ಗ್ರೀಕ್ ಸಾಹಿತ್ಯದಲ್ಲಿ ಇಲಿಯಡ್ ಕವಿತೆಯನ್ನು ಬಹುಶಃ ಕೇಳದವರು ಯಾರೂ ಇಲ್ಲ. ಹೇಗೆ ರಾಮಾಯಣ ಹಾಗೂ ಮಹಾಭಾರತಗಳು ಹಿಂದು ಸಂಸ್ಕೃತಿಯ ಮಹಾಕಾವ್ಯಗಳಾಗಿದೆಯೊ ಅದೆ ರೀತಿಯಲ್ಲಿ ಗ್ರೀಕ್ ಸಂಸ್ಕೃತಿಯ ಮಹಾಕಾವ್ಯವಾಗಿದೆ ಇಲಿಯಡ್. ಹೋಮರ್ ಇದರ ನಿರ್ಮಾತೃ ಎನ್ನಲಾಗುತ್ತದೆ.
ಆದರೆ ವಿಷಯ ಏನಪ್ಪಾ ಎಂದರೆ ಈ ಮಹಾಕಾವ್ಯದಲ್ಲಿ ಗ್ರೀಕರ ಕದನವು ಒಂದು ಅತ್ಯದ್ಭುತ ಕೋಟೆ ನಗರಿಯನ್ನು ವಶಪಡಿಸಿಕೊಳ್ಳುವತ್ತ ಸುತ್ತುತ್ತದೆ. ಆ ಚೆಂದದ ಕೋಟೆ ನಗರವೆ ಟ್ರಾಯ್. ಬಹುಶಃ ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರುವ ಹಾಗೆ ಟ್ರಾಯ್ ನಗರದ ಕುರಿತು ಹಾಲಿವುಡ್ಡಿನಲ್ಲಿ ಅದೆ ಹೆಸರಿನ ಯಶಸ್ವಿ ಚಿತ್ರವನ್ನೂ ಸಹ ನಿರ್ಮಿಸಲಾಗಿದೆ.
ಸಮುದ್ರದಲ್ಲಿ ಎದೆಯುಬ್ಬಿಸಿ ನಿಂತಿರುವ ಮುರುದ್ ಜಂಜೀರಾ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಈ ಟ್ರಾಯ್ ನಗರವನ್ನು ಭಾರತಕ್ಕೆ ಸಂಬಂಧಿಸಿದಂತೆ ಆಂಗ್ಲರು ಪ್ರಸ್ತುತ ತಮಿಳುನಾಡಿನಲ್ಲಿರುವ ಒಂದು ಕೋಟೆ ಹಾಗೂ ನಗರವನ್ನು ಆ ರೀತಿ ಕರೆದಿದ್ದರು. ಅಂದರೆ ಪೂರ್ವದ ಟ್ರಾಯ್ ಎಂದು ಈ ಕೋಟೆಯನ್ನು ಸಂಬೋಧಿಸಿದ್ದರು. ಅದೇ ಜಿಂಜೀ ಕೋಟೆ ಅಥವಾ ಸೆಂಜಿ ಕೋಟೆ.
ಚೋಳರು, ಕುರುಂಬರು, ಬಿಜಾಪುರ ಸುಲ್ತಾನರು, ಮರಾಠರು, ವಿಜಯನಗರ ನಾಯಕರು, ಮುಘಲರು, ಫ್ರೆಂಚರು ಹಾಗೂ ಇಂಗ್ಲೀಷರು ಈ ಕೋಟೆಯನ್ನ ಆಯಾ ಕಾಲದಲ್ಲಿ ತಮ್ಮ ತಮ್ಮ ವಶಕ್ಕೆ ಪಡೆದು ಆಳಿದ್ದಾರೆ. ಆದಾಗ್ಯೂ ಈ ಕೋಟೆಯು ಅತ್ಯಂತ ಪುರಾತನವಾದ ರಚನೆಯಾಗಿರುವುದಲ್ಲದೆ ತನ್ನ ಸುತ್ತಲೂ ಸಾಕಷ್ಟು ರೋಚಕವಾದ ದಂತ ಕಥೆಗಳನ್ನೂ ಸಹ ಹೊಂದಿದೆ.
