ಭಾರತವು ಅಪಾರ ಪ್ರಾಕೃತಿಕ ಸಂಪತ್ತನ್ನು ಹೊಂದಿರುವಂತಹ ರಾಜ್ಯ. ದೇಶದ ಪ್ರತಿಯೊಂದು ರಾಜ್ಯಗಳು ಕೂಡಾ ಭಿನ್ನವಿಭಿನ್ನ ಸಂಸ್ಕೃತಿ, ಆಚಾರ ವಿಚಾರ, ಪ್ರಾಕೃತಿಕ ತಾಣಗಳನ್ನು ಹೊಂದಿದೆ. ಹೀಗೆ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಬಿಹಾರ್ ಕೂಡಾ ಒಂದು. ಬಿಹಾರ್ನಲ್ಲಿರುವ ಪ್ರವಾಸಿ ನಗರಗಳ ಪೈಕಿ ಅಗ್ರಸ್ಥಾನದಲ್ಲಿರುವುದು ’ಬಿಗುಸರಾಯ್ ನಗರ’.
’ಬಿಗುಸರಾಯ್’ ಭಾರತದ ಪ್ರಮುಖ ರಾಜ್ಯಗಳ ಪೈಕಿ ಪ್ರಮುಖವಾದ ಬಿಹಾರ್ನ ಪ್ರಮುಖ ಜಿಲ್ಲಾಕೇಂದ್ರ. ಉತ್ತರ ಭಾರತದಲ್ಲಿ ಹರಿಯುತ್ತಿರುವಂತಹ ಪವಿತ್ರ ನದಿಯಾದ ಗಂಗೆಯ ಉತ್ತರತಟದಲ್ಲಿ ಬಿಗುಸರಾಯ್ ನಗರವು ತಲೆಯೆತ್ತಿ ನಿಂತಿದೆ. ಈ ನಗರದ ಹೆಸರು ಬಹಳ ವಿಶಿಷ್ಟವಾದುದು. ಅಂದಹಾಗೆ ಈ ನಗರದ ಹೆಸರು ಎರಡು ಅರ್ಥಗಳನ್ನು ಒಳಗೊಂಡ ಪದಗಳ ಸಂಯುಕ್ತರೂಪ.
ಸ್ಥಳೀಯ ಭಾಷೆಯ ಬೇಗಮ್ ಮತ್ತು ಸರಾಯ್ ಎಂಬ ಎರಡು ಪದಗಳ ಮಿಶ್ರರೂಪವೇ ಈ ಬಿಗುಸರಾಯ್. ಇಲ್ಲಿ ಬೇಗಮ್ ಅಂದರೆ ರಾಣಿ ಅನ್ನುವ ಅರ್ಥ ಮತ್ತು ಸರಾಯ್ ಎಂದರೆ ಒಂದು ತಾಣ. ಇದಕ್ಕೂ ಒಂದು ಹಿನ್ನೆಲೆಯಿದೆ. ಸ್ಥಳೀಯ ಆಸ್ಥಾನದ ರಾಣಿಯೋರ್ವರು ಈ ಪ್ರದೇಶದಲ್ಲಿ ಗಂಗಾನದಿಯ ತಟದಲ್ಲಿರುವ ಪವಿತ್ರ ತಾಣ ’ಸಿಮಾರಿಯಾ ಘಾಟ್’ನಲ್ಲಿ ಸುಮಾರು ಒಂದು ತಿಂಗಳ ಕಾಲ ತಂಗಿದ್ದರಂತೆ. ಆ ಬಳಿಕ ಇದು ರಾಣಿಯ ತಾಣ ಅಂದರೆ ರಾಣಿಯ ಏಕಾಂತ ತಾಣ ಎಂಬ ಪರ್ಯಾಯ ಹೆಸರನ್ನುಪಡೆದುಕೊಂಡಿತು. ಅದು ಕಾಲ ಕ್ರಮೇಣ ಬಿಗುಸರಾಯ್ ಎನ್ನುವ ಸಂಕ್ಷಿಪ್ತ ರೂಪವನ್ನು ಪಡೆದುಕೊಂಡು, ಪ್ರಸ್ತುತ ಅದೇ ಹೆಸರಿನಿಂದ ಕರೆಸಿಕೊಳ್ಳುತ್ತಿದೆ.
