ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಗಿರಿಧಾಮವು ಬಾಬಾ ಬುಡಾನ್ ಗಿರಿ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಸ್ಥಳವು ಎತ್ತರವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು ದಟ್ಟವಾದ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿದ್ದು, ಮಂತ್ರಮುಗ್ದಗೊಳಿಸುತ್ತದೆ.
ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಈ ಸ್ಥಳದ ಅಭಿವೃದ್ದಿಯ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಗೌರವಾರ್ಥವಾಗಿ ಕೆಮ್ಮಣ್ಣುಗುಂಡಿಯನ್ನು ಕೆ.ಆರ್. ಹಿಲ್ಸ್ (ಬೆಟ್ಟಗಳು) ಎಂದೂ ಕರೆಯಲಾಗುತ್ತದೆ. ಅವರು ಇಲ್ಲಿ ರಸ್ತೆಗಳು, ಸುಂದರವಾದ ಉದ್ಯಾನವನಗಳು ನಿರ್ಮಿಸಿದುದಲ್ಲದೆ ಈ ಬೆಟ್ಟವನ್ನು ತನಗಾಗಿ ಐಷಾರಾಮಿ ವಿಹಾರ ತಾಣವಾಗಿ ಪರಿವರ್ತಿಸಿದರು ಮತ್ತು ಪ್ರಕೃತಿಯು ಈ ಪ್ರದೇಶಕ್ಕೆ ನೀಡಿದ ಸುಂದರ ಸಂಪತ್ತನ್ನು ಸಂರಕ್ಷಿಸಲು ಕಾಳಜಿ ವಹಿಸಿದರು.
ನಂತರದ ದಿನಗಳಲ್ಲಿ ಈ ಸ್ಥಳವನ್ನು ಅವರು ಕರ್ನಾಟಕ ರಾಜ್ಯಸರಕಾರಕ್ಕೆ ದಾನ ಮಾಡಿದರು. ಈಗ ಈ ಸ್ಥಳವನ್ನು ಕರ್ನಾಟಕದ ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿದೆ.
ಕೆಮ್ಮಣ್ಣುಗುಂಡಿಯಲ್ಲಿ ನೋಡಲು ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ ಮತ್ತು ಇಲ್ಲಿ ಮಾಡಬಹುದಾದ ಚಟುವಟಿಕೆಗಳಿಗಾಗಿ ಒಂದು ದಿನ ಸಾಕಾಗುವುದಿಲ್ಲ.
Z ಪಾಯಿಂಟ್ ಕಡಿದಾದ ಬೆಟ್ಟದ ಮೇಲೆ ಇರುವ ಎತ್ತರದ ಸ್ಥಳವಾಗಿದೆ ಮತ್ತು ಇದು ಸುಮಾರು 30 ನಿಮಿಷಗಳ ಆರೋಹಣ ಮಾಡಿದ ಮೇಲೆ ಸಿಗುವ ಸ್ಥಳವಾಗಿದೆ. ಇದರ ಮೇಲಿಂದ ಪ್ರವಾಸಿಗರು ಸುತ್ತಮುತ್ತಲಿನ ಪ್ರದೇಶಗಳ ಮನಮೋಹಕ ದೃಶ್ಯಗಳ ಜೊತೆಗೆ ಶಾಂತವಾಗಿ ಹರಿಯುವ ಶಾಂತಿ ಜಲಪಾತಗಳ ದೃಶ್ಯವನ್ನೂ ನೋಡಬಹುದಾಗಿದೆ. ಎರಡು ಕವಲುಗಳನ್ನು ಹೊಂದಿರುವ ಹೆಬ್ಬೆಆಕರ್ಷಕ ಜಲಪಾತವು ಈ ಸ್ಥಳದ ಸಮೀಪದಲ್ಲಿದೆ. 120 ಮೀ ಎತ್ತರದಿಂದ ಕೆಳಗೆ ಧುಮುಕುವ ಕಾಳತ್ತಿ ಅಥವಾ ಕಾಳಹಸ್ತಿ ಜಲಪಾತ ಅಥವಾ ಕಲತಗಿರಿ ಜಲಪಾತ ಎಂದೂ ಕರೆಯಲ್ಪಡುವ ಜಲಪಾತವು ಕೆಮ್ಮಣ್ಣುಗುಂಡಿಯ ಸಮೀಪದಲ್ಲಿದೆ.
ಈ ಸ್ಥಳದಲ್ಲಿ ವಿಜಯನಗರ ಕಾಲಕ್ಕೆ ಸೇರಿದ ದೇವಾಲಯವಿದೆ. ಮುಳ್ಳಯ್ಯನಗಿರಿ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳು ಕೆಮ್ಮಣ್ಣುಗುಂಡಿ ಬಳಿ ಭೇಟಿ ನೀಡಲು ಸೂಕ್ತವಾದ ತಾಣಗಳಾಗಿವೆ. ಸಾಹಸ ಉತ್ಸಾಹಿಗಳು ಇಲ್ಲಿರುವ ಹಲವು ಆಯ್ಕೆಗಳನ್ನು ಇಷ್ಟಪಡುವುದು ಖಚಿತ. ಕರ್ನಾಟಕದಲ್ಲಿ ಈ ಸ್ಥಳದ ಹತ್ತಿರದ ನಗರಗಳಲ್ಲಿ ವಾಸಿಸುವವರಿಗೆ ಇದು ಸೂಕ್ತವಾದ ವಾರಾಂತ್ಯದ ತಾಣವಾಗಿದೆ.