ಜಿಂಜೀ ಕೋಟೆ
ಜಿಂಜೀ ಕೋಟೆಯು ಮೂಲತಃ ಮೂರು ಗುಡ್ಡಗಳ ಮೇಲೆ ತನ್ನ ಉಪಸ್ಥಿತಿಯನ್ನು ಹೊಂದಿದ್ದು ಆ ಮೂರು ಗುಡ್ಡಗಳ ಮೇಲೆ ಕೋಟೆಯ ಗೋಡೆಗಳನ್ನು ನಿರ್ಮಿಸಲಾಗಿರುವುದನ್ನು ಕಾಣಬಹುದು. ಇದರಿಂದಾಗಿ ಆ ಗುಡ್ಡಗಳು ಒಂದಕ್ಕೊಂದು ಸಂಪರ್ಕ ಹೊಂದಿರುವಂತೆ ಕಂಡುಬರುತ್ತದೆ.
ಚಿತ್ರಕೃಪೆ: Vinbhan
ಹನ್ನೊಂದು ಕಿ.ಮೀ ವಿಸ್ತೀರ್ಣ
ಗೋಡೆಗಳ ಉದ್ದವು ಸುಮಾರು 13 ಕಿ.ಮೀ ಗಳಷ್ಟಿದ್ದು ಕೋಟೆಯ ಒಳ ಭಾಗದ ಒಟ್ಟು ವಿಸ್ತಾರವು ಸುಮಾರು 11 ಚ.ಕಿ.ಮೀ ಗಳಷ್ಟಿದೆ. ಆ ಮೂರು ಗುಡ್ಡಗಳೆಂದರೆ ಉತ್ತರಕ್ಕೆ ಕೃಷ್ಣಗಿರಿ ಬೆಟ್ಟ, ಪಶ್ಚಿಮಕ್ಕೆ ರಾಜಗಿರಿ ಬೆಟ್ಟ ಹಾಗೂ ಆಗ್ನೇಯಕ್ಕೆ ಚಂದ್ರಾಯನದುರ್ಗ.
ಚಿತ್ರಕೃಪೆ: Karthik Easvur
ಕೋಟೆ ಸಂಕೀರ್ಣ
ಕೋಟೆಯ ಸಂಕೀರ್ಣದಲ್ಲಿ ಹಲವಾರು ರಚನೆಗಳನ್ನು ಕಾಣಬಹುದಾಗಿದೆ. ಅದರಲ್ಲಿ ಕಲ್ಯಾಣ ಮಹಲ್ ಬಹಳವಾಗಿ ಆಕರ್ಷಿಸುತ್ತದೆ. ಇದು ಏಳು ಅಂತಸ್ತುಗಳುಳ್ಳ ಅದ್ಭುತ ರಚನೆಯಾಗಿದ್ದು ಸಂಕೀರ್ಣದ ಪ್ರಮುಖ ಆಕರ್ಷಣೆಯಾಗಿ ಗಮನಸೆಳೆಯುತ್ತದೆ.
ಚಿತ್ರಕೃಪೆ: Karthik Easvur
ಸಾಕಷ್ಟಿವೆ
ಅದಲ್ಲದೆ ಆಹಾರ ಉಗ್ರಾಣಗಳು, ಜೈಲುಗಳು, ದೇವಾಲಯ, ಕೊಳ ಹೀಗೆ ಇನ್ನೂ ಕೆಲವಾರು ರಚನೆಗಳನ್ನು ಕಾಣಬಹುದಾಗಿದೆ. ಇಲ್ಲಿರುವ ದೇವಾಲಯವು ದೇವಿ ಚೆಂಜಿ ಅಮ್ಮನವರಿಗೆ ಮುಡಿಪಾದ ದೇವಾಲಯವಾಗಿದೆ. ಅಲ್ಲದೆ ಪವಿತ್ರವಾದ ಕಲ್ಯಾಣಿಯಿದ್ದು ಅದನ್ನು ಆನೈಕೊಳಂ ಎಂದು ಕರೆಯುತ್ತಾರೆ.
ಚಿತ್ರಕೃಪೆ: Priasai
ರೋಚಕವಾದ
ಈ ಕೋಟೆಗೆ ಸಂಬಂಧಿಸಿದಂತೆ ಎರಡು ರೋಚಕವಾದ ಪ್ರಸಂಗಗಳಿವೆ. ಒಂದು ತಮಿಳು ದಂತಕಥೆಯಾದರೆ ಇನ್ನೊಂದು ಐತಿಹಾಸಿಕವಾಗಿ ಇತಿಹಾಸಕಾರರಿಂದ ಸಿಕ್ಕ ಕೆಲವೆ ಕೆಲವು ದಾಖಲೆಗಳಿಂದ ಸಂಗ್ರಹಿಸಲಾದ ಕೋಟೆ ಇತಿಹಾಸ. ಕೋಟೆ ಇತಿಹಾಸದಂತೆ,
ಚಿತ್ರಕೃಪೆ: Karthik Easvur
ಚೋಳರು
ಇದು ಮೂಲತಃ ಚೋಳರು ನಿರ್ಮಿಸಿದ್ದ ರಚನೆ ಎನ್ನಲಾಗುತ್ತದೆ. ನಂತರ ಇದನ್ನಾಳಿದ್ದ ಹಲವಾರು ಸಾಮ್ರಾಜ್ಯಗಳು ಇದರ ನವೀಕರಣ ಮಾಡಿದರೆನ್ನಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮರಾಠರು. ಛತ್ರಪತಿ ಶಿವಾಜಿ ಮಹಾರಾಜನು ಇದನ್ನು ಬೇಧಿಸಲಾರದ ಕೋಟೆ ಎಂದೆ ಪ್ರಶಂಸಿಸಿದ್ದನು.
ಚಿತ್ರಕೃಪೆ: Johnson81385
ಅಬೇಧ್ಯ
ಇದು ಬೆಟ್ಟವೊಂದರ ಮೇಲಿದ್ದು ಅತ್ಯದ್ಭುತವಾಗಿ ಕಾಯ್ದುಕೊಳ್ಳಬಹುದಾದಂತಹ ರಣ ನೀತಿಗೆ ಉತ್ತಮ ಉದಾಹರಣೆಯಾಗಿತ್ತು. ಈ ಕೋಟೆಯೊಳಗೆ ಪ್ರವೇಶಿಸಲು ದ್ವಾರದ ಒಂದು ಮಾರ್ಗವಿತ್ತು ಹಾಗೂ ಅದರ ಕೆಳಗೆ ನೂರಾರು ಅಡಿಗಳಷ್ಟು ಕಂದಕಗಳಿದ್ದವು. ಕೇವಲ ಸೇತುವೆಯೊಂದರ ಮೂಲಕವಾಗಿಯೆ ಕೋಟೆಯೊಳಗೆ ಪ್ರವೇಶಿಸಬೇಕಾಗಿತ್ತು.
ಚಿತ್ರಕೃಪೆ: Priasai
ವಿವಿಧ ಸಾಮ್ರಾಜ್ಯಗಳು
ಚೋಳರ ನಂತರ ಕುರುಂಬರು ಈ ಕೋಟೆಯನ್ನಾಳುತ್ತಿದ್ದರು. ಕ್ರಮೇಣವಾಗಿ ಇದು ಬಿಜಾಪುರ ಸುಲ್ತಾನರ ಪಾಲಾಯಿತು. ನಂತರ ಇದನ್ನು ವಶಪಡಿಸಿಕೊಳ್ಳಲು ಮರಾಠರು. ಸಜ್ಜಾದರು. ಆದರೆ ಇದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ ಶಿವಾಜಿಯೂ ಸಹ ಸೋಲೊಪ್ಪದವನಲ್ಲ. ಹೀಗಾಗಿ ಉಡಗಳನ್ನು ಬಳಸಿಕೊಂಡು ಕೋಟೆಯನ್ನು ಮರಾಠರು ವಶಪಡಿಸಿಕೊಳ್ಳಲು ಯಶಸ್ವಿಯಾದರು 1677 ರಲ್ಲಿ.
ಚಿತ್ರಕೃಪೆ: Vinbhan
ಬಳಸಲ್ಪಡುತ್ತಿದ್ದವು!
