಠ್ಠಲ

ಚಿತ್ರಕೃಪೆ: van j

ಪಂಢರಪುರವು ಮಹಾರಾಷ್ಟ್ರದ ಹಲವು ಪ್ರಮುಖ ನಗರಗಳೊಂದಿಗೆ ರಸ್ತೆ ಹಾಗೂ ರೈಲು ಮಾರ್ಗಗಳ ಮೂಲಕ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. 70 ಕಿ.ಮೀ ದೂರದಲ್ಲಿರುವ ಸೋಲಾಪುರ ಇದಕ್ಕೆ ಹತ್ತಿರದಲ್ಲಿರುವ ಪ್ರಮುಖ ನಗರವಾಗಿದ್ದು ಸೋಲಾಪುರವನ್ನು ಭಾರತದ ಇತರೆ ಭಾಗಗಳಿಂದ ರೈಲಿನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಸೊಲಾಪುರದಿಂದ ಪಂಢರಪುರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X