"ದೇವರ ಸ್ವಂತ ನಾಡು" ಎಂಬ ಖ್ಯಾತಿಯ ಕೇರಳ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಾಮಾನ್ಯವಾಗಿ ಕಂಡು ಬರುವುದು ದಟ್ಟ ಹಸಿರಿನ ಕಾಡುಗಳು, ಬೆಟ್ಟ ಗುಡ್ಡಗಳು ಅಲ್ಲಲ್ಲಿ ಬೇರ್ಪಟ್ಟ ಸ್ಥಳಗಳಲ್ಲಿ ಸುಶ್ರಾವ್ಯವಾಗಿ ಹರಿದಿರುವ ನೀರಿನ ಕೆರೆ-ತೊರೆಗಳು, ವಿಶೀಷ್ಟ ಶೈಲಿಯ ಮನೆ ಮಠಗಳು ಹೀಗೆ ಪಟ್ಟಿ ಮುಂದೆ ಸಾಗುತ್ತಾ ಹೋಗುತ್ತದೆ.
ಮೇಕ್ ಮೈ ಟ್ರಿಪ್ : ದೇಶೀಯ ಹೋಟೆಲ್ ಬುಕ್ ಮಾಡಿ ರೂ. 4000 ಮರಳಿ ಪಡೆಯಿರಿ
ಅದರಲ್ಲೂ ಮಳೆಗಾಲದಲ್ಲಂತೂ ನೀರಿನ ಮುತ್ತಿನಂತಹ ಹನಿಗಳಿಂದ ಗಿಡ-ಬಳ್ಳಿಗಳ ಎಲೆಗಳು ಫಳ ಫಳನೆ ಹೊಳೆಯುತ್ತ ಪರಿಸರದ ಮಾದಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗೆ ನೋಡಿದರೆ ಕೇರಳದಲ್ಲಿ ಸಾಕಷ್ಟು ಪಟ್ಟಣಗಳು ತಮ್ಮದೆ ಆದ ಸ್ವಂತ ಪ್ರಕೃತಿ ಶ್ರೀಮಂತಿಕೆಯನ್ನು ಹೊಂದಿವೆ ಹಾಗೂ ಪ್ರವಾಸದ ದೃಷ್ಟಿಯಿಂದ ಭೇಟಿ ಮಾಡ ಬಹುದಾದ ಸ್ಥಳಗಳಾಗಿವೆ.
ವಿಶೇಷ ಲೇಖನ : ಸುಂದರ ಸೊಬಗಿನ ಪಾಲಕ್ಕಾಡ್
ಪ್ರಸ್ತುತ ಲೆಖನದ ಮೂಲಕ ಎಟ್ಟುಮಾನೂರು ಎಂಬ ದೇವಾಲಯ ಪಟ್ಟಣದ ಕುರಿತು ವಿಶೇಷವಾಗಿ ತಿಳಿಯಿರಿ. ಎಟ್ಟಮಾನೂರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಪ್ರದೇಶವಾಗಿದೆ.
ಎಟ್ಟಮಾನೂರು:
ಎಟ್ಟುಮಾನೂರು ಶಾಂತತೆಯಿಂದ ಕೂಡಿರುವ ಒಂದು ಸುಂದರ ಪಟ್ಟಣವಾಗಿದ್ದು ಮಾನ್ ಹಾಗೂ ಊರ್ ಎಂಬ ಪದಗಳಿಂದ ತನ್ನ ಹೆಸರು ಪಡೆದಿದೆ. ಮಲಯಾಳಂ ಭಾಷೆಯಲ್ಲಿ ಮಾನ್ ಎಂದರೆ ಜಿಂಕೆ ಎಂತಲೂ ಊರ್ ಎಂದರೆ ಊರು ಎಂತಲೂ ಅರ್ಥ ಬರುತ್ತದೆ.
ಎಟ್ಟಮಾನೂರು:
ಎಟ್ಟುಮಾನೂರು ಪ್ರಮುಖವಾಗಿ ತನ್ನಲ್ಲಿರುವ ಶಿವನಿಗೆ ಮುಡಿಪಾದ ಮಹಾದೇವ ದೇವಾಲಯಕ್ಕೆ ಹೆಚ್ಚು ಪ್ರಖ್ಯಾತವಾಗಿದೆ. ಮಹಾದೇವನ ಈ ದೇವಾಲಯವು ಪರಶುರಾಮರು ಸ್ಥಾಪಿಸಿದ 108 ಶಿವನ ದೇವಸ್ಥಾನಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Ranjithsiji
ಎಟ್ಟಮಾನೂರು:
ಮಹಾದೇವನ ಈ ಭವ್ಯ ಹಾಗೂ ಪುರಾತನ ದೇವಾಲಯದಿಂದಾಗಿಯೆ ಎಟ್ಟುಮಾನೂರಿಗೆ ಹೆಚ್ಚಿನ ಜನಪ್ರೀಯತೆ ಬಂದೊದಗಿದೆ. ಸ್ಥಳ ಪುರಾಣದಂತೆ ಹಿಂದೆ ವ್ಯಾಸ ಮಹರ್ಷಿಗಳು ಸೇರಿದಮ್ತೆ ವನವಾಸದಲ್ಲಿದ್ದ ಪಾಂಡವರೂ ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಶಿವನನ್ನು ಪೂಜಿಸಿದ್ದರಂತೆ.
ಚಿತ್ರಕೃಪೆ: Rklystron
ಎಟ್ಟಮಾನೂರು:
ಪ್ರಸ್ತುತ ಕಾಣುವ ದೇವಾಲಯದ ಕಟ್ಟಡ ಹಾಗೂ ಇತರೆ ರಚನೆಯನ್ನು ಕ್ರಿ.ಶ 1542 ರಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಈ ದೇವಾಲಯದ ಪ್ರವೇಶ ದ್ವಾರದ ಎಡ ಭಾಗದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನೂ ಸಹ ಕಾಣಬಹುದು.
ಎಟ್ಟಮಾನೂರು:
ದೇವಾಲಯ ಬರುತ್ತಿದ್ದಂತೆಯೆ ಮೊದಲಿಗೆ ಕಂಡುಬರುವುದು ಸ್ವಾಗತ ಕಮಾನು. ತದ ನಂತರ ವಿಶಾಲವಾದ ಆವರಣವಿದ್ದು ಅಲ್ಲಲ್ಲಿ ಗಿಡ ಮರಗಳಿವೆ. ಈ ಸ್ಥಳವು ವಾಹನ ನಿಲುಗಡೆಗೆ ಮೀಸಲಾಗಿದ್ದು, ಹೂವು, ಆಟಿಕೆ ಮುಂತಾದ ಚಿಕ್ಕ ವಸ್ತುಗಳನ್ನು ಮಾರುತ್ತಿರುವ ವ್ಯಾಪಾರಿಗಳನ್ನು ಕಾಣಬಹುದು.
ಎಟ್ಟಮಾನೂರು:
ನಂತರ ಮುಖ್ಯ ಪ್ರವೇಶ ದ್ವಾರವಿದ್ದು ಅದರ ಗೋಡೆಯ ಎರಡು ಬದಿಗಳಲ್ಲಿ ದ್ರಾವಿಡ ಶೈಲಿಯ ಪುರಾತನ ಹಸಿಚಿತ್ರವನ್ನು ಬಿಡಿಸಲಾಗಿದ್ದು ಶಿವನನ್ನು ನೃತ್ಯ ಭಂಗಿಯಲ್ಲಿ ನೋಡಬಹುದು. ಪ್ರಾಚೀನ ವರ್ಣಚಿತ್ರಗಳಿಗೆ ಈ ಚಿತ್ರವು ಒಂದು ಉತ್ತಮ ಉದಾಹರಣೆ ಎಂತಲೆ ಹೇಳಬಹುದು.
ಎಟ್ಟಮಾನೂರು:
ಪ್ರವೇಶಿಸಿದ ನಂತರ ಕಂಡುಬರುವುದೆ ಮತ್ತೊಂದು ವಿಶಾಲವಾದ ಅಂಗಳ ಹಾಗೂ ಅಲ್ಲಿ ಧ್ವಜ ಸ್ಥಂಭ ಮತ್ತು ಮುಖ್ಯ ದೇವಾಲಯ. ಬಂಗಾರದಂತೆ ಹೊಳೆಯುವ ಎತ್ತರದ ಈ ಧ್ವಜ ಸ್ಥಂಭವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಎಟ್ಟಮಾನೂರು:
ಈ ಆವರಣದಲ್ಲಿಯೆ ತುಲಾಭಾರದಂತಹ ಚಟುವಟಿಕೆ ಭಕ್ತಾದಿಗಳ ಹರಕೆಯಂತೆ ಜರುಗುತ್ತಿರುತ್ತದೆ. ದವಸ, ಧಾನ್ಯ, ಬಾಳೆ ಹಣ್ಣು ಹೀಗೆ ವಿವಿಧ ದ್ರವ್ಯಗಳ ತುಲಭಾರವು ನಡೆಯುತ್ತಿರುತ್ತದೆ. ಅಲ್ಲದೆ ಮುಖ್ಯ ಗುಡಿಯಲ್ಲಿ ಸದಾ ಊರಿಯುತ್ತಿರುವ ದೀಪಕ್ಕೆಂದು ಎಣ್ಣೆಯನ್ನು ಕೊಳ್ಳಲು ಇಲ್ಲಿ ಅವಕಾಶವಿರುತ್ತದೆ.