ಉಡಗಳು (ದೊಡ್ಡ ಗಾತ್ರದ ಹಲ್ಲಿ ರೀತಿಯ ಜೀವಿಗಳು) ಸಾಮಾನ್ಯವಾಗಿ ಗಟ್ಟಿಯಾದ ಉಗುರುಗಳನ್ನು ಹೊಂದಿದ್ದು ಗೋಡೆಗಳ ಮೇಲೆ ಅಸಾಧಾರಣವಾದಂತಹ ಸದೃಢ ನಿಲುವನ್ನು ಹೊಂದಿರುತ್ತವೆ. ಹೀಗೆ ಉಡಗಳನ್ನು ಕೋಟೆಯ ಗೋಡೆಗಳ ಮೇಲೆ ಹಾರಿಸಿ ಅವುಗಳಿಗೆ ಕಟ್ಟಲಾದ ಹಗ್ಗದಿಂದ ಸೈನಿಕರು ಕೋಟೆ ಏರಿದ್ದರೆನ್ನಲಾಗುತ್ತದೆ.
ಚಿತ್ರಕೃಪೆ: Vinbhan
ತಮಿಳು ಕಥೆ
ಈ ರೀತಿಯಾಗಿ ಮರಾಠರ ಕೈವಶವಾದ ಈ ಕೋಟೆ ನಂತರ ಮುಘಲರು ಹಾಗೂ ಕೊನೆಯದಾಗಿ ಆಂಗ್ಲರ ಕೈವಶವಾಯಿತು ಎನ್ನುತ್ತದೆ ಇತಿಹಾಸ. ಆದರೆ ತಮಿಳಿನಲ್ಲಿ ಈ ಇತಿಹಾಸಕ್ಕೆ ಇನ್ನೊಂದು ಅದ್ಭುತವಾದ ಆಯಾಮವೊಂದಿದೆ. ಅದೆ ರಾಜಾ ತೇಜ್ ಸಿಂಗ್ ಮತ್ತು ಅವನ ಕುದುರೆ, ಮಡದಿಯ ಪ್ರೀತಿ ಹಾಗೂ ಅವನ ಪ್ರಾಣ ಸ್ನೇಹಿತ ಮೊಹ್ಮದ್ ಖಾನ್.
ಚಿತ್ರಕೃಪೆ: Priasai
ಸಾಮಂತ
ಕಥೆಯ ಪ್ರಕಾರ, ಮುಘಲರ ಸಮಯದಲ್ಲಿ ಮುಘಲರ ಸಾಮಂತನಾಗಿದ್ದ ರಾಜಾ ಸ್ವರೂಪ್ ಸಿಂಗ್ ಎಂಬಾತನು ಈ ಕೋಟೆಯನ್ನಾಳುತ್ತಿದ್ದ. ಔರಂಗಜೇಬನ ನಂತರ ಮುಘಲರ ಪ್ರಭಾವ ಕಡಿಮೆಯಾಗಿ ಅರ್ಕೋಟಿನ ನವಾಬನು ಪ್ರದೇಶದಲ್ಲಿ ತಾನೆ ಚಕ್ರವರ್ತಿ ಎಂದು ಘೋಷಿಸಿಕೊಂಡನು. ಆದರೆ ರಾಜಾ ಸ್ವರೂಪ್ ಸಿಂಗ್ ಇದನ್ನೊಪ್ಪಲಿಲ್ಲ. ಪರಿಣಾಮ ನವಾಬನು ಸ್ವರೂಪ್ ಸಿಂಗನ ಮೇಲೆ ಯುದ್ಧ ಮಾಡಿದನು.
ಚಿತ್ರಕೃಪೆ: Nprakashemail
ಆದರೂ ಧೈರ್ಯ
ವಿಶೇಷವೆಂದರೆ ಸ್ವರೂಪ್ ಸಿಂಗನ ಹತ್ತಿರವಿದ್ದದ್ದು ಕೇವಲ ಏಳು ನೂರು ಸೈನಿಕರು ಹಾಗೂ ನವಾಬನ ಬಳಿ ಇಪ್ಪತ್ತು ಸಾವಿರಕ್ಕೂ ಅಧಿಕ ಸೈನಿಕರಿದ್ದರು. ಇಷ್ಟಾಗ್ಯೂ ನವಾಬನಿಗೆ ಆ ಕೋಟೆಯನ್ನು ವಶಪಡಿಸಿಕೊಳ್ಳಲಾಗಿರಲಿಲ್ಲ. ಕಾರಣ ಸ್ವರೂಪ್ ಸಿಂಗ ಹಾಗೂ ಅವನ ಸೈನಿಕರ ಸಾಹಸ ಧೈರ್ಯ ಒಂದೆಡೆಯಾದರೆ, ಕೋಟೆಯ ಅಬೇಧ್ಯ ರಚನೆ ಮತ್ತೊಂದೆಡೆಯಾಗಿತ್ತು.
