ಪಂಜಾಬ್ ನ ಒಂದು ಸುಂದರವಾದ ನಗರದ ಹೆಸರೇ ಸಂಗ್ರೂರ್. ಈ ಹೆಸರು ಒಬ್ಬ ಜತ್ ಆದ ಸಂಘೂವಿನಿಂದ ಬಂದಿತು. ಈ ನಗರವು ಸುಮಾರು 400 ವರ್ಷಗಳ ಹಿಂದೆ ರಚಿತವಾಯಿತು ಎಂದು ಹೇಳಲಾಗಿದೆ. ಇದು ಹಳೆಯಕಾಲದ ಜಿಂದ್ ರಾಜ್ಯದ ರಾಜಧಾನಿಯಾಗಿತ್ತು ಹಾಗೂ ಪ್ರಸ್ತುತ ಪಟಿಯಾಲಾದಿಂದ ಸುಮಾರು 46 ಕಿ.ಮೀ ದೂರದಲ್ಲಿದೆ. ಇಲ್ಲಿರುವ 20 ಕ್ಕೂ ಅಧಿಕವಾಗಿರುವ ಗುರುದ್ವಾರಗಳ ಕಾರಣದಿಂದಾಗಿ ಇದನ್ನು ಗುರುದ್ವಾರಗಳ ನಗರ ಎಂದು ಕರೆಯಲಾಗುತ್ತದೆ. ಇದು ಸಂಗ್ರೂರ್ ನ ಪ್ರವಾಸೋದ್ಯಮ ಪ್ರಖ್ಯಾತಿಗೂ ಸಹಾಯವಾಗಿದೆ. ಇಲ್ಲಿರುವ ಸಂಸ್ಕೃತಿಯಲ್ಲಿನ ವೈವಿಧ್ಯತೆ ಬೇರೆ ಬೇರೆ ದೇಶಗಳ ಜನರು ಇಲ್ಲಿ ಭೇಟಿ ನೀಡುವಂತೆ ಮಾಡಿದೆ.
ಸಂಗ್ರೂರ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳು
ಇಲ್ಲಿನ ಪ್ರಮುಖ ಸ್ಥಳಗಳಾದ ಶೀಷ್ ಮಹಲ್, ಬನಾಸರ್ ಉದ್ಯಾನ, ಗುರುದ್ವಾರ ಜನಮ್ ಆಸ್ಥಾನ್, ಗುರುದ್ವಾರ ನಾನಕ್ ಝಿರಾ ಮತ್ತು ಗುರುದ್ವಾರ ಅಕೋಯಿ ಸಾಹಿಬ್ ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಅಂಗಗಳಾಗಿವೆ. ಈ ಎಲ್ಲಾ ಗುರುದ್ವಾರಗಳಲ್ಲಿ ಸಿಖ್ ಗುರುಗಳ ಆಶೀರ್ವಾದ ಪಡೆಯಬಹುದಾಗಿದೆ. ಸಂಗ್ರೂರ್ ನ ಪ್ರವಾಸೋದ್ಯಮ ಇಲಾಖೆ ಪ್ರತಿವರ್ಷ ಇಲ್ಲಿ ವಿವಿಧ ಜಾತ್ರೆಗಳು ಮತ್ತು ಉತ್ಸವಗಳನ್ನು ಆಯೋಜಿಸುವ ಮೂಲಕ ದೇಶ ವಿದೇಶದ ಜನರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತದೆ. ಜನ್ಮಾಷ್ಟಮಿಯನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಗುಗಾ ನವಮಿ ಎಂಬ ಹೆಸರಿನ ಒಂದು ಉತ್ಸವ ಇಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತದೆ ಹಾಗೂ ಇದು ದೇಶದ ನಾನಾ ಭಾಗಗಳ ಜನರ ಸೇರುವಿಕೆಯಿಂದ ಹೆಚ್ಚಿನ ಮೆರುಗು ಪಡೆಯುತ್ತದೆ. ಜನವರಿ ತಿಂಗಳಿನಲ್ಲಿ ಆಯೋಜಿಸಲಾಗುವ ಕುಕಾ ಜಾತ್ರೆ ಸಂಗ್ರೂರ್ ಪ್ರವಾಸೋದ್ಯಮದ ವಿವಿಧ ರೂಪಗಳನ್ನು ನೋಡಲು ಬಯಸುವವರು ತಪ್ಪಿಸದೇ ಭೇಟಿ ನೀಡಬೇಕಾದಂತಹ ಒಂದು ಜಾತ್ರೆಯಾಗಿದೆ. ಇದರ ಜೊತೆಗೆ ವಾರಾಂತ್ಯದಲ್ಲಿ ಇಲ್ಲೇ ಸಮೀಪ ಇರುವ ತಾಣಗಳೆಂದರೆ ಜಾಮಾ ಮಸೀದಿ(ಮಲೆರ್ ಕೋಟ್ಲಾ), ಕಿಲ್ಲಾ ಮುಬಾರಕ್ (ಭಟಿಂಡಾ), ಸೂರ್ಯಾಸ್ತ ವೀಕ್ಷಣಾ ಕೇಂದ್ರ (ಕಸೌಲಿ) ಮತ್ತು ಕಾಳಿ ದೇವಾಲಯ (ಪಟಿಯಾಲಾ).