ಎಟ್ಟಮಾನೂರು:
ದೀಪಕ್ಕೆ ಎಣ್ಣೆ ನೀಡ ಬಯಸುವ ಭಕ್ತಾದಿಗಳು ನಿಗದಿತ ಮೊತ್ತ ಪಾವತಿಸಿ, ಒಂದು ಚಿಕ್ಕ ಪಾತ್ರೆಯಲ್ಲಿ (ಅವರೆ ಆ ಪಾತ್ರೆ ನೀಡುತ್ತಾರೆ) ಎಣ್ಣೆಯನ್ನು ತೆಗೆದುಕೊಂಡು ಸಾಲಾಗಿ ದೇವಸ್ಥಾನವನ್ನು ಪ್ರವೇಶಿಸಬೇಕು. ಪುರುಷರು ಮಾತ್ರ ಧರಿಸಿದ ಅಂಗಿಗಳನ್ನು ಕಳಚಿ ಒಳ ಪ್ರವೇಶ ಪಡೆಯಬೇಕು. ಮೊದಲಿಗೆ ದೊರಕುವುದೆ ಸದಾ ಊರಿಯುವ ದೀಪ. ಇಲ್ಲಿಂದ ಎಡ ಭಾಗದಿಂದ ಮುಂದೆ ಸಾಲಿನಲ್ಲಿ ಸಾಗುತ್ತ ಮುಖ್ಯ ವಿಗ್ರಹದ ದರುಶನ ಮಾಡಿ, ಅಭಿಷೇಕದ ತೀರ್ಥ ಸ್ವೀಕರಿಸಿ ಹೊರ ಬರುವಾಗ ಎಣ್ಣೆಯನ್ನು ಅರ್ಪಿಸಬಹುದು.
ಎಟ್ಟಮಾನೂರು:
ಬಂಗಾರದ ಧ್ವಜವುಳ್ಳ ಖಂಬವನ್ನು ಕಾಣಬಹುದಾಗಿದ್ದು, ಒಳಾಂಗಣದ ದೇವಾಲಯ ವಿನ್ಯಾಸವು ಮೂಕ ವಿಸ್ಮಿತರನ್ನಾಗಿಸುತ್ತದೆ. ವಿಶ್ವಕರ್ಮ ಸ್ಥಪತಿಗಳ ಕೌಶಲ್ಯಕ್ಕೆ ಇದು ಅದ್ಭುತ ಉದಾಹರಣೆ ಎಂತಲೂ ಸಹ ಹೇಳಬಹುದಾಗಿದೆ.
ಎಟ್ಟಮಾನೂರು:
ಈ ದೊಡ್ಡ ಆವರಣದಲ್ಲಿ ಇತರೆ ಹಲವು ಚಿಕ್ಕ ಪುಟ್ಟ ದೇಗುಲಗಳನ್ನು ಕಾಣಬಹುದಾಗಿದ್ದು, ಪ್ರತಿ ದೇಗುಲಗಳ ಮಾಳಿಗೆಗಳು ತಾಮ್ರದ ಹೊದಿಕೆಗಳಿಂದ ಮಾಡಲ್ಪಟ್ಟಿವೆ ಹಾಗೂ 14 ವಿವಿಧ ಬಗೆಯ ವಿನ್ಯಾಸಗಳನ್ನು ಈ ಮಾಳಿಗೆಗಳ ಮೇಲೆ ಕಾಣಬಹುದು.
ಎಟ್ಟಮಾನೂರು:
ಈ ಬೃಹತ್ ದೇವಾಲಯದಾವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಇತರೆ ಮುಖ್ಯ ದೇವರೆಂದರೆ ಭಗವತಿ ದೇವಿ, ಶಸ್ತ, ಮಹಾಗಣಪತಿ ಹಾಗೂ ಯಕ್ಷಿ. ಮತ್ತೊಂದು ಕುತೂಹಲಕರ ಸಂಗತಿ ಎಂದರೆ ಆದಿ ಶಂಕರರು ಇಲ್ಲಿಯೆ ಕುಳಿತು ಸೌಂದರ್ಯ ಲಹರಿ ಬರೆದಿದ್ದರೆಂದು ನಂಬಲಾಗಿದೆ.
ಎಟ್ಟಮಾನೂರು:
ಫೆಬ್ರುವರಿ ಹಾಗೂ ಮಾರ್ಚ್ ಮಧ್ಯದಲ್ಲಿ ಬರುವ ತಿರುವತಿರಾ ದಿನದಂದು ಆರಟ್ಟ ಎಂಬ ಉತ್ಸವವನ್ನು ಬಲು ಅದ್ದೂರಿ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಕಟ್ಟಿಗೆಯಲ್ಲಿ ಮಾಡಿ ಬಂಗಾರದ ಲೇಪನವಿರುವ ಏಳುವರೆ ಆನೆಗಳ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಅಲ್ಲದೆ ನಿಜವಾದ ಆನೆಗಳಿಗೆ ಸ್ನಾನ ಮಾಡಿಸುವ ಉತ್ಸವ ಇದಾಗಿದೆ.