ಚಿತ್ರಕೃಪೆ: Nagarajan Natarajan
ರಾಜ ತೀರಿಹೋದ
ಹೇಗಾದರೂ ಮಾಡಿ ಆ ಅದ್ಭುತ ಕೋಟೆಯನ್ನು ಪಡೆಯಲೆಬೇಕೆಂದು ನವಾಬ ಹಪಹಪಿಸುತ್ತಿದ್ದನು. ಹೀಗಿರುವಾಗ ದುರದೃಷ್ಟವೆಂಬಂತೆ ಸ್ವರೂಪ್ ಸಿಂಗ್ ಕಾಯಿಲೆಗೆ ತುತ್ತಾಗೆ ತೀರಿ ಹೋದನು. ತದ ನಂತರ ಅವನ ಮಗನಾದ ಹದಿನೈದು ವರ್ಷದ ರಾಜಾ ತೇಜ್ ಸಿಂಗ್ ಅಪ್ಪನ ಸ್ಥಾನವಹಿಸಿಕೊಂಡು ಕಾರ್ಯಾಭಾರ ಮಾಡಿದನು. ಹೀಗಿರುವಾಗ ಒಂದೊಮ್ಮೆ ಆ ಪ್ರದೇಶದ ಭೀಕರ ಬರಗಾಲ ಎದುರಾಯಿತು.
ಚಿತ್ರಕೃಪೆ: BrownyCat
ಬೃಹತ್ ಸೈನ್ಯ
ಇದೊಂದು ಸುವರ್ಣ ಅವಕಾಶವೆಂದುಕೊಂಡ ನವಾಬ ಕೋಟೆಯ ಬಳಿ ಬೃಹತ್ ಸೈನ್ಯದೊಂದಿಗೆ ಬಂದು ಬೀಡು ಬಿಟ್ಟನು. ಈ ಸಂದರ್ಭದಲ್ಲಿ ಹಲವು ಬಾರಿ ಕೋಟೆ ಆಕ್ರಮಿಸಲು ಪ್ರಯತ್ನಿಸಿದನಾದರೂ ಸಫಲನಾಗಲಿಲ್ಲ. ಆದರೂ ಕಾಯುತ್ತ ಕುಳಿತನು.
ಚಿತ್ರಕೃಪೆ: BrownyCat
ಚಿಂತಾಜನಕ
ಇತ್ತ ಕೋಟೆಯೊಳಗಿದ್ದ ರಾಜಾ ತೇಜ್ ಸಿಂಗ್ ತನ್ನ ಜನರ ಸ್ಥಿತಿಗತಿಗಳನ್ನು ನೋಡದಾದನು. ಏಕೆಂದರೆ ಎಲ್ಲಿಯೂ ಹೋಗದೆ ಎಲ್ಲ ಧಾನ್ಯಗಳು ಬರಿದಾಗಿದ್ದರು. ನೀರಿಲ್ಲ. ಸ್ಥಿತಿ ಚಿಂತಾಜನಕವಾಗಿತ್ತು. ರಜಪೂತ ರಾಕ್ತದ ರಾಜಾ ತೇಜ್ ಸಿಂಗ್ ತನ್ನ ಪೂರ್ವಜರ ಅಸಾಧ್ಯವಾದಂತಹ ಧೈರ್ಯಾದಿಗಳನ್ನು ನೆನೆದು ತನ್ನ ಅದ್ಭುತ ಕುದುರೆಯಾದ ಬಾರಾ ಹಜಾರಿಯೊಂದಿಗೆ ಖಡ್ಗ ಹಿಡಿದು ಕೋಟೆಯ ಹೊರ ಹೋದನು.
