ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ ನಂತರ ಹೆಸರಿಸಲಾಗಿದೆ. 16ನೇ ಶತಮಾನದಲ್ಲಿ 4ನೇ ಸಿಖ್ ಗುರುವಿನಿಂದ ಈ ನಗರ ಸ್ಥಾಪಿತಗೊಂಡಿತು. ಅವರೇ ಗುರು ರಾಮದಾಸರು. ಅವರ ನಂತರದ ಉತ್ತರಾಧಿಕಾರಿಯಾದ ಗುರು ಅರ್ಜುನ್ ದೇವಜಿಯವರು ಬಹಳ ವಿಸ್ತಾರವಾಗಿ ಈ ನಗರವನ್ನು ಅಭಿವೃದ್ಧಿಗೊಳಿಸಿದರು. 1601ನೇ ಇಸ್ವಿಯಲ್ಲಿ ಬೃಹತ್ತಾದ ಮತ್ತು ಅತ್ಯದ್ಭುತವಾದ ಮಂದಿರ ನಿರ್ಮಾಣದ ಕೆಲಸವನ್ನು ಮುಕ್ತಾಯಗೊಳಿಸಿದರು. ಈ ಮಂದಿರ ನಿರ್ಮಾಣಕ್ಕೆ ಪಾಯ ಹಾಕಿದವರು ಇವರ ಗುರುಗಳಾದ ಗುರು ರಾಮದಾಸಜಿ.
ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗುವ ಮುನ್ನ ಅಂದರೆ 1947ನೇ ಇಸ್ವಿಗೆ ಮೊದಲು ವ್ಯಾಪಾರ ಹಾಗು ವಾಣಿಜ್ಯ ಕ್ಷೇತ್ರದಲ್ಲಿ ಈ ನಗರ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿತ್ತು. ಆ ಹೊತ್ತಿನಲ್ಲಿ ಪಂಜಾಬ್ ರಾಜ್ಯ ಇನ್ನೂ ವಿಭಜನೆಯಾಗಿರಲಿಲ್ಲ. ಆದರೆ ವಿಭಜನೆ ಆದ ಮೇಲೆ ಪಶ್ಜಿಮ ಭಾಗದ ಅಮೃತಸರವನ್ನು ಭಾರತದ ಮತ್ತು ಪೂರ್ವ ಗಡಿಭಾಗ ಪಾಕಿಸ್ತಾನದ ಪಾಲಾಯಿತು. ಇಂದು ಪಟ್ಟಣದ ವ್ಯಾಪಾರ ವಹಿವಾಟುಗಳು ಕಾರ್ಪೆಟ್, ವಸ್ತ್ರ, ಕರಕುಶಲವಸ್ತು, ಕೃಷಿ ಉತ್ಪನ್ನ, ಸೇವಾ ಕ್ಷೇತ್ರ ಮತ್ತು ಹಗುರ ಇಂಜಿನಿಯರಿಂಗ್ ಉತ್ಪನ್ನಗಳಿಗೆ ಸೀಮಿತವಾಗಿವೆ. ಈ ಪ್ರದೇಶದ ಇನ್ನೊಂದು ಮುಖ್ಯ ವಾಣಿಜ್ಯ ವಹಿವಾಟೆಂದರೆ ಅಮೃತಸರ ಪ್ರವಾಸೋದ್ಯಮ.
