ಮೊದಲೆ ಬ್ರಹ್ಮ ದೇವರಿಗೆ ಮುಡಿಪಾದ ದೇವಾಲಯಗಳು ಬಲು ಅಪರೂಪ. ಪರಿಸ್ಥಿತಿ ಹೀಗಿರುವಾಗ ಇರುವ ದೇಶದ ಒಂದು ಪ್ರಮುಖವಾದ ಬ್ರಹ್ಮನ ದೇವಾಲಯದಲ್ಲೆ ಗಂಡಸರಿಗೆ ಪ್ರವೇಶವಿಲ್ಲವೆಂದರೆ ಹೇಗೆ? ಇದು ಆಶ್ಚರ್ಯವೆನಿಸಿದರೂ ಕಟು ಸತ್ಯ. ಇನ್ನೊಂದು ವಿಷಯವೆಂದರೆ ಇಲ್ಲಿ ಸಾಂಸಾರಿಕ ಅಥವಾ ಮದುವೆಯಾಗಿರುವ ಪುರುಷರು ಮಾತ್ರವೆ ಗರ್ಭಗುಡಿ ಪ್ರವೇಶಿಸುವಂತಿಲ್ಲ.
ಇವು ಭಾರತದಲ್ಲಿರುವ ಬ್ರಹ್ಮನ ವಿಶಿಷ್ಟ ದೇವಾಲಯಗಳು!
ಉಳಿದ ವಯಸ್ಕರು, ಹುಡುಗರು, ತರುಣರು ಹಾಗೂ ಬ್ರಹ್ಮಚಾರಿಗಳು ಮತ್ತು ಸನ್ಯಾಸಿಗಳು ಬ್ರಹ್ಮನ ದರ್ಶನ ಪಡೆಯಬಹುದು. ಮಿಕ್ಕ ಸಂಸಾರಿ ಪುರುಷರು ದೇವಾಲಯವನ್ನು ಪ್ರವೇಶಿಸಬಹುದಾದರೂ ಕೇವಲ ಹೊರ ಅಂಗಳದಲ್ಲಿ ಮಾತ್ರ. ತಾವು ಸಮರ್ಪಿಸಬೇಕಾದ ದಾನ, ಉಡುಗೊರೆಗಳನ್ನು ಸನ್ಯಾಸಿ ಅರ್ಚಕನೊಬ್ಬನ ಕೈಯಲ್ಲಿ ನೀಡಬೇಕು. ನಂತರ ನಿಮ್ಮ ಕಡೆಯಿಂದ ಆ ದಾನಗಳನ್ನು ಬ್ರಹ್ಮನಿಗೆ ಅರ್ಚಕರು ಅರ್ಪಿಸುತ್ತಾರೆ.

ಚಿತ್ರಕೃಪೆ: Redtigerxyz
ಈ ಎಲ್ಲ ವಿಧಾನವನ್ನು ನೀವು ಹೊರಗಡೆಗೆ ನಿಂತುಕೊಂಡೆ ಅನುಭವಿಸಬೇಕು. ಅಪ್ಪಿ ತಪ್ಪಿಯೂ ಬ್ರಹ್ಮನ ಸನ್ನಿಧಿಗೆ ತೆರಳಿ ನೋಡುವ ಹಾಗಿಲ್ಲ. ಹೆಚ್ಚೆಂದರೆ ಬ್ರಹ್ಮನ ಚಿತ್ರವನ್ನು ಮನದಲ್ಲಿ ಸ್ಮರಿಸಿಕೊಳ್ಳಬಹುದಷ್ಟೆ! ಇದು ಭಾರತದಲ್ಲೆ ಪ್ರಮುಖವಾದ ಬ್ರಹ್ಮನ ಏಕೈಕ ದೇವಾಲಯವೆಂದು ಹೇಳಲಾಗುವ ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮನ ದೇಗುಲ.

ಚಿತ್ರಕೃಪೆ: Vberger
ಪದ್ಮ ಪುರಾಣದಲ್ಲಿ ಉಲ್ಲೇಖಿಸಿರುವಂತೆ, ಒಮ್ಮೆ ವಜ್ರನಾಭನೆಂಬ ರಾಕ್ಷಸ ಬ್ರಹ್ಮನ ಮಕ್ಕಳಿಗೆ ಹಾಗೂ ಮನುಷ್ಯರಿಗೆ ಅಪಾರವಾಗಿ ಪೀಡಿಸುತ್ತಿದ್ದ. ಇದರಿಂದ ಕೊಪಗೊಂಡ ಬ್ರಹ್ಮ ತನ್ನ ಕಮಲವನ್ನೆ ಆಯುಧವನ್ನಾಗಿ ಮಾಡಿ ಆ ರಾಕ್ಷಸನನ್ನು ಸಂಹರಿಸಿದ. ಹೀಗೆ ಮಾಡುವಾಗ ಕಮಲದ ಎಲೆಗಳು ಭೂಮಿಯ ಮೂರು ವಿವಿಧ ಭಾಗಗಳಲ್ಲಿ ಬಿದ್ದವು.

ಪುಷ್ಕರ್ ಪಟ್ಟಣ, ಚಿತ್ರಕೃಪೆ: wikipedia
ನಂತರ ಭೂಮಿಗೆ ಬಂದ ಬ್ರಹ್ಮ ಆ ಎಲೆಗಳು ಬಿದ್ದ ಸ್ಥಳಗಳನ್ನು ಜೇಷ್ಠ ಪುಷ್ಕರ, ಮಧ್ಯ ಪುಷ್ಕರ ಹಾಗೂ ಕನಿಷ್ಠ ಪುಷ್ಕರ ಎಂದು ಹೆಸರಿಸಿದ. ಜೇಷ್ಠ ಪುಷ್ಕರವು ಸಾಕಷ್ಟು ಮಹತ್ವ ಪಡೆದಿದ್ದು ಪವಿತ್ರ ಪುಷ್ಕರ ಸರೋವರದಿಂದಾಗಿ ಪ್ರಸಿದ್ಧವಾಗಿದೆ. ಬ್ರಹ್ಮನು ಇದೆ ಸ್ಥಳದಲ್ಲಿ ಯಜ್ಞವನ್ನು ಮಾಡಿದ್ದನಂತೆ. ಈ ಸಂದರ್ಭದಲ್ಲೂ ಸಹ ಒಂದು ಪ್ರಸಂಗ ಜರುಗಿತ್ತೆಂದು ಹೇಳಲಾಗುತ್ತದೆ.

ಪುಷ್ಕರ್ ಸರೋವರ, ಚಿತ್ರಕೃಪೆ: wikipedia
ಯಜ್ಞ ಮಾಡುವಾಗ ಶಿವನು ಮಂತ್ರಗಾರನ ವೇಷ ಧರಿಸಿ ಕೈಯಲ್ಲಿ ಬುರುಡೆ ಹಿಡಿದು ಇಲ್ಲಿಗೆ ಬಂದಿದ್ದ. ಇದನ್ನು ಗಮನಿಸಿದ ಬ್ರಹ್ಮ ಅವನನ್ನು ಶಿವನೆಂದು ಗುರುತಿಸದೆ ತಡೆದು ಈ ರೀತಿಯಾಗಿ ಬಂದಿರುವುದಕ್ಕೆ ನಿಂದಿಸಿದ. ಇದರಿಂದ ಕೋಪಗೊಂಡ ಶಿವ ಆ ಸ್ಥಳವು ಸಂಪೂರ್ಣವಾಗಿ ತಲೆ ಬುರುಡೆಗಳಿಂದ ತುಂಬುವಂತೆ ಮಾಡಿದ. ನಂತರ ತಮ್ಮ ಜ್ಞಾನ ದೃಷ್ಟಿ ಉಪಯೋಗಿಸಿದ ಬ್ರಹ್ಮ ಆ ಮಂತ್ರಗಾರ ಸಾಕ್ಷಾತ್ ಶಿವನೆಂದು ಅರಿತ.
ಹೀಗೆ ಸಂತಸಗೊಂಡ ಬ್ರಹ್ಮ ಶಿವನನ್ನು ಯಜ್ಞಕ್ಕೆ ಆಹ್ವಾನಿಸಿದ ಹಾಗೂ ಶಿವನು ಭಾಗವಹಿಸಿದ್ದರ ಗೌರವಾರ್ಥವಾಗಿ ಒಂದು ದೇವಾಲಯವನ್ನು ನಿರ್ಮಿಸಿದ. ಇಂದಿಗೂ ಪುಷ್ಕರದ ಬ್ರಹ್ಮನ ದೇವಾಲದ ಬಳಿ ಸ್ಥಿತವಿರುವ ಗುಹೆಯೊಂದರಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದ್ದು ಇದನ್ನು ಆಪ್ತೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಇಲ್ಲಿರುವ ಶಿವಲಿಂಗವು ದೊಡ್ಡದಾಗಿದ್ದು ತಾಮ್ರದ ಹಾವಿನಿಂದ ಸುತ್ತಲಾಗಿದೆ.

ಸಾವಿತ್ರಿ ದೇವಲಯ, ಚಿತ್ರಕೃಪೆ: Scott Dexter
ಅಲ್ಲದೆ, ಬ್ರಹ್ಮನ ಪತ್ನಿಯರಾದ ಸಾವಿತ್ರಿ ಹಾಗೂ ಗಾಯಿತ್ರಿಗೆ ಮುಡಿಪಾದ ದೇವಾಲಯಗಳೂ ಸಹ ಇಲ್ಲಿದ್ದು ಬ್ರಹ್ಮನ ದೇವಾಲಯದ ಎರಡು ಬದಿಗಳಲ್ಲಿರುವ ಗುಡ್ಡಗಳ ಮೇಲೆ ಈ ಎರಡೂ ದೇವಾಲಯಗಳಿವೆ. ಬ್ರಹ್ಮನಿಂದ ಮುನಿಸಿಕೊಂಡ ಸಾವಿತ್ರಿಯ ದೇವಾಲಯವು ರತ್ನಗಿರಿ ಎಂಬ ಬೆಟ್ಟದ ಮೇಲಿದ್ದು ಒಂದು ಘಂಟೆಯ ಚಾರಣದ ಮೂಲಕ ಮಾತ್ರವೆ ತಲುಪಬಹುದಾಗಿದೆ. ಇನ್ನೂ ಗಾಯಿತ್ರಿಯ ದೇವಾಲಯವು ಚಿಕ್ಕ ಗುಡ್ಡದ ಮೇಲಿದೆ.
ಪುಷ್ಕರ್ ನಲ್ಲಿ ಆಚರಿಸಲಾಗುವ ಒಂಟೆ ಉತ್ಸವ ಗೊತ್ತೆ?
ಪುಷ್ಕರ್ ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣ ಕೇಂದ್ರವಾಗಿದೆ. ಅಜ್ಮೇರ್ ನಗರ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿ ಪುಷ್ಕರ್ ಪಟ್ಟಣವಿದ್ದು ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಅಜ್ಮೇರ್ ರೈಲು ನಿಲ್ದಾಣ ಹೊಂದಿದ್ದು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.


Click it and Unblock the Notifications

















