ಹಿಂದೂಗಳು ನಡೆದುಕೊಳ್ಳುವ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ದೇವರು ಜಗತ್ಪಾಲಕನೆಂದೆ ಪ್ರಸಿದ್ಧ. ಕಾಲಕಾಲಕ್ಕೆ ಭೂಮಿಯ ಮೇಲೆ ವಿವಿಧ ಅವತಾರಗಳನ್ನು ಎತ್ತಿ ಧರ್ಮವನ್ನು ಕಾಪಾಡುತ್ತಾನೆಂಬ ನಂಬಿಕೆ ಇಂದಿಗೂ ಹಿಂದೂಗಳಲ್ಲಿ ಪ್ರಚಲಿತದಲ್ಲಿದೆ. ಅದಕ್ಕಾಗಿಯೆ ವಿಷ್ಣು ಭಗವಂತನ ದಶಾವತಾರಗಳ ಕಥೆಗಳು ಪುರಾಣ, ಪುಣ್ಯ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ.
ಭಾರತದಲ್ಲಿಯೂ ಸಹ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಶೋಧಿಸಿದಾಗ ಅನೇಕಾನೇಕ ವಿಷ್ಣುವಿಗೆ ಮುಡಿಪಾದ ದೇವಾಲಯಗಳು ಎಲ್ಲೆಡೆ ಕಂಡುಬರುತ್ತವೆ. ವಿವಿಧ ಪ್ರಾಂತ್ಯಗಳಲ್ಲಿ ವಿಷ್ಣು ನರಸಿಂಹನಾಗಿ, ವೆಂಕಟೇಶ್ವರನಾಗಿ, ನಾರಾಯಣನಾಗಿ ಭಕ್ತಿ ಶೃದ್ಧೆಗಳಿಂದ ಪೂಜಿಸಲ್ಪಡುತ್ತಾನೆ. ಇನ್ನೂ ವಿಷ್ಣುವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು, ಸ್ಥಳ ಪುರಾಣಗಳು ವಿಶಿಷ್ಟವಾಗಿ ಹಲವೆಡೆ ಕಂಡುಬರುತ್ತವೆ.
ವಿಶೇಷ ಲೇಖನ : ಗಣೇಶನ ವಿಶೇಷ ದೇವಾಲಯಗಳು
ಕರ್ನಾಟಕ ರಾಜ್ಯದಲ್ಲಿಯೂ ಸಹ ವಿಷ್ಣುವಿಗೆ ಮುಡಿಪಾದ ಹಾಗೂ ಅವನ ಇತರೆ ಹಲವು ಅವತಾರಗಳಿಗೆ ಮುಡಿಪಾದ ದಿವ್ಯ ಸನ್ನಿಧಿಗಳು, ದೇವಾಲಯಗಳು ರಾಜ್ಯದ ಹಲವು ಭಾಗಗಳಲ್ಲಿ, ಸ್ಥಳ, ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. ಈ ದೇವಾಲಯಗಳು ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಗಳಾಗಿರುವುದು ವಿಶೇಷವೆ ಸರಿ.
ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿ ಕಂಡುಬರುವ ಕೆಲವು ಆಯ್ದ ಪ್ರಸಿದ್ಧ ವಿಷ್ಣು ಹಾಗೂ ಆತನ ಇತರೆ ಅವತಾರಗಳಿಗೆ ಸಂಬಂಧಿಸಿದಂತೆ ನೆಲೆಸಿರುವ ಪುಣ್ಯ ಕ್ಷೇತ್ರಗಳು ಹಾಗೂ ದೇವಾಲಯಗಳ ಕುರಿತು ತಿಳಿಯಿರಿ.
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಇನ್ನೊಂದು ವಿಷಯವೆಂದರೆ ವಿಷ್ಣುವಿಗೆ ಮುಡಿಪಾದ ದೇವಾಲಯಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ನೇಪಾಳ, ಅಮೇರಿಕ ಹಾಗೂ ಶ್ರೀಲಂಕಾ ದೇಶಗಳಲ್ಲೂ ಸಹ ಸ್ಥಿವಿದೆ. ಕರ್ನಾಟಕದಲ್ಲಿರುವ ಪುರಾತನ ಹಾಗೂ ಆಯ್ದ ವಿಷ್ಣು ದೇವಾಲಯಗಳ ಕುರಿತು ತಿಳಿಯುವ ಮೊದಲು ನೇಪಾಳ ದೇಶದ ಕಠ್ಮಂಡುವಿನಲ್ಲಿರುವ ದೇವಾಲಯದ ಕೊಳದಲ್ಲಿರುವ ಸುಂದರ ವಿಷ್ಣು ಪ್ರತಿಮೆಯನ್ನು ನೋಡಿ ಆನಂದಿಸಿ.