ಅಮೃತಸರದ ಸುತ್ತಮುತ್ತಲಿನ ಪ್ರವಾಸಿ ತಾಣಗಳು
ಅಮೃತಸರ ಅನೇಕ ಐತಿಹಾಸಿಕ ಗುರುದ್ವಾರಗಳಿಗೆ ಮನೆಯಾಗಿದೆ. ಅದರಲ್ಲಿ ಪ್ರಮುಖವಾದದ್ದೆಂದರೆ 'ಹರಮಂದಿರ ಸಾಹೀಬ್'. ಸಾಮಾನ್ಯವಾಗಿ ಗೋಲ್ಡನ್ ಟೆಂಪಲ್ ಎಂದೇ ಇದನ್ನು ಕರೆಯುತ್ತಾರೆ. ಸಾಕಷ್ಟು ಧಾರ್ಮಿಕ ಮಹತ್ವವನ್ನು ಹೊಂದಿರುವ ಸಿಖ್ಖರ ಈ ಪವಿತ್ರ ಕ್ಷೇತ್ರಕ್ಕೆ ಪ್ರತಿದಿನ ಸುಮಾರು 1 ಲಕ್ಷಕ್ಕೂ ಹೆಚ್ಚಿನ ದೇಶವಿದೇಶದ ಪ್ರವಾಸಿಗರು ಭೇಟಿ ನೀಡುತ್ತಾರೆ. ಸಿಖ್ಖರ ಅತ್ಯುನ್ನತ ಸಂಸ್ಥೆಯಾದ ಖಲ್ಸಾ ಸಹ ಈ ಬೃಹತ್ತಾದ ಗೋಲ್ಡನ್ ಟೆಂಪಲ್ನ ಸಂಕೀರ್ಣದಲ್ಲಿಯೇ ಇದೆ. ಅಮೃತಸರ ಪ್ರವಾಸೋದ್ಯಮ ಇತರ ಮಂದಿರಗಳಾದ ಬಿಬೇಕರ ಸಾಹೀಬ್, ಬಾಬಾ ಅಟಲ್ ಸಾಹೀಬ್, ರಾಮಸರ ಸಾಹೀಬ್, ಸಂತೋಬಸರ ಸಾಹೀಬ್ ಮಂದಿರಗಳನ್ನು ಒಳಗೊಂಡಿದೆ.
ಅಮೃತಸರ ಸಿಖ್ ಸಮುದಾಯದವರ ದೊಡ್ಡ ತೀರ್ಥಕ್ಷೇತ್ರವೆಂಬುದನ್ನು ಹೊರತುಪಡಿಸಿದರೆ, ಈ ನಗರ ಮತ್ತೊಂದು ಕುಖ್ಯಾತಿಯ ಘಟನೆಯನ್ನು ನೆನಪಿಗೆ ತಂದುಕೊಡುತ್ತದೆ. ಅದೇನೆಂದರೆ, ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ 1919ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ. ಆ ದುರಂತದಲ್ಲಿ ಅನೇಕ ಹುತಾತ್ಮರು ಮಾಡಿದ ತ್ಯಾಗ ಮತ್ತು ಬಲಿದಾನದ ನೆನಪಿಗಾಗಿ ಒಂದು ಸ್ಮಾರಕವನ್ನು ಜಲಿಯನ್ ವಾಲಾ ಬಾಗ್ ನಲ್ಲಿ ಕಟ್ಟಿಸಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ದಿಟ್ಟ ಇತಿಹಾಸವನ್ನು ಸಾರುವ ಅನೇಕ ಪರಂಪರೆಯ ಕಟ್ಟಡಗಳಲ್ಲಿ ಮಹಾರಾಜ ರಂಜೀತ್ ಸಿಂಗ್ ಮ್ಯೂಸಿಯಂ, ಖೈರ್ ಉದ್ದಿನ್ ಮಸೀದಿ, ಭಟಿಂಡಾ ಫೋರ್ಟ್, ಸರಗರಹಿ ಮೆಮೋರಿಯಲ್ ಮತ್ತು ಗೋಬಿಂದ್ ಘರ್ ಫೋರ್ಟ್ ಮುಖ್ಯವಾದವು.
