ಆಂಧ್ರಪ್ರದೇಶವು ಸಾಕಷ್ಟು ಆಕರ್ಷಕ ಧಾರ್ಮಿಕ ಕ್ಷೇತ್ರಗಳನೊಳಗೊಂಡ ರಾಜ್ಯವಾಗಿದೆ. ಅಷ್ಟೆ ಅಲ್ಲ, ಕೆಲವು ಕುತೂಹಲಕರ ಹಾಗೂ ಅಷ್ಟೊಂದು ಪ್ರವರ್ಧಮಾನಕ್ಕೆ ಬರದ ತಾಣಗಳು, ದೇವಾಲಯಗಳನ್ನೂ ಸಹ ಈ ಆಂಧ್ರಪ್ರದೇಶಲ್ಲಿ ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಕುತೂಹಲಕರ ಕ್ಷೇತ್ರದ ಕುರಿತು ತಿಳಿಸಲಾಗಿದೆ. ಸಮಯ ಸಿಕ್ಕರೆ ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಿ ಬನ್ನಿ.
ರಾಜ್ಯದ ಪ್ರಮುಖ ಜಿಲ್ಲೆಗಳ ಪೈಕಿ ಕರ್ನೂಲ್ ಸಹ ಒಂದು. ಈ ಜಿಲ್ಲೆಯಲ್ಲಿರುವ ಮಾವಿನ ಹಣ್ಣುಗಳಿಗೆ ಪ್ರಸಿದ್ಧವಾದ ಬಂಗಿನಪಲ್ಲಿ/ಬನಗನಪಲ್ಲಿ ಮಂಡಲ (ತಾಲೂಕು) ದಲ್ಲಿರುವ ಯಾಗಂಟಿ ಎಂಬ ಕ್ಷೇತ್ರವು ತನ್ನಲ್ಲಿರುವ ಉಮಾ ಮಹೇಶ್ವರ ದೇವಾಲಯದಿಂದಾಗಿ ಮಹತ್ವಪಡೆದುಕೊಂಡಿದೆ. ಬಾಯಲ್ಲಿ ನೀರೂರಿಸುವ ಬಂಗಿನಪಲ್ಲಿ ಮಾವಿನ ಹಣ್ಣುಗಳು. (ಕೆಳಗಿನ ಚಿತ್ರದಲ್ಲಿ)

ಚಿತ್ರಕೃಪೆ: Gnt
ಯಾಗಂಟಿಯು ಕರ್ನೂಲ್ ನಗರ ಕೇಂದ್ರದಿಂದ 100 ಕಿ.ಮೀ ದೂರವಿದ್ದರೆ ಬಂಗಿನಪಲ್ಲಿಯಿಂದ ಕೇವಲ 14 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಹಾಗೂ ಬಮ್ಗಿನಪಲ್ಲಿಯಿಂದ ಇಲ್ಲಿಗೆ ತೆರಳಲು ವಾಹನಗಳು ದೊರೆಯುತ್ತವೆ. ಇನ್ನೂ ಕರ್ನೂಲ್ ನಗರದಿಂದ ಬಂಗಿನಪಲ್ಲಿಗೆ ಸರ್ಕಾರಿ ಬಸ್ಸುಗಳು ದೊರೆಯುತ್ತವೆ.
ನಿಮ್ಮದೆ ವಾಹನದ ಮೂಲಕ ಹೋಗಬೇಕಿದ್ದಲ್ಲಿ ಬೆಂಗಳೂರಿನಿಂದ ಬಾಗೆಪಲ್ಲಿ, ಗೂಟಿ ಮೂಲಕವಾಗಿಯೂ, ಬಳ್ಳಾರಿಯಿಂದಲೂ ಸಹ ಗೂಟಿ ಮಾರ್ಗವಾಗಿ ತೆರಳಬಹುದು. ಯಾಗಂಟಿ ಬೆಂಗಳೂರಿನಿಂದ 335 ಕಿ.ಮೀ ಹಾಗೂ ಬಳ್ಳಾರಿಯಿಂದ 155 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Pusulurisudhakara
ಸ್ಥಳದ ಇತಿಹಾಸ ಕೆದಕಿದಾಗ ತಿಳಿಯುವುದೆಂದರೆ, ಈ ದೇವಸ್ಥಾನವು 15 ನೇಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ರಾಜ ಹರಿಹರ ಬುಕ್ಕ ರಾಯನಿಂದ ನಿರ್ಮಾಣಗೊಂಡಿದೆ. ಇಲ್ಲಿರುವ ಮುಖ್ಯ ದೇವರುಗಳೆಂದರೆ ಶಿವ-ಪಾರ್ವತಿ ಹಾಗೂ ನಂದಿ. ಆದರೆ ವಿಶೇಷವೆಂದರೆ ಇದು ವೈಷ್ಣವ ಸಂಪ್ರದಾಯಗಳ ಮುಲಕ ನಿರ್ಮಾಣಗೊಂಡಿರುವುದು.
ನಿಮಗಿಷ್ಟವಾಗಬಹುದಾದ : ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ಹಂಪಿ
ದಂತ ಕಥೆಯ ಪ್ರಕಾರ, ಋಷಿ ಅಗಸ್ತ್ಯನು ಇಲ್ಲಿ ವೆಂಕಟೇಶ್ವರನ ದೇವಾಲಯ ನಿರ್ಮಿಸಬೇಕೆಂದುಕೊಂಡು ಮೂರ್ತಿಯ ಪ್ರತಿಷ್ಠಾಪನೆ ಮಾಡುವಾಗ ವಿಷ್ಣುವಿನ ಪಾದದ ಬೆರಳೊಂದು ಭಗ್ನಗೊಂಡಿತು. ಇದರಿಂದ ಬೇಸರಪಟ್ಟ ಮುನಿಯು ವಿಷ್ಣುವಿನ ತಪಸ್ಸು ಮಾಡಿದಾಗ ವಿಷ್ಣು ಪ್ರತ್ಯಕ್ಷನಾಗಿ ಈ ಸ್ಥಳವು ಕೈಲಾಸದಂತಿರುವುದರಿಂದ ಶಿವನಿಗೆ ಆದರ್ಶಮಯವಾಗಿದೆ ಎಂದು ಹೇಳಿದ.