ಚಿತ್ರಕೃಪೆ: Ksssshl
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಕನಕಾಚಲಪತಿ ದೇವಾಲಯ : 16 ನೆಯ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು ವಿಷ್ಣು ದೇವರಿಗೆ ಮುಡಿಪಾಗಿದೆ. ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಎಂಬಲ್ಲಿ ವಿಷ್ಣುವಿನ ಈ ದೇವಾಲಯವಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಹಿಂದೆ ಸ್ವರ್ಣಗಿರಿ ಎಂದಿ ಕರೆಯಲ್ಪಡುತ್ತಿದ್ದ ಕನ್ಕಗಿರಿಯು ಕೊಪ್ಪಳ ನಗರ ಕೇಂದ್ರದಿಂದ ಕೇವಲ ಮೂರು ಕಿ.ಮೀ, ಬೆಳಗಾವಿ ನಗರದಿಂದ 200 ಕಿ.ಮೀ ಹಾಗೂ ಬೆಂಗಳೂರಿನಿಂದ 380 ಕಿ..ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಪ್ರಸ್ತುತ ಈ ಸ್ಥಳಕ್ಕಿರುವ ಕನಕಗಿರಿ ಎಂಬ ಹೆಸರು ಹಿಂದೆ ಈ ಪ್ರದೇಶದಲ್ಲಿ ತಪಸ್ಸುಗೈದಿದ್ದ ಕನಕ ಮುನಿಗಳಿಂದ ಬಂದುದಾಗಿದೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಕನಕಾಚಲಪತಿ ದೇವಾಲಯವು ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿದ್ದ ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಸ್ಥಾನವಾಗಿದೆ. ಭಾರತೀಯ ಪುರಾತತ್ವ ಇಲಾಖೆಯಡಿಯಲ್ಲಿ ಬರುವ ಈ ದೇವಾಲಯವು ಸಂರಕ್ಷಿಸಲ್ಪಟ್ಟ ರಚನೆಯಾಗಿದೆ. ಮೂರು ಗೋಪುರಗಳು ಹಾಗೂ ವಿಶಾಲವಾದ ಆವರಣ ಹೊಂದಿರುವ ದೇವಾಲಯವು ಪ್ರಸಿದ್ಧ ಧಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸಿ ಆಕರ್ಷಣೆಯೂ ಆಗಿದೆ.
ಚಿತ್ರಕೃಪೆ: Manjunath Doddamani Gajendragad
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಪ್ರತಿ ವರ್ಷ ಸಾಕಷ್ಟು ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಪಡೆಯುವ ಈ ದೇವಾಲಯದಲ್ಲಿ ಪ್ರತಿ ಫೆಬ್ರುವರಿ ತಿಂಗಳಿನಲ್ಲಿ ಕನಕಾಚಲಪತಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಕನಕಾಚಲಪತಿಯಾಗಿ ಭಕ್ತರನ್ನು ಹರಸುವ ವಿಷ್ಣುವಿನ ದರುಶನ ಕೋರಿ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಚೆನ್ನಕೇಶವ ದೇವಾಲಯ : ಇದೊಂದು ಪ್ರಸಿದ್ಧಿ ಪಡೆದ ದೇವಾಲಯವೇನಲ್ಲ. ಈ ದೇವಾಲಯ ಪ್ರಸ್ತುತ ಪಾಳು ಬಿದ್ದಿದೆ ಆದರೂ ಇದಕ್ಕಿರುವ ಐತಿಹಾಸಿಕ ಶ್ರೀಮಂತಿಕೆ ಅಪಾರ. ವಿಷ್ಣುವಿಗೆ ಮುಡಿಪಾದ ಈ ದೇವಾಲಯವಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸದಲಿ ಎಂಬ ಗ್ರಾಮದಲ್ಲಿ. ಈ ಸದಲಿ ಎಂಬ ಹೆಸರೂ ಸಹ ಪಾಂಡವರಲ್ಲಿ ಕೊನೆಯವನಾದ ಸಹದೇವನಿಂದ ಬಂದಿತೆನ್ನಲಾಗಿದೆ. ಸಹದೇವಪಲ್ಲಿ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ ಕ್ರಮೇಣವಾಗಿ ಸದಲಿ ಎಂಬ ಹೆಸರು ಪಡೆಯಿತು.
ಚಿತ್ರಕೃಪೆ: Sreenivasa S C
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಚೆಲುವನಾರಾಯಣಸ್ವಾಮಿ ದೇವಾಲಯ : ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ವಿಷ್ಣುವಿನ ಅವತಾರ ಚೆಲುವನಾರಾಯಣಸ್ವಾಮಿಗೆ ಮುಡಿಪಾದ ದೇವಾಲಯವು ಪ್ರಖ್ಯಾತ ಧಾರ್ಮಿಕ ಆಕರ್ಷಣೆಯಾಗಿದೆ. ಕಾವೇರಿ ಕಣಿವೆಗೆ ಅಭಿಮುಖವಾಗಿ ನೆಲೆಸಿರುವ ಯಾದವಗಿರಿ ಅಥವಾ ಯದುಗಿರಿ ಬೆಟ್ಟಗಳ ಮೇಲೆ ಸ್ಥಿತವಿರುವ ಈ ದೇವಾಲಯ ಕ್ಷೇತ್ರವು ತಿರುನಾರಾಯಣಪುರ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತದೆ.
ಚಿತ್ರಕೃಪೆ: Prathyush Thomas
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ದೇವಾಲಯವು ವಿಶಾಲವಾಗಿದ್ದು ಚೌಕಾಕಾರದ ರಚನೆಯಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಉತ್ಸವಮೂರ್ತಿಯು ಲೋಹದ ಮೂರ್ತಿಯಾಗಿದ್ದು ಚೆಲುವಪಿಳ್ಳೆ ಅಥವಾ ಚೆಲುವನಾರಾಯಣ ಸ್ವಾಮಿ ಎಂದು ಕರೆಯಲಾಗುತ್ತದೆ. ಮೂಲತಃ ಈ ಸ್ವಾಮಿಯ ಹೆಸರು ರಾಮಪ್ರಿಯ ಎನ್ನಲಾಗಿದೆ.
ಚಿತ್ರಕೃಪೆ: Kiran Shankar
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಪ್ರಚಲಿತದಲ್ಲಿರುವ ದಂತ ಕಥೆಯ ಪ್ರಕಾರ, ಶ್ರೀ ರಾಮಾನುಜಾಚಾರ್ಯರಿಂದ ಈ ದೇವಸ್ಥಾನದ ಲೋಹದ ಉತ್ಸವಮೂರ್ತಿಯು ಕಳೆದು ಮತ್ತೆ ಸಿಕ್ಕಿತೆಂಬ ಪ್ರತೀತಿಯಿದೆ. ಇನ್ನೂ ಮೈಸೂರಿ ಪುರಾತತ್ವ ಇಲಾಖೆಯು ಸಮಗ್ರ ಅನ್ವೇಷಣೆ ನಡೆಸಿ ವಾರ್ಷಿಕ ವರದಿಯಲ್ಲಿ ಹೇಳಿರುವಂತೆ, ರಾಮಾನುಜರಿಗಿಂತಲೂ ಮುಂಚೆಯೆ ಚೆಲುವನಾರಾಯಣಸ್ವಾಮಿಯನ್ನು ಇಲ್ಲಿ ಪೂಜಿಸಲಾಗುತ್ತಿತ್ತು. ರಾಮಾನುಜಾಚಾರ್ಯರು ಇಲ್ಲಿಗೆ ಬಂದ ಬಳಿಕ ತಮ್ಮ ಪ್ರಭಾವ ಬಳಸಿ ಈ ದೇವಾಲಯಕ್ಕೆ ಹೆಚ್ಚಿನ ಆದ್ಯತೆ, ಪ್ರಾಶಸ್ತ್ಯ ತಂದುಕೊಟ್ಟಿದ್ದಲ್ಲದೆ ದೇವಾಲಯವನ್ನು ನವೀಕರಿದರು ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಇನ್ನೂ ಮೈಸೂರು ಸಂಸ್ಥಾನದ ದೊರೆಗಳಿಂದ ಈ ದೇವಾಲಯವು ಯಾವಾಗಲೂ ಹೆಚ್ಚಿನ ಆದ್ಯತೆ ಪಡೆದಿದೆ. ಅದಕ್ಕೆ ಪೂರಕವೆಂಬಂತೆ ಅತ್ಯಂತ ಮೌಲ್ಯಯುತವಾದ ವಜ್ರಾಭರಣಗಳು ಮೈಸೂರು ರಾಜರಿಂದ ಈ ದೇವಸ್ಥಾನಕ್ಕೆ ಕಾಣಿಕೆಯಾಗಿ ಲಭಿಸಿವೆ. ಆಕರ್ಷಕವಾಗಿ ಕೆತ್ತಲಾದ ದೇವಾಲಯದ ಖಂಬಗಳು.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಮೈಸೂರು ಸಂಸ್ಥಾನದ ದೊರೆಯಾದ ರಾಜಾ ವಡೇಯರ್ (1578-1617) ಅವರು ಚೆಲುವ ನಾರಾಯಣಸ್ವಾಮಿಯ ಅಪ್ರತಿಮ ಭಕ್ತರಾಗಿದ್ದರು ಹಾಗೂ ವಿಷ್ಣುವಿನ ಈ ದೇವಾಲಯಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದರು. ಬಂಗಾರ ಹಾಗೂ ಅತ್ಯಮೂಲ್ಯವಾದ ಕಲ್ಲುಗಳಿಂದ ರಚಿತವಾದ ಕಿರೀಟವನ್ನು ಅವರು ಈ ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದರು. ಅದನ್ನು ರಾಜ ಮುಡಿ ಎಂದೆ ಕರೆಯಲಾಗುತ್ತದೆ. ಮೇಲುಕೋಟೆ ಪಟ್ಟಣದ ಪಾಕ್ಷಿಕ ನೋಟ.
ಚಿತ್ರಕೃಪೆ: Pradeep Kumbhashi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಇಂದಿಗೂ ದೇವಾಲಯಕ್ಕೆ ಸಂಬಂಧಿಸಿದ ಅನೇಕ ವಜ್ರಾಭರಣಗಳು ಸರ್ಕಾರದ ಸಂರಕ್ಷಣೆಯಲ್ಲಿದ್ದು ವರ್ಷದ ನಿರ್ದಿಷ್ಟ ಸಮಯದಲ್ಲಿ ಜರುಗುವ ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ಉತ್ಸವದ ಸಂದರ್ಭದಲ್ಲಿ ಆ ಆಭರಣಗಳನ್ನು ಸ್ವಾಮಿಗೆ ಹಾಕಿ ಅಲಂಕರಿಸಿ ಸಡಗರದಿಂದ ಉತ್ಸವ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸಾಕಷ್ಟು ಜನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಕಲ್ಯಾಣಿ.
ಚಿತ್ರಕೃಪೆ: innacoz
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಮೇಲುಕೋಟೆಯ ಗುಡ್ಡದ ಮೇಲೆ ವಿಷ್ಣುವಿನ ಮತ್ತೊಂದು ಪ್ರಸಿದ್ಧವಾದ ದೇಗುಲವನ್ನು ಕಾಣಬಹುದಾಗಿದೆ. ಅದುವೆ ಯೋಗ ನರಸಿಂಹಸ್ವಾಮಿ ದೇವಾಲಯ. ನರಸಿಂಹ ಸ್ವಾಮಿಗೆ ಮುಡಿಪಾಗಿರುವ ಈ ದೇವಸ್ಥಾನದ ವಿಗ್ರಹವನ್ನು ಸ್ವತಃ ಪ್ರಹ್ಲಾದನೆ ಪ್ರತಿಷ್ಠಾಪಿಸಿದ್ದಾನೆಂದು ಇಲ್ಲಿನ ಸ್ಥಳೀಯ ಪುರಾಣ ಹೇಳುತ್ತದೆ.
ಚಿತ್ರಕೃಪೆ: HPNadig
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಬೇಲೂರಿನ ಚೆನ್ನಕೇಶವ ದೇವಾಲಯ : ಕರ್ನಾಟಕದ ಬೇಲೂರು-ಹಳೆಬೀಡು ತಾಣಗಳು ಶಿಲ್ಪಕಲೆಗೆ ವಿಶ್ವವಿಖ್ಯಾತವಾದ ಸ್ಥಳಗಳಾಗಿವೆ. ಬೇಲೂರಿನಲ್ಲಿರುವ ವಿಷ್ಣುವಿನ ರೂಪ ಚೆನ್ನಕೇಶವನ ದೇವಾಲಯವಂತೂ ನೋಡಲು ಸಾಕಷ್ಟು ಆಕರ್ಷಣೀಯವಾಗಿದೆ. ಉತ್ಕೃಷ್ಟ ಕಲಾಕೃತಿ ಶಿಲ್ಪಕಲೆಗೆ ಹೆಸರುವಾಸಿಯಾದ ಚೆನ್ನಕೇಶವನ ದೇವಸ್ಥಾನ ಇಂದಿಗೂ ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
"ಸಾಫ್ಟ್ ಸೋಪ್" ಎಂಬ ವಿಶೇಷ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಚೆನ್ನಕೇಶವ ದೇವಾಲಯದಲ್ಲಿ ಚೆನ್ನಕೇಶವನು ವಿಷ್ಣುವಿನ ಅವತಾರವಾಗಿಯೆ ಪೂಜಿಸಲ್ಪಡುತ್ತಾನೆ. ಸುಂದರ ಕೆತ್ತನೆ ಹೊಂದಿರುವ 48 ಕಂಬಗಳಿರುವ ಈ ದೇವಸ್ಥಾನವು ಕ್ರಿ.ಶ.1117 ರಲ್ಲಿ ನಿರ್ಮಾಣಗೊಂಡಿದೆ ಎಂದು ಐತಿಹಾಸಿಕ ಐತಿಹ್ಯವಿದೆ.
ಚಿತ್ರಕೃಪೆ: Redtigerxyz
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೆ ಇಲ್ಲಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿನ ಕಥೆ, ಉಪನಿಷತ್ ಗಳನ್ನು ಚಿತ್ರ ರೂಪದಲ್ಲಿ ಕೆತ್ತಲಾಗಿದೆ. ಇವುಗಳೊಂದಿಗೆ ನವಗ್ರಹಗಳ ಕುರಿತಾದ ಮೂರ್ತಿಗಳನ್ನೂ ಇಲ್ಲಿ ಸುಂದರವಾಗಿ ಕಲ್ಲಿನಲ್ಲಿ ಕೆತ್ತಲಾಗಿದೆ. ಈ ದೇವಾಲಯದ ವರಾಂಡದೊಳಗೆ ಇರುವ ಹಲವಾರು ದೇವಾಲಯಗಳು ವಿಶಿಷ್ಟ ಶೈಲಿಯಲ್ಲಿ ಕಟ್ಟಿರುವುದರಿಂದ ಪ್ರವಾಸಿಗರಿಗೆ ಹಿಂದಿನ ಜನರ ಕಲಾ ಕೌಶಲ್ಯವು ಬೆರಗು ಮೂಡಿಸುತ್ತವೆ.
ಚಿತ್ರಕೃಪೆ: Pradam
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಗುಂಜನರಸಿಂಹಸ್ವಾಮಿ ದೇವಾಲಯ : ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ಕ್ಷೇತ್ರಕ್ಕೆ ನರಸೀಪುರ ಎಂಬ ಹೆಸರು ಕೂಡ ಇಲ್ಲಿ ಹರಿದಿರುವ ಕಬಿನಿ ನದಿಯ ಬಲ ದಂಡೆಯ ಮೇಲೆ ನೆಲೆಸಿರುವ ಗುಂಜ ನರಸಿಂಹಸ್ವಾಮಿ ದೇವಾಲಯದಿಂದ ಬಂದುದಾಗಿದೆ ಎನ್ನುತ್ತದೆ ಇಲ್ಲಿನ ಐತಿಹ್ಯ. ಕರ್ನಾಟ್ಕದ ಏಕೈಕ ಕುಂಭ ಮೇಳದ ಸ್ಥಳವಾಗಿರುವುದರಿಂದ ಇದನ್ನು ಪ್ರಯಾಗ್ ನಷ್ಟೆ ಪವಿತ್ರವಾದುದೆಂದು ಭಾವಿಸಲಾಗುತ್ತದೆ. ಇದನ್ನು ಒಮ್ಮೊಮ್ಮೆ ದಕ್ಷಿಣ ಕಾಶಿ ಕ್ಷೇತ್ರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: romana klee
