ಬಾಹುಬಲಿ ಅರ್ಥಾತ್ ಗೊಮ್ಮಟೇಶ್ವರನು ಜೈನ ಧರ್ಮದವರಿಗೆ ಅತಿ ಪವಿತ್ರವಾದ ದೇವಮಾನವ. ನಂಬಿಕೆಯ ಪ್ರಕಾರ, ಬಾಹುಬಲಿಯು ಜೈನ ಧರ್ಮದ ಮೊದಲ ತೀರ್ಥಂಕರರಾದ ರಿಷಭನ ನೂರು ಮಕ್ಕಳಲ್ಲಿ ಎರಡನೆಯವನು. ದಿಗಂಬರ ಪಂಗಡದ ಪ್ರಕಾರ ಬಾಹುಬಲಿಯು ಕಾಲ ಚಕ್ರದ ಅರ್ಧ ಸಮಯದಲ್ಲೆ ಬಂಧನ ಮುಕ್ತನಾದ ಮೊದಲ ಮನುಷ್ಯನಾಗಿದ್ದಾನೆ. ಒಂದೊಮ್ಮೆ ಅಹಂಕಾರದಿಂದ ಕೂಡಿದ್ದ ಬಾಹುಬಲಿಯು ಅಣ್ಣನೊಡನೆ ಯುದ್ಧ ಮಾಡಿ ನಂತರ ವಿಷಾದಿಸಿ, ಸತ್ಯ - ಜ್ಞಾನಗಳ ಶೋಧನೆಯ ಹಾದಿಯಲ್ಲಿ ತೊಡಗಿಕೊಂಡು ಕಠಿಣವಾದ ತಪಸ್ಸನ್ನಾಚರಿಸಿ ಕೊನೆಗೆ ಬ್ರಹ್ಮ ಜ್ಞಾನ ಪಡೆದ ಮಹಾನುಭಾವ.
ಗೊಮ್ಮಟೇಶ್ವರ ಎಂದು ಕರೆಯಲ್ಪಡುವ ಬಾಹುಬಲಿಯ ಏಕಶಿಲಾ ಪ್ರತಿಮೆಗಳನ್ನು ಪ್ರಸ್ತುತ ಕರ್ನಾಟಕದ ಐದು ಕಡೆಗಳಲ್ಲಿ ಕಾಣಬಹುದಾಗಿದೆ. ಪ್ರತಿ ಹನ್ನೆರಡು ವರುಷಗಳಿಗೊಮ್ಮೆ ಮಹಾಮಸ್ತಕಾಭಿಶೇಕವನ್ನು ಗೊಮ್ಮಟೇಶ್ವರನ ಪ್ರತಿಮೆಗೆ ಅತಿ ಉತ್ಸಾಹ, ಶೃದ್ಧೆ ಹಾಗು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಕರ್ನಾಟಕದ ಯಾವ ಯಾವ ಸ್ಥಳಗಳಲ್ಲಿ ಗೊಮ್ಮಟೇಶ್ವರನ ಪ್ರತಿಮೆಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಶ್ರವಣಬೆಳಗೊಳ:
ಬೆಂಗಳೂರಿನಿಂದ 158 ಕಿ.ಮೀ ದೂರವಿರುವ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಎಂಬ ಪಟ್ಟಣದಲ್ಲಿ ರಾಜ್ಯದ ಮೊದಲ ಪ್ರಖ್ಯಾತ ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಯಿದೆ. ಈ ಪಟ್ಟಣವು ಜೈನ ಸಮುದಾಯದವರಿಗೆ ಪವಿತ್ರವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಗೊಮ್ಮಟೇಶ್ವರನ ಪ್ರತಿಮೆಯು ಸುಮಾರು 57 ಅಡಿಗಳಷ್ಟು ಎತ್ತರವಿದ್ದು ಕಲಾತ್ಮಕವಾಗಿ ಕೆತ್ತಲಾಗಿದೆ.