ಚಿತ್ರಕೃಪೆ: BrownyCat
ಸೈನಿಕರು ಸಜ್ಜು
ಅವನ ಮನಸ್ಸಿನಾರ್ಥವನ್ನು ತಿಳಿದ ಸೈನಿಕರು ತಾವೂ ಸಜ್ಜಾಗಿ ಅವನ ಹಿಂದೆ ಬಂದು ನಿಂತು ಯುದ್ಧ ಮಾಡಲು ಅಣಿಯಾದರು. ಇದೆ ಸಂದರ್ಭದಲ್ಲಿ ತೇಜ್ ಸಿಂಗನ ಪ್ರಾಣ ಸ್ನೇಹಿತನಾಗಿದ್ದ ಮಹ್ಮದ್ ಖಾನನು ಅಂದೆ ತನ್ನ ಮದುವೆಯಿದ್ದರೂ ಸಹ ಅದನ್ನು ತ್ಯಜಿಸಿ ತನ್ನ ಸ್ನೇಹಿತನಿಗಾಗಿ ಯುದ್ಧ ಮಾಡಲು ಬಂದನು. ಇದನ್ನು ಕಂಡ ತೇಜ್ ಸಿಂಗನ ಕಣ್ಣುಗಳು ಒದ್ದೆಯಾಗಿ ಹುಮ್ಮಸ್ಸಿನಿಂದ ಬೀಡು ಬಿಟ್ಟಿದ್ದ ನವಾಬನ ಸೈನಿಕರ ಮೇಲೆ ಆಕ್ರಮಣ ಮಾಡಿಯೆ ಬಿಟ್ಟನು.
ಚಿತ್ರಕೃಪೆ: Nprakashemail
ನವಾಬ ದಿಗ್ಭ್ರಮೆ
ಒಮ್ಮೆಲೆ ಆದ ಆಕ್ರಮಣವನ್ನು ಅರ್ಥೈಸಿಕೊಳ್ಳಲಾಗದೆ ನವಾಬನ ಸೈನಿಕರು ದಿಗ್ಭ್ರಾಂತರಾದರು. ಕೇವಲ ನೂರಾರು ಸಂಖ್ಯೆಯಲ್ಲಿದ್ದ ತೇಜ್ ಸಿಂಗನ ಸೈನಿಕರು ನವಾಬನ ಸೈನ್ಯಕ್ಕೆ ಸಾಕಷ್ಟು ತೊಡಕನ್ನು ಉಂಟು ಮಾಡಿದರು. ನಂತರ ಸುಧಾರಿಸಿಕೊಂಡ ನವಾಬನ ಸೈನಿಕರು ಅಪಾರ ಸಂಖ್ಯೆಯಲ್ಲಿದ್ದ ಕಾರಣ ತೇಜ್ ಸಿಂಗನ ಸೈನಿಕರನ್ನು ಹೊಡೆದುರುಳಿಸ ತೊಡಗಿದರು. ಜಿಂಜೀ ಕೋಟೆಯ ದೇವಾಲಯ.
ಚಿತ್ರಕೃಪೆ: Vijay rajendran
ತೇಜ್ ಸಿಂಗ್ ದುಖಿತನಾದ
ಈ ಸಂದರ್ಭದಲ್ಲಿ ತೇಜ್ ಸಿಂಗನ ಸ್ನೇಹಿತ ಮಹ್ಮದ್ ಖಾನನಿಗೆ ಈಟಿಯೊಂದು ನೇರವಾಗಿ ತಾಗಿ ರಕ್ತದ ಮೊಡವಿನಲ್ಲಿ ಒದ್ದಾಡತೊಡಗಿದನು. ಇದನು ಕಂಡ ತೇಜ ಸಿಂಗನು ಅವನ ಬಳಿ ಧಾವಿಸಿ ಅವನನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ರೋಧಿಸತೊಡಗಿದನು. ಆದರೆ ಆ ಸ್ನೇಹಿತ ಅವನನ್ನು ನೋಡಿ ಅಂತಿಮ ನಗೆಯನ್ನು ಬೀರಿ ಪ್ರಾಣ ಕಳೆದುಕೊಂಡನು.