ಚಿತ್ರಕೃಪೆ: Sivavkm
ಎಟ್ಟಮಾನೂರು:
ಕೇರಳದ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಪ್ರಾಚೀನ ಕಾಲದ ಹಲವು ಮಹತ್ತರ ಹಾಗೂ ಅಮೂಲ್ಯವಾದ ವಸ್ತುಗಳನ್ನು ಹೊಂದಿದೆ. ಇಲ್ಲಿ ಪ್ರಮುಖವಾಗಿ ನಡೆಯುವ ಚಟುವಟಿಕೆಗಳ ಪೈಕಿ ತುಲಾಭಾರವೂ ಸಹ ಒಂದು. ಹರಕೆಗೆ ತಕ್ಕಂತೆ ಹರಕೆ ಮಾಡಿಕೊಂಡವರು ಅದು ತೀರಿದ ತರುವಾಯ ದವಸ, ಧಾನ್ಯ, ಹಣ್ಣುಗಳಿಂದ ತುಲಭಾರವನ್ನು ನೆರವೇರಿಸುತ್ತಾರೆ.
ಚಿತ್ರಕೃಪೆ: Ranjithsiji
ಎಟ್ಟಮಾನೂರು:
ಹಿಂದೂಗಳಿಗೆ ಮಹಾ ದೇವಾಲಯದ ಹಾಗೆ ಕ್ರೈಸ್ತರಿಗೂ ಸಹ ಒಂದು ಪವಿತ್ರವಾದ ದೇವಾಲಯವಿಲ್ಲಿದ್ದು ಅದನ್ನು ಅತಿರಂಪುಳಾ ಸಂತ ಮೇರಿ ಫೊರೇನ್ ದೇವಾಲಯ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Sivavkm
ಎಟ್ಟಮಾನೂರು:
ಇದೊಂದು ಸೈರೊ-ಮಲಬಾರ್ ಕ್ಯಾಥೋಲಿಕ್ ದೇವಾಲಯವಾಗಿದ್ದು ಕ್ರಿ.ಶ 835 ರಲ್ಲಿ ನಿರ್ಮಾಣಗೊಂಡಿದೆ. ಇದು ತಾಯಿ ಮೇರಿಗೆ ಮುಡಿಪಾದ ದೇವಮಂದಿರವಾಗಿದ್ದರೂ ಸಹ ಇಲ್ಲಿ ಜರುಗುವ ಸಂತ ಸೆಬಾಸ್ಟಿಯನ್ನರ ಉತ್ಸವ ಅತ್ಯಂತ ಹೆಸರುವಾಸಿಯಾಗಿದ್ದು ಸಾಕಷ್ಟು ಜನರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: കുമാര് വൈക്കം
ಎಟ್ಟಮಾನೂರು:
ಈ ದೇವಾಲಯದಲ್ಲಿರುವ ಸಂತ ಸೆಬಾಸ್ತಿಯನ್ನರ ಪ್ರತಿಮೆ ಅತ್ಯಂತ ಪುರಾತನ ಎಂದು ಹೇಳಲಾಗಿದ್ದು, ಪೋರ್ಚುಗೀಸರು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಅದನ್ನು ತಂದಿದ್ದರೆನ್ನಲಾಗುತ್ತದೆ. ಆ ಕಾರಣದಿಂದ ಸೆಬಾಸ್ತಿಯನ್ನರ ಉತ್ಸವ ಬಲು ಅದ್ದೂರಿಯಾಗಿ ಇಲ್ಲಿ ಜರುಗುತ್ತದೆ.
ಚಿತ್ರಕೃಪೆ: കുമാര് വൈക്കം
ಎಟ್ಟಮಾನೂರು:
ಎಟ್ಟುಮಾನೂರು ಎರ್ನಾಕುಲಂನಿಂದ 65 ಕಿ.ಮೀ ಹಾಗೂ ಕೊಟ್ಟಾಯಂನಿಂದ 15 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಇನ್ನೂ ಎರ್ನಾಕುಲಂ ದೇಶದ ಎಲ್ಲ ಪ್ರಮುಖ ನಗರಗಳೊಂದಿಗೆ ರೈಲಿನ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಅಲ್ಲದೆ ಎರ್ನಾಕುಲಂನಿಂದ ಎಟ್ಟುಮಾನೂರಿಗೆ ರೈಲಿನ ಸಂಪರ್ಕವೂ ಸಹ ಇದೆ.
ಚಿತ್ರಕೃಪೆ: Ranjithsiji