ಇಂದಿನ ಆಧುನಿಕ ಯುಗದಲ್ಲೂ ಸಾಕಷ್ಟು ಜನ ಕೆಲವು ಹಳೆಯ ಆಚಾರ ವಿಚಾರಗಳನ್ನು ಗೌರವಿಸುತ್ತಾರೆ. ಹಲವಾರು ಪದ್ಧತಿಗಳನ್ನು ಆಚರಿಸುತ್ತಾರೆ. ಸಾಕಷ್ಟು ನಂಬಿಕೆಗಳಿಗೆ ಮಾನ್ಯತೆ ನೀಡುತ್ತಾರೆ. ಇದು ಅವರವರ ಭಕ್ತಿಗೆ ಬಿಟ್ಟ ವಿಚಾರ. ಅಂತಹ ಕೆಲವು ಆಚರಣೆಗಳ ಸಂಬಂಧಿಸಿದಂತೆ ಕುತೂಹಲದಿಂದ ಗಮನಿಸಿದಾಗ ಸರ್ಪ ದೋಷದ ಕುರಿತೂ ತಿಳಿದುಬರುತ್ತದೆ. ಹೌದು, ಬಹು ಸಂಖ್ಯೆಯಲ್ಲಿ ಹಿಂದುಗಳು ಈ ರೀತಿಯ ದೊಷದ ಕುರಿತು ನಂಬಿಕೆ ಇರಿಸಿಕೊಂಡಿದ್ದಾರೆ.
ಇನ್ನೂ ಈ ದೋಷವು ಸಾಮಾನ್ಯವಾಗಿ ಬಹುತೇಕರಿಗೆ ಹಿಂದಿನ ಪೂರ್ವಜರ ಕರ್ಮದಿಂದಲೋ ಅಥವಾ ಜಾತಕದಿಂದಲೋ ಬರುತ್ತದೆಂದು ಜ್ಯೋತಿಷಿಗಳು, ಜಾತಕ ಹೇಳುವವರು ಅಭಿಪ್ರಾಯ ಪಡುತ್ತಾರೆ. ಈ ನಾಗ ದೋಷವುಳ್ಳವರು ಸಾಮಾನ್ಯವಾಗಿ ಜೀವನಪೂರ್ತಿ ಸಾಕಷ್ಟು ಅಡೆ-ತಡೆ, ಕಷ್ಟ-ಕಾರ್ಪಣ್ಯ ಅನುಭವಿಸಬೇಕಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ದೋಷವನ್ನು ಪರಿಹರಿಸಿಕೊಳ್ಳಲು ಸಾಕಷ್ಟು ಜನ ಬಯಸುತ್ತಾರೆ ಹಾಗೂ ಅದೃಷ್ಟವೆಂಬಂತೆ ಇಂತಹ ದೋಷ ಪರಿಹಾರಕ್ಕೆಂದೆ ಕೆಲವು ಕ್ಷೇತ್ರಗಳು ಹಾಗೂ ದೇವಾಲಯಗಳು ಭಾರತದಾದ್ಯಂತ ಪ್ರಸಿದ್ಧಿ ಪಡೆದಿದ್ದು ಧಾರ್ಮಿಕ ಪ್ರವಾಸೋದ್ಯಮಕ್ಕೆ ಮಹತ್ವ ನೀಡಿದೆ.
ಆಸಕ್ತಿಕರ ಲೇಖನ : ಪವಿತ್ರ ಸಪ್ತ ನದಿಗಳು ಮತ್ತುಅವುಗಳ ತಟಗಳ ಮೇಲಿರುವ ತೀರ್ಥ ಕ್ಷೇತ್ರಗಳು
ಮೂಲವಾಗಿ ಈ ದೋಷ ನಿವಾರಣೆಗಾಗಿ ಸುಬ್ರಹ್ಮಣ್ಯ ದೇವರನ್ನು ಪ್ರಮುಖವಾಗಿ ಕಟ್ಟು ನಿಟ್ಟಿನ ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಾಗ ದೋಷ ಪರಿಹಾರ ದೇಗುಲಗಳಿದ್ದರೂ ಸಹ ಕೆಲವೆ ಕೆಲವು ಕ್ಷೇತ್ರಗಳು ಹೆಚ್ಚಿನ ಜನಮನ್ನಣೆಗಳಿಸಿದ್ದು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ದೋಷ ನಿವಾರಣಾರ್ಥವಾಗಿ ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ಆಯ್ದ ಹಾಗೂ ಪ್ರಮುಖ ದೇವಾಲಯ ಕ್ಷೇತ್ರಗಳ ಕುರಿತು ತಿಳಿಯಿರಿ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಕುಕ್ಕೆ ಸುಬ್ರಹ್ಮಣ್ಯ : ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ. ಅದುವೆ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಶ್ರೀಕ್ಷೇತ್ರ ಕುಕ್ಕೆ ಅಥವಾ ಕುಕ್ಕೆ ಸುಬ್ರಹ್ಮಣ್ಯ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಜಾತಕಗಳಲ್ಲಿರುವ ದೋಷ, ಬಹು ಮುಖ್ಯವಾಗಿ ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ. ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರಿನ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ. ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿ ಅಥವಾ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ಹರಿದಿರುವ ಕುಮಾರಧಾರಾ ನದಿಗೆ ಭೇಟಿ ನೀಡಿ, ನದಿಯ ನೀರಿನಿಂದ ಶುಚಿರ್ಭುತರಾಗಿ ನಂತರ ಸುಬ್ರಹ್ಮಣ್ಯ ದೇವರ ದರುಶನ ಕೋರಿ ದೇವಸ್ಥಾನಕ್ಕೆ ಪ್ರವೇಶಿಸುತ್ತಾರೆ. ದೇವಸ್ಥಾನವನ್ನು ಹಿಂಭಾಗದಿಂದ ಪ್ರವೇಶಿಸಲಾಗುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ದೇವಸ್ಥಾನದ ಗರ್ಭಗೃಹದ ಎದುರು ಗರುಡಗಂಭವನ್ನು ಕಾಣಬಹುದು. ಇಲ್ಲಿ ವಾಸಿಸುತ್ತಿರುವ ವಾಸುಕಿ ಎಂಬ ವಿಷಕಾರಿ ಸರ್ಪದ ಜ್ವಾಲೆಯಂತಹ ಉಸಿರುಗಳಿಂದ ಜನರನ್ನು ಇದು ರಕ್ಷಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಖಂಬಕ್ಕೂ ಸಹ ಪ್ರದಕ್ಷಿಣೆ ಹಾಕಲಾಗುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇಲ್ಲಿ ಮುಖ್ಯವಾಗಿ ಎರಡು ಸೇವೆಗಳನ್ನು ದೋಷವಿರುವವರು ಅಥವಾ ಭೇಟಿ ನೀಡುವ ಭಕ್ತಾದಿಗಳು ಮಾಡಬಹುದು. ಈ ಎರಡು ಮುಖ್ಯ ಪೂಜೆಗಳೆಂದರೆ ಒಂದು ಅಶ್ಲೇಷ ಬಲಿ ಪೂಜೆ ಹಾಗೂ ಇನ್ನೊಂದು ಸರ್ಪ ಸಂಸ್ಕಾರ/ಸರ್ಪದೋಷ. ತಿಳಿಯಬೇಕಾದ ಅಂಶವೆಂದರೆ ಈ ಎರಡೂ ಪೂಜೆಗಳಿಗೆ ಬಹಳ ಬೇಡಿಕೆಯಿರುವುದರಿಂದ ಮುಂಗಡವಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಬೇಕಾಗಿರುವುದು ಅವಶ್ಯ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಒಂದೆ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೆ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ನೆನಪಿರಲಿ ಈ ಪೂಜೆಯು ಬೆಳಿಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುತ್ತದೆ. ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸಗಳು ಈ ಪೂಜೆ ನೆರವೇರಿಸಲು ಉತ್ತಮ ಸಮಯ ಎನ್ನಲಾಗುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ಎರಡು ದಿನಗಳನ್ನು ಮೀಸಲಿಡಬೇಕಾಗುತ್ತದೆ. ಈ ಒಂದು ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ. ಈ ಪೂಜೆಯಲ್ಲಿ ಯಾರೆ ಆಗಲಿ ಯಾವುದೆ ಭೇದ ಭಾವನೆಗಳಿಲ್ಲದೆ ಪಾಲ್ಗೊಳ್ಳಬಹುದು. ಪೂಜೆ ಮಾಡಿಸುವವರಿಗೆ ದೇವಸ್ಥಾನದ ವತಿಯಿಂದಲೆ ಉಪಹಾರ, ಭೋಜನದ ವ್ಯವಸ್ಥೆಯಿರುತ್ತದೆ. ಪ್ರತಿ ಕುಟುಂಬದಿಂದ ಗರಿಷ್ಠ ನಾಲ್ಕು ಜನರು ಮಾತ್ರ ಪಾಲ್ಗೊಳ್ಳಬಹುದು.
ನಾಗದೋಷ ನಿವಾರಣಾ ಕ್ಷೇತ್ರಗಳು:
ಶ್ರೀಕಾಳಹಸ್ತಿ : ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ಪಟ್ಟಣದಲ್ಲಿರುವ ಶ್ರೀಕಾಳಹಸ್ತೀಶ್ವರ ದೇವಾಲಯವು ರಾಹು-ಕೇತುಗಳ ದೋಷಕ್ಕೆ ಪರಿಹಾರ ಪೂಜೆ ಒದಗಿಸುವುದರ ಮೂಲ ಕಾಳ ಸರ್ಪದೋಷ ನಿವಾರಿಸುವ ಕ್ಷೇತ್ರವಾಗಿದೆ. ಐತಿಹ್ಯದ ಪ್ರಕಾರ, ಹಿಂದೆ ಶ್ರೀ ಎಂಬ ಜೇಡ, ಕಾಳ ಎಂಬ ಸರ್ಪ ಹಾಗೂ ಹಸ್ತಿ ಎಂಬ ಆನೆಗಳು ಇಲ್ಲಿರುವ ಲಿಂಗ ರೂಪದ ಶಿವನನ್ನು ಯಾವುದೆ ಸ್ವಾರ್ಥವಿಲ್ಲದೆ ಭಕ್ತಿ, ಶೃದ್ಧೆಗಳಿಂದ ಪ್ರತ್ಯೇಕವಾಗಿ ಪೂಜಿಸುತ್ತಿದ್ದವು. ಒಂದೊಮ್ಮೆಈ ಮೂವರು ಒಟ್ಟಿಗೆ ಶಿವಲಿಂಗವನ್ನು ಪೂಜಿಸಲು ಬಂದಾಗ ತಮ್ಮ ತಮ್ಮಲೆ ತಪ್ಪು ತಿಳಿದು ಕಚ್ಚಾಡಿ ಸತ್ತು ಹೋದವು. ಆದರೆ ಇವರ ಭಕ್ತಿಗೆ ಮೆಚ್ಚಿದ ಪರಶಿವ ಆ ಮೂವರಿಗೂ ಮೋಕ್ಷ ಕರುಣಿಸಿ, ಈ ಕ್ಷೇತ್ರವು ಇನ್ನು ಮೇಲೆ ಶ್ರೀಕಾಳಹಸ್ತಿ ಎಂದೆ ಹೆಸರು ಪಡೆದು ತೀರ್ಥ ಯಾತ್ರಾ ಕ್ಷೇತ್ರವಾಗುತ್ತದೆ ಎಂದು ಹರಸಿದ.
