ಮಹಾರಾಷ್ಟ್ರದ ರಾಜಧಾನಿ ನಗರ ಮುಂಬೈ ಸಾಕಷ್ಟು ಪುರಾತನ ನಗರವಾಗಿದ್ದು ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಈ ಸ್ಥಳದ ಕುರಿತು ಸಾಕಷ್ಟು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿರುವುದನ್ನೂ ಸಹ ಗಮನಿಸಬಹುದು. ಅಂತೆಯೆ ಇಲ್ಲಿ ಕೆಲವು ಪುರಾತನ ದೇವಾಲಯ ತಾಣಗಳನ್ನೂ ಸಹ ಕಾಣಬಹುದು.
ನಿಮಗಿಷ್ಟವಾಗಬಹುದಾದ : ಮಹಾರಾಷ್ಟ್ರದ ಪ್ರಮುಖ ದೇವಾಲಯಗಳು
ಅಂತಹ ಕೆಲವು ಪುರಾತನ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ. ವಾಲಕೇಶ್ವರ ದೇವಾಲಯ. ಶಿವನಿಗೆ ಮುಡಿಪಾದ ಈ ದೇವಾಲಯವನ್ನು ಬಾಣ ಗಂಗಾ ದೇವಸ್ಥಾನ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಏಕೆಂದರೆ ಇದಕ್ಕೆ ಹೊಂದಿಕೊಂಡಂತೆ ಒಂದು ರೋಚಕ ದಂತ ಕಥೆಯೊಂದಿದೆ.
ಚಿತ್ರಕೃಪೆ: wikipedia
ಪ್ರಸ್ತುತವಾಗಿ, ದಕ್ಷಿಣ ಮುಂಬೈ ಪ್ರದೇಸದಲ್ಲಿರುವ ಮಲಬಾರ್ ಹಿಲ್ ಎಂಬಲ್ಲಿರುವ ವಾಲಕೇಶ್ವರ ಎಂಬ ಗ್ರಾಮದಲ್ಲಿ ಈ ಪುರಾತನ ದೇವಾಲಯವಿದೆ. ನಗರ ಪ್ರದೇಶದಿಂದ ಈ ದೇವಾಲಯಕ್ಕೆ ತೆರಳಲು ಸಾಕಷ್ಟು ಸ್ಥಳೀಯ ರೈಲುಗಳು ಹಾಗೂ ಬಾಡಿಗೆ ಟ್ಯಾಕ್ಸಿಗಳು ದೊರೆಯುತ್ತವೆ.
ಚಿತ್ರಕೃಪೆ: Eric Parker
ದಂತಕಥೆಯ ಪ್ರಕಾರ, ಹಿಂದೆ ತ್ರೇತಾ ಯುಗದಲ್ಲಿ ರಾಮನು ಸೀತೆಯನ್ನು ಕರೆತರಲು ಲಂಕೆಗೆ ತೆರಳುತ್ತಿದ್ದಾಗ ಈ ಸ್ಥಳಕ್ಕೆ ಬಂದೊಡನೆಯೆ ಶಿವನನ್ನು ಪೂಜಿಸಲು ಅವನಿಗೆ ಹೇಳಲಾಯಿತು. ಅದಕ್ಕಾಗಿ ಶಿವಲಿಂಗವೊಂದನ್ನು ತರಲು ರಾಮ ಲಕ್ಷ್ಮಣನಿಗೆ ಆದೇಶಿಸಿ ಕಾಯುತ್ತ ಕುಳಿತ. ಬಹಳ ಹೊತ್ತಾದರೂ ಲಕ್ಷ್ಮಣ ಮರಳದಿದ್ದಾಗ ಬೇಸರಗೊಂಡ ರಾಮ ಅಲ್ಲಿದ್ದ ಮರಳಿನಿಂದಲೆ ಶಿವಲಿಂಗ ಸ್ಥಾಪಿಸಿ ಪೂಜಿಸಿದ.
ಚಿತ್ರಕೃಪೆ: Viraj
ಈ ತಾಣವು ಸಮುದ್ರದ ಬಳಿಯಿರುವುದರಿಂದ ಯಥೇಚ್ಚವಾಗಿ ಮರಳಿತ್ತು. ಅಲ್ಲದೆ, ಸಂಸ್ಕ್ರೂತದಲ್ಲಿ ವಾಲುಕ ಎಂದರೆ ಮರಳು ಎಂದಿರುವುದರಿಂದ ಈ ಸ್ಥಳಕ್ಕೆ ಹಾಗೂ ದೇವಾಲಯಕ್ಕೆ ವಾಲ್ಕೇಶ್ವರ ನಂತರ ವಾಲಕೇಶ್ವರ ಎಂಬ ಹೆಸರು ಬಂದಿತು.
ಮುಂಬೈನ ಸಾವಿರ ಕಥೆಗಳನ್ನು ಹೇಳುವ ಚಿತ್ರಗಳನ್ನು ನೋಡಬೇಕೆ?
ಇನ್ನೊಂದು ಕಥೆಯಂತೆ, ರಾಮನಿಗೆ ನೀರಡಿಕೆಯಾದಾಗ ಇಲ್ಲಿ ನೀರು ದೊರೆಯಲಿಲ್ಲ. ಕಾರಣ ಸಮುದ್ರ ತಾಣವಿರುವುದರಿಂದ ಕೇವಲ ಉಪ್ಪು ನೀರು ಮಾತ್ರವಿತ್ತು. ಇದಕ್ಕೆ ಪರಿಹಾರಾರ್ಥವಾಗಿ ರಾಮನು ತನ್ನ ಬಾಣದಿಂದ ಗಂಗೆಯನ್ನು ಇಲ್ಲಿಗೆ ಕರೆತಂದ. ಹೀಗಾಗಿ ಇದಕ್ಕೆ ಬಾಣ ಗಂಗಾ ಎಂಬ ಹೆಸರೂ ಸಹ ಬಂದಿತೆನ್ನಲಾಗಿದೆ. ಇಂದಿಗೂ ಈ ಕೊಳವಿದ್ದು ಇದರಲ್ಲಿ ಎಂದಿಗೂ ಬತ್ತದ ಸಿಹಿ ನೀರನ್ನು ಕಾಣಬಹುದು. ವಿಶೇಷವೆಂದರೆ ಇದು ಸಮುದ್ರಕ್ಕೆ ಬಲು ಹತ್ತಿರವಿದ್ದರೂ ಇಲ್ಲಿನ ನೀರು ಮಾತ್ರ ಸಿಹಿ.