ಚಿತ್ರಕೃಪೆ: Ashwin Kumar
ತದನಂತರ ಮುನಿಯು ಶಿವನನ್ನು ಕುರಿತು ಒಂದೆ ಶಿಲೆಯಲ್ಲಿ ಉಮಾ-ಮಹೇಶ್ವರನ ಸಮೇತನಾಗಿ ನೆಲೆಸಲು ಕೇಳಿಕೊಂಡಾಗ ಶಿವನು ಅದಕೊಪ್ಪಿ ಇಲ್ಲಿ ಉಮಾ-ಮಹೇಶ್ವರನಾಗಿ ನೆಲೆಸಿದ್ದಾನೆ ಎನ್ನುತ್ತದೆ ಸ್ಥಳ ಪುರಾಣ. ಇನ್ನೊಂದು ಕಥೆಯ ಪ್ರಕಾರ ಹಿಂದೆ ಚಿತ್ತೆಪ್ಪನೆಂಬ ಶಿವನ ಪರಮ ಭಕ್ತನಿದ್ದ. ಶಿವನ ದರ್ಶನಕ್ಕಾಗಿ ಹಗಲಿರುಳು ಕಠಿಣ ತಪಸ್ಸನಾಚರಿಸುತ್ತಿದ್ದ. ಒಮ್ಮೆ ಶಿವನು ಹುಲಿಯ ರುಪದಲ್ಲಿ ಇವನ ಮುಂದೆ ಬಂದಾಗ....

ಚಿತ್ರಕೃಪೆ: wikimedia
ಚಿತ್ತೆಪ್ಪ ಆ ಶಿವನೇ ಹುಲಿಯ ರುಪದಲ್ಲಿ ಬಂದುದನ್ನು ಮನಗಂಡು "ನೇಗಂಟಿ ಶಿವನು ನೆ ಕಂಟಿ" (ನಾನು ಶಿವನನ್ನು ನೋಡಿದೆ) ಎಂದು ಸಂತಸದಿಂದ ಉದ್ಘರಿಸಿದ. ಈ ರೀತಿಯಾಗಿ ಇಲ್ಲಿ ಶಿವನು ಭಕ್ತನ ಕೋರಿಕೆಯಂತೆ ಇಲ್ಲಿ ನೆಲೆಸಿ ಕ್ರಮೇಣ ಯಾಗಂಟಿ ಉಮಾ-ಮಹೇಶ್ವರನಾಗಿ ಭಕ್ತರನ್ನು ಹರಸತೊಡಗಿದ.
ನಿಮಗಿಷ್ಟವಾಗಬಹುದಾದ : ಕರ್ನಾಟಕದಲ್ಲಿರುವ ಶಿವನ ಅನನ್ಯ ದೇವಾಲಯಗಳು