ಚಿತ್ರಕೃಪೆ: Krishna Kumar Subramanian
ನಾಗದೋಷ ನಿವಾರಣಾ ಕ್ಷೇತ್ರಗಳು:
ಇನ್ನೊಂದು ವಿಷಯವೆಂದರೆ ಇದು ಪಂಚಭೂತ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿರುವ ಶಿವಲಿಂಗವು ಪಂಚಭೂತಗಳಲ್ಲೊಂದಾದ ವಾಯುವನ್ನು ಪ್ರತಿನಿಧಿಸುತ್ತದೆ. ಅಂತೆಯೆ ಇದಕ್ಕೆ ವಾಯುಲಿಂಗ ಎಂದು ಕರೆಯಲಾಗುತ್ತದೆ. ಅಲ್ಲದೆ ಇದು ರಾಹು-ಕೇತು ಕ್ಷೇತ್ರ ಎಂಬ ಹೆಸರಿನಿಂದಲೂ ಸಹ ಗುರುತಿಸಲ್ಪಡುತ್ತದೆ. ರಾಹು, ಕೇತು ದೋಷ ಅಥವಾ ಕಾಳಸರ್ಪ ದೋಷವಿರುವವರು ಇಲ್ಲಿ ವರ್ಷದಲ್ಲಿ ಎರಡು ಬಾರಿ ಅಂದರೆ ಉತ್ತರಾಯಣ (ಜನವರಿ 15 ರಿಂದ ಜುಲೈ 15 ರವರೆಗೆ ) ಹಾಗೂ ದಕ್ಷಿಣಾಯಣಗಳ (ಜುಲೈ 15 ರಿಂದ ಜನವರಿ 15 ರವರೆಗೆ) ಸಂದರ್ಭದಲ್ಲಿ ಈ ದೋಷ ನಿವಾರಣೆಯ ಪೂಜೆ ಮಾಡಿಕೊಳ್ಳಬಹುದಾಗಿದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಮನ್ನಾರಶಾಲಾ ದೇವಾಲಯ : ಮನ್ನಾರಶಾಲಾದಲ್ಲಿರುವ ನಾಗರಾಜನ ದೇವಾಲಯವು ಕೇರಳದಲ್ಲಿ ಸರ್ಪ ದೇವರ ಅತಿ ದೊಡ್ಡ ದೇವಸ್ಥಾನವಾಗಿದೆ. ಕೇರಳದ ಅಲಪುಳಾ (ಅಲ್ಲೆಪ್ಪಿ) ದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ. ದಂತಕಥೆಯ ಪ್ರಕಾರ, ಜಮದಗ್ನಿ ಋಷಿಗಳ ಮಗನಾದ ಪರಶುರಾಮರು ತಮಗಂಟಿದ ಕ್ಷತ್ರೀಯ ರಾಜರ ಸಂಹಾರದ ಪಾಪದಿಂದ ಮುಕ್ತಿ ಪಡೆಯಲು ಬ್ರಾಹ್ಮಣರಿಗೆ ಭೂಮಿಯನ್ನು ದಾನ ಮಾಡಲೆಂದು ಅರಬ್ಬಿ ಸಮುದ್ರದಲ್ಲಿ ತಮ್ಮ ಕೊಡಲಿಯನ್ನು ಒಂದು ನಿರ್ದಿಷ್ಟ ಸ್ಥಳದವ್ರೆಗೆ ಎಸೆದು ಕೇರಳ ಭಾಗವನ್ನು ಸೃಷ್ಟಿಸಿದರು ಹಾಗೂ ಅದನ್ನು ದಾನ ನೀಡಿದರು. ಆದರೆ ಆ ಭೂಮಿಯು ಕ್ಷಾರಯುಕ್ತವಾಗಿತ್ತು ಮತ್ತು ವಾಸಯೋಗ್ಯವಾಗಿರಲಿಲ್ಲ. ಇದನ್ನು ವಾಸಯೋಗ್ಯ ಮಾಡಲು ಸರ್ಪಗಳ ಅಗಾಧ ವಿಷ ಶಕ್ತಿ ಬೇಕಾಗಿತ್ತು.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇದನ್ನರಿತ ಪರಶುರಾಮರು ಕಠೋರವಾದ ತಪಸ್ಸು ಮಾಡಿ ನಾಗರಾಜನನ್ನು ಪ್ರಸನ್ನಗೊಳಿಸಿದರು. ನಾಗರಾಜನು ಪ್ರತ್ಯಕ್ಷನಾದಾಗ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ತರುವಾಯ ಆ ಪ್ರದೇಶಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸರ್ಪಗಳು ಆಗಮಿಸಿ ತಮ್ಮ ವಿಷ ಪ್ರಭಾವ ಬೀರಿ, ಕ್ಷಾರವಾದ ಆ ಭೂಮಿಯನ್ನು ವಾಸಯೋಗ್ಯ ಮಾಡಿದವು. ಅಲ್ಲದೆ ಪರಶುರಾಮ ಇಚ್ಛೆಯಂತೆ ನಾಗರಾಜನು ಇಲ್ಲಿಯೆ ನೆಲೆಸಿದನು. ಹೀಗಾಗಿ ನಾಗಪೂಜೆಗೆ ಇದೊಂದು ಪ್ರಖ್ಯಾತ ಕ್ಷೇತ್ರವಾಗಿದೆ. ಇನ್ನೊಂದು ವಿಶೇಷವೆಂದರೆ ಇಲ್ಲಿನ ದೇವಾಲಯದಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳು ಸ್ತ್ರೀಯರಿಂದಲೆ ಮಾಡಲ್ಪಡುತ್ತವೆ. ಅಂದರೆ ಇಲ್ಲಿ ಸ್ತ್ರೀಯರನ್ನು ಅರ್ಚಕರ ರೂಪದಲ್ಲಿ ಕಾಣಬಹುದು. ಈ ಒಂದು ಕ್ಷೇತ್ರದಲ್ಲಿ 30,000 ಕ್ಕೂ ಅಧಿಕ ಸರ್ಪಗಳ ಚಿತ್ರಗಳನ್ನು, ಪ್ರತಿಮೆಗಳನ್ನು ಕಾಣಬಹುದು.
ನಾಗದೋಷ ನಿವಾರಣಾ ಕ್ಷೇತ್ರಗಳು:
ತ್ರ್ಯಂಬಕೇಶ್ವರ/ತ್ರಿಂಬಕೇಶ್ವರ : ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿರುವ ತ್ರಿಂಬಕೇಶ್ವರದಲ್ಲಿ ನಾಗಬಲಿ ಅಥವಾ ಕಾಳಸರ್ಪ ದೋಷ ನಿವಾರಣಾ ಪೂಜೆಗಳು ಜನಮನ್ನಣೆಗಳಿಸಿವೆ. ಇದು ಜ್ಯೋತಿರ್ಲಿಂಗವಿರುವ ಪವಿತ್ರ ಸ್ಥಳವೂ ಆಗಿರುವುದರಿಂದ ಭಕ್ತಿಯಿಂದ ಇಲ್ಲಿ ಪೂಜೆಯನ್ನು ನೆರವೇರಿಸಿದರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆಂದು ಸಾವಿರಾರು ಭಕ್ತರ ಪ್ರಬಲ ನ್ಂಬಿಕೆಯಾಗಿದೆ. ತ್ರಿಂಬಕೇಶ್ವರವು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿದ್ದು, ನಾಶಿಕ್ ಪಟ್ಟಣದಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಮಹಾಕಾಲೇಶ್ವರ ದೇವಸ್ಥಾನ : ಮಧ್ಯಪ್ರದೇಶ ರಾಜ್ಯದಲ್ಲಿರುವ ಮಹಾಕಾಲೇಶ್ವರ ದೇವಸ್ಥಾನವೂ ಸಹ ಕಾಳಸರ್ಪ ದೋಷ ನಿವಾರಣೆಗೆ ಹೆಚ್ಚು ಭೇಟಿ ನೀಡಲ್ಪಡುವ ಉತ್ತರ ಭಾರತದ ಸ್ಥಳಗಳ ಪೈಕಿ ಒಂದಾಗಿದೆ. ಇದೂ ಸಹ ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿರುವುದರಿಂದ ಹೆಚ್ಚಿನ ಜನಪ್ರೀಯತೆಗಳಿಸಿದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಲೋಧೇಶ್ವರ ಮಹಾದೇವ ಮಂದಿರ : ಕಾಳ ಸರ್ಪ ದೋಷ ನಿವಾರಣೆಗೆಂದು ಪ್ರಸಿದ್ಧವಾಗಿರುವ ಸ್ಥಳಗಳ ಪೈಕಿ ಲೋಧೇಶ್ವರ ಮಹಾದೇವ ದೇವಾಲಯವೂ ಸಹ ಒಂದು. ಈ ದೇವಸ್ಥಾನವು ಉತ್ತರಪ್ರದೇಶ ರಾಜ್ಯದ ಬಾರಾಬಂಕಿ ಜಿಲ್ಲೆಯ ರಾಮನಗರ ತಾಲೂಕಿನ ಮಹಾದೇವ ಎಂಬ ಗ್ರಾಮದಲ್ಲಿ ಸ್ಥಿತವಿದೆ. ಇಲ್ಲಿರುವ ಶಿವಲಿಂಗವು ಹಿಂದೂ ಗ್ರಂಥದಲ್ಲಿ ಹೇಳಲಾದ 52 ಶಕ್ತಿಪೀಠಗಳಲ್ಲಿ ಕಂಡುಬರುವ ಶಿವಲಿಂಗಗಳಲ್ಲಿ ಅಪರೂಪವಾದ ಶಿವಲಿಂಗ ಹೊಂದಿದೆ. ಇದೊಂದು ಪುರಾತನವಾದ ದೇವಾಲಯವೂ ಹೌದು.
ನಾಗದೋಷ ನಿವಾರಣಾ ಕ್ಷೇತ್ರಗಳು:
ರಾಮೇಶ್ವರ : ದಕ್ಷಿಣದ ಜ್ಯೋತಿರ್ಲಿಂಗ ತಾಣವಾದ ಶ್ರೀಕ್ಷೇತ್ರ ರಾಮೇಶ್ವರಂನಲ್ಲಿಯೂ ಸಹ ನಾಗ ದೋಷ ಹಾಗೂ ನಾಗ ಪ್ರತಿಷ್ಠಾ ಪೂಜೆಗಳನ್ನು ಮಾಡಲು ಯೋಗ್ಯವಾದ ಸ್ಥಳವಾಗಿದೆ. ಏಕೆಂದರೆ, ಗ್ರಂಥಗಳ ಪ್ರಕಾರ, ರಾವಣನ ಸಹೋದರನಾಗಿದ್ದ ವಿಭೀಷಣನು ಕಾಳ ಸರ್ಪ ದೋಷ ನಿವಾರಣೆಗಾಗಿ ಶ್ರೀರಾಮಚಂದ್ರನ ನೆತೃತ್ವದಲ್ಲಿ ಇಲ್ಲಿಯೆ ಪೂಜೆ ಮಾಡಿದ್ದನು. ಅದರಿಂದ ಅವನಿಗೆ ಉತ್ತಮ ಫಲವೂ ದೊರೆಯಿತು. ಹೀಗಾಗಿ ರಾಮೇಶ್ವರಂ ಸಹ ನಾಗ ದೋಷ ನಿವಾರಣೆಯ ಪೂಜೆಗೆ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಆದರೆ ಇನ್ನೊಂದು ವಿಚಾರವೆಂದರೆ ಇಲ್ಲಿ ಪ್ರಾಥಮಿಕ ಪೂಜಾ ಕೈಂಕರ್ಯಗಳನ್ನು ಮುಗಿಸಿದ ಬಳಿಕ ತಮೀಲುನಾಡಿನಲ್ಲೆ ಇರುವ ರಾಮೇಶ್ವರಂನಿಂದ 320 ಕಿ.ಮೀ ದೂರವಿರುವ ನಾಗರಕೋಯಿಲ್ ನಲ್ಲಿರುವ ನಾಗಗಳ ಅಧಿದೇವತೆಗೆ ಮುಡಿಪಾದ ದೇವಸ್ಥಾನಕ್ಕೆ ತೆರಳಿ ಸಮಗ್ರ ವಿಧಿಯನ್ನು ಪೂರ್ಣಗೊಳಿಸಿದಾಗ ನಿಮಗಿದ್ದ ನಾಗ ದೋಷುವು ಪರಿಹಾರವಾಗುವುದಲ್ಲದೆ ನಿಮ್ಮ ಮುಂದಿನ ಪಿಳಿಗೆಗೂ ಇದು ಅಂಟುವುದಿಲ್ಲವೆನ್ನಲಾಗುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಘಾಟಿ ಸುಬ್ರಹ್ಮಣ್ಯ : ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಪ್ರಖ್ಯಾತ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಈ ಲೇಖನದ ಮೂಲಕ ಘಾಟಿಯ ಕುರಿತು ಚೊಕ್ಕಾಗಿ ತಿಳಿದುಕೊಳ್ಳಿ ಹಾಗೂ ಸರ್ಪಗಳ ಅಧಿ ದೇವತೆಯಾದ ಸುಬ್ರಮಣ್ಯನ ದರುಶನ ಪಡೆಯಲು ಯೋಜಿಸಿರಿ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ.
ಚಿತ್ರಕೃಪೆ: Vedamurthy J
ನಾಗದೋಷ ನಿವಾರಣಾ ಕ್ಷೇತ್ರಗಳು:
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಸುಂದರ ದಂತ ಕಥೆಯೊಂದು ಪ್ರಚಲಿತದಲ್ಲಿದೆ. ಅದರ ಪ್ರಕಾರ, ಬಹಳ ಹಿಂದೆ ವಿಳ್ಯದೆಲೆ ವ್ಯಾಪಾರಿಯೊಬ್ಬ ವ್ಯಾಪಾರಕ್ಕೆಂದು ಹೋಗುವಾಗ ಈ ಕ್ಷೇತ್ರದ ಮೂಲಕ ಹಾದು ಹೋಗುತ್ತಿದ್ದನಂತೆ. ಈ ಸ್ಥಳವು ಅವನ ಪ್ರಯಾಣ ಮಾರ್ಗದ ಮಧ್ಯದಲ್ಲಿದ್ದುದರಿಂದ ಇಲ್ಲಿ ಕಟ್ಟಿಕೊಂಡ ಬುತ್ತಿ ತಿಂದು ವಿರಮಿಸಲು ಇಲ್ಲಿ ತಂಗುತ್ತಿದ್ದ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇಲ್ಲಿರುವ ಕುಮಾರತೀರ್ಥದ ಬಳಿ ಊಟ ಮಾಡಿ ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ. ಹೀಗಿರುವಾಗ ಒಂದು ದಿನ ಅಪರಚಿತ ಧ್ವನಿಯೊಂದು "ಇದರ ಮೇಲೇಕೆ ಮಲಗಿರುವೆ ಏಳು ಏಳು" ಅಂದ ಹಾಗಾಗಿ ಅವನಿಗೆ ಎಚ್ಚರವಾಯಿತು. ಯಾರು ಕಾಣದಿದ್ದಾಗ ಇದೊಂದು ದುಷ್ಟ ಶಕ್ತಿಗಳ ಕೀಟಲೆ ಇರಬಹುದೆಂದು ಬಗೆದು ಮರಳಿ ಮಲಗಿದ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇದು ಹೀಗೆ ಪುನರಾವರ್ತಿತಗೊಂಡರೂ ಅದರ ಕುರಿತು ಅವನು ದಿವ್ಯ ನಿರ್ಲಕ್ಷ್ಯವಹಿಸಿದ. ಒಂದು ದಿನ ಹೀಗೆ ವ್ಯಾಪಾರ ಮುಗಿಸಿ ವಿರಮಿಸುತ್ತ ಮಲಗಿದ್ದಾಗ ಕನಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಸ್ವತಃ ಪ್ರತ್ಯಕ್ಷನಾಗಿ, ತಾನು ಆತ ಮಲಗಿರುವ ಶಿಲೆಯಿಂದ 20 ಗಜಗಳಷ್ಟು ದೂರದಲ್ಲಿ ನೆಲೆಸಿರುವುದಾಗಿಯೂ, ನನ್ನ ಕುರಿತು ಬಳ್ಳಾರಿಯ ಸಂಡೂರಿನ ರಾಜರಿಗೆ ವಿಷಯ ತಿಳಿಸಬೇಕೆಂದೂ, ಆಗ ಅವರು ನನಗೆ ಗುಡಿ ಗೋಪುರ ಕಟ್ಟಿಸುವುದಾಗಿಯೂ ಹೇಳಿ ಅದೃಶ್ಯನಾದ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಥಟ್ಟನೆ ಎಚ್ಚೆತ್ತ ವ್ಯಾಪಾರಿ ಬೆಚ್ಚಿ ಬಿದ್ದ ಹಾಗೂ ಏನೂ ತೋಚದಾದಾಗ ಅಲ್ಲಿ ಬರುತ್ತಿದ್ದ ಒಬ್ಬ ಬ್ರಾಹ್ಮಣನನ್ನು ತಡೆದು ನಡೆದ ಸರ್ವ ವಿಷಯವನ್ನು ಅರುಹಿದ. ಬ್ರಾಹಣನು ಚಕಿತಗೊಂಡು ತಾನು ಆ ಸ್ಥಳದಲ್ಲಿ ಬರಲು ಕ್ಷಣ ಮಾತ್ರದಲ್ಲಿ ಆತನಿಗೂ ಸ್ವಾಮಿಯ ದರ್ಶನವಾಗಿ ಹೋಯಿತು. ಇದರಿಂದ ಪ್ರಸನ್ನರಾದ ಇಬ್ಬರು ಅಂದೆ ಸಂಡೂರಿಗೆ ರಾಜನಿಗೆ ವಿಷಯ ತಿಳಿಸಲು ತೆರಳಿದರು.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇತ್ತ ಸಂಡೂರಿಗೆ ಬಂದು ರಾಜನನ್ನು ಕಂಡು ಎಲ್ಲ ವಿಷಯ ಹೇಳಲು, ರಾಜನು ಸದ್ಯ ತನಗೆ ಕಾರ್ಯಗಳು ಬಹಳಷ್ಟಿರುವುದರಿಂದ ತಕ್ಷಣವೆ ಬರಲಾಗದು, ಬೇಕಿದ್ದರೆ ಧನ ಕನಕಗಳನ್ನು ಕೊಡುವೆ ನೀವೆ ಗುಡಿ ಗೋಪುರವನ್ನು ನಿರ್ಮಿಸಿ ಎಂದು ಹೇಳಿ ಕಳುಹಿಸಿದನು. ಇದರಿಂದ ನೊಂದ ಆ ಇಬ್ಬರು ಮರಳಿ ತಮ್ಮೂರಿಗೆ ಹೊರಡುವ ಮುಂಚೆ ಅದೆ ಊರಿನ ಇನ್ನೊಬ್ಬ ಬ್ರಾಹ್ಮಣನ ಮನೆಯಲ್ಲಿ ವಸತಿ ಹೂಡಿದರು. ಅಂದು ರಾತ್ರಿ ರಾಜನ ಕನಸಿನಲ್ಲಿ ಸ್ವಾಮಿಯು ಉಗ್ರ ರೂಪದಲ್ಲಿ ದರುಶನ ನೀಡಿ, ತನ್ನ ಆದೇಶವನ್ನು ನಿರ್ಲಕ್ಷಿಸಿದುದರ ಕುರಿತು ಕೋಪಗೊಂಡನು.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇದರಿಂದ ದಿಢೀರನೆ ಎಚ್ಚೆತ್ತ ರಾಜನು ತಾನು ಎಂತಹ ತಪ್ಪು ಮಾಡುತ್ತಿರುವೆನೆಂದು ಗೊತ್ತಾಗಿ, ಸೈನಿಕರ ಸಹಾಯದಿಂದ ಆ ಇಬ್ಬರು ವ್ಯಾಪಾರಿ ಹಾಗೂ ಬ್ರಾಹ್ಮಣನನ್ನು ಕಂಡು ಹಿಡಿದು ಅವರ ಜೊತೆ ಘಾಟಿಯೆಡೆ ಪ್ರಯಾಣ ಬೆಳೆಸುತ್ತಾನೆ ಹಾಗೂ ಅಲ್ಲಿ ದೇವಸ್ಥಾನ, ಗೋಪುರ ನಿರ್ಮಿಸಿ ಆ ಇಬ್ಬರನ್ನು ಅದರ ನಿರ್ವಹಣೆಗಾಗಿ ನೇಮಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಆ ಬ್ರಾಹ್ಮಣ ಪೂಜಾರಿಯ ವಂಶಸ್ಥರೆ ಸ್ವಾಮಿಗೆ ಪೂಜೆಯನ್ನು ಮುಂದುವರೆಸುತ್ತ ಬಂದಿದ್ದಾರೆನ್ನಲಾಗಿದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇಲ್ಲಿರುವ ದೇವಾಲಯದ ಪ್ರಧಾನ ದೇವತೆ ಶ್ರೀ ಸುಬ್ರಹ್ಮಣ್ಯ. ದೇವಸ್ಥಾನದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿ ಸ್ಥಿತವಿದ್ದು