ಹಿಂದುಗಳು ಪರಿಪಾಲಿಸುವ ಸನಾತನ ಧರ್ಮವು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮೂಲತಃ ದೇವನೊಬ್ಬ ನಾಮ ಹಲವು ಎಂಬ ತತ್ವದ ತಾತ್ಪರ್ಯ ಹೊಂದಿರುವ ಸನಾತನ ಧರ್ಮದಲ್ಲಿ ವಿಶ್ವವೇ ಏಕಂ ಅಂದರೆ ಸಕಲ ಜಗತ್ತು ಒಂದೆ ಆಗಿದೆ ಹಾಗೂ ಅಲ್ಲಿರುವ ಜೀವಿಗಳೆಲ್ಲ ಒಂದೆ ಪರಬ್ರಹ್ಮನ ಅಂಶಗಳಾಗಿದ್ದರೆ ಎಂಬುದನ್ನು ಸಾರುತ್ತದೆ.
ಕರ್ನಾಟಕದಲ್ಲಿ ನೋಡಬಹುದಾದ ಅನನ್ಯ ವಿನ್ಯಾಸಗಳ ಗೋಪುರ ಶಿಖರಗಳು
ಅದಕ್ಕೆ ಅಲ್ಲವೆ ಹಿಂದುಗಳು ಹೇಳಿದ್ದು "ವಸುದೈವ ಕುಟುಂಬಕಂ" ಎಂದು. ಆದರೂ ಈ ಕ್ಲಿಷ್ಟಕರ ಸತ್ಯವನ್ನು ಮನುಷ್ಯ ಸರಳವಾಗಿ ಅರ್ಥೈಸಿಕೊಳ್ಳುವ ದೃಷ್ಟಿಯಿಂದ ದೇವನೊಬ್ಬನಾದರೂ ನಾಮ ಹಲವು ಬಂದವು ಎಂದು ತಿಳಿದವರು ಹೇಳುತ್ತಾರೆ. ಅಂತೆಯೆ ಆ ಭಗವಂತನನ್ನು ಸದಾ ಸ್ಮರಿಸಲು, ಅವನೊಡನೆ ನಿರಂತರ ಹಾಗೂ ನಿಶ್ಕಲ್ಮಶವಾದ ಸಂಪರ್ಕ ಹೊಂದಿರಲು ದೇವಾಲಯಗಳು ಎಂಬ ರಚನೆಗಳು ರೂಪತಳೆದವು.
ಹಲವಾರು ವೈದಿಕ ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ದೇವಾಲಯ ರಚನೆಗಳ ಕುರಿತು ವಿವಿಧ ರೀತಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ದೇವಾಲಯ ಎಂಬುದು ಭಗವಂತ ಹಾಗೂ ಭಕ್ತನ ಮಧ್ಯೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿರುತ್ತದೆ. ಅದೇ ರೀತಿಯಾಗಿ ಇಂದು ನಾವು ಭಾರತದ ಎಲ್ಲ ಸ್ಥಳಗಳಲ್ಲಿಯೂ ವಿಶಿಷ್ಟವಾಗಿ ನಿರ್ಮಿಸಲಾಗಿರುವ ವಿವಿಧ ವಿನ್ಯಾಸಗಳ ದೇವಾಲಯಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Akashdeep83
ಇನ್ನೊಂದು ವಿಶೇಷವೆಂದರೆ ದೇವಾಲಯಗಳನ್ನು ನಿರ್ಮಿಸುವ ಸ್ಥಳಗಳ ಕುರಿತು ಸಾಕಷ್ಟು ಗ್ರಂಥಗಳಲ್ಲಿ ಸ್ಥಳ ವಿಶೇಷ ಗುಣಲಕ್ಷಣಗಳನ್ನು ಮಂಡಿಸಲಾಗಿದೆ. ಅದರಂತೆ ಇಂದು ನಾವು ವಿವಿಧ ದೇವಾಲಯಗಳನ್ನು ಅವುಗಳು ನಿರ್ಮಿತವಾದ ಸ್ಥಳ ವಿಶೇಷ ಗುಣಲಕ್ಷ್ಣದ ಮೂಲಕ ವಿವಿಧ ರೀತಿಯಾಗಿ ವಿಂಗಡಿಸಬಹುದಾಗಿದೆ. ನೀವು ಈ ವಿಶಿಷ್ಟ ರೀತಿಯ ದೇವಾಲಯಗಳಿಗೆ ಭೇಟಿ ನೀಡಬೇಕೆ? ಅವು ಯಾವ ಪ್ರಕಾರಗಳು ತಿಳಿಯಬೇಕೆ? ಮುಂದೆ ಓದಿ.
ಬೆಟ್ಟ ದೇವಾಲಯ/ಪರ್ವತ ದೇವಾಲಯ : ಒಂದು ವಿಶಿಷ್ಟ ಪ್ರಕಾರವಾಗಿ ನಿರ್ಮಿಸಲಾಗುವ ದೇವಾಲಯವಾಗಿದೆ. ಸಾಮಾನ್ಯವಾಗಿ ಶಿಲೆಗಳಿರುವ ಬೆಟ್ಟವನ್ನೆ ದೇವಾಲಯಗಳ ರೂಪದಲ್ಲಿ ಕಡಿದು ನಿರ್ಮಿಸಲಾಗುವ ದೇವಾಲಯಗಳಿವು. ದಕ್ಷಿಣ ಭಾರತದಲ್ಲಿ ಇದಕ್ಕೆ ಉದಾಹರಣೆಯಾಗಿ ಸಾಕಷ್ಟು ದೇವಾಲಯಗಳನ್ನು ಹೆಸರಿಸಬಹುದು. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳ ತಾಣದಲ್ಲಿರುವ ಕೈಲಾಶನಾಥ ದೇವಾಲಯವೂ ಸಹ ಇದಕ್ಕೊಂದು ಉತ್ತಮ ನಿದರ್ಶನ.

ಮಸ್ರೂರ್ ದೇವಾಲಯ, ಚಿತ್ರಕೃಪೆ: ROHEWALMS
ಆದಾಗ್ಯೂ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಕಂಗ್ರಾ ಪಟ್ಟಣದಿಂದ 40 ಕಿ.ಮೀ ದೂರದಲ್ಲಿರುವ ಕಂಗ್ರಾ ಕಣಿವೆಯಲ್ಲಿರುವ ಮಸ್ರೂರು ಬಂಡೆ ದೇವಾಲಯಗಳು ಉತ್ತಮ ಉದಾಹರಣೆಯಾಗಿದೆ. ಈ ರೀತಿಯ ದೇವಾಲಯ ರಚನೆ ದಕ್ಷಿಣದಲ್ಲಿ ಸಾಮಾನ್ಯವಾದರೂ ಉತ್ತರ ಭಾರತದ ಮಟ್ಟಿಗೆ ವಿಶೇಷವೆಂದೆ ಹೇಳಬಹುದು. ಆರರಿಂದ ಏಳನೇಯ ಶತಮಾನದ ಮಧ್ಯದಲ್ಲಿ ನಿರ್ಮಿತವಾದ ಈ ದೇವಾಲಯ ವಿಷ್ಣುವಿಗೆ ಮುಡಿಪಾಗಿದೆ.
ಗುಹಾ ದೇವಾಲಯ : ಕಲ್ಲು ಬಂಡೆಗಳ ಪರ್ವಗಳನ್ನು ಕಡಿದು ಗುಹೆಗಳನ್ನು ನಿರ್ಮಿಸಿ ನಂತರದಲ್ಲಿ ಅಲ್ಲಿ ದೇವಾಲಯಗಳನ್ನು ನಿರ್ಮಿಸುವುದು ಹಿಂದೆ ಒಂದು ವಾಡಿಕೆಯಾಗಿತ್ತು. ಸಾಕಷ್ಟು ಹಿಂದು, ಜೈನ ಹಾಗೂ ಬೌದ್ಧ ದೇವಾಲಯಗಳು ಈ ರೀತಿಯಲ್ಲಿ ನಿರ್ಮಿಸಲಾಗಿರುವುದನ್ನು ಇಂದು ಕಾಣಬಹುದು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾ ದೇವಾಲಯಗಳು ಈ ರೀತಿಯ ದೇವಾಲಯಗಳಿಗೆ ಅದ್ಭುತವಾದ ಉದಾಹರಣೆಯಾಗಿವೆ. ಸಾಕಷ್ಟು ವಿಶೇಷವಾಗಿ ನಿರ್ಮಿಸಲಾಗಿರುವ ಈ ಪುರಾತನ ಗುಹಾ ದೇವಾಲಯಗಳು ಪ್ರವಾಸಿಗರ ಗಮನ ಸೆಳೆಯದೆ ಇರಲಾರದು.

ರಾಣಿ ಕಿ ವಾವ್, ಗುಜರಾತ್, ಚಿತ್ರಕೃಪೆ: Bernard Gagnon
ಮೆಟ್ಟಿಲು ಬಾವಿಗಳ ದೇವಾಲಯಗಳು : ಇವು ಪ್ರಾಚೀನ ಭಾರತೀಯರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿ ನಿಂತಿರುವ ಅದ್ಭುತ ಕಲಾ ರಚನೆಗಳಾಗಿವೆ. ಉತ್ತರ ಭಾರತದ ಅದರಲ್ಲೂ ವಿಶೇಷವಾಗಿ ರಾಜಸ್ಥಾನ ಹಾಗೂ ಗುಜರಾತ್ ಭಾಗಗಳಲ್ಲಿ ನೀರಿನ ಅಭಾವ ಸಾಮಾನ್ಯವಾಗಿರುವುದರಿಂದ ಮೆಟ್ಟಿಲುಗಳನ್ನು ನಿರ್ಮಿಸಿ ಅಲ್ಲಿ ವೈವಿಧ್ಯಮಯವಾದ ದೇವ ದೇವತೆಯರ ಕೆತ್ತನೆಗಳನ್ನು ಮಾಡಲಾಗುತ್ತಿತ್ತು. ಧಾರ್ಮಿಕ ವಿಧಿ ವಿಧಾನಗಳನ್ನೂ ಸಹ ಆಚರಿಸಲಾಗುತ್ತಿತ್ತು. ಮಳೆ ಬಿದ್ದಾಗ ಇವು ತುಂಬುತ್ತಿದ್ದರೂ ಸಹ ನೀರು ಕಡಿಮೆಯಾದಂತೆ ದೇವರ ಸನ್ನಿಧಿಗಳು ಗೋಚರಿಸುತ್ತಿದ್ದವು.

ಜಾಗೇಶ್ವರ್ ದೇವಾಲಯ, ಚಿತ್ರಕೃಪೆ: Amrit
ಕಾಡು ದೇವಾಲಯಗಳು : ಹೆಸರೆ ಸೂಚಿಸುವ ಹಾಗೆ ಈ ರೀತಿಯ ದೇವಾಲಯಗಳು ಸಾಮಾನ್ಯವಾಗಿ ದಟ್ಟವಾದ ಕಾಡು ಪ್ರದೇಶದಲ್ಲಿ ನಿರ್ಮಿಸಲ್ಪಡುತ್ತಿದ್ದವು. ಹಿಂದೆ ಋಷಿ-ಮುನಿಗಳು ತಪಗೈದ ಅದೆಷ್ಟೋ ಕಾಡು ಸ್ಥಳಗಳು ಪ್ರಭಾವಶಾಲಿಯಾಗಿರುವುದರಿಂದ ದೇವಾಲಯಗಳು ನಿರ್ದಿಷ್ಟ ಸ್ಥಳದಲ್ಲಿ ನಿರ್ಮಿಸಲ್ಪಡುತ್ತಿದ್ದವು. ಇಂದಿಗೂ ಭಾರತದಲ್ಲಿ ಸಾಕಷ್ಟು ಕಡೆ ಈ ರೀತಿಯ ದೇವಾಲಯಗಳನ್ನು ಕಾಣಬಹುದಾಗಿದೆ. ಉತ್ತರಾಖಂಡ ಅಲ್ಮೋರಾ ಜಿಲ್ಲೆಯ ಜಾಗೇಶ್ವರದ ಬಳಿಯಿರುವ ಜಾಗೇಶ್ವರ ನಾಗೇಶ ಜ್ಯೋತಿರ್ಲಿಂಗ ದೇವಾಲಯವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಮಹಾಬಲಿಪುರಂ ಕಡಲ ತೀರ ದೇವಾಲಯ, ಚಿತ್ರಕೃಪೆ: Owen Young
ಸಮುದ್ರ/ನದಿ ತಟದ ದೇವಾಲಯಗಳು : ಈ ರೀತಿಯ ದೇವಾಲಯಗಳು ಸಾಮಾನ್ಯವಾಗಿ ಭಾರತದ ಎಲ್ಲ ತೀರ್ಥ ಯಾತ್ರಾ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ಕಾಶಿ, ಭೀಮಾಶಂಕರ, ಹರಿದ್ವಾರ, ಮಂತ್ರಾಲಯ, ಶೃಂಗೇರಿ ಹೀಗೆ ಹತ್ತುಅ ಹಲವು ಕಡೆಗಳಲ್ಲಿ ನದಿಯ ತಟಗಳಲ್ಲಿ ನಿರ್ಮಿಸಲಾದ ದೇವಾಲಯಗಳನ್ನು ದರ್ಶಿಸಬಹುದು. ಆದಾಗ್ಯೂ ತಮಿಳುನಾಡಿನ ಚೆನ್ನೈನಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿರುವ ಮಹಾಬಲಿಪುರಂ ಅಥವಾ ಮಾಮಲ್ಲಪುರಂ ಸಮುದ್ರ ತೀರದಲ್ಲಿ ನಿರ್ಮಿಸಲಾದ ದೇವಾಲಯಗಳಿಗೆ ಸಾಕಷ್ಟು ಹೆಸರುವಾಸಿಯಾಗಿದೆ.


Click it and Unblock the Notifications

