ಚಿತ್ರಕೃಪೆ: Vijay rajendran
ಅಂತ್ಯಕ್ರಿಯೆ
ಅಷ್ಟರಲ್ಲಾಗಲೆ ನವಾಬನ ಸೈನಿಕರು ಎಲ್ಲೆಡೆಯಿಂದ ತೇಜ್ ಸಿಂಗನನ್ನು ಸುತ್ತುವರೆದಿದ್ದರು. ನವಾಬ ಕುಹುಕು ನಗೆ ಬೀರುತ್ತ ಆತನನ್ನು ಬರ್ಬರವಾಗಿ ಕೊಂದನು. ಯುದ್ಧ ನಂತರದಲ್ಲಿ ತೇಜ್ ಸಿಂಗನ ದೇಹವನ್ನು ಹಾಗೂ ಆತನ ಪ್ರೀತಿಯ ಕುದುರೆಯ ದೇಹವನ್ನು ಅಕ್ಕ ಪಕ್ಕದಲ್ಲೆ ಇಟ್ಟು ದಹನ ಕ್ರೀಯೆ ಮಾಡುವಲ್ಲಿ ಸಜ್ಜಾಗಿದ್ದರು.
ಚಿತ್ರಕೃಪೆ: Johnson81385
ನಾವಬನ ನೀಚತನ
ಈ ದೃಶ್ಯವನ್ನು ಕಂಡು ತೇಜ್ ಸಿಂಗನ ಸುಂದರ ಮೊಗದ ಮಡದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳ ಚೆಲುವನ್ನು ಕಂಡ ನವಾಬ ಅವಳನ್ನು ಪಡೆದೆ ಎಂದು ನಗುತ್ತ ಅವಳನ್ನು ಸುಖಿಸುವಂತಹ ದೃಷ್ಟಿಯಿಂದ ನೋಡತೊಡಗಿದ. ಅವನ ನೀಚ ಸ್ವಭಾವವನ್ನು ಅರಿತ ತೇಜ್ ಸಿಂಗನ ಮಡದಿಯು ತನ್ನ ಪತಿಯ ಚಿತೆಯಲ್ಲೆ ಹಾರಿ ಪ್ರಾಣ ಬಿಟ್ಟಳು.
ಚಿತ್ರಕೃಪೆ: Vijay rajendran
ಪೂರ್ವದ ಟ್ರಾಯ್
ಇದು ಟ್ರಾಯ್ ಕಥೆಯೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವುದರಿಂದ ಆಂಗ್ಲರು ಇದನ್ನು ಪೂರ್ವದ ಟ್ರಾಯ್ ಎಂದೆ ಕರೆದರು. ಹೀಗಾಗಿ ಇಂದಿಗೂ ಈ ಕೋಟೆಯು ತನ್ನ ಅದ್ಭುತವಾದ ಕಥೆಯನ್ನು ನೋಡುಗರಿಗೆ, ಪ್ರವಾಸಿಗರಿಗೆ ಸದಾ ಹೇಳುತ್ತದೆ. ಜಿಂಜೀ ಕೋಟೆಯಿಂದ ಕಾಣುವ ನೋಟ.
ಚಿತ್ರಕೃಪೆ: Prabak
ತಮಿಳುನಾಡು
ಜಿಂಜೀ ಕೋಟೆಯು ಪ್ರಸ್ತುತ ತಮಿಳುನಾಡು ರಾಜ್ಯದ ವಿಲ್ಲುಪುರಂ ಜಿಲ್ಲೆಯಲ್ಲಿದೆ. ತಿಂಡಿವನಂ ಎಂಬ ಪಟ್ಟಣದ ಬಳಿಯಿರುವ ಜಿಂಜೀ ಕೋಟೆಯು ಚೆನ್ನೈ ನಗರದಿಂದ 160 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Arulghsr
ಐತಿಹಾಸಿಕ ತಾಣ
ತೆರಳಲು ಚೆನ್ನೈ ನಗರದಿಂದ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ವಿಲ್ಲುಪುರಂ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಸ್ಥಳಗಳ ಪೈಕಿ ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ಜಿಂಜೀ ಕೋಟೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕೋಟೆಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Prabak
ಪುರಾತನ
ಈಗಲೂ ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಈ ಭೂತ (ಹಳೆಯ) ಕೋಟೆಯು ಒಂದು ರೀತಿಯ ವಿಚಿತ್ರ ಮನೋಭಾವನೆಯನ್ನು ಮನಸಿನಲ್ಲಿ ಮೂಡಿಸದೆ ಇರಲಾರದು.
ಚಿತ್ರಕೃಪೆ: பிரகாஷ்