ಪ್ರಸ್ತುತ ಇದು, ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ . ಇದು ನಾಗಗಳ ವಾಸಸ್ಥಾನವಾಗಿರುವುದರಿಂದ ಇಲ್ಲಿ ಸಲ್ಲಿಸಲಾಗುವ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುತ್ತದೆಂದು ನಂಬಲಾಗಿದೆ. ಹಾಗಾಗಿಯೆ ಇದೊಂದು ಪ್ರಸಿದ್ಧ ಸರ್ಪದೋಷ ನಿವಾರಣಾ ಕ್ಷೇತ್ರವಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಸರ್ಪಸಂಸ್ಕಾರ , ನಾಗಪ್ರತಿಷ್ಠೆ, ಆಶ್ಲೇಷಬಲಿಗಳಂತಹ ಇತರೆ ಹಲವಾರು ಪೂಜೆಗಳನ್ನು ಸಲ್ಲಿಸಲು ಬರುತ್ತಾರೆ. ಗರ್ಭಗುಡಿಯಲ್ಲಿ ಸುಬ್ರಹ್ಮಣ್ಯನ ಜೊತೆ ವಾಸುಕಿ ಹಾಗೂ ಆದಿಶೇಷನ ವಿಗ್ರಹಗಳಿವೆ. ಹುತ್ತದ ಮಣ್ಣನ್ನು ಪ್ರಸಾದವನ್ನಾಗಿ ಭಕ್ತರಿಗೆ ನೀಡಲಾಗುತ್ತದೆ. ಪುಷ್ಯ ಷಷ್ಟಿಯ ದಿನದಂದು ಬ್ರಹ್ಮೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಮಿಕ್ಕಂತೆ ನರಸಿಂಹ ಜಯಂತಯನ್ನೂ ಸಹ ಇಲ್ಲಿ ಆಚರಿಸಲಾಗುತ್ತದೆ. ಮಹಾ ಪ್ರಸಾದವು ಅಂದು ಲಭ್ಯವಿರುತ್ತದೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಇನ್ನೂ ಘಾಟಿಗೆ ತೆರಳುವುದು ಬಹಳ ಸುಲಭವಾಗಿದೆ. ಮೊದಲಿಗೆ ದೊಡ್ಡಬಳ್ಳಾಪುರಕ್ಕೆ ತೆರಳಬೇಕು. ಅಲ್ಲಿಂದ ಹತ್ತು ಕಿ.ಮೀ ದೂರವಿರುವ ಘಾಟಿಗೆ ಸಾರಿಗೆಯು ನಿರಂತರವಾಗಿ ಲಭ್ಯವಿರುತ್ತದೆ. ಇನ್ನೂ ದೊಡ್ಡಬಳ್ಳಾಪುರಕ್ಕೆ ಬೆಂಗಳೂರಿನಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಮೂಲಕ ತಲುಪಬಹುದು. ನಿಮ್ಮದೆ ಸ್ವಂತ ವಾಹನವಿದ್ದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣವಿರುವ ದೇವನಹಳ್ಳಿಗೆ ತೆರಳಿ ಅಲ್ಲಿಂದ ಎಡ ತಿರುವು ಪಡೆದು ದೊಡ್ಡಬಳ್ಳಾಪುರಕ್ಕೆ ತಲುಪಬಹುದು. ಅಲ್ಲಿಂದ ಘಾಟಿ ಕೇವಲ ಹತ್ತು ಕಿ.ಮಿ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಭೈರವ ಕೋನ : ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ಸಿ ಎಸ್ ಪುರಂ ತಾಲೂಕಿನ ಅಂಬವರಂ ಕೋತಪಲ್ಲಿ ಎಂಬ ಗ್ರಾಮದಲ್ಲಿರುವ ಭೈರವ ಕೋನ ಎಂಬ ಕ್ಷೇತ್ರವು ನಾಗ ದೋಷ ಪರಿಹರಿಸುವ ತಾಣವೆಂದು ಖ್ಯಾತಿಗಳಿಸಿದೆ. ಶಿವನ ಎಂಟು ರೂಪಗಳಾದ ಶಶಿ ನಾಗಲಿಂಗಂ, ರುದ್ರ, ವಿಶ್ವೇಶ್ವರ, ನಾಗರೀಕೇಶ್ವರ, ಭಾರ್ಗೇಶ್ವರ, ರಾಮೇಶ್ವರ, ಮಲ್ಲಿಕಾರ್ಜುನ ಹಾಗೂ ಪ್ರಕ್ಷಮಲಿಕಾಲಿಂಗಗಳಿಗೆ ಮುಡಿಪಾದ ದೇಗುಲಗಳನ್ನು ಒಂದೆ ಬಂಡೆಯಲ್ಲಿ ಕೆತ್ತಲಾಗಿದೆ. ಜನರ ನಂಬಿಕೆಯಂತೆ ಇಲ್ಲಿ ಶಿವನು ಕಾಲಭೈರವನಾಗಿಯೂ ನೆಲೆಸಿದ್ದಾನೆ. ಇಲ್ಲಿರುವ ಶಶಿ ನಾಗಲಿಂಗದ ದರ್ಶನ ಪಡೆದು 16 ರಿಂದ 128 ಸಲ ಪ್ರದಕ್ಷಿಣೆಯನ್ನು ಭಕ್ತಿ ಹಾಗೂ ನಂಬಿಕೆಯ ಮೂಲಕ ಹಾಕುವುದರಿಂದ ನಾಗ ದೋಷ ಪರಿಹಾರವಾಗುತ್ತದೆ ಎಂದು ಭಕ್ತರಲ್ಲಿ ಪ್ರಬಲವಾದ ನಂಬಿಕೆಯಿದೆ.