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಇಲ್ಲಿನ ನರಸೀಹಸ್ವಾಮಿ ದೇವಸ್ಥಾನಕ್ಕೆ ರೋಚಕವಾದ ಹಿನ್ನಿಲೆಯಿದೆ. ಅದರಂತೆ, ಒಂದೊಮ್ಮೆ ಇಲ್ಲಿ ವಾಸವಿದ್ದ ಅಗಸನೊಬ್ಬನ ಕನಸಿನಲ್ಲಿ ದೇವರು ಪ್ರತ್ಯಕ್ಷನಾಗಿ ಆತ ಬಟ್ಟೆ ಒಗೆಯಲು ಬಳಸುತ್ತಿದ್ದ ಕಲ್ಲಿನ ಕೆಳಗೆ ದೇವರ ವಿಗ್ರಹವೊಂದಿದ್ದು ಅದಕ್ಕಾಗಿ ದೇವಾಲಯ ನಿರ್ಮಿಸುವಂತೆ ಆದೇಶಿಸಿದ. ಅಲ್ಲದೆ ಅಲ್ಲಿಯೆ ಹುದುಗಿರುವ ಚಿನ್ನದ ನಾಣ್ಯಗಳನ್ನು ದೇವಾಲಯ ನಿರ್ಮಾಣಕ್ಕಾಗಿ ಬಳಸಲು ಸೂಚಿಸಿದ. ಆಗ ಅಗಸನು ತನ್ನ ಇಚ್ಛೆಯಂತೆ ಕಾಶಿಗೆ ಹೋಗುವ ಕುರಿತು ಭಗವಂತನಲ್ಲಿ ಕೇಳಿಕೊಂಡ. ಗುಂಜ ನರಸಿಂಹಸ್ವಾಮಿಯ ಮೂಲ ವಿಗ್ರಹ, ಗರ್ಭಗುಡಿಯಲ್ಲಿ...ನವೀಕರಿಸಿದ ನಂತರ ಆದರೆ ಪ್ರತಿಷ್ಠಾಪನೆಯ ಮೊದಲು.
ಚಿತ್ರಕೃಪೆ: Nvvchar
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಅದಕ್ಕೆ ಸ್ವತಃ ಭಗವಂತನು ಅಗಸನನ್ನು ಕುರಿತು, ಕಾಶಿಗೆ ಭೇಟಿ ನೀಡುವ ಅವಶ್ಯಕತೆಯಿಲ್ಲದಾಗಿಯೂ, ಕಾಶಿಯ ಭೇಟಿಯಿಂದ ಪ್ರಾಪ್ತವಾಗುವ ಪುಣ್ಯವು ಬೆಳೆಯುವ ಗುಲಗಂಜಿ ಬೀಜಗಳಂತೆ (ಬಳ್ಳಿಯಂತೆ) ಅವನಿಗೆ ಆಗಲೆ ಲಭಿಸಿದ್ದಾಗಿಯೂ ಹೇಳುತ್ತಾನೆ. ಹೀಗಾಗಿ ಇಲ್ಲಿ ನೆಲೆಸಿರುವ ನರಸಿಂಹನು ಗುಂಜ ನರಸಿಂಹನಾಗಿ ದರುಶನ ಕೋರಿ ಬರುವ ಭಕ್ತರನ್ನು ಹರಸುತ್ತಿದ್ದಾನೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Nvvchar
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಬೀದರಿನಲ್ಲಿರುವ ಶ್ರೀಕ್ಷೇತ್ರ ಝರಣಿ ನರಸಿಂಹ ಗುಹಾ ದೇವಾಲಯ ವಿಷ್ಣುವಿನ ಅವತಾರ ನರಸಿಂಹನ ಅತಿ ಪ್ರಮುಖ ದೇವಸ್ಥಾನವೆಂದೆ ಹೇಳಬಹುದು. ಇದೊಂದು ಸುರಂಗ ಮಾರ್ಗ ಹೊಂದಿರುವ ಕೊನೆಯಲ್ಲಿ ಗೋಡೆಯ ಮೇಲೆ ಸ್ವಯಂಭೂ ನರಸಿಂಹನಿರುವ ದೇವಾಲಯ ಎನ್ನಲಾಗುತ್ತದೆ. ಒಟ್ಟಾರೆ ಸುರಂಗ ಮಾರ್ಗವು 300 ಮೀ. ಗಳಷ್ಟು ಉದ್ದವಿದೆ. ಇನ್ನೊಂದು ವಿಶೇಷವೆಂದರೆ ಈ ಸುರಂಗ ಮಾರ್ಗದಲ್ಲಿ ನೂರಾರು ವರ್ಷಗಳಿಂದ ನೀರಿನ ಮೂಲವೊಂದು ಹರಿದಿರುವುದು.
ಚಿತ್ರಕೃಪೆ: epuja.co.in
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ದಂತಕಥೆಯ ಪ್ರಕಾರ, ಹಿಂದೆ ನರಸಿಂಹನು ಹಿರಣ್ಯಕಶಿಪು ರಾಕ್ಷಸನನ್ನು ಕೊಂದ ನಂತರ ಮತ್ತೆ ಜಲಾಸುರನೆಂಬ ರಾಕ್ಷಸನನ್ನು ಸಂಹರಿಸಲು ತೆರಳುತ್ತಾನೆ. ಜಲಾಸುರ ಶಿವನ ಅಪ್ರತಿಮ ಭಕ್ತ. ಆದರೂ ಪಾಪ ಕೃತ್ಯಗಳ ಫಲವಾಗಿ ನರಿಸಿಂಹ ದೇವರಿಂದ ಸಂಹರಿಸಲ್ಪಡುತ್ತಾನೆ ಮತ್ತು ನೀರಾಗಿ ನರಸಿಂಹನ ಪಾದಗಳಡಿಯಿಂದ ಹರಿಯಲಾರಂಭಿಸುತ್ತಾನೆ. ಇಂದಿಗೂ ಜಲಾಸುರನೆ ಆ ನೀರಾಗಿ ಹರಿಯುತ್ತಿದ್ದಾನೆ ಎಂಬ ಪ್ರತೀತಿಯಿದೆ. ಸುರಂಗ ಮಾರ್ಗವು ಸುಮಾರು 300 ಮೀ ಉದ್ದವಿದ್ದು ನೀರಿನಿಂದಾವೃತವಾಗಿದೆ. ನೀರು ಗರಿಷ್ಠ ನಾಲ್ಕು ಅಡಿಗಳಷ್ಟು ಎತ್ತರವಿದೆ. ಉಸಿರಾಡಲು ಕೃತಕ ವೆಂಟಿಲೇಟರ್ ಗಳನ್ನು ಹಾಗೂ ನಡೆಯಲು ಅನುಕೂಲವಾಗುವಂತೆ ಕೃತಕ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಂಗದ ಗೋಡೆಗಳ ಮೇಲೆ ಬಾವಲಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರಿಂದ ಸಾಕಷ್ಟು ರೋಮಾಂಚನವೂ ಸಹ ಉಂಟಾಗುತ್ತದೆ. ಅಂತ್ಯದಲ್ಲಿ ಸ್ವಯಂಭೂ ನರಸಿಂಹ ಹಾಗೂ ಜಲಾಸುರನು ಪೂಜಿಸುತ್ತಿದ್ದ ಶಿವಲಿಂಗವನ್ನು ಕಾಣಬಹುದು. ಏಕಕಾಲದಲ್ಲಿ ಕೇವಲ ಎಂಟು ಜನರು ಮಾತ್ರ ಈ ದರ್ಶನ ಮಾಡಬಹುದು. ಮಿಕ್ಕವರು ನೀರಿನಲ್ಲೆ ತಮ್ಮ ಸರತಿಗಾಗಿ ಕಾಯಬೇಕು.
ಚಿತ್ರಕೃಪೆ: wikimapia
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಗದಗ : ಹುಬ್ಬಳಿ-ಧಾರವಾಡ ಅವಳಿ ನಗರಗಳಂತೆಯೆ ಗದಗ-ಬೆಟಗೇರಿಯೂ ಸಹ ಒಂದೆ ಆಡಳಿತ ನಿರ್ವಹಣೆ ಹೊಂದಿರುವ ನಗರವಾಗಿದೆ. ಅದರಲ್ಲೂ ವಿಶೇಷವಾಗಿ ಗದಗಿನಲ್ಲಿ ಸಾಕಷ್ಟು ಪುರಾತನ ದೇಗುಲಗಳನ್ನು ಕಾಣಬಹುದು. ಗದಗಿನಲ್ಲಿರುವ ವಿಷ್ಣುವಿಗೆ ಮುಡಿಪಾದ ಪ್ರಮುಖ ದೇವಸ್ಥಾನವೆಂದರೆ ವೀರನಾರಾಯಣ ದೇವಸ್ಥಾನ.
ಚಿತ್ರಕೃಪೆ: Vinayak Kulkarni
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ರಂಗನಾಥಸ್ವಾಮಿ ದೇವಾಲಯ : ಬೆಂಗಳೂರಿನ ಹೃದಯ ಭಾಗವಾದ ಚಿಕ್ಕಪೇಟೆ ಪ್ರದೇಶದಲ್ಲಿ ಈ ಸುಂದರ ರಂಗನಾಥ ಸ್ವಾಮಿಯ ದೇವಾಲಯವಿದೆ. 16 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿರುವ ಈ ದೇವಾಲಯವು ವಿಜಯನಗರ ವಾಸ್ತುಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ರಂಗನಾಥನು ತನ್ನ ಪತ್ನಿಯರಾದ ಶ್ರೀದೇವಿ ಹಾಗೂ ನೀಲಾ ದೇವಿಯರ ಸಮೇತನಾಗಿ ನೆಲೆಸಿದ್ದಾನೆ. ದೇವಾಲಯದ ಮುಂದಿನ ರಸ್ತೆಯನ್ನು ದೇವಾಲಯ ಬೀದಿ ಅಥವಾ "ಟೆಂಪಲ್ ಸ್ಟ್ರೀಟ್" ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: ASG Balaji
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಕೋಟೆ ವೆಂಕಟರಮಣಸ್ವಾಮಿ ದೇವಾಲಯ : ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿ ಈ ದೇವಾಲಯವಿರುವುದನ್ನು ಕಾಣಬಹುದು. ಟಿಪ್ಪು ಸುಲ್ತಾನನ ಅರಮನೆಯ ಪಕ್ಕದಲ್ಲೆ ಕೋಟೆ ವೆಂಕಟರಮಣನ ದೇವಸ್ಥಾನವಿದ್ದು ಸಾಕಷ್ಟು ಭಕ್ತಾದಿಗಳು ದಿನನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Omshivaprakash
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ ದೇವಾಲಯ : ಬೆಂಗಳೂರಿನ ರಾಜಾಜಿ ನಗರ ಬಡಾವಣೆಯ ಐದನೆಯ ಹಾಗೂ ಆರನೆಯ ಬ್ಲಾಕುಗಳ ಮಧ್ಯದಲ್ಲಿ ಈ ಕ್ಷೇತ್ರವಿದೆ. ಇಲ್ಲಿನ ದೇವಾಲಯದಲ್ಲಿ ಶಿವ, ವಿಷ್ಣು, ದೇವಿ ಹಾಗೂ ಇತರೆ ದೇವರುಗಳ ಸನ್ನಿಧಿಗಳಿದ್ದು ವಿಶೇಷವಾಗಿ ವಿಷ್ಣು ಶಯನಾವಸ್ಥೆಯಲ್ಲಿ ಪ್ರತಿಷ್ಠಾಪಿತನಾಗಿರುವುದು ಇಲ್ಲಿನ ವಿಶೇಷ. ಪ್ರತಿ ನಿತ್ಯ ಸಾಕಷ್ಟು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: wikimedia
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಲಕ್ಷ್ಮಿಕಾಂತ ದೇವಾಲಯ, ಕಾಳಲೆ : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಳಲೆ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. 18 ನೆಯ ಶತಮಾನಕ್ಕೆ ಸಂಬಂಧಿಸಿದ ಈ ದೇವಾಲಯವು ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿದ್ದು ವಿಷ್ಣುವಿಗೆ ಮುಡಿಪಾದ ದೇವಸ್ಥಾನವಾಗಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಕರಿಘಟ್ಟ ದೇವಾಲಯ : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬರುವ ಶ್ರೀರಂಗಪಟ್ಟಣಕ್ಕಿಂತ ಕೆಲವು ಕಿ.ಮೀ ಗಳ ಮುಂಚೆಯೆ ಇರುವ ಕರಿಘಟ್ಟ ಎಂಬ ಬೆಟ್ಟವೊಂದರ ಮೇಲೆ ಈ ದೇವಾಲಯವಿದೆ. ಈ ದೇವಾಲಯವು ವಿಷ್ಣುವಿಗೆ ಮುಡಿಪಾಗಿದ್ದು ಅವನನ್ನು ಕರಿಗಿರಿವಾಸ, ಶ್ರೀನಿವಾಸ, ಬೈರಾಗಿ ವೆಂಕಟರಮಣ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ವರಾಹ ಪುರಾಣದಲ್ಲಿ ಈ ಕ್ಷೇತ್ರವನ್ನು ನೀಲಾಚಲ ಎಂದು ಉಲ್ಲೇಖಿಸಲಾಗಿದ್ದು ಜೀವನದಲ್ಲಿ ಕಷ್ಟ ಪಡುತ್ತಿರುವವರು ಕೆಲವು ನಿರ್ದಿಷ್ಟ ಪೂಜೆಗಳನ್ನು ಇಲ್ಲಿ ಮಾಡುವುದರಿಂದ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆಂದು ನಂಬಲಾಗಿದೆ.
ಚಿತ್ರಕೃಪೆ: Pratheepps
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಚೆನ್ನಕೇಶವ ದೇವಾಲಯ, ಸೋಮನಾಥಪುರ : ಮೂಲವಾಗಿ ಸೋಮನಾಥಪುರ ಒಂದು ಗ್ರಾಮೀಣ ಪ್ರದೇಶವಾಗಿದ್ದು ಪ್ರಸಿದ್ಧ ಐತಿಹಾಸಿಕ ಹಾಗೂ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನಿಂದ 35 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸೋಮನಾಥಪುರವು ವಿಶೇಷವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ಹೆಸರು ಪಡೆದಿದೆ. ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ಕೃಷ್ಣನ ಈ ದೇವಸ್ಥಾನವು ನಿರ್ಮಾಣಗೊಂಡಿದೆ. ಅಂದರೆ 700 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಇದಾಗಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಲಕ್ಷ್ಮಿ ನರಸಿಂಹ ದೇವಾಲಯ, ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೇಂದ್ರದಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನು ಲಕ್ಷ್ಮಿ ನರಸಿಂಹನಾಗಿ ಈ ದೇವಾಲಯದಲ್ಲಿ ವಿರಾಜಮಾನನಾಗಿದ್ದಾನೆ. ಹೊಯ್ಸಳ ರಾಜವಂಶದ ವಿಷ್ಣುವರ್ಧನನ ಮೊಮ್ಮಗನಾದ ವೀರ ನರಸಿಂಹನಿಂದ 13 ನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣ ಮಾಡಲಾಗಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಲಕ್ಷ್ಮಿ ನಾರಾಯಣ ದೇವಾಲಯ, ನುಗ್ಗೇಹಳ್ಳಿ : ಪ್ರವಾಸಿಗರು ಹಾಸನ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿಗೆ ಸಮೀಪದ ನುಗ್ಗೆಹಳ್ಳಿಗೆ ಭೇಟಿ ಕೊಡಬೇಕು. ಈ ಊರಿನಲ್ಲಿ ಬಳಪದ ಕಲ್ಲು ಅಥವಾ ಸೋಪ್ ಸ್ಟೋನ್ ಅಥವಾ ಕ್ಲೋರಿಟಿಕ್ ಶಿಸ್ಟ್ ಎಂದು ಸಹಾ ಕರೆಯಲಾಗುವ ಕಲ್ಲುಗಳಿಂದ ನಿರ್ಮಿಸಲಾದ ಪ್ರಸಿದ್ಧ ಲಕ್ಷ್ಮಿ ನಾರಾಯಣ ದೇವಾಲಯವಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಲಕ್ಷ್ಮಿ ನರಸಿಂಹ ದೇವಸ್ಥಾನ, ವಿಗ್ನಸಂತೆ : ತುಮಕೂರು ಜಿಲ್ಲೆಯ ವಿಗ್ನಸಂತೆ ಎಂಬ ಗ್ರಾಮದಲ್ಲಿ ವಿಷ್ಣುವಿಗೆ ಮುಡಿಪಾದ ಈ ಪುರಾತನ ದೇಗುಲವಿದೆ. ಹೊಯ್ಸಳ ದೊರೆ ಮೂರನೆಯ ನರಸಿಂಹನು ರಾಜ್ಯಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 1286 ರಲ್ಲಿ ವಿಷ್ಣುವಿನ ಈ ದೇವಾಲಯದ ನಿರ್ಮಾಣವಾಗಿದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ವಿಜಯನಾರಾಯಣ ದೇವಸ್ಥಾನ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿದೆ ವಿಷ್ಣುವಿಗೆ ಮುಡಿಪಾದ ಈ ದೇವಸ್ಥಾನ. ಈ ದೇವಸ್ಥಾನದ ಮೂಲವು ಗಂಗರಾಳುತ್ತಿದ್ದ ಕಾಲ ಅಂದರೆ ಹತ್ತನೆಯ ಶತಮಾನಕ್ಕೆ ಸಂಬಂಧಿಸಿದೆ. ಇವರ ನಂತರ ಬಂದ ಇತರೆ ರಾಜವಂಶಗಳೂ ಸಹ ಈ ದೇವಸ್ಥಾನಕ್ಕೆ ತಮ್ಮದೆ ಆದ ಕೊಡುಗೆಗಳನ್ನು ಧಾರೆ ಎರೆದಿದ್ದಾರೆ. ಹೊಯ್ಸಳ ದೊರೆ ವಿಷ್ಣುವರ್ಧನ ಈ ದೇವಸ್ಥಾನದ ವಿಷ್ಣು ಮೂರ್ತಿಯ ಪ್ರತಿಷ್ಠಾಪನೆಗೆ ಮೂಲ ಕಾರಣಕರ್ತ ಎನ್ನಲಾಗುತ್ತದೆ.
ಚಿತ್ರಕೃಪೆ: Dineshkannambadi
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಶ್ರೀರಂಗನಾಥಸ್ವಾಮಿ ದೇವಾಲಯ : ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ 9 ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು ದೊಡ್ಡ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಂಗರ ನಂತರ ವಿಜಯನಗರ ಅರಸರು ಮತ್ತು ಹೊಯ್ಸಳರ ದೊರೆಗಳು ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು. ಇದು ವಿಷ್ಣುವಿನ ರೂಪವಾದ ರಂಗನಾಥಸ್ವಾಮಿಯ ದೇವಾಲಯವಾಗಿದ್ದು, ಪಂಚರಂಗ ಕ್ಷೇತ್ರಗಳಲ್ಲಿ ಒಂದೆಂದು ಹೆಸರಾಗಿದೆ.
ಚಿತ್ರಕೃಪೆ: Chitra sivakumar
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಈ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪುಕಲ್ಲಿನಿಂದ ಕಡೆಯಲಾಗಿರುವ ಸ್ವಾಮಿಯ ಮೂರ್ತಿಯಿದ್ದು, ಇದು ನಗುಮೊಗವನ್ನು ಹೊಂದಿದೆ. ಈ ವಿಗ್ರಹವು ಆದಿಶೇಷನ ಮೇಲೆ ಮಲಗಿರುವ ಅನಂತನಾಥನನ್ನು ತೋರಿಸುತ್ತದೆ. ದೇವಾಲಯದಲ್ಲಿ 24 ಸುಂದರ ಕಂಬಗಳಿದ್ದು ಅವು ವಿಷ್ಣುವಿನ 24 ರೂಪಗಳನ್ನು ತೋರಿಸುತ್ತದೆ. ಇವುಗಳು ಈ ಸ್ಮಾರಕದ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿದ್ದರೂ ಸಹ ಮೈಸೂರು ನಗರ ಕೇಂದ್ರದಿಂದ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: YVSREDDY
ಕರ್ನಾಟಕದಲ್ಲಿರುವ ವಿಷ್ಣು ದೇವಾಲಯಗಳು:
ಈ ದೇವಾಲಯದ ಒಳಗೋಡೆಗಳು ಶ್ರೀನಿವಾಸ ಸ್ವಾಮಿಯ ವಿವಿಧ ಚಿತ್ರಗಳಿಂದ ಹಾಗು ಪಂಚಮುಖ ಆಂಜನೇಯನ ಚಿತ್ರಗಳಿಂದ ಅಲಂಕೃತವಾಗಿವೆ.ಕರ್ನಾಟಕದ ದೊಡ್ಡ ದೇವಾಲಯಗಳಲ್ಲಿ ಒಂದೆಂದು ಹೆಸರಾಗಿರುವ ಈ ದೇವಾಲಯವು ಒಂದು ಮಹಾದ್ವಾರವನ್ನು ,ಸದೃಡವಾದ ಗೋಪುರವನ್ನು ಹಾಗು ಕಂಬಗಳಿರುವ ಮೊಗಸಾಲೆಯನ್ನು ಹೊಂದಿದೆ. ಇವುಗಳನ್ನು ಮೂರು ಅಥವಾ ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಸಂಕ್ರಾಂತಿಯ ಶುಭದಿನದಂದು ನಡೆಯುವ ಲಕ್ಷದೀಪೋತ್ಸವಕ್ಕೆ ಆಗಮಿಸಬಹುದು.
ಚಿತ್ರಕೃಪೆ: Adam63