ಚಿತ್ರಕೃಪೆ: Sanju189
ಇಲ್ಲಿನ ಇನ್ನೊಂದು ಆಸಕ್ತಿಕರ ವಿಷಯವೆಂದರೆ ನಂದಿ ವಿಗ್ರಹ. ಇಲ್ಲಿಗೆ ಬರುವ ಭಕ್ತಾದಿಗಳು ಹೇಳುವಂತೆ ಈ ವಿಗ್ರಹವು ಪ್ರತಿ ವರ್ಷ ಆಕಾರದಲ್ಲಿ ಬೆಳೆಯುತ್ತಿದೆಯಂತೆ! ಭಾರತೀಯ ಪುರಾತತ್ವ ಇಲಾಖೆಯು ಇದರ ಪ್ರಯೋಗಗಳನ್ನು ನಡೆಸಿದ್ದು ಈ ವಿಗ್ರಹವನ್ನು ನೈಸರ್ಗಿಕವಾಗಿ ಬೆಳೆಯುವ ಗುಣವುಳ್ಳ ಕಲ್ಲಿನಲ್ಲಿ ಕೆತ್ತಲಾಗಿರುವುದರಿಂದ ಈ ರೀತಿಯಾಗುವುದೆಂದು ಹೇಳಿದೆ.

ಚಿತ್ರಕೃಪೆ: Pranayraj1985
ತೆಲುಗು ಸಂತ ಶ್ರೀ ಪೋತುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ಹೇಳಿರುವಂತೆ ಕಲಿಯುಗದ ಅಂತ್ಯವಾದ ನಂತರ ಈ ಕಲ್ಲಿನ ನಂದಿಯು ಜೀವ ಪಡೆದು ಒದರುತ್ತದಂತೆ! ಅಲ್ಲದೆ ಇಲ್ಲಿ ಅಗಸ್ತ್ಯ ಮುನಿಗಳು ತಪಗೈದ ಗುಹೆ, ಅದರ ಹೊರತಾಗಿ ವೀರಬ್ರಹ್ಮ ಗುಹೆ ಹಾಗೂ ವೆಂಕಟೇಶ್ವರ ಗುಹೆಗಳನ್ನೂ ಸಹ ಕಾಣಬಹುದು. ಮೇಲಿನ ಚಿತ್ರದಲ್ಲಿ ಅಗಸ್ತ್ಯ ಗುಹೆ.

ಚಿತ್ರಕೃಪೆ: wikimedia
ಮತ್ತೊಂದು ಕುತೂಹಲ ಸಂಗತಿ ಎಂದರೆ ಈ ಕ್ಷೇತ್ರದಲ್ಲಿ ಕಾಗೆಗಳು ಕಂಡುಬರುವುದಿಲ್ಲ. ಅಗಸ್ತ್ಯ ಮುನಿಗಳು ತಪಸ್ಸನ್ನಾಚರಿಸುತ್ತಿರುವಾಗ ಕಾಗೆಗಳಿಂದ ಕಿರಿ ಕಿರಿ ಉಂಟಾಗಿ ಅವು ಬರದಂತೆ ಶಪಿಸಿದರಂತೆ. ಅಲ್ಲದೆ ಕಾಗೆಯು ಶನಿ ದೇವರ ವಾಹನವಾಗಿರುವುದರಿಂದ ಈ ಕ್ಷೇತ್ರಕ್ಕೆ ಶನಿ ದೇವರು ಬರಲಾಗುವುದಿಲ್ಲವಂತೆ! ಅದರಂತೆ ಇಲ್ಲಿನ ಪುಷ್ಕರಿಣಿಯೂ ಸಹ ವಿಶೇಷವಾಗಿದೆ. ಪಕ್ಕದ ಬೆಟ್ಟಗಳ ಮೂಲಗಳಿಂದ ಈ ಕಲ್ಯಾಣಿಗೆ ಯಾವ ರೀತಿ ನೀರು ಹರಿದುಬರುತ್ತದೆಂದು ಯಾರಿಗೂ ತಿಳಿದಿಲ್ಲ. ಇದರ ನೀರು ಶುದ್ಧವಾಗಿದ್ದು ಸಿಹಿಯಾಗಿದೆ. ಇದರಲ್ಲಿ ಮಿಂದು ಶಿವನ ದರ್ಶನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆಂದು ಭಕ್ತರ ನಂಬಿಕೆಯಾಗಿದೆ.


Click it and Unblock the Notifications
