ಭಾರತ ಪಾಕಿಸ್ತಾನದ ಗಡಿಭಾಗವನ್ನು ವಾಘಾ ಬಾರ್ಡರ್ ಎಂದು ಕರೆಯುತ್ತಾರೆ. ಅಲ್ಲಿ ನಡೆಯುವ ಸೆರೆಮೋನಿಯಲ್ ಪರೇಡನ್ನು ನೋಡಲೆಂದೇ ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಇನ್ನು ಹಿಂದೂ ಭಕ್ತರಿಗಾಗಿ ಅನೇಕ ಮಂದಿರಗಳು ಸಹ ಈ ನಗರದಲ್ಲಿವೆ. ಅವುಗಳಲ್ಲಿ ದುರ್ಗಿಯಾನಾ ಮಂದಿರ, ಮಾತಾ ಲಾಲ್ ದೇವಿ, ಇಸ್ಕಾನ್ ಮಂದಿರ, ಹನುಮಾನ ಮಂದಿರ ಮತ್ತು ಶ್ರೀರಾಮ ತೀರಥ್ ಮಂದಿರ ಮುಖ್ಯವಾದವು. ಇವುಗಳನ್ನು ಹೊರತುಪಡಿಸಿದರೆ, ನಗರದಲ್ಲಿನ ಇತರ ಪ್ರವಾಸಿ ತಾಣಗಳೆಂದರೆ ಕೈಸರ್ ಬಾಗ್, ರಾಮ ಬಾಗ್, ಖಲ್ಸಾ ಕಾಲೇಜು, ಗುರು ನಾನಕ್ ವಿಶ್ವವಿದ್ಯಾಲಯ, ತರ್ನ್ ತರನ್ ಮತ್ತು ಪುಲ್ ಕಂಜಾರಿ ಮುಂತಾದ ಸ್ಥಳಗಳಿವೆ.
ಅಮೃತಸರ ತಲುಪುವ ಬಗೆ
ಪಂಜಾಬ್ ರಾಜ್ಯದ ಮುಖ್ಯ ಪಟ್ಟಣವೆನಿಸಿರುವ ಅಮೃತಸರ ಭಾರತದ ಇತರ ಮುಖ್ಯ ಭಾಗಗಳಿಂದ, ವಿದೇಶದಿಂದ ಸುಲಭವಾಗಿ ರಸ್ತೆ, ರೈಲು ಮಾರ್ಗದಿಂದ ತಲುಪುವ ಸಂಪರ್ಕ ಹೊಂದಿದೆ. ಶ್ರೀ ಗುರು ರಾಮದಾಸಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಮೃತಸರಕ್ಕೆ ವಾಯುಯಾನದ ಮುಖ್ಯ ಪ್ರವೇಶ ದ್ವಾರವಾಗಿದೆ. ರೈಲ್ವೆ ನಿಲ್ದಾಣ ದೇಶದ ಎಲ್ಲಾ ದೊಡ್ಡ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಗ್ರಾಂಡ್ ಟ್ರಂಕ್ ರೋಡ್ (ಎನ್ಎಚ್ 1) ನಲ್ಲಿರುವ ಅಮೃತಸರ ಉತ್ತಮ ಬಸ್ ಮತ್ತು ಟ್ಯಾಕ್ಸಿ ವ್ಯವಸ್ಥೆಯನ್ನು ಹೊಂದಿದೆ.
ಅಮೃತಸರವನ್ನು ಭೇಟಿ ಮಾಡಲು ಸೂಕ್ತ ಸಮಯ
ಅಮೃತಸರದ ಹವಾಮಾನವು ವಾಯವ್ಯ ಭಾರತದ ಇತರ ಪ್ರದೇಶಗಳಂತೆ ವರ್ಷದಲ್ಲಿ ಮೂರು ಕಾಲಗಳಾದ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲವನ್ನು ಕಾಣುತ್ತದೆ. ಪ್ರವಾಸಿಗನಿಗೆ ವರ್ಷದಲ್ಲಿ ಎಲ್ಲ ಕಾಲವೂ ಪ್ರವಾಸಿಗನಿಗೆ ಅಲ್ಲಿಗೆ ಪ್ರವಾಸ ಕೈಗೊಳ್ಳಲು ಹವಾಮಾನ ನೆರವಾಗುತ್ತದೆ. ಸೂಕ್ತ ಸಮಯವೆಂದರೆ, ಅಕ್ಟೋಬರ್ ನಿಂದ ಮಾರ್ಚ್ ವರೆಗೆ.