ಚಿತ್ರಕೃಪೆ: Sughoshdivanji
ಕಾರ್ಕಳ:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 42 ಅಡಿಗಳಷ್ಟು ಎತ್ತರದ ಗೊಮ್ಮಟೇಶ್ವರನ ಪ್ರತಿಮೆಯನ್ನು ಕಾಣಬಹುದು. ಪಶ್ಚಿಮ ಘಟ್ಟದಲ್ಲಿ ನೆಲೆಸಿರುವ ಈ ಪ್ರದೇಶವು ಬೆಂಗಳೂರಿನಿಂದ ಸುಮಾರು 380 ಕಿ.ಮೀ ದೂರದಲ್ಲಿದೆ. ಕಡೆಯ ಮಹಾಮಸ್ತಕಾಭಿಶೇಕವು 2002 ರಲ್ಲಿ ಜರುಗಿದ್ದು ಪ್ರಸ್ತುತ ಫೆಬ್ರುವರಿ 2014 ರಲ್ಲಿ ಜರುಗುವ ನಿರೀಕ್ಷೆಯಿದೆ.
ಚಿತ್ರಕೃಪೆ: Vaikoovery
ಧರ್ಮಸ್ಥಳ:
ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಶ್ರೀ ಮಂಜುನಾಥನ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 39 ಅಡಿಗಳಷ್ಟು ಎತ್ತರದ ಏಕಶಿಲಾ ಗೊಮ್ಮಟೇಶ್ವರನ ಪ್ರತಿಮೆಯನ್ನು ಕಾಣಬಹುದು.
ಚಿತ್ರಕೃಪೆ: Mithun Raju
ವೇಣೂರು:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಫಾಲ್ಗುಣಿ ನದಿ ತಟದ ಮೇಲೆ ನೆಲೆಸಿರುವ ವೇಣೂರು ಎಂಬ ಹಳ್ಳಿಯಲ್ಲಿ 35 ಅಡಿಗಳಷ್ಟು ಎತ್ತರದ ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಯನ್ನು ಕಾಣಬಹುದಾಗಿದೆ. ಧರ್ಮಸ್ಥಳ - ಮೂಡಬಿದ್ರಿ - ಕಾರ್ಕಳ ಮಾರ್ಗದಲ್ಲಿ ಸಾಗುವಾಗ ವೇಣೂರು ಗ್ರಾಮವನ್ನು ಕಾಣಬಹುದು.
ಗೊಮ್ಮಟಗಿರಿ:
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಿಂದ 20 ಕಿ.ಮೀ ದೂರದಲ್ಲಿರುವ ಗೊಮ್ಮಟಗಿರಿಯಲ್ಲಿ 20 ಅಡಿಗಳಷ್ಟು ಎತರದ ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಯನ್ನು ಕಾಣಬಹುದು. ಹುಣಸೂರು ತಾಲೂಕಿನ ಬಿಳಿಕೆರೆ ಹೊಬಳಿಯಲ್ಲಿ ಗೊಮ್ಮಟಗಿರಿಯಿದೆ. ಇದೊಂದು ಜೈನ ಕೇಂದ್ರವಾಗಿದ್ದು 700 ವರ್ಷಗಳಷ್ಟು ಪುರಾತನವಾದ ಗೊಮ್ಮಟೇಶ್ವರನ ಪ್ರತಿಮೆಯನ್ನು ಹೊಂದಿದೆ. ಈ ಪ್ರತಿಮೆಯನ್ನು 50 ಮೀ. ಗಳಷ್ಟು ಎತ್ತರದ "ಶ್ರಾವಣ ಗುಡ್ಡ" ಎಂಬ ಗುಡ್ಡದ ತುದಿಯಲ್ಲಿ ಸ್ಥಾಪಿಸಲಾಗಿದೆ.
ಚಿತ್ರಕೃಪೆ: Rajan Thambehalli