ಪ್ರಯಾಸವಿಲ್ಲದೇ ಸಂಗ್ರೂರ್ ಗೆ ಪ್ರಯಾಣ
ಈ ನಗರ ಪಂಜಾಬ್ ನ ಎಲ್ಲಾ ಪ್ರಮುಖ ನಗರಗಳಿಗೆ ರಸ್ತೆಯ ಮೂಲಕ ಸಂಪರ್ಕ ಸಾಧಿಸುವ ಕಾರಣ ಇಲ್ಲಿಗೆ ತಲುಪುವುದು ಅಷ್ಟೊಂದು ಕಷ್ಟದ ಕೆಲಸವೇನಲ್ಲ. ಜಬಲ್ ಪುರ್ ಎಕ್ಸ್ ಪ್ರೆಸ್, ಅಮೃತ್ ಸರ್ ಎಕ್ಸ್ ಪ್ರೆಸ್ ಮತ್ತು ಪಂಜಾಬ್ ಮೈಲ್ ನಂತಹ ಕೆಲವು ರೈಲುಗಳು ಸಂಗ್ರೂರ್ ರೈಲ್ವೆ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ನಗರದ ಎಲ್ಲಾ ಮೂಲೆ ಮೂಲೆಗಳಲ್ಲಿ ಆಟೋ ರಿಕ್ಷಾ ದಂತಹ ಸಮೂಹ ಸಾರಿಗೆ ವ್ಯವಸ್ಥೆಗಳು ದಿನದ ಎಲ್ಲಾ ಸಮಯದಲ್ಲೂ ಲಭ್ಯವಿವೆ. ಇದಲ್ಲದೆ ಸಮೀಪ ಇರುವ ಚಂದೀಗಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಅಲ್ಲಿಂದ ಟಾಕ್ಸಿಯ ಮೂಲಕ ಸಂಗ್ರೂರ್ ತಲುಪಬಹುದು. ಸಂಗ್ರೂರ್ ನ ವಾಯುಗುಣ
ಇಲ್ಲಿ ಬೇಸಿಗೆಯು ಶುಷ್ಕ ಮತ್ತು ಬಿಸಿಯಾಗಿರುತ್ತವೆ ಹಾಗೂ ಚಳಿಗಾಲ ಶೀತಮಯವಾಗಿಯೂ ಆಹ್ಲಾದಕರವಾಗಿಯೂ ಇರುತ್ತದೆ. ಇಲ್ಲಿನ ಮಳೆಗಾಲ ಕೇವಲ ಕೆಲವೇ ಕೆಲವು ತಿಂಗಳುಗಳ ಕಾಲ ಇರುತ್ತದೆ. ಡಿಸೆಂವರ್ ನಿಂದ ಮಾರ್ಚ ಇಲ್ಲಿನ ಭೇಟಿಗೆ ಅತ್ಯಂತ ಸೂಕ್ತವಾದ ಕಾಲ. ಈ ಸಮಯದ ವಾತಾವರಣ ಆಹ್ಲಾದಕರವಾಗಿಯೂ ಸುತ್ತಲಿನ ಸ್ಥಳಗಳಿಗೆ ತಿರುಗಾಡಲು ಉತ್ತಮವಾಗಿಯೂ ಇರುತ್ತದೆ, ಇದೇ ಅವಧಿಯಲ್ಲಿ ಇಲ್ಲಿ ಜಾತ್ರೆಗಳೂ ಆಯೋಜನೆಯಾಗುತ್ತವೆ.