ಚಿತ್ರಕೃಪೆ: Ck984923
ನಾಗದೋಷ ನಿವಾರಣಾ ಕ್ಷೇತ್ರಗಳು:
ಇನ್ನೊಂದು ವಿಶೇಷವೆಂದರೆ ಬಾಲಭೈರವನು ಇಲ್ಲಿ ಕ್ಷೇತ್ರಪಾಲಕನಾಗಿದ್ದು ಅವನನ್ನು ಕಾಯಲು ದುರ್ಗೆಯೂ ಸಹ ಇಲ್ಲಿ ನೆಲೆಸಿದ್ದಾಳೆ ಹಾಗೂ ಆಕೆಗೆ ಮುಡಿಪಾದ ದೇವಸ್ಥಾನವೂ ಇಲ್ಲಿದೆ. ಕಾರ್ತಿಕ ಪೌರಣಮಿಯ ದಿನದಂದು ಚಂದ್ರನ ಬೆಳಕು ನೇರವಾಗಿ ದುರ್ಗೆಯ ವಿಗ್ರಹದ ಮೇಲೆ ಬಿಳಿವುದು ಒಂದು ವಿಶೇಷವಾಗಿದೆ. ಈ ಸುಂದರ ಅನುಭವವನ್ನು ನೋಡಲೂ ಸಹ ಸಾಕಷ್ಟು ಜನ ಭಕ್ತಾದಿಗಳು ಈ ಕ್ಷೇತ್ರ ಹಾಗೂ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನೂ ಈ ಕ್ಷೇತ್ರವನ್ನು ಅಂಬವರಂ ಕೋತಪಲ್ಲಿಯಿಂದ ದೊರೆಯುವ ಬಸ್ಸುಗಳ ಮೂಲಕ ತೆರಳಿ ಸುಲಭವಾಗಿ ತಲುಪಬಹುದು. ಒಂಗೋಲ್ ಪಟ್ಟಣದಿಂದ ಅಂಬವರಂಗೆ ತಲುಪಲೂ ಸಹ ಬಸ್ಸುಗಳು ದೊರೆಯುತ್ತವೆ. ಮೂರು ಬೆಟ್ಟಗಳ ಮಧ್ಯೆ ಇರುವ ಕಾಡು ಪ್ರದೇಶದಲ್ಲಿ ಭೈರವ ಕೋನ ಸ್ಥಿತವಿದೆ. ಅಲ್ಲದೆ ಇಲ್ಲಿ ಒಂದು ಸುಂದರವಾದ ಜಲಪಾತವನ್ನೂ ಸಹ ಕಾಣಬಹುದು.
ನಾಗದೋಷ ನಿವಾರಣಾ ಕ್ಷೇತ್ರಗಳು:
ತಿರುನಾಗೇಶ್ವರಂ : ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುನಾಗೇಶ್ವರ ಪಟ್ಟಣದಲ್ಲಿರುವ ನಾಗನಾಥ ಸ್ವಾಮಿಯ ದೇಗುಲವು ಒಂದು ಪ್ರಖ್ಯಾತ ರಾಹು ಕ್ಷೇತ್ರವಾಗಿದೆ. ನವಗೃಹಗಳ ಪೈಕಿ ಒಂದಾದ ರಾಹುವಿನನ್ನು ಇಲ್ಲಿ ಅವನ ಮಡದಿಯರಾದ ನಾಗವಲ್ಲಿ ಹಾಗೂ ನಾಗಕನ್ನಿ ಸಮೇತನಾಗಿ ನೆಲೆಸಿರುವುದನ್ನು ಕಾಣಬಹುದು. ಇಲ್ಲಿ ರಾಹುವಿಗೆ ರಾಹು ಕಾಲದಲ್ಲಿಯೆ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಅಚ್ಚರಿ ಎಂದರೆ ಭಕ್ತರ ಪ್ರಕಾರ, ಹಾಲು ರಾಹುವಿನ ಮೈಮೇಲಿರುವಾಗ ನೀಲಿ ಬಣ್ಣಕ್ಕೆ ತಿರುಗಿ ನಂತರ ನೆಲೆದ ಮೇಲೆ ಬಿದ್ದ ತಕ್ಷಣ ಮತ್ತೆ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗಿದೆ. ಭಕ್ತರು ಇಲ್ಲಿ ನಾಗ ಪ್ರತಿಷ್ಠಾ ಹಾಗೂ ದೋಷ ನಿವಾರಣಾ ಪೂಜೆಗಳನ್ನೂ ಸಹ ನೆರವೇರಿಸುತ್ತಾರೆ. ಶಿವನು ಇಲ್ಲಿ ನಾಗನಾಥನಾಗಿ ನೆಲೆಸಿದ್ದಾನೆ.
ನಾಗದೋಷ ನಿವಾರಣಾ ಕ್ಷೇತ್ರಗಳು:
ಮೋಪಿದೇವಿ : ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಚಲ್ಲಪಲ್ಲಿಯಿಂದ ಐದು ಕಿ.ಮೀ ದೂರದಲ್ಲಿರುವ ಮೋಪಿದೇವಿಯ ಸುಬ್ರಹ್ಮಣ್ಯ ದೇವಸ್ಥಾನವು ನಾಗ ದೋಷ ಪರಿಹಾರ ಪೂಜೆಗಳಿಗೆ ಹೆಸರುವಾಸಿಯಾದ ತಾಣವಾಗಿದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಶಿವಲಿಂಗ ರೂಪದಲ್ಲಿ ನೆಲೆಸಿದ್ದು ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆನ್ನಲಾಗಿದೆ.