ಬಿಗುಸರಾಯ್ ಮುಗರ್ ಜಿಲ್ಲೆಯ ಒಂದು ಭಾಗವಾಗಿದ್ದು, ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ. ಖ್ಯಾತ ಹಿಂದಿ ಕವಿಯಾದ ರಾಷ್ಟ್ರಕವಿ ರಾಮ್ಧಾರಿ ಸಿಂಗ್ ಮತ್ತು ಮತ್ತು ಖ್ಯಾತ ಇತಿಹಾಸತಜ್ಞ ರಾಮ್ ಶರಣ್ ಶರ್ಮಾ ಅವರನ್ನು ಪ್ರಪಂಚಕ್ಕೆ ನೀಡಿದ ಹಿರಿಮೆ ಈ ಬಿಗುಸರಾಯ್ ನಗರದ್ದಾಗಿದೆ. ಇದು ಪಾರಂಪರಿಕವಾಗಿ ಕಮ್ಯುನಿಸ್ಟ್ವಾದದ ತವರಾಗಿದ್ದು, ಈ ನಗರವು ಮೊದಲು ’ ಬಿಹಾರದ ಲೆನಿನ್ಗ್ರಾಂಡ್’ ಎಂದೇ ಪ್ರಖ್ಯಾತಿಯನ್ನು ಪಡೆದಿತ್ತು.
ಬಿಗುಸರಾಯ್ ಪಟ್ಟಣವು ಇಷ್ಟೊಂದು ಮುಂದುವರೆದಿದೆ ಎಂದಮೇಲೆ ಇಲ್ಲಿ ಸಾಕಷ್ಟು ಪ್ರವಾಸಿತಾಣಗಳು ಕೂಡಾ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಹೌದು, ಇಲ್ಲಿ ಹಲವಾರು ಪ್ರವಾಸಿತಾಣಗಳಿದ್ದು, ಪ್ರವಾಸಿಗರಿಗೆ ಮುದ ನೀಡುತ್ತಿವೆ. ಇಲ್ಲಿರುವ ಪ್ರಮುಖ ಪ್ರವಾಸಿತಾಣಗಳೆಂದರೆ ಕನ್ವಾರ್ ಸರೋವರದ ಪಕ್ಷಿಧಾಮ ಮತ್ತು ನೌಲಾ ಘರ್.
ಹವಾಮಾನ
ಗಂಗಾನದಿಯ ತಟದಲ್ಲಿದ್ದರೂ ಇಲ್ಲಿಯ ಯಾವುದೇ ರೀತಿಯಲ್ಲೂ ಹವಾಮಾನ ವೈಪರೀತ್ಯಗಳು ಕಂಡುಬರುವುದಿಲ್ಲ. ಕ್ರಮಬದ್ಧವಾಗಿ ಋತುಗಳು ಬದಲಾಗುತ್ತಾ ಇರುತ್ತವೆ.
ತಲುಪುವ ಬಗೆ
ಬಿಗುಸರಾಯ್ ನಗರಕ್ಕೆ ತೆರಳಲು ಕಷ್ಟವೇನೂ ಇಲ್ಲ. ಬಿಹಾರದ ಎಲ್ಲಾ ನಗರಗಳಿಗೂ ಬಿಗುಸರಾಯ್ನಿಂದ ಸಂಪರ್ಕವಿದೆ. ಹೀಗಾಗಿ ರೈಲು ಮತ್ತು ರಸ್ತೆಮಾರ್ಗದ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದು.